ಮೈಸೂರಿನಲ್ಲಿ ಎರಡು ದಿನ ಆಯೋಜಿಸಿರುವ ಹಲಸಿನ ಮೇಳಕ್ಕೆ ಚಾಲನೆ:ಹಲಸು ಬೆಳೆಗಾರ ಸಾಹಿತಿ ಕೃಷ್ಣಮೂರ್ತಿ ಬೆಳಗೆರೆ ಖುಷಿಯ ಯಾನ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರಿನಲ್ಲಿ ಎರಡು ದಿನ ಆಯೋಜಿಸಿರುವ ಹಲಸಿನ ಮೇಳಕ್ಕೆ ಚಾಲನೆ:ಹಲಸು ಬೆಳೆಗಾರ ಸಾಹಿತಿ ಕೃಷ್ಣಮೂರ್ತಿ ಬೆಳಗೆರೆ ಖುಷಿಯ ಯಾನ

ಮೈಸೂರಿನಲ್ಲಿ ಎರಡು ದಿನ ಆಯೋಜಿಸಿರುವ ಹಲಸಿನ ಮೇಳಕ್ಕೆ ಚಾಲನೆ:ಹಲಸು ಬೆಳೆಗಾರ ಸಾಹಿತಿ ಕೃಷ್ಣಮೂರ್ತಿ ಬೆಳಗೆರೆ ಖುಷಿಯ ಯಾನ

ಮೈಸೂರಿನಲ್ಲಿ ಎರಡು ದಿನಗಳ ಹಲಸಿನ ಮೇಳ ಶನಿವಾರ ಆರಂಭಗೊಂಡಿತು. ನಾನಾ ಭಾಗದಿಂದ ಬಂದಿರುವ ಹಲಸು, ಹಲಸಿನ ಖಾದ್ಯಗಳು ಗಮನ ಸೆಳೆಯುತ್ತಿವೆ.

ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ಆರಂಭಗೊಂಡ ಹಲಸಿನಮೇಳ.
ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ಆರಂಭಗೊಂಡ ಹಲಸಿನಮೇಳ.

ಮೈಸೂರು: ವಾಸನೆ ಎಂದು ಮೂಗು ಮುರಿದವರು, ಅಂಟು ಎಂದು ಹಲಸನ್ನು ಜರಿದವರು, ಹೊಟ್ಟೆ ನೋವಿನ ಹಣ್ಣು ಎಂದು ನಿರ್ಲಕ್ಷ್ಯ ಮಾಡಿದವರು ಈಗ ಹಲಸನ್ನು ಹಾಡಿ ಹೊಗಳುವ ಕಾಲ ಬಂದಿದೆ. ಜೇನು ಸವಿದಂತೆನಿಸುವ ಹಲಸು, ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದರ ಘಮಲು ನಮ್ಮ ಮನೆ ಮನಗಳಲ್ಲಿ ಸದಾ ಹರಡಬೇಕು. ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದೆ ಬೆಳೆಯಬಹುದಾದ ಹಲಸು ಬಯಲುಸೀಮೆ ಹಳ್ಳಿಗರ ಕಲ್ಪವೃಕ್ಷ. ಬದಲಾದ ವಾತಾವರಣ ಮತ್ತು ಮಳೆಗಾಲಕ್ಕೆ ಹೊಂದಿಕೊಂಡು ಬೆಳೆಯುವ ಸಾಮರ್ಥ್ಯವಿರುವ ಹಲಸು ಭವಿಷ್ಯದ ಬೆಳೆಯಾಗಿದೆ ಎನ್ನುವುದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೆಸರಾಂತ ಬರಹಗಾರ ಮತ್ತು ಹಲಸು ಬೆಳೆಗಾರ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯ.

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಮತ್ತು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮದವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿನೋಬ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಆರಂಭವಾದ ಎರಡು ದಿನಗಳ ಹಲಸಿನ ಮೇಳವನ್ನು ಕೃಷ್ಣಮೂರ್ತಿ ಬಿಳಿಗೆರೆ ಅವರು ಉದ್ಘಾಟಿಸಿ ಮಾತನಾಡಿದರು.

"ಮಳೆಯಾಶ್ರಿತ ಪ್ರದೇಶಗಳಲ್ಲಿ ಹಲಸು ಬೆಳೆಸುವ ಅವಕಾಶವಿದ್ದು, ಬರ ಎದುರಿಸುವ ಭವಿಷ್ಯದ ಬೆಳೆಯಾಗಿದೆ. ಮೈಸೂರು ಭಾಗದ ಉತ್ತಮ ಗುಣದ ಹಲಸಿನ ತಳಿಗಳನ್ನು ಗುರುತಿಸಿ, ಜನಪ್ರಿಯಗೊಳಿಸುವ ಕೆಲಸ ನಡೆಯಬೇಕಿದೆ. ಮಹಿಳಾ ಸಂಘಗಳು ಮತ್ತು ರೈತ ಉತ್ಪಾದಕರ ಕಂಪನಿಗಳಿಗೆ ಆರ್ಥಿಕ ನೆರವು ನೀಡಿ ಹಲಸಿನ ಮೌಲ್ಯವರ್ಧನೆ ಮಾಡಲು ಉತ್ತೇಜಿಸಬೇಕಿದೆ. ಹಲಸು ಬೆಳೆಯಲು ಮುಂದೆ ಬರುವ ರೈತರಿಗೆ ಅಗತ್ಯ ಸಹಕಾರ ಮತ್ತು ಸೂಕ್ತ ಮರುಕಟ್ಟೆ ಒದಗಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.

'ಜ್ಯೂಸ್ ಬಿಲ್ವ' ಮಾಹಿತಿ ಪತ್ರ ಬಿಡುಗಡೆ ಮಾಡಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾವಯವ ಕೃಷಿಕ ಶಿವನಾಪುರದ ರಮೇಶ್ ಮಾತನಾಡಿ, ಹಲಸಿನಂತೆ ನಿರ್ಲಕ್ಷ್ಯಕ್ಕೆ ಒಳಗಾದ ನೂರಾರು ಹಣ್ಣಿನ ತಳಿಗಳು ನಮ್ಮಲ್ಲಿವೆ. ಅವುಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಿದೆ. ದೇವರ ಪೂಜೆಗೆ ಬಳಕೆಯಾಗುವ ಬಿಲ್ವ ಹಣ್ಣನ್ನು ಆಹಾರವಾಗಿ ಬಳಸಬಹುದು, ರುಚಿಕರ ಪೇಯ ಮಾಡಬಹುದು.‌ ಹಲಸಿನಂತೆ ಜ್ಯೂಸ್ ಬಿಲ್ವ ಹಣ್ಣನ್ನೂ ಜನಪ್ರಿಯಗೊಳಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್ ಅಂಗಡಿ ಮಾತನಾಡಿ, ಜೇನು ಸವಿದಂತೆನಿಸುವ ಹಲಸು, ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ತಾಕತ್ತು ಹಲಸಿಗಿದೆ. ಇದರ ಘಮಲು ನಮ್ಮ ಮನೆ ಮನಗಳಲ್ಲಿ ಸದಾ ಹರಡಬೇಕು ಎಂದು ಹೇಳಿದರು.

ಸಹಜ ಸಮೃದ್ಧದ ಕಾರ್ಯದರ್ಶಿ ಆನಂದತೀರ್ಥ ಪ್ಯಾಟಿ ಮಾತನಾಡಿ ಬಯಲು ಸೀಮೆಯ ಬಂಗಾರ ಎನಿಸಿದ ಹಲಸು ಒಣಭೂಮಿ ರೈತರ ಆಶಾಕಿರಣವಾಗಿದೆ. ನಾಲ್ಕು ವರ್ಷ ಕಾಳಜಿ ಮಾಡಿದರೆ, ನೂರು ವರ್ಷ ಆದಾಯ ತರುತ್ತದೆ. ಒಣಭೂಮಿ ರೈತರು ಹಲಸಿನ ಕೃಷಿಗೆ ಮುಂದಾಗಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮದ ಕಾರ್ಯದರ್ಶಿ ದೇವರಾಜು ಎಂ ಮಾತನಾಡಿ ನೈಸರ್ಗಿಕವಾಗಿ ಸಿಗುವ ಹಲಸು ಪ್ರಕೃತಿ ನೀಡಿದ ಕೊಡುಗೆಯಾಗಿದೆ. ವಿವಿಧ ಬಣ್ಣದ, ರುಚಿಯ ಹಲಸಿನ ತಳಿಗಳನ್ನು ತಿಂದು ಸಂಭ್ರಮಿಸಬೇಕು. ಇದು ಗ್ರಾಹಕರಿಗೆ ಆರೋಗ್ಯ ಮತ್ತು ರೈತರಿಗೆ ಆದಾಯ ತಂದುಕೊಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷರಾದ ನಾಗೇಶ್ ಎಂ ಎಲ್ ಮಾತನಾಡಿ ನಿರ್ಲಕ್ಷ್ಯಿತ ಹಣ್ಣಾದ ಹಲಸಿಗೆ ಮೌಲ್ಯ ತಂದುಕೊಡುವ ಪ್ರಯತ್ನ ಮೆಚ್ಚುವಂತಹದು. ಗ್ರಾಹಕರು ಮತ್ತು ರೈತರನ್ನು ಬೆಸೆಯುವ ಇಂತಹ ಮೇಳಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಸಲಹೆ ನೀಡಿದರು.

ಸಹಜ ಸಮೃದ್ಧದ ನಿರ್ದೇಶಕ ಜಿ ಕೃಷ್ಣಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಗುಣಮಟ್ಟದ ತಳಿಯ ಹಲಸಿಗೆ ಬೇಡಿಕೆ ಬರುತ್ತಿದೆ. ವಿಶೇಷವಾಗಿ ಕೆಂಪು ಹಲಸಿನ ತಳಿಗಳಿಗೆ ಹೊರರಾಜ್ಯದಲ್ಲೂ ಬೇಡಿಕೆ ಇದೆ. ರೈತರು ಈ ಅವಕಾಶ ಬಳಸಿಕೊಂಡು, ಹಲಸಿನ ಕೃಷಿ ಮಾಡಲು ಮುಂದಾಗಬೇಕು. ನಿರ್ಲಕ್ಷಿತ ಬೆಳೆಗಳನ್ನು ಮುಖ್ಯವಾಹಿನಿಗೆ ತರಲು ಅಗತ್ಯವಿರುವ ನೆರವನ್ನು ಸರ್ಕಾರ ನೀಡಬೇಕು ಎಂದರು.

ಎಲ್ಲರ ಬಾಯಲ್ಲಿ ನೀರೂರಿಸುವ ಹಲಸು ಹಣ್ಣಿನ ಮೇಳಕ್ಕೆ ಮೊದಲ ದಿನವೇ ಹರಿದು ಬಂದ ಜನಸಾಗರ, ವಿವಿಧ ಬಗೆಯ ಹಲಸಿನ‌ಹಣ್ಣು ಹಾಗೂ ಹಲಸಿನ ಖಾದ್ಯಗಳನ್ನು ಖರೀದಿಸಲು ಮುಗಿಬಿದ್ದುದು ಕಂಡು ಬಂದಿತು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.