ಮೈಸೂರಿನ ಹೊರವಲಯದಲ್ಲಿ ಯುವಕನ ಬರ್ಬರ ಕೊಲೆ: ರೌಡಿಶೀಟರ್‌ ಕಾರ್ತಿಕ್‌ ಹತ್ಯೆ; ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರಿನ ಹೊರವಲಯದಲ್ಲಿ ಯುವಕನ ಬರ್ಬರ ಕೊಲೆ: ರೌಡಿಶೀಟರ್‌ ಕಾರ್ತಿಕ್‌ ಹತ್ಯೆ; ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರಿನ ಹೊರವಲಯದಲ್ಲಿ ಯುವಕನ ಬರ್ಬರ ಕೊಲೆ: ರೌಡಿಶೀಟರ್‌ ಕಾರ್ತಿಕ್‌ ಹತ್ಯೆ; ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರಿನ ಹೊರವಲಯದ ಹೋಟೆಲ್ ಬಳಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹತ್ಯೆಯ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನ ಹೊರವಲಯದಲ್ಲಿ ಯುವಕನ ಬರ್ಬರ ಕೊಲೆ
ಮೈಸೂರಿನ ಹೊರವಲಯದಲ್ಲಿ ಯುವಕನ ಬರ್ಬರ ಕೊಲೆ

ಮೈಸೂರು: ಮೈಸೂರಿನ ಹೊರವಲಯದಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ವರುಣ ಗ್ರಾಮದ ಸನಿಹದಲ್ಲಿರುವ ಹೋಟೆಲ್ ಬಳಿ ಹತ್ಯೆ ನಡೆದಿದ್ದು, ಕೊಲೆಯಾದ ಯುವಕನನ್ನು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ. ಕೊಲೆಗೀಡಾದ ಕಾರ್ತಿಕ್ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಭಾನುವಾರ ತಡರಾತ್ರಿ ಹತ್ಯೆ ನಡೆದಿದೆ.

ಐದು ಜನರ ತಂಡದಿಂದ ದುಷ್ಕೃತ್ಯ ಎಸಗಲಾಗಿದ್ದು, ಹತ್ಯೆಯ ದೃಶ್ಯ ಹೋಟೆಲ್ ಆವರಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೀಡಾದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್ ಹಾಗೂ ಗಾಯಿತ್ರಿಪುರಂ ನಿವಾಸಿ ಪ್ರವೀಣ್ ನಡುವೆ ಈ ಹಿಂದೆ ಗಲಾಟೆಯಾಗಿತ್ತು. ನಾಲ್ಕೈದು ತಿಂಗಳ ಹಿಂದೆ ಹಣಕಾಸಿನ ವಿಚಾರಕ್ಕೆ ನಡೆದಿದ್ದ ಗಲಾಟೆಯಲ್ಲಿ, ಪ್ರವೀಣ್‌ ಎಂಬಾತನನ್ನು ಕೊಲೆ ಮಾಡುವುದಾಗಿ ಕಾರ್ತಿಕ್ ಧಮ್ಕಿ ಹಾಕಿದ್ದ. ಹೀಗಾಗಿ ಕಾರ್ತಿಕ್ ಕೊಲೆ ಮಾಡ್ತಾನೆ ಎನ್ನುವ ಭಯದಲ್ಲೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ ಚಿಕ್ಕಹಳ್ಳಿಯಲ್ಲಿ ನಡೆದ ಕೊಲೆ ಯತ್ನ ಕೇಸ್‌ನಲ್ಲಿ ಜೈಲು ಸೇರಿದ್ದ ಕಾರ್ತಿಕ್, ಬಳಿಕ ಬೇಲ್ ಮೇಲೆ ಹೊರಬಂದಿದ್ದ. ಹೀಗಾಗಿ ಈ ಸಂದರ್ಭ ನೋಡಿ, ಸ್ಕೆಚ್ ಹಾಕಿ ಕಾರ್ತಿಕ್ ಕೊಲೆ ಮಾಡಲಾಗಿದೆ.

ನನ್ನ ಮಗನಿಗೆ ರಾತ್ರಿ 10.45ಕ್ಕೆ ಫೋನ್ ಮಾಡಿದ್ದೆ, ಊಟ ಮಾಡಿಕೊಂಡು ಹೋಗಲು ಹೇಳಿದ್ದೆ. ಅದಕ್ಕೆ ಅವನು ಬರ್ತೀನಮ್ಮ ಚಪಾತಿ ಮಾಡಿಡು ಅಂತ ಹೇಳಿದ್ದ. ಕಾರ್ತಿಕ್ ರಾತ್ರಿ 11.30ಕ್ಕೆ ಬಂದು ಊಟ ಮಾಡಿಕೊಂಡು ಹೋಗಿದ. ನಂತರ ರಾತ್ರಿ 1.30ಕ್ಕೆ ಆತನ ಜೊತೆಗಿದ್ದ ಹುಡುಗಿಯಿಂದ ಪೋನ್ ಬಂದಿದೆ. ಆದರೆ ನಾನು ಕರೆ ಸ್ವೀಕರಿಸಲಿಲ್ಲ. ನಂತರ ಬೆಳಿಗ್ಗೆ ಆತನ ಸ್ನೇಹಿತರು ಮನೆ ಮುಂದೆ ಬಂದು ಕೂಗಾಡಿದಾಗ ವಿಷಯ ಗೊತ್ತಾಯಿತು ಎಂದು ಮೃತ ಕಾರ್ತಿಕ್ ತಾಯಿ ಶಾಂತಕುಮಾರಿ ಹೇಳಿಕೆ ನೀಡಿದ್ದಾರೆ.

ನಮ್ಮ ಏರಿಯಾದ ಲಕ್ಷ್ಮಿ ಎಂಬುವಳ ಮೂಲಕ ಈ ಕೊಲೆ ಆಗಿರಬಹುದು. ಲಕ್ಷ್ಮಿಯನ್ನು ಪ್ರವೀಣ್ ಟ್ರ್ಯಾಪ್ ಮಾಡಿದ್ದಾನೆ. ಆಕೆಯ ಮೂಲಕ ನನ್ನ ಮಗ ಇರುವ ಜಾಗವನ್ನು ಗೊತ್ತು ಮಾಡಿಕೊಂಡಿದ್ದಾನೆ.

ಲಕ್ಷ್ಮಿ ಮೂಲಕ ಪೋನ್ ಮಾಡಿಸಿ ಕರೆಸಿಕೊಂಡು ಕೊಲೆ ಮಾಡಿರಬಹುದು. ಇದು ಲಕ್ಷ್ಮಿ ಮುಖೇನವೇ ಆಗಿರುವ ಕೊಲೆ. ಆಕೆಯನ್ನು ಹಿಡಿದು ವಿಚಾರಿಸಿದರೆ ಎಲ್ಲವೂ ಗೊತ್ತಾಗುತ್ತದೆ. ನನ್ನನ್ನು ಎಲ್ಲರೂ ಬಂದು ಅಮ್ಮ ಅಂತ ಕರೆಯುತ್ತಾರೆ, ಯಾರ ಮೇಲೆ ನಾನು ಅನುಮಾನ ಪಡಲಿ ಹೇಳಿ ಎಂದು ಕಾರ್ತಿಕ್ ತಾಯಿ ಶಾಂತಕುಮಾರಿ ಹೇಳಿದ್ದಾರೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in