ಮೈಕ್ರೋಫೈನಾನ್ಸ್ ವಿಶೇಷ ಸಭೆ; ಸಿಎಂ ಸಿದ್ದರಾಮಯ್ಯ 5 ನೇರ ಪ್ರಶ್ನೆಗಳಿಗೆ ಸಿಗದ ಸ್ಪಷ್ಟ ಉತ್ತರ, ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳು ತತ್ತರ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಕ್ರೋಫೈನಾನ್ಸ್ ವಿಶೇಷ ಸಭೆ; ಸಿಎಂ ಸಿದ್ದರಾಮಯ್ಯ 5 ನೇರ ಪ್ರಶ್ನೆಗಳಿಗೆ ಸಿಗದ ಸ್ಪಷ್ಟ ಉತ್ತರ, ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳು ತತ್ತರ

ಮೈಕ್ರೋಫೈನಾನ್ಸ್ ವಿಶೇಷ ಸಭೆ; ಸಿಎಂ ಸಿದ್ದರಾಮಯ್ಯ 5 ನೇರ ಪ್ರಶ್ನೆಗಳಿಗೆ ಸಿಗದ ಸ್ಪಷ್ಟ ಉತ್ತರ, ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳು ತತ್ತರ

Microfinance Harassment: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜನವರಿ 25) ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮೈಕ್ರೋಫೈನಾನ್ಸ್‌ ವಿಶೇಷ ಸಭೆ ನಡೆಸಿದರು. ಅಲ್ಲಿ ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳಿಗೆ 5 ನೇರ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಉತ್ತರ ನೀಡಲಾಗದೆ ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳು ಕಷ್ಟಪಟ್ಟರು. ಇಲ್ಲಿದೆ ಆ ವಿವರ.

ಮೈಕ್ರೋಫೈನಾನ್ಸ್ ವಿಶೇಷ ಸಭೆ; ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ 5 ನೇರ ಪ್ರಶ್ನೆಗಳನ್ನು ಮೈಕ್ರೋಫೈನಾನ್ಸ್ ಕಂಪನಿ ಪ್ರತಿನಿಧಿಗಳಿಗೆ ಕೇಳಿದರು. ಆದರೆ ಸ್ಪಷ್ಟ ಉತ್ತರ ನೀಡಲು  ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳು ಕಷ್ಟಪಟ್ಟರು. (ಸಾಂಕೇತಿಕ ಚಿತ್ರ)
ಮೈಕ್ರೋಫೈನಾನ್ಸ್ ವಿಶೇಷ ಸಭೆ; ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ 5 ನೇರ ಪ್ರಶ್ನೆಗಳನ್ನು ಮೈಕ್ರೋಫೈನಾನ್ಸ್ ಕಂಪನಿ ಪ್ರತಿನಿಧಿಗಳಿಗೆ ಕೇಳಿದರು. ಆದರೆ ಸ್ಪಷ್ಟ ಉತ್ತರ ನೀಡಲು ಕಿರುಹಣಕಾಸು ಸಂಸ್ಥೆ ಪ್ರತಿನಿಧಿಗಳು ಕಷ್ಟಪಟ್ಟರು. (ಸಾಂಕೇತಿಕ ಚಿತ್ರ)

Microfinance Harassment: ಬಡವರ ಹಿತವೇ ಮುಖ್ಯವಾಗಿದ್ದು, ಕಾನೂನು ಚೌಕಟ್ಟು ಮೀರಿ ಬಲವಂತದ ಸಾಲವಸೂಲಿ ವಿರುದ್ಧ ಮೈಕ್ರೋಫೈನಾನ್ಸ್ ಕಂಪನಿಗಳ ಎಂಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಸರ್ಕಾರ ಶನಿವಾರ (ಜನವರಿ 25) ಎಚ್ಚರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮೈಕ್ರೋಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಜತೆಗೆ ವಿಶೇಷ ಸಭೆ ನಡೆಸಿದರು. ಮೊದಲ ಹಂತದ ಸಭೆಯಲ್ಲಿ ಮೈಕ್ರೋಫೈನಾನ್ಸ್ ಕಂಪನಿ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರಿಂದ ಬಹುಮುಖ್ಯ ಪ್ರಶ್ನೆಗಳಿಗೆ ಉತ್ತರ ಬಯಸಿದ್ದರು.

ಮೈಕ್ರೋಫೈನಾನ್ಸ್ ವಿಶೇಷ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಮುಖ್ಯ ಪ್ರಶ್ನೆ

ನೋಂದಣಿ ಆಗಿ ಪರವಾನಗಿ ಪಡೆದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಲವು ಮುಖ್ಯ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ತಾಕೀತು ಮಾಡಿದರು.

1) ಮೈಕ್ರೋಫೈನಾನ್ಸ್ ಕಂಪನಿ ಸಿಬ್ಬಂದಿ ನಿಯಮ ಬಾಹಿರವಾಗಿ ಸಾಲವಸೂಲಿ ಮಾಡುತ್ತಿರುವುದನ್ನು ನಿಯಂತ್ರಿಸಲು ಏನು ಕ್ರಮ ಜರುಗಿಸಿದ್ದೀರಿ? ಅಂಥಾ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಾ?

2) ಸಾಲ ನೀಡುವ ಮೊದಲು ಮೊದಲು ಕೆವೈಸಿ ಮಾಡಿಸಿದ್ದರೆ ಒಬ್ಬರೇ ಸಾಲಗಾರರಿಗೆ ಪದೇಪದೆ ಸಾಲ ಕೊಡುವುದು ತಪ್ಪುತ್ತಿತ್ತು. ಆಧಾರ್ ಕೆವೈಸಿ ಮಾಡಿಸುತ್ತಿಲ್ಲವೇಕೆ

3) ಸಾಲ ಸಾಮರ್ಥ್ಯವನ್ನು ಅಂದಾಜಿಸದೇ ಸಾಲ ನೀಡುವುದೇಕೆ? ಆರ್‌ಬಿಐ ನಿಯಮ ಮೀರಿ ಸಾಲ ಕೊಡುತ್ತಿರುವುದೇಕೆ, ಅವರ ಮರುಪಾವತಿಯ ಸಾಮರ್ಥ್ಯ ಗಮನಿಸಬೇಕಲ್ಲವೆ

4) ಸಾಲ ಕೊಡುವ ಮೊದಲು ಆರ್‌ಬಿಐನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ?

5) ಸಾಲ ವಸೂಲಿ ಮಾಡುವುದಕ್ಕಾಗಿ ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರಾ, ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಾ, ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು

ನಾವಲ್ಲ, ಪರವಾನಗಿ ಇಲ್ಲದ ಕಂಪನಿ ಪ್ರತಿನಿಧಿಗಳು ಎಂದ ಮೈಕ್ರೋಫೈನಾನ್ಸ್ ಪ್ರತಿನಿಧಿಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹಂತದ ಸಭೆಯಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳ ಮುಖ್ಯಸ್ಥರಿಗೆ 5 ಮುಖ್ಯ ಪ್ರಶ್ನೆಗಳನ್ನು ಕೇಳಿದಾಗ ಅವರಿಂದ ಸ್ಪಷ್ಟ ಉತ್ತರ ಸಿಗಲಿಲ್ಲ.

ಇದೇ ವೇಳೆ, ಆರ್ ಬಿ ಐ ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿದ ಮೈಕ್ರೋ ಫೈನಾನ್ಸ್ ಕಂಪನಿಗಳ ಪರವಾನಗಿ ರದ್ದುಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಆರ್‌ಬಿಐ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ನಡುವೆ, ಭಾರತೀಯ ರಿಸರ್ವ್ ಬ್ಯಾಂಕ್ ಪರವಾನಗಿ ಪಡೆದಿರುವ ಕಂಪನಿಗಳು ನಿಯಮಬಾಹಿರ ವಸೂಲಿಗೆ ಇಳಿದಿಲ್ಲ, ಆ ರೀತಿ ಮಾಡುತ್ತಿರುವುದು ಪರವಾನಗಿ ಇಲ್ಲದ ಕಂಪನಿಗಳು ಎಂದು ಮೈಕ್ರೋಫೈನಾನ್ಸ್ ಕಂಪನಿ ಮುಖ್ಯಸ್ಥರು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.

ಆ ಸಂದರ್ಭದಲ್ಲಿ, ಸಚಿವ ಕೃಷ್ಣಬೈರೇಗೌಡರು, ಎಚ್.ಕೆ.ಪಾಟೀಲ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಕರಾರು ವ್ಯಕ್ತಪಡಿಸಿ, ಪರವಾನಗಿ ಇದ್ದವರೇ ಈ ರೀತಿ ಮಾಡುತ್ತಿದ್ದಾರೆ ಎನ್ನುವ ವರದಿ ನಮಗೆ ಗ್ರೌಂಡ್ ರಿಪೋರ್ಟ್ ನಲ್ಲಿ ಬಂದಿದೆ. ಆದ್ದರಿಂದ ಬಡ ಜನರ ಹಿತಕಾಯಲು ನಾವು ನಿಯಮ ಉಲ್ಲಂಘಿಸುವ ಕಂಪನಿ ಎಂ.ಡಿ ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಚಿವರು ಸಭೆಯಲ್ಲಿ‌ ಗುಡುಗಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನಿಯಮ ಬಾಹಿರ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಮಹಿಳೆಯರ, ವೃದ್ಧರ ಮೇಲೆ ದಬ್ಬಾಳಿಕೆ ನಡೆಸಿರುವ ಪತ್ರಿಕಾ ವರದಿಗಳೂ ನಿತ್ಯ ಬರುತ್ತಿವೆ. ನಾನು ಇದನ್ನೆಲ್ಲಾ ಸಹಿಸುವುದಿಲ್ಲ. ನನ್ನ ಜನರ ರಕ್ಷಣೆಗೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಮೈಕ್ರೋಫೈನಾನ್ಸ್ ಕಂಪನಿ ಮುಖ್ಯಸ್ಥರನ್ನು ಎಚ್ಚರಿಸಿದರು.

Whats_app_banner