ಮುಡಾ ಕೇಸ್ ಬಿ ರಿಪೋರ್ಟ್: ತನಿಖೆ ಮುಂದುವರಿಸಲು ಲೋಕಾಯುಕ್ತಕ್ಕೆ ವಿಶೇಷ ಕೋರ್ಟ್ ಸೂಚನೆ, ಮೇ 7ಕ್ಕೆ ವಿಚಾರಣೆ ಮುಂದೂಡಿಕೆ, ಸಿಎಂಗೆ ಹಿನ್ನಡೆ
MUDA Case: ಮುಡಾ ಕೇಸ್ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಧ್ಯಂತರ ತನಿಖಾ ವರದಿ ಆಧರಿಸಿ ನೀಡಿದ್ದ ಬಿ ರಿಪೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಲು ವಿಶೇಷ ನ್ಯಾಯಾಲಯ ಇಡಿಗೆ ಅವಕಾಶ ನೀಡಿದೆ. ತನಿಖೆ ಮುಂದುವರಿಸಲು ಲೋಕಾಯುಕ್ತಕ್ಕೆ ಸೂಚಿಸಿದ ನ್ಯಾಯಾಲಯ, ಮೇ 7ಕ್ಕೆ ವಿಚಾರಣೆ ಮುಂದೂಡಿದೆ.

MUDA Case: ಮುಡಾ ಸೈಟ್ ಹಂಚಿಕೆ ಅಕ್ರಮ ಸಂಬಂಧಿಸಿದ ತನಿಖೆ ಮುಂದುವರಿಸುವಂತೆ ಲೋಕಾಯುಕ್ತ ಪೊಲೀಸರಿಗೆ ವಿಶೇಷ ಕೋರ್ಟ್ ಆದೇಶಿಸಿದೆ. ಮುಡಾ ಕೇಸ್ನಲ್ಲಿ ಲೋಕಾಯುಕ್ತ ಪೊಲೀಸರು ಮಧ್ಯಂತರ ತನಿಖಾ ವರದಿ ಆಧರಿಸಿ ನೀಡಿದ ಬಿ ರಿಪೋರ್ಟ್ ಕುರಿತು ಇಡಿ ಕೂಡ ತಕರಾರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ ಎಂದು ವಿಶೇಷ ಕೋರ್ಟ್ ಮಂಗಳವಾರ (ಏಪ್ರಿಲ್ 15) ಹೇಳಿದೆ. ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿದೆ.
ಮುಡಾ ಕೇಸ್ ತನಿಖೆ ಮುಂದುವರಿಸಲು ಲೋಕಾಯುಕ್ತಕ್ಕೆ ವಿಶೇಷ ಕೋರ್ಟ್ ಸೂಚನೆ
ಲೋಕಾಯುಕ್ತ ಪೊಲೀಸರು ಮಧ್ಯಂತರ ವರದಿ ಸಲ್ಲಿಸಿರುವ ಕಾರಣ ಬಿ ರಿಪೋರ್ಟ್ ಬಗ್ಗೆ ತಕರಾರು ಅರ್ಜಿ ಸಲ್ಲಿಸುವುದಕ್ಕೆ ಜಾರಿ ನಿರ್ದೇಶನಾಲಯಕ್ಕೂ ವಿಶೇಷ ನ್ಯಾಯಾಲಯ ಅವಕಾಶ ನೀಡಿದೆ. ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ತಕರಾರು ಅರ್ಜಿಯ ಜತೆಗೆ ಜಾರಿ ನಿರ್ದೇಶನಾಲಯ ಸಲ್ಲಿಸಿದ ತಕರಾರು ಅರ್ಜಿಯನ್ನೂ ವಿಶೇಷ ಕೋರ್ಟ್ ಪರಿಗಣಿಸಿದೆ.
ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸಿ, ಪೂರ್ಣ ವರದಿ ಸಲ್ಲಿಸಬೇಕು ಎಂದು ವಿಶೇಷ ನ್ಯಾಯಾಲಯ ಆದೇಶಿಸಿದ್ದು, ಮೇ 7ಕ್ಕೆ ಮುಂದಿನ ವಿಚಾರಣೆಗೆ ದಿನ ನಿಗದಿ ಮಾಡಿದೆ. ಮುಂದಿನ ವಿಚಾರಣೆ ದಿನಾಂಕದೊಳಗೆ ತನಿಖೆ ಪೂರ್ಣಗೊಳಿಸಬೇಕಾಗಿದೆ. ಅದಾದ ಬಳಿಕ ಬಿ ರಿಪೋರ್ಟ್ ಸ್ವೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬುದನ್ನು ನಿರ್ಧರಿಸುವುದಾಗಿ ಕೋರ್ಟ್ ಹೇಳಿದೆ.
ಇಡಿ ಪರ ವಕೀಲರ ವಾದ ಮಂಡನೆ ಹೀಗಿತ್ತು
ಇಡಿ ಪರ ವಕೀಲ ಮರುಕ ದೇಶಪಾಂಡೆ ವಾದ ಮಂಡಿಸಿದರೆ, ಲೋಕಾಯುಕ್ತ ಪೊಲೀಸರ ಪರವಾಗಿ ವಕೀಲ ವೆಂಕಟೇಶ್ ಅರಬಟ್ಟಿ ಪ್ರತಿವಾದ ಮಂಡಿಸಿದ್ದಾರೆ. ಇ.ಡಿ. ಮಧ್ಯಂತರ ಅರ್ಜಿಗೆ ಲೋಕಾಯುಕ್ತ ಪೊಲೀಸರ ಪರ ವಕೀಲ ವೆಂಕಟೇಶ್ ಅರಬಟ್ಟ ಆಕ್ಷೇಪ ವ್ಯಕ್ತಪಡಿಸಿದರು.
ಲೋಕಾಯುಕ್ತ ತನಿಖಾಧಿಕಾರಿಗಳು ದಾಖಲೆ ಕಲೆ ಹಾಕಿ ಇತರರು ಕೊಟ್ಟಿರುವ ದಾಖಲೆ ಪರಿಶೀಲಿಸಿಯೇ "ಬಿ" ವರದಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ವ್ಯಕ್ತಿಯಾಗಿರುವ ಇಡಿಅಧಿಕಾರಿಗಳಿಗೆ ಅವಕಾಶ ನೀಡಿದರೆ ಸಮಸ್ಯೆ ಆಗುತ್ತದೆ. ಇಡಿಗೆ ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದಿದ್ದರು.
ಇ.ಡಿ. ಪರ ವಕೀಲ ಮಧುಕರ್ ದೇಶಪಾಂಡೆ ವಾದ ಮ೦ಡಿಸಿ, ಈ ಕೇಸ್ಗಳಲ್ಲಿ ನೊಂದ ವ್ಯಕ್ತಿಗಳೇ ಅರ್ಜಿ ಸಲ್ಲಿಸಬೇಕೆಂದಿಲ್ಲ. ಇಡಿ. ಸಹ 'ಬಿ' ವರದಿಗೆ ತಕರಾರು ಅರ್ಜಿ ಸಲ್ಲಿಸಬಹುದು. ಪಿಎಂಎಲ್ಎ ಕಾಯ್ದೆಯ 66(2) ಅಡಿ ಇಡಿ. ಶಾಸನಬದ್ಧ ಮಾಹಿತಿದಾರವಾಗುತ್ತದೆ ಎಂದು ಪ್ರತಿಪಾದಿಸಿದ್ದರು. ಇದನ್ನು ಕೋರ್ಟ್ ಅಂಗೀಕರಿಸಿದ್ದು, ತಕರಾರು ಅರ್ಜಿ ಸಲ್ಲಿಸುವುದಕ್ಕೆ ಇಡಿಗೆ ಅವಕಾಶ ಮಾಡಿಕೊಟ್ಟಿದೆ.
ಸ್ನೇಹಮಯಿ ಕೃಷ್ಣ ಏನು ಹೇಳಿದರು
ಮುಡಾ ಕೇಸ್ನಲ್ಲಿ ತಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ. ಲೋಕಾಯುಕ್ತ ಪೊಲೀಸರು, ಆರೋಪಿಗಳನ್ನು ಬಜಾವ್ ಮಾಡಲು ಸುಳ್ಳು ವರದಿ ನೀಡಿದ್ದಾರೆ. ಸಾಕ್ಷಿಗಳ ಕೊರತೆ ಅಂತ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ನಾನು ಸಾಕಷ್ಟು ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳಿಗೂ ಕೊಟ್ಟಿದ್ದೆ. ಅದರ ಪ್ರಕಾರ ತನಿಖೆ ಮಾಡಿಲ್ಲ ಎಂದು ಸ್ನೇಹಮಯಿ ಕೃಷ್ಣ ಮೈಸೂರಲ್ಲಿ ಬೆಳಿಗ್ಗೆ ಹೇಳಿದ್ದರು.
