ʻವಸಂತಸೇನೆʼ ಆಗಿ ಹೊಸ ರೂಪ-ಒಳನೋಟಗಳೊಡನೆ ʻಮೃಚ್ಛಕಟಿಕʼ: ಶಿವಮೊಗ್ಗದಲ್ಲಿ ನಾಳೆ ನಮ್‌ ಟೀಂನಿಂದ ನಾಟಕ ಪ್ರದರ್ಶನ
ಕನ್ನಡ ಸುದ್ದಿ  /  ಕರ್ನಾಟಕ  /  ʻವಸಂತಸೇನೆʼ ಆಗಿ ಹೊಸ ರೂಪ-ಒಳನೋಟಗಳೊಡನೆ ʻಮೃಚ್ಛಕಟಿಕʼ: ಶಿವಮೊಗ್ಗದಲ್ಲಿ ನಾಳೆ ನಮ್‌ ಟೀಂನಿಂದ ನಾಟಕ ಪ್ರದರ್ಶನ

ʻವಸಂತಸೇನೆʼ ಆಗಿ ಹೊಸ ರೂಪ-ಒಳನೋಟಗಳೊಡನೆ ʻಮೃಚ್ಛಕಟಿಕʼ: ಶಿವಮೊಗ್ಗದಲ್ಲಿ ನಾಳೆ ನಮ್‌ ಟೀಂನಿಂದ ನಾಟಕ ಪ್ರದರ್ಶನ

ಶಿವಮೊಗ್ಗೆಯ ʻನಮ್ ಟೀಮ್ʼ ಹವ್ಯಾಸಿ ರಂಗ ತಂಡ ರಜತ ಸಂಭ್ರಮದಲ್ಲಿ ಶೂದ್ರಕ ಮಹಾಕವಿಯ ಸಾರ್ವಕಾಲಿಕ ಪ್ರಸ್ತುತ ನಾಟಕ ʻಮೃಚ್ಛಕಟಿಕʼ ಆಧರಿಸಿದ ʻವಸಂತಸೇನೆʼ ನಾಟಕವನ್ನು ಏಪ್ರಿಲ್‌ 20ರಂದು ಭಾನುವಾರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿಸಲಿದೆ.

ಶಿವಮೊಗ್ಗದಲ್ಲಿ ನಮ್‌ ಟೀಂನಿಂದ ವಸಂತ ಸೇನೆ ನಾಟಕದ ಸಿದ್ದತೆ
ಶಿವಮೊಗ್ಗದಲ್ಲಿ ನಮ್‌ ಟೀಂನಿಂದ ವಸಂತ ಸೇನೆ ನಾಟಕದ ಸಿದ್ದತೆ

ಕರ್ನಾಟಕದ ಹಲವು ಹವ್ಯಾಸಿ ರಂಗತಂಡಗಳು ಸ್ವರ್ಣವರ್ಷದ ಸಂಭ್ರಮದಲ್ಲಿರುವಾಗ ಒಂದರ್ಥದಲ್ಲಿ ಮಲೆನಾಡು ಕರ್ನಾಟಕದ ಸಾಂಸ್ಕೃತಿಕ ನಗರಿಯಾದ ಶಿವಮೊಗ್ಗೆಯ ʻನಮ್ ಟೀಮ್ʼ ಹವ್ಯಾಸಿ ರಂಗ ತಂಡಕ್ಕೆ ಈ ವರ್ಷ ರಜತ ಸಂಭ್ರಮ. ಈ ಸಂಭ್ರಮದ ಹಿನ್ನೆಲೆಯಲ್ಲಿ ಶೂದ್ರಕ ಮಹಾಕವಿಯ ಸಾರ್ವಕಾಲಿಕ ಪ್ರಸ್ತುತ ನಾಟಕ ʻಮೃಚ್ಛಕಟಿಕʼ ಆಧರಿಸಿದ ʻವಸಂತಸೇನೆʼ ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ. ಈ ನಾಟಕ ಏಪ್ರಿಲ್‌ 20ರಂದು ಭಾನುವಾರ ಸಂಜೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಕುವೆಂಪು ರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ʻಮೃಚ್ಛಕಟಿಕʼ ಸಂಸ್ಕೃತ ನಾಟಕ ಸಾಹಿತ್ಯದಲ್ಲೇ ಒಂದು ಅಚ್ಚರಿಗೊಳಿಸುವ ಕೃತಿ. ಇದನ್ನು ರಚಿಸಿದ ಶೂದ್ರಕ, ಭಾಸ, ಕಾಳಿದಾಸರಂಥ ಅಸಾಧಾರಣ ನಾಟಕಕಾರರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡೂ ತೇಜಸ್ಸುಗೆಡದೆ ಉಳಿದಿದ್ದಾನೆ ಎನ್ನುವುದೇ ಇದಕ್ಕೆ ಸಾಕ್ಷಿ.

ಸ್ಪಷ್ಟವಾಗಿ ಅವನದ್ದೆಂದು ನಮಗೆ ದೊರೆತಿರುವ ಪೂರ್ಣ ನಾಟಕ ಇದೊಂದೇ. ಭಾಸ ಮತ್ತು ಕಾಳಿದಾಸರಿಗಿದ್ದಂತೆ ಒಂದಿಲ್ಲೊಂದು ಕೃತಿಯ ಬೆಂಬಲ ಇವನಿಗಿಲ್ಲ. (ಅವನ ʻವಿನವಾಸವದತ್ತʼ ಹಾಗೂ ʻಬಾನಾʼ ಎಂಬ ಇನ್ನೂ ಎರಡು ನಾಟಕಗಳು ಇವೆ ಎಂದು ಹೇಳಲಾಗುತ್ತಿದೆ. ಆದರೆ, ಅವು ಲಭ್ಯವಿಲ್ಲ) ಶೂದ್ರಕ ಮಹಾ ಕವಿ, ಅಳಿದರೂ ಉಳಿದರೂ ಅದು ಮೃಚ್ಛಕಟಿಕವೊಂದರಿಂದಲೇ. ಹೀಗಿದ್ದರೂ ಶೂದ್ರಕ ಭಾಸ, ಕಾಳಿದಾಸರೊಡನೆ ಸಮಾನವಾಗಿ ಸ್ವೀಕೃತನಾಗುತ್ತಾನೆ. ಸಂಕ್ಷಿಪ್ತತೆ, ಗದ್ಯ ಪದ್ಯಗಳ ಔಚಿತ್ಯವನ್ನರಿತ ಹಂಚಿಕೆ ಇಂಥ ಒಂದೆರಡು ಗುಣಗಳಲ್ಲಿ ಅವರು, ಇವನನ್ನು ಮೀರಿದರೆನ್ನಿಸಿದರೂ, ಲೋಕಜೀವನದ ಸಂಕೀರ್ಣ ಗ್ರಹಿಕೆಯಲ್ಲಿ ಶೂದ್ರಕ ನಮ್ಮ ಎಲ್ಲ ನಾಟಕಕಾರರನ್ನೂ ಸ್ಪಷ್ಟವಾಗಿ ಹಿಂದೆ ಹಾಕಿದ್ದಾನೆ.

ವಿಶೇಷವೆಂದರೆ ಈ ನಾಟಕ ಪುರೂರವ, ದುಷ್ಯಂತರಂಥ ದೇವಮಾನವರ ಕಥೆಯಲ್ಲ. ಅಗ್ನಿ ಮಿತ್ರ, ಉದಯನರಂಥ ರಾಜರ ಕಥೆಯೂ ಅಲ್ಲ. ನಾಟಕದ ದೃಷ್ಟಿ ಚಾರುದತ್ತ, ವಸಂತ ಸೇನೆಯರಂಥ ಪ್ರಜೆಗಳನ್ನು ಆಧರಿಸಿದ್ದು. ನಾಟಕದ ಕ್ರಿಯೆಯು ದೇವಲೋಕ, ಅರಮನೆ, ಋಷ್ಯಾಶ್ರಮ ಗಳಿಂದ ಬೀದಿ, ಬಯಲು, ಬಡಮನೆ ನ್ಯಾಯಾಲಯಗಳಿಗೆ ಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಆವರೆಗೆ ಸಂಸ್ಕೃತ ನಾಟಕ ವಿದೂಷಕರಿಗೆ ತೊಡಿಸಿದ್ದ ಅಸಹ್ಯವೇಷವನ್ನು ಮೈತ್ರೇಯ ನಾಟಕ ಮುಗಿಯುವ ಹೊತ್ತಿಗೆ ತನ್ನ ನಿರ್ಮಲ ಋಜು ವ್ಯಕ್ತಿತ್ವದ ಬಲದಿಂದ ಕಳಚಿ ಎಸೆದಿದ್ದಾನೆ.

ಅಷ್ಟೇ ಅಲ್ಲ. ಖಳನಾಯಕನಾದ ಶಕಾರನೇ ವಿದೂಷಕನೂ ಆಗಿಬಿಡುವ ವಿಚಿತ್ರ ಇಲ್ಲಿದೆ. ಶಕಾರನ ಮಾತುಗಳಲ್ಲಿನ ಪೆದ್ದುತನಕ್ಕೂ, ಅವನ ಕೃತ್ಯಗಳ ಕೀಳುತನಕ್ಕೂ ಗುಪ್ತಸಂಬಂಧದ ಮೈತ್ರಿಯಿದೆ. ಪುರಾಣ, ಚರಿತ್ರೆ, ವರ್ತಮಾನಗಳ ಗಡಿಗಳನ್ನು ಅಳಿಸಿ, ಎಲ್ಲದರ ಕಲಸುಮೇಲೋಗರದ ಮಾತಾಡಿ, ನಗಿಸುವ ಶಕಾರ ನಿಜದ ಬದುಕಿನಲ್ಲಿ ಶಿಸ್ತಿನ ಗಡಿಗಳನ್ನು ಮುರಿಯುವ, ಕಂಡವರ ಬದುಕಿನಲ್ಲಿ ಹಾಹಾಕಾರ ಸೃಷ್ಟಿಸುವ ಕ್ರೂರಿಯಾಗಿದ್ದಾನೆ. ಅವನಿಗೆ ಯಾವುದರ ಬಗ್ಗೆ ಗೌರವವಿದೆ? ತನ್ನಿಂದ ಹಿಡಿದು ಎಲ್ಲರ ಮೇಲೆ ಕೆಸರೆರಚಿ ನಗುವ ಅವನ ಪೈಶಾಚಿಕ ಹುಡುಗಾಟದಲ್ಲಿ ಸಿಡಿಯುವ ಅಸಂಬದ್ಧತೆ ಸಂಸ್ಕೃತ ನಾಟಕಗಳಲ್ಲೇ ಅನನ್ಯವಾದದ್ದು.

ಪ್ರಸ್ತುತ ನಾಟಕದಲ್ಲಿ ಚಾರುದತ್ತ-ವಸಂತ ಸೇನೆಯರ ನಿರ್ಮಲ ಪ್ರೇಮವನ್ನು ಅನಾವರಣಗೊಳಿಸುವುದರ ಜೊತೆಗೆ, ಅವರನ್ನು ಪ್ರಕೃತಿ-ಪುರುಷರ ರೂಪಕದಲ್ಲಿ ಕೇಂದ್ರೀಕರಿಸಿ, ವಸಂತೋತ್ಸವವನ್ನು ಸಾಂಕೇತಿಕವಾಗಿ ರಂಗಕ್ಕೆ ತರಲಾಗಿದೆ. ಸಮಾಜದಲ್ಲಿನ ಒಳ್ಳೆಯದು, ಕೆಟ್ಟದ್ದರ ಸಂಕೇತವಾಗಿ ಇಲ್ಲಿಯ ಪಾತ್ರಗಳು ಅನಾವರಣಗೊಳ್ಳುತ್ತವೆ. ಶೂದ್ರಕ ಮಹಾಕವಿಯ ವೃಚ್ಚಕಟಿಕ ನಾಟಕವನ್ನು ವಸಂತ ಸೇನೆಯ ಮೂಲಕ ನೋಡುವ ಪ್ರಯತ್ನ ಇದು.

ಮೂಲ ಶೂದ್ರಕ ಮಹಾ ಕವಿಯ ʻಮೃಚ್ಚಕಟಿಕʼವನ್ನು ಕನ್ನಡಕ್ಕೆ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರವರು ಅನುವಾದಿಸಿದ್ದು, ರಂಗರೂಪದೊಂದಿಗೆ ಹೆಚ್. ಯು. ವೈದ್ಯನಾಥ್ (ವೈದ್ಯ) ನಿರ್ದೇಶಿಸಿದ್ದಾರೆ. ವಸಂತ ಸೇನೆ, ʻನಮ್‌ಟೀಮ್‌ʼಗಾಗಿ ವೈದ್ಯರವರು ನಿರ್ದೇಶಿಸುತ್ತಿರುವ ನಾಲ್ಕನೇ ನಾಟಕ.ನಿರ್ದೇಶಕ ವೈದ್ಯನಾಥ್‌ರವರು ವೈದ್ಯ ಎಂದೇ ಚಿರಪರಿಚಿತರು. 1976ರಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಇವರು, 1979 ರಲ್ಲಿ ಪ್ರತಿಷ್ಟಿತ ನೀನಾಸಂನಲ್ಲಿ ಕೆ. ವಿ. ಸುಬ್ಬಣ್ಣರವರಿಂದ ರಂಗ ತರಬೇತಿ ಪಡೆದವರು. ಸುಬ್ಬಣ್ಣರವರೇ ನಿರ್ದೇಶಿಸಿದ ʻಬೆಟ್ಟಕ್ಕೆ ಚಳಿಯಾದರೆʼ ನಾಟಕಕ್ಕೆ ಸಹಾಯಕರಾಗಿ ಕೆಲಸ ಮಾಡಿದವರು. ಕೋಟೇ ಭೀಮೇಶ್ವರ ದೇವಾಲಯದ ಆವರಣದಲ್ಲಿ ಬತ್ತೇರಿಯನ್ನೇ ವೇದಿಕೆಯಾಗಿ ಬಳಸಿಕೊಂಡು ನಿರ್ದೇಶಿಸಿದ ವಿಲಿಯಂ ಗೊಲ್ಡಿಂಗ್‌ರವರ ʻಲಾರ್ಡ್‌ ಆಫ್‌ ಫ್ಲೈಸ್‌ʼ ಆಧಾರಿತ ಬೇಟೆ, ಪಂಜರ ಶಾಲೆ ನಾಟಕಗಳು ೮೦ರ ದಶಕದಲ್ಲಿ ಇವರ ಗಮನಾರ್ಹ ಪ್ರಯೋಗಗಳು.

ನಾಟಕದಲ್ಲಿ ಗೀತ ಸಾಹಿತ್ಯವಾಗಿ ರಾಷ್ಟ್ರಕವಿ ಕುವೆಂಪುರವರ ಕವಿತೆಯೊಂದನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ. ಹಾಗೆಯೇ ಬಿ. ವಿ. ಕಾರಂತರು ರಾಗಸಂಯೋಜಿಸಿರುವ ʻಗಜವದನಾʼ ಗೀತೆಯನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಇನ್ನುಳಿದ ಗೀತೆಗಳನ್ನು ಡಾ. ಗಜಾನನ ಶರ್ಮ, ನಿರ್ದೇಶಕ ವೈದ್ಯ ಬರೆದಿದ್ದಾರೆ. ನಾಟಕಕ್ಕೆ ಶ್ರೀಕಾಂತ ಕಾಳಮಂಜಿ ಸಂಗೀತ ಸಂಯೋಜಿಸಿದ್ದಾರೆ. ಗಾಯನದಲ್ಲಿ ಕೀರ್ತನಾ ವ್ಯಾಸ್, ರಾಜೇಂದ್ರ ಪಾಲ್ಗೊಂಡಿದ್ದಾರೆ. ಚಂದನ್ ಎನ್. ನೀನಾಸಂರವರ ಬೆಳಕಿನ ವಿನ್ಯಾಸ, ಗುರುಮೂರ್ತಿ ವರದಾಮೂಲ ಅವರ ರಂಗ-ವಸ್ತ್ರವಿನ್ಯಾಸ, ಪ್ರಸಾದನ, ವಾಸುಕಿ ಕುಲಕರ್ಣಿಯವರ ನೃತ್ಯ ಸಂಯೋಜನೆ ಈ ರಂಗಪ್ರಯೋಗಕ್ಕಿದೆ , ನಿರ್ದೇಶನದಲ್ಲಿ ಡಾ. ನಾಗಭೂಷಣ ಹೆಚ್. ಎಸ್. ನಾಗರಾಜ ನೀಲ್ /ವಿಜಯ್ ನೀನಾಸಂರವರು ಸಹಕಾರ ನೀಡಿದ್ದಾರೆ.

ರಜತ ಸಂಭ್ರಮದಲ್ಲಿರುವ ʻನಮ್‌ಟೀಮ್ʼ ತಂಡ ಈವರೆಗೆ 50ಕ್ಕೂ ಹೆಚ್ಚು ಹೊಸ ನಾಟಕಗಳನ್ನು ನಿರ್ಮಿಸಿ, ಪ್ರದರ್ಶಿಸಿದ ಹೆಗ್ಗಳಿಕೆ ಹೊಂದಿದೆ. ರಾಜ್ಯದ ವಿವಿಧೆಡೆಗಳ 150 ಕ್ಕೂ ಹೆಚ್ಚು ತಂಡಗಳನ್ನು ಆಹ್ವಾನಿಸಿ, ರಂಗ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಸಂದರ್ಭಾನುಸಾರವಾದ 36ನಾಟಕೋತ್ಸವಗಳನ್ನು ಸಂಘಟಿಸಿರುವುದು ʻನಮ್‌ ಟೀಮ್‌ʼ ರಂಗಭೂಮಿಗೆ ನೀಡಿದ ಗಮನಾರ್ಹ ಕೊಡುಗೆ ಎನ್ನಬಹುದು.

-ಮುರಳೀಧರ ಖಜಾನೆ, ಹಿರಿಯ ಪತ್ರಕರ್ತರು, ಲೇಖಕರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.