Mysore News: ಬೆಂಗಳೂರಲ್ಲಿ ಜನ ಮೆಚ್ಚಿದ ಜತೆಗಿರುವನು ಚಂದಿರ ಮೈಸೂರಿಗೂ ಬರುತ್ತಿದ್ದಾನೆ, ಮೇ 26ಕ್ಕೆ ನಟನದಲ್ಲಿ ನಾಟಕ ಪ್ರದರ್ಶನ
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಬೆಂಗಳೂರಲ್ಲಿ ಜನ ಮೆಚ್ಚಿದ ಜತೆಗಿರುವನು ಚಂದಿರ ಮೈಸೂರಿಗೂ ಬರುತ್ತಿದ್ದಾನೆ, ಮೇ 26ಕ್ಕೆ ನಟನದಲ್ಲಿ ನಾಟಕ ಪ್ರದರ್ಶನ

Mysore News: ಬೆಂಗಳೂರಲ್ಲಿ ಜನ ಮೆಚ್ಚಿದ ಜತೆಗಿರುವನು ಚಂದಿರ ಮೈಸೂರಿಗೂ ಬರುತ್ತಿದ್ದಾನೆ, ಮೇ 26ಕ್ಕೆ ನಟನದಲ್ಲಿ ನಾಟಕ ಪ್ರದರ್ಶನ

ಜಯಂತ್‌ ಕಾಯ್ಕಿಣಿ ಅವರ ಜತೆಗಿರುವನು ಚಂದಿರ ಕೃತಿ ರಂಗರೂಪದೊಂದಿಗೆ ನಾಟಕವಾಗಿ ಬೆಂಗಳೂರಿನಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಈಗ ಮೈಸೂರಿನ ನಟನ ರಂಗಶಾಲೆಯಲ್ಲಿ ಮೇ26ಕ್ಕೆ ಪ್ರದರ್ಶನ. ಸಂಕಲ್ಪ ತಂಡದ ಕಲಾವಿದ ಹುಲುಗಪ್ಪ ಕಟ್ಟಿಮನಿ ಅಭಿನಯಿಸಿ ನಿರ್ದೇಶಿಸಿದ ನಾಟಕವಿದು.

ಜತೆಗಿರುವನು ಚಂದಿರ ನಾಟಕ.
ಜತೆಗಿರುವನು ಚಂದಿರ ನಾಟಕ.

ಏಪ್ರಿಲ್‌ ಎರಡನೇ ವಾರ ಬೆಂಗಳೂರಿನ ರಂಗ ಶಂಕರದಲ್ಲಿಇಳೆಗಿಳಿದಿಹ ಬೆಳದಿಂಗಳಲ್ಲಿ ಜಳಕ ಮಾಡಿದಂತಹ ಅನುಭವ. ಸುಮಾರು 2 ಗಂಟೆ 20 ನಿಮಿಷಗಳ ಕಾಲ ಬಹುತೇಕ ಈ ತಲೆಮಾರಿನ ಯುವಕರೇ ಆಗಿದ್ದ ಪ್ರೇಕ್ಷಕರು ಹಾಡು, ನೃತ್ಯ, ಚುರುಕಾದ ಸಂಭಾಷಣೆ, ಹದವಾದ ಅಭಿನಯ, ಮೃದುವಾದ ಹಾಸ್ಯಗಳಲ್ಲಿ ಮಿಂದು ಖುಷಿಯಿಂದ ಹೊರಬಂದುನ್ನು ನೋಡುವುದೇ ಒಂದು ಚೆಂದ. ಯಾವುದೋ ಗತಕಾಲದ ಸಿನಿಮಾದಲ್ಲಿ ಕೇಳಿ ಬಂದಂತೆ ಕ್ಷಣಕ್ಕೊಮ್ಮೆ ಸಿಳ್ಳೆಗಳು, ಚಪ್ಪಾಳೆಗಳು. ಒಂದು ಗಾಢವಾದ ಅನುಭವ, ಒಂದು ಬದುಕಿನ ಕುರಿತಾದ ಗಂಭೀರ ಒಳನೋಟ ಇವೆಲ್ಲವನ್ನು ಹೊಂದಿದ್ದೂ ಕೂಡ ಕಥೆಯೊಂದು ನಮ್ಮ ಎದುರು ಮನಸ್ಸನ್ನು ರಂಜಿಸುತ್ತಾ ಬಿಚ್ಚಿಕೊಂಡ ಪರಿ ಇದು.

ಅದು ಜತೆಗಿರುವನು ಚಂದಿರ ನಾಟಕ. ಕಥೆ ಭಾರತದ ವಿಭಜನೆಯ ಹಿನ್ನೆಲೆಯನ್ನು ಹೊಂದಿದೆ. ಅರ್ಥಹೀನ ಕೋಮು ದ್ವೇಷ, ಹಿಂಸೆ ಮತ್ತು ದಂಗೆ ಈ ಬೆಳಗುವ ಮಾನವತೆಯ ಹಿನ್ನೆಲೆಯ ಅಂಧಕಾರವಾಗಿ ನಮ್ಮ ಕಣ್ಣಿಗೆ ಕಟ್ಟುತ್ತದೆ. ಆದ್ದರಿಂದಲೇ ಇದು ಸಮಕಾಲೀನ.

ಸಿನೆಮಾದಿಂದ ನಾಟಕಕ್ಕೆ

ಶೊಲೋಮ್ ಅಲೈಖೆಮ್ ನ ರಶ್ಯನ್ ಕಥೆಗಳನ್ನಾಧರಿಸಿ ಜೋಸೆಫ್ ಸ್ಟೀನ್ ರಚಿಸಿರುವ ಫಿಡ್ಲರ್ ಆನ್ ದಿ ರೂಫ್( ಮಾಡಿನ ಮೇಲೆ ನಿಂತ ಪಿಟೀಲುಗಾರ) ಪ್ರಪಂಚದ ಶ್ರೇಷ್ಟ ಸಂಗೀತ ನಾಟಕಗಳಲ್ಲೊಂದು.ಇದರ ಚಿತ್ರ ಪಟ ರೂಪ ಸಹ ತನ್ನ ಸಂಗೀತ ನಾಟಕಮಯತೆಯಿಂದಲೇ ಜನಮನವನ್ನು ಗೆದ್ದಿತು ಜಾರನ ರಷ್ಯಾದಲ್ಲಿ ಹುಚ್ಚಾಟಿಸಲ್ಪಟ್ಟು ಬೇರು ಬೀಳಲು ಎರಡನ್ನೂ ಕಿತ್ತುಕೊಂಡು ಗುಳ್ಏ ಹೊರಡಬೆರಕಾಗಿ ಬಂದ ಅಲ್ಪ ಸಂಖ್ಯಾತ ಜ್ಯೂ ಕುಟುಂಬ ವೊಂದರ ಕಥಾನಕ ಇದು.ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಏಕಮಾತ್ರ ಉಪಾಯದಂತಿರುವ, ಜ್ಯೂ ಜನರದ್ದೇ ಆದ ವಿಶಿಷ್ಟ ಹಾಸ್ಯ ಪ್ರಜ್ಞೆ ಮತ್ತು ದಟ್ಟ ಕೌಟುಂಬಿಕತೆ ಈ ನಾಟಕದ ಜೀವಾಳವಾಗಿದೆ.

ಯುದ್ಧ,ದೇಶ ವಿಭಜನೆ, ಅಭಿವೃದ್ಧಿ,ಆಣೆಕಟ್ಟು- ಇತ್ಯಾದಿಗಳ ನೆಪದಲಗಲಿ ಮನುಷ್ಯನ ಸ್ಥಾನಾಂತರ- ಉಚ್ಛಾಟನೆಗಳು ನಡೆದೇ ಇವೆ.ಭಾರತದ ದೇಶ ಚ್ಛೇದದ ಸಂದರ್ಭದಲ್ಲಿ ಈ ನಾಟಕವನ್ನು ಅಳವಡಿಸಲು ಯತ್ನಿಸಲಾಗಿದೆ. ಛೇದ ಉತ್ತರ ಭಾರತದಲ್ಲಾದರೂ ದಕ್ಷಿಣ ಕರಾವಳಿಯ ಹಳ್ಳಿಯ ಮೆರಲಾಗುವ ಅದರ ಗಾಯ ಈ ನಾಟಕದ ವಸ್ತು.

ಈ ನಾಟಕದ ಮೊದಲ ರೂಪವು 1964ರಲ್ಲಿ ನ್ಯೂಯಾರ್ಕ್ ನಗರದ ಬ್ರಾಡ್ವೇಯಲ್ಲಿ ಪ್ರದರ್ಶನ ಕಂಡಿತು. ಎಂದರೆ ಈ ನಾಟಕಕ್ಕೆ ಈಗ ವಜ್ರ ಮಹೋತ್ಸವ. ಇದು ಎಂಥಾ ಯಶಸ್ವಿ ನಾಟಕವಾಯಿತೆಂದರೆ ಸತತವಾಗಿ 3242 ಪ್ರದರ್ಶನಗಳನ್ನು ಕಂಡಿತು. ನಂತರ ಲಂಡನ್ ನಲ್ಲಿಯೂ 2000ಕ್ಕೂ ಹೆಚ್ಚು ಪ್ರದರ್ಶನಗಳು. ಆಸ್ಟ್ರೇಲಿಯಾ ಜರ್ಮನಿ, ಫ್ರಾನ್ಸ್ ಹೀಗೆ ಹೋದಲ್ಲೆಲ್ಲ ಜಯಭೇರಿ. ಮೂಲ ಕಥೆಗಾರ ಶೋಲೇಂ ಆಲ್ಕೈಮ್ 1905ರ ಉಕ್ರೇನ್ ನ ಹಳ್ಳಿಗಾಡಿನ ಯಹೂದಿ ಕುಟುಂಬದ ಕಥೆಯಾಗಿ ಇದನ್ನು ಬರೆದಿದ್ದ. ಹೆಸರು ‘ಟೇವ್ಯೆ ಮತ್ತು ಆತನ ಹೆಣ್ಣು ಮಕ್ಕಳು’. ನಾಟಕ ರೂಪವನ್ನು ಮುಗಿಸುವ ಮುನ್ನ ತೀರಿಕೊಂಡಿದ್ದ. 20ನೆಯ ಶತಮಾನದ ಪೂರ್ವಾರ್ಧದಲ್ಲಿಯೇ ಯಿದ್ದಿಶ್ ಭಾಷೆಯಲ್ಲಿ ಇದು ನಾಟಕವೂ, ನಂತರ ಚಲನಚಿತ್ರವೂ ಆಗಿ ಯಶಸ್ವಿಯಾಗಿತ್ತು.

ಇದು ಎಲ್ಲರ ಗಮನವನ್ನು ಸೆಳೆದದ್ದು ಅಮೆರಿಕದಲ್ಲಿ ಚಲನಚಿತ್ರವಾಗಿ. ಸಾವಿರದ ಒಂಬೈನೂರ ಎಪ್ಪತ್ತೊಂದರಲ್ಲಿ ಆ ವರ್ಷದ ಅತ್ಯಂತ ಹೆಚ್ಚು ಹಣಗಳಿಕೆಯ ಚಿತ್ರವಾಗಿ 'ಫಿಡ್ಲರ್ ಆನ್ ದಿ ರೂಫ್' ಜಯಭೇರಿ ಬಾರಿಸಿತು.

ಕನ್ನಡಕ್ಕೆ ತಂದರು ಕಾಯ್ಕಿಣಿ

ಕನ್ನಡಕ್ಕೆ ಇದನ್ನು ರೂಪಾಂತರಿಸಿದ ಜಯಂತ ಕಾಯ್ಕಿಣಿಯವರು ಮೂಲದಲ್ಲಿ ಇರುವ ಪಾತ್ರ ಚಿತ್ರಣ, ಒಟ್ಟಾರೆ ವಾತಾವರಣ, ಹಾಡು ಮತ್ತು ನೃತ್ಯದ ನವಲವಿಕೆ ಎಲ್ಲವನ್ನು ಹಿಡಿದಿಡುವಂತೆ ಅನುವಾದ ಮಾಡಿದ್ದಾರೆ. ಆದರೆ ಅದನ್ನು ನಮ್ಮ ಭಾರತೀಯ ಸಂಧರ್ಭಕ್ಕೆ ಹಾಗೂ ಮುಸ್ಲಿಂ ಸಮುದಾಯದ ಸಂಸ್ಕೃತಿಗೆ ಒಗ್ಗುವಂತೆ ರೂಪಾಂತರಿಸಿರುವ ಪ್ರತಿಭೆ ಇದೆಯಲ್ಲ, ಅದು ಅಸಾಧಾರಣವಾದದ್ದು. ಎಷ್ಟೋ ಕಡೆ ಅವರ ಅನುವಾದ ಮೂಲವನ್ನು ಮೀರಿದೆ. ಉದಾಹರಣೆಗೆ 'ವಿಸ್ಮಯ ಆಹಾ ವಿಸ್ಮಯ' ಎಂಬ ಹಾಡು ಮತ್ತು ಬಡೇ ಮಿಯಾ ಹುಟ್ಟಿಸಿಕೊಂಡು ಅಭಿನಯಿಸುವ ಕನಸಿನ ದೃಶ್ಯದಲ್ಲಿ ಸೇರಿಕೊಂಡಿರುವ ಅಂಶಗಳು. ನಾಟಕದ ಉದ್ದಕ್ಕೂ ಬಡೇ ಮಿಯಾ ಆಗಿ ನಟಿಸಿರುವ ಹಾಗೂ ನಾಟಕದ ನಿರ್ದೇಶನ ಸಹ ಮಾಡಿರುವ ಹುಲಿಗಪ್ಪ ಕಟ್ಟಿಮನಿ ಹಾಗೂ ತಾಯಿ ಮುನೀರ್ ಜಾನ್ ಪಾತ್ರದಲ್ಲಿ ಎನ್. ಮಂಗಳ ಅಮೋಘವಾದ ಅಭಿನಯ ನೀಡಿದ್ದಾರೆ.

ಹೀಗಿದೆ ನಾಟಕ

ಸಮಾಜ ಒಂದು ಸ್ಥಿತ್ಯಂತರ ಘಟ್ಟದಲ್ಲಿದ್ದಾಗ, ಹಳೆಯ ಮತ್ತು ಹೊಸ ಮೌಲ್ಯಗಳ ನಡುವೆ ಸಂಘರ್ಷ ಬಂದಾಗ ಒಂದು ತಲೆಮಾರು ಸಂಕಟಗಳನ್ನು ಅನುಭವಿಸಿ ಮಾನಸಿಕವಾಗಿ ಮರುಹುಟ್ಟು ಪಡೆಯುತ್ತದೆ. ಆದರೆ ಕನ್ನಡದಲ್ಲಿ ಬಂದಿರುವ ರೂಪಾಂತರದಲ್ಲಿ ಇದಕ್ಕೆ ಇನ್ನಷ್ಟು ಅರ್ಥಗಳು ಹುಟ್ಟಿಕೊಂಡಿವೆ. ಮೂಲ ಕಥೆಯಲ್ಲಿ ಇದ್ದ ಯಹೂದಿ ಕುಟುಂಬದ ಬದಲಾಗಿ ಇಲ್ಲಿ ಇದು ಮುಸ್ಲಿಂ ಕುಟುಂಬದ ಸುತ್ತಲೂ ನಡೆಯುತ್ತದೆ. ಮನೆಯ ಯಜಮಾನ ಬಡೇ ಮಿಯಾ ಇಲ್ಲಿ ನಾಯಕ. ಆತನ ಮಡದಿ ಮುನೀರ್ ಜಾನ್. ಇವರಿಗೆ ಮೂವರು ಹೆಣ್ಣು ಮಕ್ಕಳು. ಆ ಸಂಪ್ರದಾಯನಿಷ್ಠ ಸ್ವತಂತ್ರ ಪೂರ್ವ ಭಾರತದ ಮುಸ್ಲಿಂ ಕುಟುಂಬದಲ್ಲಿ, ಪ್ರೇಮವನ್ನು ಆಧರಿಸಿದ ಮದುವೆ ಎಂಬುದನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ತಂದೆ ನಿರ್ಧರಿಸುವ ಮತ್ತು ಮಧ್ಯಸ್ಥಿಕೆದಾರರು ಕುದುರಿಸುವ ಸಾಂಪ್ರದಾಯಿಕ ಮದುವೆ ಮಾತ್ರ ಅವರಿಗೆ ಗೊತ್ತು. ಆದರೆ ಅದು ಹೇಗೋ ಏನೋ ಬಡೇ ಮಿಯಾನ ಮೂವರು ಹೆಣ್ಣು ಮಕ್ಕಳೂ ತಂದೆ ತಾಯಿ ನಿರೀಕ್ಷಿಸದಿದ್ದ ರೀತಿಯಲ್ಲಿ ತಮ್ಮ ಹೃದಯದ ಕರೆಗೆ ಓಗೊಟ್ಟು ಮದುವೆಯಾಗುತ್ತಾರೆ. ಮನಸ್ಸಿನಲ್ಲಿ ನಡೆಯುವ ಎಲ್ಲಾ ತಾಕಲಾಟ ವಿರೋಧಗಳನ್ನು ಮೀರಿ ತಾಯಿ ತಂದೆಯರು ತಮ್ಮ ಮಕ್ಕಳ ಆಯ್ಕೆಯನ್ನು ಹಂತ ಹಂತವಾಗಿ ಸ್ವೀಕರಿಸುತ್ತಾ ಉದಾತ್ತ ಮನುಷ್ಯರಾಗಿ ಅರಳಿಕೊಳ್ಳುತ್ತಾ ಹೋಗುತ್ತಾರೆ.

ಅವರ ಸುತ್ತಲಿನ ಹಳ್ಳಿಯ ಬದುಕಿನಲ್ಲಿ ಸಣ್ಣತನವಿದೆ, ಗಾಸಿಪ್ ಇದೆ, ಜಗಳಗಂಟತನವಿದೆ, ಕೋಮು ದ್ವೇಷವೂ ಇದೆ, ಎಲ್ಲಕ್ಕಿಂತಲೂ ಮಿಗಿಲಾಗಿ ಕಾಡುವ ಬಡತನವಿದೆ. ಆದರೆ ಬಹುತೇಕ ಎಲ್ಲರಲ್ಲೂ ಮಾನವೀಯತೆಯ ಹಣತೆಯು ಬೆಳಗುತ್ತದೆ. ಇಡೀ ನಾಟಕವನ್ನು ಒಂದು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಇದೇ ಗುಣವೇ ಎಂದು ಹಿರಿಯ ಲೇಖಕ ಬಿ.ಆರ್. ಮಂಜುನಾಥ್‌ ನಾಟಕವನ್ನು ವಿಶ್ಲೇಷಿಸುತ್ತಾರೆ.

ನೀನಾಸಂ ನಂತರ ಸಂಕಲ್ಪ

ಕನ್ನಡದಲ್ಲಿ ನೀನಾಸಂ ಸಂಸ್ಥೆಯು ತನ್ನ ವಾರ್ಷಿಕ ತಿರುಗಾಟದ ಭಾಗವಾಗಿ ಇದನ್ನು 1998-99 ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತು. ಹೀಗಾಗಿ ಕನ್ನಡದಲ್ಲಿ ಇದಕ್ಕೆ ಬೆಳ್ಳಿ ಹಬ್ಬ. ಇದನ್ನು ಈಗ ನಿರ್ದೇಶಿಸುತ್ತಿರುವವರು ಹಿರಿಯ ಕಲಾವಿದ ಹುಲುಗಪ್ಪ ಕಟ್ಟಿಮನಿ. ಈ ಬಾರಿ ಮೈಸೂರಿನ 'ಸಂಕಲ್ಪ' ತಂಡದಿಂದ ರಂಗಶಂಕರದಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ಗೆದ್ದುಕೊಂಡು ಸತತವಾಗಿ ಹೌಸ್ ಫುಲ್ ಆಗಿ ಪ್ರದರ್ಶಿತವಾಯಿತು. ಈಗ ಮೈಸೂರಿನಲ್ಲಿ ಸಂಕಲ್ಪದಿಂದಲೇ ನಾಟಕ ಪ್ರದರ್ಶನ. ಮೈಸೂರಿನ ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ. 26ನೇ ಮೇ 2024ರ ಭಾನುವಾರ ಸಂಜೆ 6.30ಕ್ಕೆ. ಬುಕ್‌ ಮೈ ಶೋ ನಲ್ಲಿ Book my show ನಲ್ಲಿ ಟಿಕೆಟ್‌ಗಳು ಲಭ್ಯ. ಸಂಗೀತ : ಶ್ರೀನಿವಾಸ ಭಟ್,ರಂಗಾಯಣ. ವಿನ್ಯಾಸ,ನಟನೆ,ನಿರ್ದೇಶನ: ಹುಲುಗಪ್ಪ ಕಟ್ಟೀಮನಿ ಅವರದ್ದು. ಬನ್ನಿ ವಿಭಿನ್ನ ನಾಟಕ ನೋಡಿ.

ಮಾಹಿತಿಗೆ: ಹುಲಗಪ್ಪ ಕಟ್ಟಿಮನಿ(97439 12770)

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)