ತುರ್ತು ಸಂದರ್ಭಗಳಲ್ಲಿ ನಾಗರೀಕ ರಕ್ಷಣೆಯ ಕರ್ತವ್ಯ ನಿರ್ವಹಣೆಗೆ ಮೈಸೂರು ಜಿಲ್ಲೆಯಲ್ಲಿ 12 ಸೇವಾ ತಂಡಗಳ ರಚನೆ; ಕಂಟ್ರೋಲ್ ರೂಂ ಆರಂಭ
ಮೈಸೂರಿನಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ 12 ಸೇವಾ ತಂಡಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ರಚನೆ ಮಾಡಲಾಗಿದೆ.

ಮೈಸೂರು: ಪಹಲ್ಗಾಮ್ ಪ್ರಕರಣದ ಹಿನ್ನೆಲೆಯಲ್ಲಿ ತುರ್ತು ಸಂದರ್ಭ ಎದುರಾದಲ್ಲಿ ನಾಗರೀಕರ ರಕ್ಷಣೆ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ನಾಗರೀಕ ರಕ್ಷಣೆಯ ತುರ್ತು ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಲು ಮೈಸೂರು ಜಿಲ್ಲೆಯಲ್ಲಿ ಸಮರ್ಥ ಅಧಿಕಾರಿಗಳ ನೇತೃತ್ವದಲ್ಲಿ ಅಗತ್ಯವಿರುವ ಎಲ್ಲಾ ಇಲಾಖೆಗಳನ್ನು ಒಳಗೊಂಡಂತೆ 12 ಸೇವಾ ತಂಡಗಳನ್ನು ಜಿಲ್ಲಾಡಳಿತದಿಂದ ರಚನೆ ಮಾಡಲಾಗಿದೆ.ಜಿಲ್ಲಾಡಳಿತದ ವತಿಯಿಂದ ಕಂಟ್ರೋಲ್ ರೂಂ ಅನ್ನು 24*7 ತೆರೆಯಲಾಗಿದ್ದು, ಅಲ್ಲಿಂದ ನಿರ್ದೇಶನಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಲಾಗುವುದು, ನಿರ್ದೇಶನಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಪತ್ತು ಸಂದರ್ಭಗಳಲ್ಲಿ ನಾಗರೀಕರ ರಕ್ಷಣೆಯ ಬಗ್ಗೆ ಕೈಗೊಳ್ಳಬೇಕಾದ ಅಗತ್ಯ ಕಾರ್ಯಗಳ ಸಿದ್ದತೆ ಗಳ ಕುರಿತಂತೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಚರ್ಚೆ ನಡೆಸಿದರು.
ಮೈಸೂರಿಗೆ ಪ್ರಾಥಮಿಕವಾಗಿ ಭದ್ರತೆಯ ದೃಷ್ಟಿಯಿಂದ ತೀವ್ರತರವಾದ ಆತಂಕವಿಲ್ಲ. ಆದರೆ ಮೈಸೂರು ಜಗತ್ ಪ್ರಸಿದ್ದ ಪ್ರವಾಸಿ ಕೇಂದ್ರ ಆಗಿರುವುದರಿಂದ ನಾವೆಲ್ಲರೂ ಜಾಗೃತರಾಗಿ ರುವುದು ಅವಶ್ಯಕ ಈ ಸಂಬಂಧ ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು. ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ, ಬೆಂಕಿಯಿಂದ ರಕ್ಷಣೆ ಹಾಗೂ ಸೂಕ್ಷ್ಮ ಪ್ರದೇಶಗಳ ಭದ್ರತೆ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ವೃಂದದ ಅಧಿಕಾರಿಗಳು ಸಮನ್ವಯತೆಯಿಂದ ಒಂದಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು ಎನ್ನುವುದು ಅವರು ನೀಡಿದ ಸೂಚನೆ.
ನಾಗರೀಕ ರಕ್ಷಣೆಗೆ 12 ಸೇವಾ ತಂಡಗಳ ರಚನೆ
ನಾಗರೀಕ ರಕ್ಷಣೆಯ ಸಂಬಂಧ ಪರಿಣಾಮಕಾರಿಯಾಗಿ ಕೆಲಸ ನಿರ್ವಹಣೆ ಮಾಡಲು ಎಚ್ಚರಿಕೆ ಮತ್ತು ಮಾಹಿತಿ ಪ್ರಸರಣಕ್ಕಾಗಿ ಸಂವಹನ ಸೇವೆ, ಬೆಂಕಿ ಸಂಬಂಧಿತ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಅಗ್ನಿಶಾಮಕ ಸೇವೆ, ಕಲ್ಯಾಣ ಸೇವೆ, ನಾಗರೀಕ ರಕ್ಷಣಾ ಸೇವೆ, ಸಾರಿಗೆ ಪೂರೈಕೆ ಸೇವೆ ಈ ರೀತಿ 12 ತಂಡಗಳ ರಚನೆ ಮಾಡಲಾಗಿದೆ. ಸದರಿ 12 ತಂಡಗಳಲ್ಲಿ ಪೊಲೀಸ್ ಆಯುಕ್ತರು, ಆರಕ್ಷಕ ಅಧೀಕ್ಷಕರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರರು, ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು, ಅಗ್ನಿ ಶಾಮಕ ಪ್ರಾದೇಶಿಕ ಅಧಿಕಾರಿ, ಏರ್ಪೋರ್ಟ್ ಅಧಿಕಾರಿಗಳು, ರೈಲ್ವೇ ಅಧಿಕಾರಿಗಳು, ಆಕಾಶವಾಣಿ ಮುಂತಾದ ಜಿಲ್ಲೆಯ ಎಲ್ಲಾ ಇಲಾಖೆಗಳ ಎಲ್ಲಾ ಅಧಿಕಾರಿಗಳು ಒಳಗೊಂಡಿರುತ್ತಾರೆ.
ಕೇಂದ್ರ ಸರ್ಕಾರದ ವೃಂದದ ಹಾಗೂ ರಾಜ್ಯ ಸರ್ಕಾರದ ವೃಂದದ ಎಲ್ಲಾ ಇಲಾಖೆಗಳು ಪ್ರಕ್ಷುಬ್ದ ಪರಿಸ್ಥಿತಿಗಳಲ್ಲಿ ನಾಗರೀಕರಿಗೆ ರಕ್ಷಣೆ ನೀಡಲು ಹಾಗೂ ಆತ್ಮಸ್ಥೈರ್ಯ ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು. ಜಿಲ್ಲಾಡಳಿತದ ವತಿಯಿಂದ ಕಂಟ್ರೋಲ್ ರೂಂ ಅನ್ನು 24*7 ತೆರೆಯಲಾಗಿದ್ದು 24*7 ಕರ್ತವ್ಯ ನಿರ್ವಹಿಸಲು ಸನ್ನದ್ದರಾಗಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.