ಮೈಸೂರಿನ ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕಟ್ಟಡಕ್ಕೆ ವಕ್ಫ್ ಮಂಡಳಿ ನೊಟೀಸ್, ಮೇ 9ರ ಒಳಗೆ ಉತ್ತರ ನೀಡಲು ಗಡುವು
ಮೈಸೂರಿನಲ್ಲಿ ಶತಮಾನಕ್ಕೂ ಹಳೆಯಾದ ಎಂಕೆ ಹಾಸ್ಟೆಲ್ ಕಟ್ಟಡದ ವಿಚಾರವಾಗಿ ವಕ್ಫ್ ಮಂಡಳಿ ನೊಟೀಸ್ ಜಾರಿ ಮಾಡಿದ್ದು ವಿವಾದವನ್ನು ಹುಟ್ಟು ಹಾಕಿದೆ.

ಮೈಸೂರು:ಮೈಸೂರಿನ ಹೃದಯ ಭಾಗದಲ್ಲಿರುವ ಶಿವರಾಂಪೇಟೆಯ ವಿನೋಬಾ ರಸ್ತೆಯಲ್ಲಿರುವ ಎಂ ಕೆ ಹಾಸ್ಟೆಲ್ ಗೆ ಸೇರಿದ ಖಾಲಿ ಜಾಗ ವಕ್ಫ್ ಗೆ ಸೇರಿದ ಆಸ್ತಿ ಎಂದು ನೋಟೀಸ್ ಜಾರಿ ಮಾಡಿರುವುದು ವಿವಾದಕ್ಕೆ ಕಾರಣವಾಗಿವೆ. 1916ರಲ್ಲಿ ಕಡಬದ ನಾರಾಯಣ ಶೆಟ್ಟರು ಸ್ಥಾಪಿಸಿರುವ ಸ್ಟೂಡೆಂಟ್ಸ್ ಹಾಸ್ಟೆಲ್ನಲ್ಲಿ ಮಕ್ಕಳು ಈಗಲೂ ಕಲಿಯುತ್ತಿದ್ದಾರೆ. ಬರುವ ಮೇ 9ರ ಒಳಗೆ ಉತ್ತರ ನೀಡುವಂತೆ ಆಂಗ್ಲ ಭಾಷೆಯಲ್ಲಿ ನೋಟೀಸ್ ಜಾರಿ ಮಾಡಿದ್ದು, ಇದಕ್ಕೆ ಭಾರೀ ಆಕ್ಷೇಪ ಕೇಳಿ ಬಂದಿದೆ. ರಾಜ್ಯದಾದ್ಯಂತ ದೊಡ್ಡ ಸದ್ದು ಮಾಡಿದ ವಕ್ಪ್ ಆಸ್ತಿ ವಿಚಾರ ತಣ್ಣಗಾಗುವ ಹೊತ್ತಲ್ಲೇ ಮೈಸೂರಿನಲ್ಲಿ ಶತಮಾನಗಳ ಇತಿಹಾಸವಿರುವ ಎಂಬಕೆ ಹಾಸ್ಟೆಲ್ ಜಾಗಕ್ಕೆ ವಕ್ಫ್ ಮಂಡಳಿಯಿಂದ ನೋಟೀಸ್ ಜಾರಿ ಮಾಡಿರುವುದು ಚರ್ಚೆ ಹುಟ್ಟು ಹಾಕಿದೆ.
ಶಿವರಾಂಪೇಟೆಯಲ್ಲಿ ಪೂರ್ವ ಪಶ್ಚಿಮ 54 ಅಡಿ, ಉತ್ತರ ದಕ್ಷಿಣ 100 ಅಡಿ ಸೇರಿದಂತೆ ಒಟ್ಟು 3268 ಚದರ ಅಡಿ ನಮ್ಮ ಸಂಸ್ಥೆಗೆ ಸೇರಿದ್ದು ಎಂದು ಎಂ ಕೆ ಹಾಸ್ಟೆಲ್ ವಿಳಾಸಕ್ಕೆ ನೋಟಿಸ್ ಅನ್ನು ಅಧಿಕಾರಿಗಳು ಅಂಟಿಸಿದ್ದಾರೆ.
ಎಂ ಕೆ ಹಾಸ್ಟೆಲ್ ಗೆ ಹೊಂದಿಕೊಂಡಿರುವ ಜಾಗದಲ್ಲಿ ಯಾವುದೇ ದಾಖಲೆ ಇಲ್ಲದ ಅನಧಿಕೃತ ಜಾಗದಲ್ಲಿ ಹಿಂದೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಗದ್ದಿಗೆ ಇತ್ತು. ಕಾಲಾನಂತರದಲ್ಲಿ ಅಲ್ಲಿ ಕೆಲವರು ಅತಿಕ್ರಮಣ ಮಾಡಿಕೊಂಡು ಗದ್ದಿಗೆಯನ್ನು ನಮ್ಮ ದರ್ಗಾ ಎಂದು ಹೇಳಿ ಜಾಗವನ್ನು ತಮ್ಮ ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.
ನಮ್ಮ ಜಾಗದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಅವರ ಬಳಿ ಏನು ದಾಖಲೆಗಳಿವೆಯೋ ಅದನ್ನು ತೋರಿಸಲಿ, ನಾವು ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಂ ಕೆ ಹಾಸ್ಟೆಲ್ ಮಾಲಿಕರಾದ ಸಿ ವಿ ರಾಮಚಂದ್ರ ಶೆಟ್ಟಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ ಮಾಹಿತಿ ನೀಡಿದ ರಾಮಚಂದ್ರ ಶೆಟ್ಟಿ ಇತ್ತೀಚಿನ ಬೆಳವಣಿಗೆಯಲ್ಲಿ ಹಲವಾರು ಸಾರ್ವಜನಿಕ ಸ್ಥಳಗಳನ್ನು ವಕ್ಫ್ ಆಸ್ತಿ ಎಂದು ಹೇಳಿಕೊಂಡು ಕೆಲವು ಖಾಸಗಿ ಆಸ್ತಿಗಳ ಕಬಳಿಸುವ ಯತ್ನವನ್ನು ವಕ್ಪ್ ಮಂಡಳಿ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ವಕ್ಪ್ ಮಂಡಳಿಗೆ ಬಿಟ್ಟುಕೊಡುವುದಿಲ್ಲ. ಅದು ನಮ್ಮ ಆಸ್ತಿ ಅಂತ ಒಂದೇ ಒಂದು ದಾಖಲೆ ಇದ್ದರೇ ತೋರಿಸಲಿ ಎಂದು ಒತ್ತಾಯಿಸಿದರು.
ನಾವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ ಎಂ ಕೆ ಹಾಸ್ಟೆಲ್ ಪರ ಹೋರಾಟಗಾರರು. ಶತಮಾನಗಳ ಇತಿಹಾಸವಿರುವ ಮೈಸೂರಿನ ಎಂ ಕೆ ಹಾಸ್ಟೆಲ್ ನ ಜಾಗ ವಕ್ಫ್ ಮಂಡಳಿಗೆ ಸೇರಿದೆ ಎಂದು ನೋಟಿಸ್ ಜಾರಿ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಎಂ ಕೆ ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್ ನಾಗೇಂದ್ರ, ಮಾಜಿ ನಗರಪಾಲಿಕೆ ಸದಸ್ಯರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಗೋಡೆಗೆ ಅಂಟಿಸಿದ್ದ ವಕ್ಫ್ ಮಂಡಳಿಯ ನೋಟಿಸ್ ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದೂ ಅಲ್ಲದೇ ವಕ್ಫ್ ಮಂಡಳಿ ಹಾಗು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, 109 ವರ್ಷಗಳ ಇತಿಹಾಸ ವಿರುವ ಎಂಕೆ ಹಾಸ್ಟೆಲ್ ಗೋಡೆ ಮೇಲೆ ಏಕಾಏಕಿ ವಕ್ಫ್ ಮಂಡಳಿ ನೋಟಿಸ್ ಅಂಟಿಸಿ, ನಮಗೆ ಸೇರಿದ್ದು ಎಂದು ಹೇಳ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಮನ್ನಾರ್ ಕೃಷ್ಣ ಶೆಟ್ಟಿ ಅವರು ನಡೆಸುತ್ತಿರುವ ಹಾಸ್ಟೆಲ್ ಆಗಿದೆ. ಅವರ ಮಗ ರಾಮಕೃಷ್ಣ ಶೆಟ್ಟಿ ಅವರು ಇದ್ದಾರೆ. ಅವರ ಹೆಸರಿನಲ್ಲಿ ಸಂಪೂರ್ಣ ಆಸ್ತಿ ಇದೆ. ಮೈಸೂರಿನಲ್ಲಿ ಯಾರಾದರೂ ಹಿನ್ನೆಲೆ ಇದ್ರೇ ಅದು ಮಹಾರಾಜರದ್ದು, ಇದಕ್ಕೆ ವಕ್ಫ್ ಆಗಲಿ ಹೈದರಾಲಿ, ಟಿಪ್ಪುಸುಲ್ತಾನ್ ಅವರ ಕುರುಹುಗಳೂ ಸಹ ಇಲ್ಲ ಎಂದು ಹೇಳಿದರು.
ಏಕಾಏಕಿ ಬಂದು ವಕ್ಫ್ ನೋಟಿಸ್ ಹಾಕಿರುವ ಕಾರಣ ಅಂದ್ರೇ 2013 ರ ವಕ್ಫ್ ಕಾಯ್ದೆ ತಿದ್ದುಪಡಿಯಲ್ಲಿ ಖಾಸಗಿ ಜಮೀನು, ಸರ್ಕಾರದ ಜಮೀನು ಅಥವಾ ಯಾರದ್ದೇ ಜಮೀನು ಆದರೂ ಮನಸ್ಸಿಗೆ ಬಂದ ಹಾಗೆ ಕಬಳಿಸಲಿಕ್ಕೆ ಆಗಿನ ಕೇಂದ್ರ ಸರ್ಕಾರ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ನೇತೃತ್ವದಲ್ಲಿ ತಿದ್ದುಪಡಿ ಮೂಲಕ ಅವಕಾಶ ಮಾಡಿಕೊಟ್ಟಿದ್ದರು. ಇದರಿಂದ ಎಲ್ಲಾ ಧರ್ಮದವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಖಾಸಗಿ ಆಸ್ತಿಯನ್ನು ಕಬಳಿಸಲು ವಕ್ಫ್ ಮಂಡಳಿ ಮುಂದಾಗಿದೆ, ಇದಕ್ಕೆ ಖಂಡಿತ ನಾವು ಅವಕಾಶ ಮಾಡಿಕೊಡುವುದಿಲ್ಲ. ಸಿದ್ದರಾಮಯ್ಯ ಅವರು ಮಾತೆತ್ತಿದ್ರೇ ದೇವರಾಜು ಅರಸು ಅಂತಾರೆ, ದೇವರಾಜು ಅರಸು ಅವರು ಉಳುವವನೇ ಭೂಮಿಯ ಒಡೆಯ ಅಂದರು. ಅದೆಲ್ಲ ಇದಕ್ಕೆ ಅನ್ವಯ ಆಗಲ್ವಾ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದರು.
ವಿಭಾಗ