Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ ಘಮಘಮ, 416 ಕೋಟಿ ದಾಖಲೆಯ ನಿವ್ವಳ ಲಾಭ ಗಳಿಸಿದ ಕೆಎಸ್‌ಡಿಎಲ್‌
ಕನ್ನಡ ಸುದ್ದಿ  /  ಕರ್ನಾಟಕ  /  Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ ಘಮಘಮ, 416 ಕೋಟಿ ದಾಖಲೆಯ ನಿವ್ವಳ ಲಾಭ ಗಳಿಸಿದ ಕೆಎಸ್‌ಡಿಎಲ್‌

Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ ಘಮಘಮ, 416 ಕೋಟಿ ದಾಖಲೆಯ ನಿವ್ವಳ ಲಾಭ ಗಳಿಸಿದ ಕೆಎಸ್‌ಡಿಎಲ್‌

Mysore Sandal Soap: ಕರ್ನಾಟಕ ಸ್ವಾಮ್ಯದ ಮೈಸೂರು ಸ್ಯಾಂಡಲ್‌ ಸೋಪ್‌ ತಯಾರಿಸುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಯು ಉತ್ತಮ ವಹಿವಾಟು ನಡೆಸುವ ಜತೆಗೆ ದಾಖಲೆ ಆದಾಯವನ್ನೂ ಪಡೆದಿದೆ.

ಮೈಸೂರು ಸ್ಯಾಂಡಲ್‌ ಸೋಪ್‌ ಸಹಿತ ಹಲವು ಉತ್ಪನ್ನಗಳನ್ನು ಉತ್ಪಾದಿಸುವ ಕೆಎಸ್‌ಡಿಎಲ್‌ ಉತ್ತಮ ಲಾಭ ಪಡೆದಿದೆ.
ಮೈಸೂರು ಸ್ಯಾಂಡಲ್‌ ಸೋಪ್‌ ಸಹಿತ ಹಲವು ಉತ್ಪನ್ನಗಳನ್ನು ಉತ್ಪಾದಿಸುವ ಕೆಎಸ್‌ಡಿಎಲ್‌ ಉತ್ತಮ ಲಾಭ ಪಡೆದಿದೆ.

Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ ಸಹಿತ ನಾನಾ ಉತ್ಪನ್ನಗಳನ್ನು ತಯಾರಿಸುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ಡಿಎಲ್) 2024-25ನೇ ಸಾಲಿನಲ್ಲಿ 1,787 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿ, 416 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು ಸಾಲಿಗಿಂತ 54 ರೂ. ಕೋಟಿ ಹೆಚ್ವು.ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಮತ್ತು ಕೆಎಸ್ ಡಿಎಲ್ ಅಧ್ಯಕ್ಷರೂ ಆದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಜಂಟಿ ಹೇಳಿಕೆಯಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಸಚಿವರು, ಕಳೆದ ಹಣಕಾಸು ವರ್ಷದಲ್ಲಿ ಸಂಸ್ಥೆಯು 43,144 ಮೆಟ್ರಿಕ್ ಟನ್ ಸಾಬೂನು ಮತ್ತು ಮಾರ್ಜಕಗಳನ್ನು ಮಾರಾಟ ಮಾಡಿ, ದಾಖಲೆಯ ಲಾಭ ಗಳಿಸಿದೆ. ಲಾಭದಲ್ಲಿ ನಿಯಮಾನುಸಾರ ಶೇ.30ರಷ್ಟನ್ನು, ಅಂದರೆ 123 ಕೋಟಿ ರೂ.ಗಳನ್ನು ಸರಕಾರಕ್ಕೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ.

ಸಂಸ್ಥೆಯು 2023-24ರಲ್ಲಿ 37,916 ಟನ್ ಉತ್ಪನ್ನ ಮಾರಾಟ ಮಾಡಿ, 1,570 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ 362 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. ಆ ಪೈಕಿ 108 ಕೋಟಿ ರೂ.ಗಳನ್ನು ಸರಕಾರಕ್ಕೆ ಕೊಡಲಾಗಿತ್ತು. ಹಿಂದೆ ಸಂಸ್ಥೆಯು ಲಾಭಾಂಶ ಕೊಡುವ ಸರಕಾರಿ ಉದ್ದಿಮೆಗಳ ಪೈಕಿ 21ನೇ ಸ್ಥಾನದಲ್ಲಿತ್ತು. ಈಗ 3ನೇ ಸ್ಥಾನದಲ್ಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

2024-25ರಲ್ಲಿ ಸಂಸ್ಥೆಯು ಉತ್ಪಾದನೆ, ಮಾರಾಟ ಮತ್ತು ಲಾಭ ಮೂರರಲ್ಲೂ ಸಾರ್ವಕಾಲಿಕ ದಾಖಲೆ ಬರೆದಿದೆ.‌ ಕಳೆದ ಸಾಲಿನಲ್ಲಿ ರಫ್ತು ವಹಿವಾಟಿನ ಮೂಲಕವೂ ಕೆಎಸ್ಡಿಎಲ್ 23.2 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸಿದೆ ಎಂದು ಸಚಿವ ಪಾಟೀಲ ವಿವರಿಸಿದ್ದಾರೆ.

ಸಂಸ್ಥೆಯು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ 19 ಉತ್ಪನ್ನಗಳನ್ನು ಒಳಗೊಂಡಿದೆ. ಇದರಲ್ಲಿ ಮೈಸೋಪು, ಹ್ಯಾಂಡ್ ವಾಶ್, ಶವರ್ ಜೆಲ್, ಕುಡಿಯುವ ನೀರು, ಅಗರಬತ್ತಿ ಮುಂತಾದ ಉತ್ಕೃಷ್ಟ ಉತ್ಪನ್ನಗಳನ್ನು ಹೊಂದಿದೆ. ಮಾರುಕಟ್ಟೆ ವಿಸ್ತರಣೆ ಮತ್ತು ದಕ್ಷ ಉತ್ಪಾದನಾ ವಿಧಾನದ ಮೂಲಕ ಲಾಭವನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಸ್ಥೆಯು ಈಗ ಇ-ಕಾಮರ್ಸ್ ಮತ್ತು ಆಧುನಿಕ ವ್ಯಾಪಾರ ಮಾದರಿಗಳನ್ನು ಅಳವಡಿಸಿಕೊಂಡಿದೆ. ಸಂಸ್ಥೆಯ ಚೆನ್ನೈ, ಹೈದರಾಬಾದ್, ಮುಂಬೈ, ಅಹಮದಾಬಾದ್, ದೆಹಲಿ, ಛತ್ತೀಸಗಢ ಮತ್ತು ಕೋಲ್ಕತಾ ಹಾಗೂ ಒಡಿಶಾ ಶಾಖೆಗಳಲ್ಲಿ ಕೂಡ ವಹಿವಾಟು ಹೆಚ್ಚಳ ಕಂಡಿದೆ ಎಂದು ಅವರು ನುಡಿದಿದ್ದಾರೆ.

ಸಂಸ್ಥೆಯಲ್ಲಿ ಈಗ ಮೂರು ಪಾಳಿಗಳ ಕೆಲಸದ ವ್ಯವಸ್ಥೆ ಇದೆ. ವಿಜಯಪುರದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಸ್ಥೆಯ ಘಟಕವನ್ನು ತೆರೆಯಲಾಗುವುದು.‌ ಇದಕ್ಕೆ 50 ಎಕರೆ ಜಾಗವನ್ನು ಕೆಐಎಡಿಬಿ ಹಂಚಿಕೆ ಮಾಡಿದೆ. 2025-26ರಲ್ಲಿ ಸಂಸ್ಥೆಯು 1,819 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಪಾಟೀಲ ಹೇಳಿದ್ದಾರೆ.

ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ.ಪ್ರಶಾಂತ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸಂಸ್ಥೆಯ ಲಾಭದ ಪ್ರಮಾಣ ಏರುಮುಖವಾಗಿದೆ. ಪಾರದರ್ಶಕತೆ, ದಕ್ಷತೆ, ಮಾರುಕಟ್ಟೆ ವಿಸ್ತರಣೆ ಮತ್ತು ಗುಣಮಟ್ಟ ಈ‌ ‌ನಾಲ್ಕು ಅಂಶಗಳಿಗೆ ಆದ್ಯತೆ ನೀಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು.

ಸಂಸ್ಥೆಯ ಸಾಬೂನು ಘಟಕವು ಕಳೆದ ಸಾಲಿನಲ್ಲಿ 36,268 ಟನ್, ಡಿಟರ್ಜೆಂಟ್ ಘಟಕವು 5,788 ಟನ್ ಮತ್ತು ಸೌಂದರ್ಯ ವರ್ಧಕಗಳ ಘಟಕವು 1,087 ಟನ್ ಉತ್ಪನ್ನಗಳನ್ನು ತಯಾರಿಸಿದೆ ಎಂದು ಅವರು ಹೇಳಿದ್ದಾರೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.