ನಮ್ಮಲ್ಲಿ ಸದ್ದಿಲ್ಲದೇ ಕರಗಿ ಹೋಗಿದೆ ನೈತಿಕತೆ, ಅದಕ್ಕೆ ಈ ಯೂರೋಪ್ ಘಟನೆಯೇ ಉತ್ತಮ ಉದಾಹರಣೆ; ರಂಗನೋಟ ಅಂಕಣ
ಕನ್ನಡ ಸುದ್ದಿ  /  ಕರ್ನಾಟಕ  /  ನಮ್ಮಲ್ಲಿ ಸದ್ದಿಲ್ಲದೇ ಕರಗಿ ಹೋಗಿದೆ ನೈತಿಕತೆ, ಅದಕ್ಕೆ ಈ ಯೂರೋಪ್ ಘಟನೆಯೇ ಉತ್ತಮ ಉದಾಹರಣೆ; ರಂಗನೋಟ ಅಂಕಣ

ನಮ್ಮಲ್ಲಿ ಸದ್ದಿಲ್ಲದೇ ಕರಗಿ ಹೋಗಿದೆ ನೈತಿಕತೆ, ಅದಕ್ಕೆ ಈ ಯೂರೋಪ್ ಘಟನೆಯೇ ಉತ್ತಮ ಉದಾಹರಣೆ; ರಂಗನೋಟ ಅಂಕಣ

ಯಾರೇನೇ ಅನ್ಯಾಯ ಮಾಡಲಿ ನಾನು ಮಾತ್ರ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳುವುದಿಲ್ಲ ಎನ್ನುವ ಆತ್ಮಗೌರವವಿರುವ ಪ್ರಜೆಗಳ ಸಂಖ್ಯೆ ಇಂದಿಗೆ ನಮ್ಮ ಸಮಾಜದಲ್ಲಿ ಬೆರಳೆಣಿಕೆಗೆ ಕುಸಿದಿದೆ. ಹೀಗೆ ಹೇಳಲು ಕಾರಣ ಇದೆ. ಅದಕ್ಕಿಲ್ಲಿ ಉತ್ತಮ ಉದಾಹರಣೆಯೂ ಇದೆ ಓದಿ. ಇದು ರಂಗಸ್ವಾಮಿ ಮೂಕನಹಳ್ಳಿ ಅವರ ರಂಗನೋಟ ಅಂಕಣ.

ನಮ್ಮಲ್ಲಿ ಸದ್ದಿಲ್ಲದೇ ಕರಗಿ ಹೋಗಿದೆ ನೈತಿಕತೆ, ಅದಕ್ಕೆ ಈ ಯೂರೋಪ್ ಘಟನೆಯೇ ಉತ್ತಮ ಉದಾಹರಣೆ; ರಂಗನೋಟ ಅಂಕಣ
ನಮ್ಮಲ್ಲಿ ಸದ್ದಿಲ್ಲದೇ ಕರಗಿ ಹೋಗಿದೆ ನೈತಿಕತೆ, ಅದಕ್ಕೆ ಈ ಯೂರೋಪ್ ಘಟನೆಯೇ ಉತ್ತಮ ಉದಾಹರಣೆ; ರಂಗನೋಟ ಅಂಕಣ

ಒಬ್ಬ ವ್ಯಕ್ತಿ, ಒಂದು ಸಮಾಜ, ಒಂದು ಊರು, ಒಂದು ನಗರ, ಒಂದು ಜಿಲ್ಲೆ, ಒಂದು ರಾಜ್ಯ, ಹಾಗೆ ಒಂದು ದೇಶ ಒಂದೇ ದಿನದಲ್ಲಿ ಕೆಟ್ಟದಾಗುವುದಿಲ್ಲ. ಒಳ್ಳೆಯದಾಗಲಿ, ಕೆಟ್ಟದಾಗಲಿ ಅದೊಂದು ಪ್ರಕ್ರಿಯೆ. ವರ್ಷಾನುಗಟ್ಟಲೆ ಅದದೇ ಪುನರಾವರ್ತನೆ ಆದುದರ ಫಲವದು. ಒಂದು ತಲೆಮಾರಿನ ನಂತರ ಅದು ಬದುಕುವ ರೀತಿ ಆಗಿ ಬಿಡುತ್ತದೆ. ಯಾವ ಕ್ಷಣದಲ್ಲಿ ಕೆಟ್ಟದರ ಕಡೆಗೆ ನಾವು ಹೊರಳಿದೆವು? ಎನ್ನುವುದನ್ನು ನಾವು ನಿಖರವಾಗಿ ಚರಿತ್ರೆಯ ಪುಟಗಳನ್ನು ತೆಗೆದಾಗ ಖಂಡಿತ ಉತ್ತರ ಸಿಗುತ್ತದೆ. ಆದರೆ ನಾವು ಆ ತಪ್ಪನ್ನು ತಿದ್ದದೆ ಬಿಟ್ಟ ಕಾರಣ ಇಂದಿನ ಸ್ಥಿತಿಗೆ ತಲುಪಿದ್ದೇವೆ.

ಭಾರತ ಎಂದರೆ ರಸ್ತೆಗಳಲ್ಲಿ ಚಿನ್ನ, ವಜ್ರ-ವೈಡೂರ್ಯಗಳನ್ನು ರಸ್ತೆಯಲ್ಲಿ ಮಾರುತ್ತಿದ್ದ ದೇಶ ಎಂದೂ, ಕೇವಲ ಒಂದು ಸುಳ್ಳು ಹೇಳಿದರೆ ಜೀವ ಉಳಿಸಿಕೊಳ್ಳುವ ಅಥವಾ ಅಪಾರ ಆಸ್ತಿ ತನ್ನದಾಗಿಸಿ ಕೊಳ್ಳುವ ಅವಕಾಶವಿದ್ದೂ ಸುಳ್ಳು ಹೇಳದವರ ದೇಶ ಎಂದು ಪ್ರಸಿದ್ಧವಾಗಿದ್ದ ಭಾರತ ಇಂದು ಸುಳ್ಳರ, ಆಷಾಡಭೂತಿಗಳ, ಸಮಯಸಾಧಕರ, ಸ್ವಸುಖಕ್ಕಾಗಿ ತಂದೆ ಮಗನನ್ನು, ಮಕ್ಕಳು ಹೆತ್ತವರನ್ನು, ಹೆಂಡತಿ ತನ್ನ ಗಂಡನನ್ನು ಕೊಲ್ಲುವ ಮಟ್ಟಕ್ಕೆ ಬದಲಾಗದ್ದು ಹೇಗೆ? ಮೊದಲ ಸಾಲಿನಲ್ಲಿ ಹೇಳಿದಂತೆ ಇದೆಲ್ಲವೂ ಒಂದು ದಿನದಲ್ಲಿ ಆಗಲಿಲ್ಲ. ಯಾರೊಬ್ಬರೂ ನಾನು ಕೆಟ್ಟವನಾಗಬೇಕು ಎಂದು ಪ್ಲಾನ್ ಮಾಡುವುದಿಲ್ಲ. ಅನ್ಯ ಮಾರ್ಗವೇ ಬೆಸ್ಟ್ ಎಂದು ಯಾರಿಗೂ ಅನ್ನಿಸುವುದಿಲ್ಲ.

ಹೀಗಿದ್ದೂ ಇವೆಲ್ಲವೂ ತೀರಾ ಸಾಧಾರಣ, ಸಾಮಾನ್ಯ ಎನ್ನುವಂತೆ ಸಮಾಜ, ದೇಶ ಬದಲಾಗುವುದು ಹೇಗೆ? ಇದೆಲ್ಲಕ್ಕೂ ಮೂಲ ಅದೆಲ್ಲೋ ಒಂದು ಸಣ್ಣ ಕಾರಣ, ಅಂದಿನ ದಿನದ ಮತಿಗೆಟ್ಟ ಕೆಲಸದಲ್ಲಿ ಅಡಗಿರುತ್ತದೆ. ಮೊದಲ ದಿನಗಳಲ್ಲಿ ಕಾಡುವ ಪಾಪಪ್ರಜ್ಞೆ ನಿಧಾನವಾಗಿ ನಶಿಸಿ, ಆ ಜಾಗದಲ್ಲಿ ಅದೊಂದು ಸಹಜ ಕ್ರಿಯೆ ಎನ್ನುವಂತೆ ಬದಲಾಗುತ್ತದೆ. ಆ ದಿನವನ್ನು, ಆ ಕ್ಷಣವನ್ನು ನಾವು ಬದಲು ಮಾಡಲಾಗುವುದಿಲ್ಲ. ಆದರೆ, ನಮ್ಮ ಕೈಲಿ ಮುಂದಿನ ದಿನಗಳನ್ನು, ಕ್ಷಣಗಳನ್ನು ಹೇಗಾಗಿಸಬೇಕು ಎನ್ನುವ ಮಾನಸಿಕ ಸಿದ್ಧತೆಯೊಂದಿಗೆ ನಡೆಯಲು ಶುರು ಮಾಡಿದರೆ ಮುಂದಿನ ಹತ್ತಾರು ವರ್ಷದಲ್ಲಿ ಮತ್ತೆ ಸ್ವರ್ಣ ಭೂಮಿ ಭಾರತ ಎನ್ನುವಂತೆ ನಾವು ಮಾಡಬಹುದು. ಅದಕ್ಕೆ ಬೇಕಾದ ಸಿದ್ಧತೆ ಮತ್ತು ಬದ್ಧತೆ ಮಾತ್ರ ಕಾಣುತ್ತಿಲ್ಲ ಎನ್ನುವುದು ವಿಷಾದನೀಯ.

ಮೊನ್ನೆ ಏನಾಯ್ತು ಅಂದರೆ..!

ರಿಲಯನ್ಸ್​ಗೆ ಮನೆಗೆ ಬೇಕಾದ ದಿನಸಿ ಕೊಳ್ಳಲು ಹೋಗಿದ್ದೆವು. ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗರಲ್ಲಿ ಐದಾರು ಹುಡುಗರು ಮಾತಾಡಿಕೊಂಡು ಒಟ್ಟಿಗೆ ಕೆಲಸ ಬಿಟ್ಟು ಬಿಟ್ಟಿದ್ದಾರೆ. ಅಷ್ಟು ದೊಡ್ಡ ಅಂಗಡಿಯಲ್ಲಿ ಇದದ್ದು ಕೇವಲ ಒಬ್ಬ ಕೆಲಸಗಾರ ಮಾತ್ರ. ಆತ ಅಂಗಡಿಯ ಹೊರಗೆ ನಿಂತಿದ್ದರು. ಏಕೆಂದರೆ ಅಲ್ಲಿ ಹಣ್ಣು ಮತ್ತು ತರಕಾರಿ ಇಟ್ಟಿದ್ದರು. ಅಂಗಡಿಯ ಒಳಗೆ ಹೋದರೆ, ಹೊರಗಡೆ ಇರುವ ಹಣ್ಣು, ತರಕಾರಿ ಯಾರು ಎತ್ತಿಕೊಂಡು ಹೋದರೂ ಆತನಿಗೆ ತಿಳಿಯುವುದಿಲ್ಲ! ಈ ಆತಂಕದಲ್ಲಿ ಆತ ಬಳಲುತ್ತಿದ್ದರು.

ಅಂಗಡಿಯ ಒಳಗೆ ದಿನಸಿ ತೆಗೆದುಕೊಂಡು ಬಿಲ್ಲಿಂಗ್​ಗೆ ಬನ್ನಿ ಎಂದಾಗ ಆತ ಒಳಗೆ ಬರುತ್ತಿದ್ದರು. ಅಂಗಡಿಯನ್ನು ಪ್ರವೇಶಿಸುವ ಗ್ರಾಹಕರು ದ್ರಾಕ್ಷಿ ಹಣ್ಣನ್ನು ಒಂದೆರೆಡು ಮುರಿದು ಬಾಯಿಗೆ ಹಾಕಿಕೊಂಡು ಒಳಕ್ಕೆ ಬರುತ್ತಿದ್ದರು. ಒಬ್ಬರಲ್ಲ , ಮುಕ್ಕಾಲು ಪಾಲು ಜನ ಅದು ತಮ್ಮ ಹಕ್ಕು ಎನ್ನುವಂತೆ ಒಂದೆರೆಡು ಕಿತ್ತು ಬಾಯಿಗೆ ಹಾಕಿಕೊಂಡು ಹೋಗುತ್ತಿದ್ದರು. ಅಲ್ಲಿ ಒಬ್ಬ ಕೆಲಸಗಾರ ಇದಿದ್ದರೆ ಈ ಸಭ್ಯ ಜನರಾರೂ ಆ ರೀತಿ ಮಾಡುತ್ತಿರಲಿಲ್ಲ. ಇನ್ನು ಒಳಗಿನ ವಿಷಯ ಇನ್ನೊಂದು ತರಹದ್ದು! ಕಡಲೇಕಾಯಿ ಬೀಜ ಮುಷ್ಠಿ ತುಂಬಾ ಹಿಡಿದು ತಿನ್ನುತ್ತಾ ಹೋಗುವುದು. ಅವಲಕ್ಕಿ ಬಾಯಿಗೆ ಎಸೆದುಕೊಳ್ಳುವುದು ಇವೆಲ್ಲವೂ ಅತಿ ಸಾಧಾರಣ ಎನ್ನುವಂತ್ತಿತ್ತು. ಅದ್ಯಾರೋ ಮಹಾನುಭಾವರು ಬಿಸ್ಕತ್ ಪ್ಯಾಕೆಟ್ ಕೂಡ ಬಿಚ್ಚಿ ಒಂದೆರೆಡು ತಿಂದು ಉಳಿದದ್ದು ಅಲ್ಲೇ ಬಿಸಾಕಿ ಹೋಗಿದ್ದರು!

ಈ ರಿಲಯನ್ಸ್​​ಗೆ ನಾನು ಮತ್ತು ರಮ್ಯ ಕಳೆದ ಮೂರು ವರ್ಷದಿಂದ ಬರುತ್ತಿದ್ದೇವೆ. ಈ ರೀತಿ ಕಂಡದ್ದು ಇದೇ ಮೊದಲು. ಕಾರಣ ಸ್ಪಷ್ಟ. ಅಲ್ಲಿ ನೋಡುವವರು, ಗಮನಿಸುವವರು, ಸೂಪರ್​​ವೈಸ್ ಮಾಡುವವರು ಯಾರೂ ಇರಲಿಲ್ಲ! ನೋಡುವರಿಲ್ಲದ ತಕ್ಷಣ ಅದು ಪಬ್ಲಿಕ್ ಪ್ರಾಪರ್ಟಿ ಎನ್ನುವಂತೆ ವರ್ತಿಸುವ ನಮ್ಮ ಜನರ ಈ ಮನೋಭಾವಕ್ಕೆ ಏನು ಹೇಳುವುದು? ಅಂದಹಾಗೆ ಸುತ್ತಮುತ್ತಲ ಮನೆಗಳಿಂದ ಬರುವ ಈ ಸಭ್ಯ ನಾಗರಿಕರ ಮನೆಗಳು ಕೋಟಿಗೆ ಬಾಳುತ್ತವೆ. ಇವರಾರೂ ಬಡವರಲ್ಲ. ಹೊಟ್ಟೆ ಹಸಿದವರೂ ಅಲ್ಲ. ಕೊರೊನಾ ಸಮಯದಲ್ಲಿ ಕೂಡ ಹೀಗೆ ಶಾಸಕರು, ಸರ್ಕಾರ, ಮತ್ತಿತರ ಸಂಘ, ಸಂಸ್ಥೆಗಳು ಉಚಿತವಾಗಿ ನೀಡುತ್ತಿದ್ದ ಫುಡ್ ಕಿಟ್ ಪಡೆಯಲು ಕೋಟಿ ಕೋಟಿ ಬೆಲೆ ಬಾಳುವ ಮನೆಯ ಒಡೆಯರು ಸಾಲಿನಲ್ಲಿ ನಿಂತದ್ದು ನಾನು ಕಣ್ಣಾರೆ ಕಂಡಿದ್ದೇನೆ. ಈ ಮನಸ್ಥಿತಿ ಬದಲಾಗದ ಹೊರತು ಭಾರತ ಬದಲಾಗುವುದಾದರೂ ಹೇಗೆ?

ಯೂರೋಪ್​ನಲ್ಲೂ ಹೀಗೇನಾ..?

ಮಾರ್ಚ್ ತಿಂಗಳಲ್ಲಿ ಮೂರು ವಾರ ಯೂರೋಪ್ ಪ್ರವಾಸ ಮಾಡುವ ಅವಕಾಶ ನನ್ನದಾಗಿತ್ತು. ಅಲ್ಲೇ 18 ವರ್ಷ ನೆಲೆ ನಿಂತಿದ್ದ ಕಾರಣ ಅದು ಹೊಸತು ಎನ್ನುವಂತಿಲ್ಲ. ಆದರೂ ಡೆನ್ಮಾರ್ಕ್ ದೇಶಕ್ಕೆ ಅದು ನನ್ನ ಮೊದಲ ಭೇಟಿಯಾಗಿತ್ತು. ಚಳಿ ದೇಶವಾದ ಕಾರಣ ಮತ್ತು ದೇಶದ ಒಟ್ಟಾರೆ ಜನಸಂಖ್ಯೆ ಕೇವಲ 59 ಲಕ್ಷವಿರುವ ಕಾರಣ ಅಲ್ಲಿಯ ಬಹುತೇಕ ಅಂಗಡಿಗಳಲ್ಲಿ ಅತ್ಯಂತ ಕಡಿಮೆ ಕೆಲಸಗಾರರನ್ನು ನೀವು ನೋಡಬಹುದು. ಸೊವಿನೀರ್ ಕೊಳ್ಳುವ ಅಂಗಡಿಯಲ್ಲಿ ಒಬ್ಬಾತ ಕ್ಯಾಶ್ ಕೌಂಟರ್​ನಲ್ಲಿ ಕುಳಿತ್ತಿದ್ದು ಬಿಟ್ಟರೆ ಮತ್ತ್ಯಾರೂ ಇರಲಿಲ್ಲ. ಅಲ್ಲಿ ಕಳ್ಳತನ ಮಾಡಬೇಕು ಎಂದು ಯಾರಾದರೂ ಬಯಸಿದರೆ ಅದು ಬಹಳ ಸುಲಭ. ಆದರೆ ಅಂತಹ ಒಂದು ಘಟನೆಗೂ ನಾನು ಸಾಕ್ಷಿಯಾಗುವ ಅವಕಾಶ ಸಿಕ್ಕಲಿಲ್ಲ. ಬದಲಿಗೆ ಕೆಲವೊಂದು ವಿಷಯಗಳನ್ನು ನೋಡಿ ಅವಾಕ್ಕಾಗುವ ಸನ್ನಿವೇಶ ಸಿಕ್ಕಿತು.

ನಗರ ಪ್ರದೇಶದಿಂದ ಸ್ವಲ್ಪ ದೂರಾಗಿ, ಹಳ್ಳಿ ಪ್ರದೇಶಗಳ ಕಡೆಗೆ ಹೋದರೆ, ಅಲ್ಲಿನ ರೈತರು ಫ್ರೆಶ್ ತರಕಾರಿ, ಹಣ್ಣು ಇತ್ಯಾದಿಗಳನ್ನು ಒಂದೆಡೆ ಇಟ್ಟು ಕೇಜಿಗೆ ಇಷ್ಟು ಎಂದು ಬೆಲೆ ನಮೂದಿಸಿ, ಸಣ್ಣದೊಂದು ತೂಕ ನೋಡುವ ಮಷೀನ್ ಮತ್ತು ಸ್ವಾಯ್ಪ್ ಮಾಡಿ ಹಣ ಪಾವತಿಸಲು ಒಂದು ಮಷಿನ್ ಇರಿಸಿ ಹೋಗುತ್ತಾರೆ. ಅಲ್ಲಿ ಯಾರೊಬ್ಬರೂ ಇರುವುದಿಲ್ಲ. ಜನ ತಾವೇ ತೂಕ ಹಾಕಿ, ಸರಿಯಾದ ಹಣ ಪಾವತಿಸಿ ಹೋಗುತ್ತಾರೆ. ವಾರದ ಹಿಂದೆ ಜಪಾನಿನಲ್ಲಿ ಟೋಲ್ ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎನ್ನುವ ಕಾರಣಕ್ಕೆ ಎಲ್ಲರಿಗೂ ಹೋಗಲು ಬಿಟ್ಟರಂತೆ, ಆಮೇಲೆ ಹಣ ನೀಡಿ ಎಂದಿದ್ದಾರೆ. ಅವರೆಲ್ಲರೂ ನಿಯತ್ತಾಗಿ ಆ ನಂತರ ಹಣ ಪಾವತಿಸಿದ್ದಾರೆ.

ಇಂತಹ ಘಟನೆಗಳಿಗೆ ಕಣ್ಣಾರೆ ಕಂಡಾಗ, ಕೆಲವೊಂದು ಕೇಳಿದಾಗ, ಸಹಜವಾಗೇ ಹುಟ್ಟುವ ಪ್ರಶ್ನೆ ಎಲ್ಲಿ ಮಾಯವಾಯ್ತು ನಮ್ಮ ನೈತಿಕತೆ? ಎನ್ನುವುದು. ಅಧಿಕಾರಿಗಳನ್ನು, ಸಮಾಜವನ್ನು, ಸರ್ಕಾರವನ್ನು, ರಾಜಕಾರಿಣಿಗಳನ್ನು ದೂಷಿಸುವ, ಅವರನ್ನು ಭ್ರಷ್ಟರು ಎನ್ನುವ ನಾವು ಮಾತ್ರ ಸುಭಗರೇ? ಎನ್ನುವ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಳ್ಳುವುದಿಲ್ಲ. ಯಾರೇನೇ ಅನ್ಯಾಯ ಮಾಡಲಿ ನಾನು ಮಾತ್ರ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳುವುದಿಲ್ಲ ಎನ್ನುವ ಆತ್ಮಗೌರವವಿರುವ ಪ್ರಜೆಗಳ ಸಂಖ್ಯೆ ಇಂದಿಗೆ ನಮ್ಮ ಸಮಾಜದಲ್ಲಿ ಬೆರಳೆಣಿಕೆಗೆ ಕುಸಿದಿದೆ. ಈ ಸಂಖ್ಯೆ ಹೆಚ್ಚಾಗದ ಹೊರತು ಭಾರತ ಪುಣ್ಯ ಭೂಮಿಯಾಗಲು, ಸತ್ಯವಂತರ ನಾಡಾಗುವುದು, ವಿಶ್ವಗುರುವಾಗುವುದು ಕೇವಲ ತಿರುಕನ ಕನಸು.

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ.

ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪ್ಯಾನಿಷ್, ಇಂಗ್ಲಿಷ್, ಹಿಂದಿ, ಪೊರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 32 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.