Lakshmi Hebbalkar: 13 ದಿನ ಬಳಿಕ ಲಕ್ಷ್ಮೀ ಹೆಬ್ಬಾಳಕರ್ ಆಸ್ಪತ್ರೆಯಿಂದ ಬಿಡುಗಡೆ; ಬಿಜೆಪಿ ಕಲ್ಲು ಹೃದಯದವರಿಗೆ ಉತ್ತರಿಸೋಲ್ಲವೆಂದ ಸಚಿವೆ
ಕನ್ನಡ ಸುದ್ದಿ  /  ಕರ್ನಾಟಕ  /  Lakshmi Hebbalkar: 13 ದಿನ ಬಳಿಕ ಲಕ್ಷ್ಮೀ ಹೆಬ್ಬಾಳಕರ್ ಆಸ್ಪತ್ರೆಯಿಂದ ಬಿಡುಗಡೆ; ಬಿಜೆಪಿ ಕಲ್ಲು ಹೃದಯದವರಿಗೆ ಉತ್ತರಿಸೋಲ್ಲವೆಂದ ಸಚಿವೆ

Lakshmi Hebbalkar: 13 ದಿನ ಬಳಿಕ ಲಕ್ಷ್ಮೀ ಹೆಬ್ಬಾಳಕರ್ ಆಸ್ಪತ್ರೆಯಿಂದ ಬಿಡುಗಡೆ; ಬಿಜೆಪಿ ಕಲ್ಲು ಹೃದಯದವರಿಗೆ ಉತ್ತರಿಸೋಲ್ಲವೆಂದ ಸಚಿವೆ

ಅಪಘಾತಕ್ಕೆ ಒಳಗಾಗಿ ಬೆಳಗಾವಿಯಲ್ಲಿ ಎರಡು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು.

ಬೆಳಗಾವಿ ಆಸ್ಪತ್ರೆಯಿಂದ ಬಿಡುಗಡೆಯಾದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ವೈದ್ಯರ ಸೇವೆಗೆ ಕೈ ಮುಗಿದರು.
ಬೆಳಗಾವಿ ಆಸ್ಪತ್ರೆಯಿಂದ ಬಿಡುಗಡೆಯಾದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ವೈದ್ಯರ ಸೇವೆಗೆ ಕೈ ಮುಗಿದರು.

ಬೆಳಗಾವಿ: ರಸ್ತೆ ಅಪಘಾತದಿಂದಾಗಿ ಕಳೆದ 13 ದಿನಗಳಿಂದ ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭಾನುವಾರ ಬಿಡುಗಡೆ ಮಾಡಲಾಯಿತು. ಎರಡು ವಾರದ ಹಿಂದೆ ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರು ಬಳಿ ಕಾರು ಅಪಘಾತವಾಗಿ ಬೆನ್ನಿಗೆ ಏಟು ಬಿದ್ದಿದ್ದರಿಂದ ಗಾಯಗೊಂಡು ಲಕ್ಷ್ಮಿ ಹೆಬ್ಬಾಳಕರ್‌ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ವಾರ ಆಸ್ಪತ್ರೆಯಲ್ಲಿ ಇರಬೇಕು ಎನ್ನುವ ಸೂಚನೆಯಂತೆ ಅವರು ಅಲ್ಲಿಯೇ ಚಿಕಿತ್ಸೆ ಪಡೆದು ಮನೆಗೆ ವಾಪಾಸಾದರು. ಇನ್ನೂ ಕೆಲ ದಿನಗಳ ಕಾಲ ಅವರು ವಿರಾಮದಲ್ಲಿಯೇ ಇರಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್‌ ಅವರು ಗಣರಾಜ್ಯೋತ್ಸವದಲ್ಲೂ ಭಾಗಿಯಾಗಲಿಲ್ಲ.

ರಸ್ತೆ ಅಪಘಾತದಲ್ಲಿ ಬದುಕಿ ಬಂದಿದ್ದು ನನಗೆ ಪುನರ್ಜನ್ಮ ಬಂದಂತಾಗಿದೆ. ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ, ಸಚಿವೆಯಾಗಿ ನನಗೂ ಜವಾಬ್ದಾರಿ ಇದೆ. ಮಾರ್ಚ್ ತಿಂಗಳಲ್ಲಿ ಬಜೆಟ್ ಕೂಡ ಇದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಕೂಡ ಚನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಮೂರು ವಾರ ವಿಶ್ರಾಂತಿ ಹೇಳಿದ್ದಾರೆ. ಆದಷ್ಟು ಬೇಗ ಸಾರ್ವಜನಿಕ ಜೀವನಕ್ಕೆ ಮರಳುತ್ತೇನೆ ಎಂದು ಸಚಿವರು ಆಸ್ಪತ್ರೆ ಬಳಿ ಸುದ್ದಿಗಾರರಿಗೆ ತಿಳಿಸಿದರು.

ಸಂಕ್ರಾಂತಿ ದಿನ ಬೆಳಗ್ಗೆ 7 ಗಂಟೆಯೊಳಗೇ ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡೋಣ ಅಂತ ಜನವರಿ 13ರಂದು ರಾತ್ರಿ 10.30ರ ವೇಳೆಗೆ ನಿರ್ಧಾರ ಮಾಡಿ ಬೆಂಗಳೂರಿನಿಂದ ಹೊರಡಲಾಯಿತು. ಬಳಿಕ ಕುಟುಂಬ ಸದಸ್ಯರೊಂದಿಗೆ ಹಿರೇಹಟ್ಟಿಹೊಳಿಗೆ ಹೋಗಲು ತೀರ್ಮಾನಿಸಿದ್ದೆವು. ಪ್ರವಾಸ ದಿಢೀರ್ ನಿರ್ಧಾರ ಆಗಿದ್ದಕ್ಕೆ ಬೆಂಗಾವಲು ಪಡೆ ತೆಗೆದುಕೊಂಡಿರಲಿಲ್ಲ. ಈ ವೇಳೆ ಅಪಘಾತವಾಯಿತು ಎಂದು ಅಂದಿನ ಘಟನೆ ವಿವರಿಸಿದರು.

ಕಳೆದ 13 ದಿನಗಳಿಂದ ಚಿಕಿತ್ಸೆ ನೀಡಿದ ವಿಜಯ ಆಸ್ಪತ್ರೆ ವೈದ್ಯ ಡಾ. ರವಿ ಪಾಟೀಲ್ ಅವರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು. ಕಳೆದ 13 ದಿನಗಳು ನನಗೆ ಆಸ್ಪತ್ರೆಗಿಂತ ಮನೆಯಂತೆ ಭಾಸವಾಯಿತು. ನನ್ನ ಕುಟುಂಬಕ್ಕಿಂತ ಹೆಚ್ಚಾಗಿ ನನ್ನನ್ನು ನೋಡಿಕೊಂಡರು. ನನ್ನ ಕಷ್ಟದ ಸಮಯದಲ್ಲಿ, ವೈದ್ಯರು ನನ್ನ ಪಕ್ಕದಲ್ಲಿ ನಿಂತು, ಬೆಂಬಲ ಮತ್ತು ಕಾಳಜಿಯನ್ನು ತೋರಿದರು. ವೈದ್ಯರ ದಯೆ, ತಾಳ್ಮೆ ಮತ್ತು ಸಮರ್ಪಣೆ ಹೃದಯಸ್ಪರ್ಶಿಯಾಗಿತ್ತು. ಧೈರ್ಯ ಕಳೆದುಕೊಳ್ಳದಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ನನ್ನ ಜೊತೆ ನಿಂತರು ಎಂದು ಹೇಳಿದರು.

ನನ್ನ ಪುಣ್ಯವೇನೋ ಗೊತ್ತಿಲ್ಲ, ಇಲ್ಲಿನ ವೈದ್ಯರ ಕಾಳಜಿಯಿಂದ ಬೇಗ ಗುಣಮುಖ ಆದೆ. ಅಪಘಾತದ ಭಾವನೆ, ಆತಂಕ ಬಾರದಂತೆ ನೋಡಿಕೊಂಡರು, ಧೈರ್ಯ ತುಂಬಿದರು. ತಾಯಿ, ತಮ್ಮ, ಸೊಸೆ, ಮಗ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳುವೆ ಎಂದರು.

ಕಾರ್ಯಕರ್ತರು, ಕ್ಷೇತ್ರದ ಜನರಿಗೆ ಋಣಿ

ಆಸ್ಪತ್ರೆಯಲ್ಲಿದ್ದ ವೇಳೆ ನನ್ನ ಚೇತರಿಕೆಗೆ ಹಾರೈಸಿದ ನಾಡಿನ ಮಠಾಧೀಶರು, ಕಾರ್ಯಕರ್ತರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆ, ಬೆಳಗಾವಿ ಜಿಲ್ಲೆಯ ಜನರಿಗೆ ಋಣಿಯಾಗಿದ್ದೇನೆ. ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ನನ್ನ ಚೇತರಿಕೆಗೆ ಹಾರೈಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಸಚಿವ ಸಂಪುಟದ ಸಹೋದ್ಯೋಗಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ಭೇಟಿಯಾಗಿ ಧೈರ್ಯ ತುಂಬಿದರು. ಅವರಿಗೆ ಎಂದಿಗೂ ಕೃತಜ್ಞಳಾಗಿರುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಕಲ್ಲು ಹೃದಯದವರ ಆರೋಪಕ್ಕೆ ಉತ್ತರವಿಲ್ಲ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಹಣವಿತ್ತು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಲ್ಲು ಹೃದಯದವರು, ಹೃದಯ ಇಲ್ಲದವರಿಗೆ ಉತ್ತರ ಕೊಡಲ್ಲ. ಸಾವಿನಲ್ಲೂ ರಾಜಕೀಯ ಮಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಬಿಜೆಪಿ ನಾಯಕರ ಆರೋಪಕ್ಕೆ ಉತ್ತರ ಕೊಡಲ್ಲ. ಆರೋಪ ಮಾಡಿದವರಿಗೆ ಬುದ್ಧಿ ಭ್ರಮಣೆ ಆಗಿರಬೇಕು. ಅಪಘಾತದ ಬಳಿಕ ಪ್ರಾಣಾಪಾಯದಿಂದ ಗೆದ್ದು ಬಂದಿರುವೆ. ಚೇತರಿಕೆ ಬಳಿಕ ಸಂಪೂರ್ಣ ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಸಂಬಂಧ ಕಾರ್ಯಪ್ರವೃತ್ತಳಾಗಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Whats_app_banner