ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಿದ್ದತೆ, ಖಾಸಗಿ ವಾಹನ ನಿರ್ಬಂಧ; ವಿಶೇಷ ದರ್ಶನ ಟಿಕೆಟ್‌ ದರ ಹೇಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಿದ್ದತೆ, ಖಾಸಗಿ ವಾಹನ ನಿರ್ಬಂಧ; ವಿಶೇಷ ದರ್ಶನ ಟಿಕೆಟ್‌ ದರ ಹೇಗಿದೆ

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಿದ್ದತೆ, ಖಾಸಗಿ ವಾಹನ ನಿರ್ಬಂಧ; ವಿಶೇಷ ದರ್ಶನ ಟಿಕೆಟ್‌ ದರ ಹೇಗಿದೆ

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಬರುವ ಜೂನ್‌ ಹಾಗೂ ಜುಲೈನಲ್ಲಿ ನಡೆಯಲಿರುವ ಆಷಾಢ ಮಾಸದ ಶುಕ್ರವಾರ ಹಾಗೂ ಅಮ್ಮನವರ ವರ್ಧಂತಿಗೆ ಸಿದ್ದತೆಗಳು ಶುರುವಾಗಿವೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ವಿಶೇಷ ಪೂಜೆಗಳಿಗೆ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗಿದೆ,
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ ವಿಶೇಷ ಪೂಜೆಗಳಿಗೆ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗಿದೆ,

ಮೈಸೂರು:ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಜೂನ್ 27, ಜುಲೈ 04, ಜುಲೈ 11, ಜುಲೈ 18 ರಂದು ನಾಲ್ಕು ಆಷಾಢ ಶುಕ್ರವಾರಗಳು ಹಾಗೂ ಜುಲೈ 17 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ನಡೆಯಲಿದೆ. ಆಷಾಢ ಶುಕ್ರವಾರ ಹಾಗೂ ವರ್ಧಂತಿ ದಿನಗಳಂದು ಯಾವುದೇ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ. ವಾಹನಗಳನ್ನು ಲಲಿತಾ ಮಹಲ್ ಹೊಟೇಲ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು. ಭಕ್ತಾದಿಗಳಿಗೆ ಸಾರ್ವಜನಿಕ ವಾಹನ ವ್ಯವಸ್ಥೆ ಮಾಡಲಾಗುವುದು. ಆಷಾಢ ಶುಕ್ರವಾರ ಹಾಗೂ ಆಷಾಢ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾಮಾನ್ಯ ದರ್ಶನ ಉಚಿತವಾಗಿದ್ದು, ಪ್ರವೇಶ ದರ್ಶನಕ್ಕೆ 50 ರೂ. ಹಾಗೂ ವಿಶೇಷ ದರ್ಶನಕ್ಕೆ 300 ರೂ. ಗಳ ಟಿಕೆಟ್ ನಿಗದಿ ಪಡಿಸಲಾಗಿದೆ.

ಜಿಲ್ಲಾ ಪಂಚಾಯತ್ ಡಿ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ ಆಷಾಢ ಮಾಸದ 4 ಶುಕ್ರವಾರ ಗಳು ಮತ್ತು ಅಮ್ಮನವರ ಜನ್ಮೋತ್ಸವ ಪ್ರಯುಕ್ತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಶ್ರೀ ಚಾಮುಂಡೇಶ್ವರಿ ಜನ್ಮೋತ್ಸವ ಹಾಗೂ ಆಷಾಢ ಶುಕ್ರವಾರ ಗಳ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.

ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಬೇಕು. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ಸ್ವಚ್ಚತೆ ಮಾಡಬೇಕು. ಚೆಸ್ಕಾಂ ವತಿಯಿಂದ 1000 ಮೆಟ್ಟಿಲುಗಳ ಬಳಿಯಿರುವ ವಿದ್ಯುತ್ ದೀಪಗಳ ದುರಸ್ಥಿ ಹಾಗೂ ಬೆಟ್ಟದ ದೇವಾಲಯಗಳಿಗೆ ದೀಪಾಲಂಕಾರ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ , ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ರಾದ ಶೇಖ್ ತನ್ವೀರ್ ಆಸಿಫ್, ಡಿಸಿಪಿ ಮುತ್ತುರಾಜ್, ಚಾಮುಂಡೇಶ್ವರಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಸೂರು ಚಾಮುಂಡಿಬೆಟ್ಟದ ವಿಶೇಷ

ಮೈಸೂರಿನ ಮುಕುಟುದಂತಿರುವ ಚಾಮುಂಡಿ ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಧಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ, ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಮಹಿಷಾಸುರ ಮರ್ಧಿನಿಯನ್ನು ಮೈಸೂರು ಅರಸರು ಬೆಟ್ಟದ ತಾಯಿ ಚಾಮುಂಡೇಶ್ವರಿ ಎಂದು ಕರೆದು, ತಮ್ಮ ಕುಲದೇವತೆಯಾಗಿ ಪೂಜಿಸಿದರು ಎನ್ನುತ್ತದೆ ಇತಿಹಾಸ.

ಬೆಟ್ಟದ ಮೇಲಿರುವ ಚಾಮುಂಡೇಶ್ವರಿಯ ಪುರಾತನ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಹಳೆಯ ದೇವಾಲಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ನವೀಕರಿಸಿ ಇದರ ಮಹಾದ್ವಾರಕ್ಕೆ ಒಂದು ಸುಂದರವಾದ ಗೋಪುರವನ್ನು ಕಟ್ಟಿಸಿದ್ದಾರೆ.ದೇವಾಲಯ ಇವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತು. ದ್ರಾವಿಡ ಶೈಲಿಯ ದೇವಾಲಯಗಳಂತೆ ಈ ದೇವಾಲಯದಲ್ಲೂ ಸುಕನಾಸಿ ಮತ್ತು ನವರಂಗಗಳಿವೆ. ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನ, ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳನ್ನು ರಾಜಮನೆತವರು ದೇವಿಗೆ ಸಮರ್ಪಿಸಿದ್ದಾರೆ.

ಪ್ರತಿವರ್ಷ ಬೆಟ್ಟದಲ್ಲಿ ಆಷಾಢದಂದು ಶುಕ್ರವಾರ ವಿಶೇಷ ಪೂಜೆಗಳು, ಆಶ್ವೀಜ ಶುದ್ಧ ಹುಣ್ಣಿಮೆಯಂದು ಚಾಮುಂಡೇಶ್ವರಿ ರಥೋತ್ಸವ ಜರುಗುತ್ತದೆ.. ರಥೋತ್ಸವದ ಎರಡು ದಿನಗಳ ಬಳಿಕ ರಾತ್ರಿ ದೇವಾಲಯದ ಸಮೀಪದಲ್ಲೇ ಇರುವ ಕೊಳದಲ್ಲಿ ನಡೆಯುವ ತೆಪ್ಪೋತ್ಸವ ನೋಡಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ನವರಾತ್ರಿ ವೇಳೆ ಒಂಬತ್ತು ದಿನ ವಿಶೇಷ ಅಲಂಕಾರವೂ ಇರಲಿದೆ ಬೆಟ್ಟಕ್ಕೆ ಹೋಗಿ ಇಳಿಯುತ್ತಿದ್ದಂತೆಯೇ ದೇವಾಲಯಕ್ಕೆ ಹೋಗುವ ದಾರಿಯಲ್ಲಿರುವ 12 ಅಡಿ ಎತ್ತರದ ಮಹಿಷಾಸುರನ ಬೃಹತ್ ಪ್ರತಿಮೆ ಪ್ರವಾಸಿಗರನ್ನು, ಭಕ್ತರನ್ನು ಸ್ವಾಗತಿಸುತ್ತದೆ. ಅಂಗಡಿಗಳ ಸಾಲಿನಲ್ಲಿ ಮುಂದೆ ಸಾಗಿದರೆ ಮಷಿಷಾಸುರನನ್ನೇ ಕೊಂದ ತಾಯಿ ಚಾಮುಂಡಿಯ ದರ್ಶನವೂ ದೊರಕುತ್ತದೆ.

ಬೆಟ್ಟಕ್ಕೆ ಹೋಗಿ ಇಳಿಯುತ್ತಿದ್ದಂತೆಯೇ ದೇವಾಲಯಕ್ಕೆ ಹೋಗುವ ದಾರಿಯಲ್ಲಿರುವ 12 ಅಡಿ ಎತ್ತರದ ಮಹಿಷಾಸುರನ ಬೃಹತ್ ಪ್ರತಿಮೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಅಂಗಡಿಗಳ ಸಾಲಿನಲ್ಲಿ ಮುಂದೆ ಸಾಗಿದರೆ ಮಷಿಷಾಸುರನನ್ನೇ ಕೊಂದ ತಾಯಿ ಚಾಮುಂಡಿಯ ದರ್ಶನವೂ ದೊರಕುತ್ತದೆ. 16 ಅಡಿ ಎತ್ತರದ ಹೆಬ್ಬಂಡೆಯಲ್ಲಿ ಕೆತ್ತಲಾಗಿರುವ ನಂದಿಯ ಸುಂದರ ಮೂರ್ತಿ ಬೆಟ್ಟದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ನಂದಿಯ ಮೂರ್ತಿಯಲ್ಲಿ ಗಂಟೆಸರ, ಗೆಜ್ಜೆಸರಗಳನ್ನು, ಶಿಲ್ಪಿ ಸುಂದರವಾಗಿ ಕೆತ್ತಿದ್ದಾರೆ.ಅದನ್ನೂ ನೋಡಬಹುದು. ಬೆಟ್ಟದಿಂದ ಮೈಸೂರಿನ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು.ಸಂಜೆ ನಂತರ ದೀಪಗಳಲ್ಲಿ ಮಿಂಚುವ ಮೈಸೂರು ನೋಡುವುದೇ ಚಂದ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.