Mysuru Kodagu Result: ಮೈಸೂರು ಕೊಡಗು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಮಹಾರಾಜ, ಸಿಎಂ ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೋಲು
ಕನ್ನಡ ಸುದ್ದಿ  /  ಕರ್ನಾಟಕ  /  Mysuru Kodagu Result: ಮೈಸೂರು ಕೊಡಗು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಮಹಾರಾಜ, ಸಿಎಂ ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೋಲು

Mysuru Kodagu Result: ಮೈಸೂರು ಕೊಡಗು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಮಹಾರಾಜ, ಸಿಎಂ ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೋಲು

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ತವರು ಜಿಲ್ಲೆಯಾದ ಮೈಸೂರಿನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇಲ್ಲಿ ಸ್ಪರ್ಧಿಸಿದ್ದ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂ.ಲಕ್ಷ್ಮಣ ಅವರನ್ನು139262 ಮತದಿಂದ ಮಣಿಸಿದ್ದಾರೆ.

ಮೈಸೂರಲ್ಲಿ ಬಿಜೆಪಿ ಗೆದ್ದು ಕಾಂಗ್ರೆಸ್‌ ಸೋತಿದೆ.
ಮೈಸೂರಲ್ಲಿ ಬಿಜೆಪಿ ಗೆದ್ದು ಕಾಂಗ್ರೆಸ್‌ ಸೋತಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ ( Mysore Kodagu Lok Sabha MP Election 2024 Result) ಪ್ರಕಟಗೊಂಡಿದೆ. ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ( CM Siddaramaiah) ಇವರು ಕಾರಣದ ಜತೆಗೆ ರಾಜವಂಶಸ್ಥರು ಕಣಕ್ಕೆ ಇಳಿದಿದ್ದರಿಂದ ಭಾರೀ ಗಮನ ಸೆಳೆದಿತ್ತು. ಇಲ್ಲಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಪುತ್ರ ಕಣಕ್ಕೆ ಇಳಿಯಬಹುದು ಎನ್ನುವ ಲೆಕ್ಕಾಚಾರವಿತ್ತಾದರೂ ಸಿದ್ದರಾಮಯ್ಯ ಅವರು ಜಾತೀ ಸಮೀಕರಣದಂತೆ ಒಕ್ಕಲಿಗ ಸಮುದಾಯದವರಾದ ಸಾಮಾನ್ಯ ಕಾರ್ಯಕರ್ತ ಎಂ.ಲಕ್ಷ್ಮಣ(M Laxmana) ಅವರಿಗೆ ಅವಕಾಶ ಮಾಡಿಕೊಟ್ಟರು. ಇಡೀ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರೇ ಹೆಚ್ಚಾಗಿರುವುದರಿಂದ ಕಾಂಗ್ರೆಸ್‌ ಮತ ಬ್ಯಾಂಕ್‌ ನೊಂದಿಗೆ ಈ ಮತಗಳು ಬಂದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ಇದರ ಹಿಂದೆಯೂ ಇತ್ತು. ಕಾಂಗ್ರೆಸ್‌ ನಾಲ್ಕು ದಶಕದ ನಂತರ ಒಕ್ಕಲಿರಿಗೆ ಟಿಕೆಟ್‌ ನೀಡಿದೆ ಎಂದೇ ಬಿಂಬಿಸಿತ್ತು. ಇದರ ನಡುವೆಯೇ ಫಲಿತಾಂಶ ಬಂದಿದೆ.

ಈ ಕ್ಷೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದರೂ ಬಿಜೆಪಿ ಸೇರಿ ಸೋತಿದ್ದರು. ಈ ಬಾರಿ ಬಿಜೆಪಿಯಿಂದಲೇ ಕಣಕ್ಕೆ ಇಳಿದ ಯದುವೀರ್‌ ಒಡೆಯರ್‌( Yaduveer wadiyar) ಅವರು ಜಯಭೇರಿ ಬಾರಿಸಿದ್ದಾರೆ. ಹತ್ತು ವರ್ಷದ ಹಿಂದೆ ಪತ್ರಕರ್ತರಾಗಿದ್ದುಕೊಂಡೇ ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಪ್ರತಾಪಸಿಂಹ ಗೆದ್ದಿದ್ದರು. ಚೆನ್ನಾಗಿ ಕೆಲಸ ಮಾಡಿದ ಅಭಿಪ್ರಾಯವಿದ್ದರೂ ರಾಜಕೀಯ ಕಾರಣದಿಂದ ಅವರು ಈ ಬಾರಿ ಟಿಕೆಟ್‌ ತಪ್ಪಿಸಿಕೊಳ್ಳಬೇಕಾಯಿತು. ಸ್ಥಳೀಯವಾಗಿಯೂ ಸಿಂಹ ವಿರುದ್ದ ಅಸಮಾಧಾನವಿತ್ತು. ಈ ಕಾರಣದಿಂದಲೇ ಅವರ ಬದಲು ಮಾಡಿ ರಾಜವಂಶಸ್ಥರಿಗೆ ಟಿಕೆಟ್‌ ನೀಡಿ ಬಿಜೆಪಿ ತಂತ್ರ ರೂಪಿಸಿತು. ಇದು ಫಲ ಕೊಟ್ಟಂತೆ ಕಾಣುತ್ತಿದೆ. ಹಿಂದಿನ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಯಾಗಿದ್ದು ವ್ಯತಿರಿಕ್ತ ಫಲಿತಾಂಶ ನೀಡಿತ್ತು. ಈ ಬಾರಿ ಜೆಡಿಎಸ್‌ ಮತಗಳು ಹೆಚ್ಚಿನ ಪಾಲು ಬಿಜೆಪಿಗೆ ಬಂದಿರುವುದು ಫಲಿತಾಂಶವನ್ನು ತೋರಿಸಲಿದೆ. ಸಿಎಂ ಸಿದ್ದರಾಮಯ್ಯ ಸತತ ಮೂರನೇ ಬಾರಿಗೆ ಕಾಂಗ್ರೆಸ್‌ನಿಂದ ಅಭ್ಯರ್ಥಿ ಬದಲಿಸಿ ಹೊಸಬರಿಗೆ ನೀಡಿದ್ದು ಫಲ ನೀಡಿಲ್ಲ.

ಮೈಸೂರು ಕೊಡಗು ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಮೈಸೂರು ಕೊಡಗು

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

ಎಂ.ಲಕ್ಷ್ಮಣ (ಕಾಂಗ್ರೆಸ್‌): 656241 ಮತಗಳು

ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (ಬಿಜೆಪಿ): 795503 ಮತಗಳು

ಯದುವೀರ್‌ ಪರಿಚಯ

ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ರಾಜವಂಶಸ್ಥ. ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ ಮರಿ ಮೊಮ್ಮಗ. ಅವರನ್ನು ಮೈಸೂರು ಅರಮನೆಗೆ ದತ್ತು ತೆಗೆದುಕೊಂಡು ಈಗಾಗಲೇ ಹತ್ತು ವರ್ಷದಿಂದಲೇ ಅವರು ರಾಜವಂಶ ಸೇರಿದ್ದಾರೆ. ಅವರನ್ನು ಬಿಜೆಪಿ ಶತ ಪ್ರಯತ್ನದ ನಂತರ ಅಭ್ಯರ್ಥಿಯನ್ನಾಗಿಸಿದೆ. ಅವರು ಬೆಂಗಳೂರು,ಲಂಡನ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಹಲವಾರು ಸಾಮಾಜಿಕ ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಮೈಸೂರು ರಾಜವಂಶಸ್ಥರ ಹಲವಾರು ಉದ್ಯಮ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ಯದುವೀರ್‌ ತೊಡಗಿಸಿಕೊಂಡಿದ್ದಾರೆ. 32 ವರ್ಷದ ಒಡೆಯರ್‌ ಅವರಿಗೆ ಇದು ಮೊದಲನೇ ಚುನಾವಣೆ.

ಮೈಸೂರು ಕೊಡಗು ಕ್ಷೇತ್ರವಿದು

ಮೈಸೂರು ನಗರ, ಗ್ರಾಮೀಣ ಪ್ರದೇಶ, ಕೊಡಗು ಜಿಲ್ಲೆ ಒಳಗೊಂಡ ಕ್ಷೇತ್ರವಿದು. ಇಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆಯೇ ನೇರ ಹಣಾಹಣಿ. ಮೈಸೂರಿನ ಗ್ರಾಮೀಣ ಭಾಗದಲ್ಲಿ ಬಿಜೆಪಿ ಬಲ ಅಷ್ಟಾಗಿ ಇಲ್ಲದೇ ಇದ್ದರೂ ಹಿಂದೆ ಸಿ.ಎಚ್.ವಿಜಯಶಂಕರ್‌ ಹಾಗೂ ಪ್ರತಾಪಸಿಂಹ ತಲಾ ಎರಡು ಬಾರಿ ಗೆದ್ದಿದ್ದಾರೆ. ಅದನ್ನು ಬಿಟ್ಟರೆ ಕಾಂಗ್ರೆಸ್‌ ಹೆಚ್ಚು ಬಾರಿ ಗೆದ್ದಿದೆ. ಜನತಾಪರಿದವರು ಗೆದ್ದ ಇತಿಹಾಸವಿಲ್ಲ. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಾಲ್ಕು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಕಳೆದ ನಾಲ್ಕು ಚುನಾವಣೆಗಳಿಂದ ಕೊಡಗು ಕೂಡ ಮೈಸೂರು ಭಾಗವಾಗಿ ಮಾರ್ಪಟ್ಟಿದೆ. ಕಳೆದ ಎರಡು ಬಾರಿ ಇಲ್ಲಿಂದ ಪ್ರತಾಪಸಿಂಹ ಗೆದ್ದಿದ್ದರು. ಈ ಬಾರಿ ಅವರಿಗೆ ಟಿಕೆಟ್‌ ಸಿಕ್ಕಿಲ್ಲ.

(Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.)

Whats_app_banner