ಕನ್ನಡ ಸುದ್ದಿ  /  Karnataka  /  Minister Ashwath Narayan Inaugurated A Program At Bengaluru Doordarshan Kendra

Doordarshan: ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ “ಮಾಧ್ಯಮ ಮೈಲುಗಲ್ಲು ನಲವತ್ತರ ಹೊಸ್ತಿಲು” ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಅಶ್ವತ್ಥ ನಾರಾಯಣ

ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಅಮೃತ ಕಾಲದ ಕನಸುಗಳನ್ನು ನನಸು ಮಾಡಲಿದೆ ಎಂದು ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ “ಮಾಧ್ಯಮ ಮೈಲುಗಲ್ಲು ನಲವತ್ತರ ಹೊಸ್ತಿಲು” ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಅಶ್ವತ್ಥ ನಾರಾಯಣ
ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ “ಮಾಧ್ಯಮ ಮೈಲುಗಲ್ಲು ನಲವತ್ತರ ಹೊಸ್ತಿಲು” ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು: ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಅಮೃತ ಕಾಲದ ಕನಸುಗಳನ್ನು ನನಸು ಮಾಡಲಿದೆ ಎಂದು ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಪ್ರಸಾರ ಭಾರತಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ “ಮಾಧ್ಯಮ ಮೈಲುಗಲ್ಲು ನಲವತ್ತರ ಹೊಸ್ತಿಲು” ಕಾರ್ಯಕ್ರಮ ಉದ್ಘಾಟಿಸಿ, ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಿಸಿ ಮಾತನಾಡಿದ ಅವರು, ಕರ್ನಾಟಕ ಅನನ್ಯ ಪ್ರತಿಭೆಗಳ ತಾಣ. ಇಡೀ ದೇಶಕ್ಕೆ ಇಲ್ಲಿನ ಪ್ರತಿಭೆಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಆಧಾರ್ ಪರಿಕಲ್ಪನೆ ಬಂದಿದ್ದು ಇದೇ ರಾಜ್ಯದಿಂದ, ಜಿ.ಎಸ್.ಟಿ, ಕೃಷಿ ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ ಹೀಗೆ ಯಾವುದೇ ವಲಯದಲ್ಲಿ ನೋಡಿದರೂ ಕರ್ನಾಟಕ ಪ್ರತಿಭೆಗಳ ಆಲೋಚನೆಗಳು ದೇಶಾದ್ಯಂತ ಅನುಷ್ಠಾನಗೊಂಡಿವೆ. ಅಧ್ಯಯನದ ಪ್ರಕಾರ ರಾಜ್ಯದ ಶೇ 70 ರಷ್ಟು ವಿದ್ಯಾರ್ಥಿಗಳು ಸ್ವಂತ ಸಾಮರ್ಥ್ಯದಿಂದ ಕಲಿಯುತ್ತಿದ್ದು, ಶೇ 20 ರಷ್ಟು ಸ್ನೇಹಿತರಿಂದ ಹಾಗೂ ಶೇ 10 ರಷ್ಟು ಮಾತ್ರ ಶಿಕ್ಷಕರಿಂದ ಕಲಿಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಅಗಾಧ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ವಿಜ್ಞಾನ, ತಂತ್ರಜ್ಞಾನ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ಇಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದೆ. ಮಾಧ್ಯಮಗಳು ಸಹ ಕೆಟ್ಟದ್ದು ಮತ್ತು ಒಳ್ಳೆಯದನ್ನು ತೋರಿಸುತ್ತವೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕು. ಬೆಂಗಳೂರು ದೂರದರ್ಶನ ತನ್ನದೇ ಆದ ವೈಭವವನ್ನು ಹೊಂದಿದ್ದು, 40 ಹಿರಿಯ ಮತ್ತು ಶ್ರೇಷ್ಠ ಪತ್ರಕರ್ತರ ಬದುಕು – ಬರಹ – ಜೀವನ ಕುರಿತ ಕಾರ್ಯಕ್ರಮ ಪ್ರಸಾರ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಹಿರಿಯರ ಅನುಭವ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿದೆ ಎಂದು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ ಮಾತನಾಡಿ, ದೂರದರ್ಶನ ವಾಹಿನಿಯಿಂದ ಹಿರಿಯ ಪತ್ರಕರ್ತರ ಜೀವನಗಾಥೆಯನ್ನು ಪ್ರಸ್ತುತಪಡಿಸುವ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಪ್ರತಿಯೊಬ್ಬ ಹಿರಿಯ ಪತ್ರಕರ್ತರು 25 ರಿಂದ 30 ಪುಸ್ತಕಗಳನ್ನು ಬರೆಯುವಷ್ಟು ಅನುಭವವನ್ನು ಹೊಂದಿದ್ದಾರೆ. ಮುಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇವರ ಸಾಧನೆ ದಾರಿ ದೀಪವಾಗಲಿದೆ. ಜೊತೆಗೆ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಜೊತೆಗೂಡಿ ಪತ್ರಕರ್ತರಿಗೆ ವೃತ್ತಿ ತರಬೇತಿ ನೀಡುವ ಕೋರ್ಸ್ ಗಳನ್ನು ಆರಂಭಿಸಲಾಗುವುದು. ಮಾಧ್ಯಮ ತಜ್ಞ, ಬೆಂಗಳೂರು ವಿವಿ ಮಾಜಿ ರಿಜಿಸ್ಟ್ರಾರ್ ಡಾ. ಬಿ.ಕೆ. ರವಿ ಮತ್ತಿತರ ಸಹಕಾರದಿಂದ ಪಠ್ಯ ಕ್ರಮ ಸಿದ್ಧಪಡಿಸಲಾಗುವುದು. ಇದಕ್ಕಾಗಿ ಶೀಘ್ರದಲ್ಲೇ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಡಾ. ನಿರ್ಮಲಾ ಸಿ ಎಲಿಗಾರ್ ಮಾತನಾಡಿ, ದೂರದರ್ಶನ ಚಂದನವಾಹಿನಿ ಬೆಳವಣಿಗೆಗೆ ಹಲವಾರು ಹಿರಿಯ ಪತ್ರಕರ್ತರ ಸಹಕಾರವಿದ್ದು, ಅಂತಹ ಮಹನೀಯರ ಬದುಕು, ಸಾಧನೆಗಳನ್ನು ಪ್ರತಿಬಿಂಬಿಸುವ ಸರಣಿ ಕಾರ್ಯಕ್ರಮವನ್ನು ಆರಂಭಿಸಲಾಗುವುದು. ಚಂದನ ವಾಹಿನಿ ಯಾವುದೇ ಅಬ್ಬರವಿಲ್ಲದೇ ವಸ್ತುನಿಷ್ಟ ಕಾರ್ಯಕ್ರಮ, ವಿಶ್ವಾಸಾರ್ಹ ಸುದ್ಧಿ ಪ್ರಸಾರ ಸೇವೆಯನ್ನು ಮುಂದುವರೆಸುತ್ತಿದೆ. ಆಧುನಿಕ ತಂತ್ರಜ್ಞಾನಕ್ಕೆ ಚಂದನವಾಹಿನಿ ತೆರೆದುಕೊಂಡಿದ್ದು, 17 ಸಾವಿರ ಕಾರ್ಯಕ್ರಮಗಳು ಯೂಟ್ಯೂಬ್ ವಾಹಿನಿಯಲ್ಲಿವೆ ಎಂದರು.

ವಿಜಯವಾಣಿ ಸಂಪಾದಕರಾದ ಕೆ.ಎನ್. ಚೆನ್ನೇಗೌಡ ಚಂದನವಾಹಿಯ ಸುದ್ದಿ ವಿಭಾಗದೊಂದಿಗಿನ ತನ್ನ ಅನುಭವಗಳನ್ನು ಹಂಚಿಕೊಂಡರು. ಇಲ್ಲಿ ಕಲಿತ ವಿಷಯಗಳು ತಮ್ಮ ವೃತ್ತಿ ಬದುಕಿಗೆ ಪೂರಕವಾಗಿವೆ. ಚಂದನವಾಹಿನಿಯ ಪ್ರೀತಿಯ ವಾತಾವರಣದಲ್ಲಿ ಏನೇನು ಬದಲಾವಣೆಗಳಾಗಿಲ್ಲ. ಇಲ್ಲಿನ ಸೊಗಡಿನ ಘಮಲು ಹಾಗೆಯೇ ಉಳಿದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರನಟಿ, ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಮಾತನಾಡಿ, ಚಂದನ ವಾಹಿನಿಯ ಭಾಷೆ ಅತ್ಯುತ್ತಮವಾಗಿದ್ದು, ಕನ್ನಡ ಕಲಿಕೆಗೆ ಮಾರ್ಗದರ್ಶನ ಮಾಡುತ್ತದೆ. ವಾಹಿನಿಯ ಗುಣಮಟ್ಟ ಉತ್ತಮವಾಗಿದ್ದು, ತಂತ್ರಜ್ಞಾನಕ್ಕೆ ತಕ್ಕಂತೆ ತನ್ನನ್ನು ಮೇಲ್ದರ್ಜೇಗೇರಿಸಿಕೊಳ್ಳುತ್ತಿದೆ ಎಂದು ಹೇಳಿದರು.

IPL_Entry_Point