ಅಣಕು ಯುದ್ಧ ತಾಲೀಮು: ಇಲ್ಲಿದೆ ಮಾಕ್ ಡ್ರಿಲ್ ನಡೆಯುವ ಕರ್ನಾಟಕದ ಜಿಲ್ಲೆಗಳ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಅಣಕು ಯುದ್ಧ ತಾಲೀಮು: ಇಲ್ಲಿದೆ ಮಾಕ್ ಡ್ರಿಲ್ ನಡೆಯುವ ಕರ್ನಾಟಕದ ಜಿಲ್ಲೆಗಳ ವಿವರ

ಅಣಕು ಯುದ್ಧ ತಾಲೀಮು: ಇಲ್ಲಿದೆ ಮಾಕ್ ಡ್ರಿಲ್ ನಡೆಯುವ ಕರ್ನಾಟಕದ ಜಿಲ್ಲೆಗಳ ವಿವರ

ಯುದ್ಧ ಸಂದರ್ಭದಲ್ಲಿ ಸನ್ನದ್ಧತೆ ಮತ್ತು ಕ್ಷಿಪ್ರ ಪ್ರತಿಕ್ರಿಯೆ ನೀಡುವ ಕ್ರಮಗಳನ್ನು ಜನರಿಗೆ ಪರಿಚಯಿಸಲು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್ ನಡೆಸುವಂತೆ ಸೂಚನೆ ನೀಡಿದೆ. ಅದರ ಪ್ರಕಾರ ಅಣಕು ಯುದ್ಧ ತಾಲೀಮು ನಡೆಯುವ ಜಿಲ್ಲೆಗಳ ವಿವರ ಇಲ್ಲಿದೆ.

ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್ ನಡೆಸುವಂತೆ ಸೂಚನೆ- ಸಾಂದರ್ಭಿಕ ಚಿತ್ರ
ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್ ನಡೆಸುವಂತೆ ಸೂಚನೆ- ಸಾಂದರ್ಭಿಕ ಚಿತ್ರ

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಣ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಯಾವುದೇ ಸಂದರ್ಭದಲ್ಲಿ ಯುದ್ಧ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಹೊಸ ಮತ್ತು ಸಂಕೀರ್ಣ ಬೆದರಿಕೆಗಳ ವಿರುದ್ಧ ಸನ್ನದ್ಧತೆಯನ್ನು ಪರಿಶೀಲಿಸಲು ಅಣಕು ಯುದ್ಧ ಅಭ್ಯಾಸಗಳನ್ನು ನಡೆಸುವಂತೆ ಗೃಹ ಸಚಿವಾಲಯ ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಮಧ್ಯೆ ಈ ನಿರ್ದೇಶನ ಬಂದಿದೆ. ಹೀಗಾಗಿ ಮೇ 7 ರಂದು ದೇಶಾದ್ಯಂತ ಆಯ್ದ 244 ಜಿಲ್ಲೆಗಳಲ್ಲಿ ಈ ಅಭ್ಯಾಸಗಳನ್ನು ನಡೆಸಲಾಗುವುದು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಅಣಕು ಯುದ್ಧ ತಾಲೀಮಿನ ಭಾಗವಾಗಿ, ವಾಯು-ದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆಗೆ ಸನ್ನದ್ಧತೆಯನ್ನು ಪರಿಶೀಲಿಸುವುದು ಮತ್ತು ಪ್ರತಿಕೂಲ ದಾಳಿ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರಿಗೆ ಅಗತ್ಯ ಮತ್ತು ಸೂಕ್ತ ನಾಗರಿಕ ರಕ್ಷಣಾ ಅಂಶಗಳ ಬಗ್ಗೆ ತರಬೇತಿ ನೀಡಬೇಕು ಎಂದು ಗೃಹ ಸಚಿವಾಲಯದ ಸೂಚನೆ ತಿಳಿಸಿದೆ.

ಮಾಕ್ ಡ್ರಿಲ್‌ನ ಭಾಗವಾಗಿ ಅಣಕು ಅಭ್ಯಾಸಗಳು ಕ್ರ್ಯಾಶ್-ಬ್ಲ್ಯಾಕೌಟ್ ಕ್ರಮಗಳು, ಪ್ರಮುಖ ಸ್ಥಾವರಗಳು ಮತ್ತು ಸ್ಥಾಪನೆಗಳನ್ನು ಶೀಘ್ರವಾಗಿ ಕ್ಯಾಮೌಫ್ಲೇಜ್ ಮಾಡುವುದು ಮತ್ತು ಸ್ಥಳಾಂತರಿಸುವ ಯೋಜನೆಗಳನ್ನು ತಕ್ಷಣದಲ್ಲಿ ಜಾರಿಗೊಳಿಸುವುದು ಮತ್ತು ಪೂರ್ವಾಭ್ಯಾಸ ಮಾಡುವುದು ಇದರಲ್ಲಿ ಸೇರಿದೆ. ರಾಜ್ಯದ ಬೆಂಗಳೂರು ನಗರ, ಮಲ್ಲೇಶ್ವರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಯಲಿದೆ.

ಅಣಕು ಅಭ್ಯಾಸಗಳ ಭಾಗವಾಗಿ ಭಾರತೀಯ ವಾಯುಪಡೆ ಯೊಂದಿಗೆ ಹಾಟ್ಲೈನ್ ಮತ್ತು ರೇಡಿಯೋ-ಸಂವಹನ ಸಂಪರ್ಕಗಳನ್ನು ಕಾರ್ಯಗತಗೊಳಿಸುವುದು, ನಿಯಂತ್ರಣ ಕೊಠಡಿಗಳು ಮತ್ತು ರೆಡಾರ್ ನಿಯಂತ್ರಣ ಕೊಠಡಿಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದನ್ನು ಕೂಡ ಒಳಗೊಂಡಿರುತ್ತದೆ.

ಪ್ರಸ್ತುತ ಭೌಗೋಳಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ, ಹೊಸ ಬೆದರಿಕೆಗಳು ಮತ್ತು ಯುದ್ಧದ ಸವಾಲುಗಳು ಹೊರಹೊಮ್ಮಿವೆ, ಆದ್ದರಿಂದ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗರಿಷ್ಠ ನಾಗರಿಕ ರಕ್ಷಣಾ ಸನ್ನದ್ಧತೆಯನ್ನು ಎಲ್ಲಾ ಸಮಯದಲ್ಲೂ ಕಾಪಾಡಿಕೊಳ್ಳುವುದು ಈಗಿನ ಅಗತ್ಯವಾಗಿದೆ ಎಂದು ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ನಿರ್ದೇಶನಾಲಯದ ಪತ್ರದಲ್ಲಿ ತಿಳಿಸಲಾಗಿದೆ.

ಈ ಅಭ್ಯಾಸವನ್ನು ಗ್ರಾಮ ಮಟ್ಟದವರೆಗೆ ನಡೆಸಲು ಯೋಜಿಸಲಾಗಿದೆ. ಈ ಅಭ್ಯಾಸವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸನ್ನದ್ಧತೆಯನ್ನು ನಿರ್ಣಯಿಸುವ ಮತ್ತು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in