Kannada News  /  Karnataka  /  Mysuru Bengaluru Expressway Toll Expected To Be Around <Span Class='webrupee'>₹</span>250, Details
Bengaluru Mysuru Expressway toll: ಬೆಂಗಳೂರು ಮೈಸೂರು ಬಸ್‌ ಟಿಕೆಟ್‌ ದರಕ್ಕಿಂತ ವಾಹನ ಮಾಲೀಕರಿಗೆ ಎಕ್ಸ್‌ಪ್ರೆಸ್‌ವೇ ಟೋಲ್‌ ದುಬಾರಿ?
Bengaluru Mysuru Expressway toll: ಬೆಂಗಳೂರು ಮೈಸೂರು ಬಸ್‌ ಟಿಕೆಟ್‌ ದರಕ್ಕಿಂತ ವಾಹನ ಮಾಲೀಕರಿಗೆ ಎಕ್ಸ್‌ಪ್ರೆಸ್‌ವೇ ಟೋಲ್‌ ದುಬಾರಿ?

Bengaluru Mysuru Expressway toll: ಬಸ್‌, ಏಸಿ ರೈಲು ದರಕ್ಕಿಂತ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ದರ ದುಬಾರಿಯಾಗಿರಲಿದೆಯೇ?

14 February 2023, 9:48 ISTPraveen Chandra B
14 February 2023, 9:48 IST

ಶೀಘ್ರದಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳಲಿದ್ದು, ಇದರ ಟೋಲ್‌ ದರ ಎಷ್ಟಿರಲಿದೆ ಎಂಬ ಕುತೂಹಲ ಜನರಲ್ಲಿ ಮನೆಮಾಡಿದೆ.

ಬೆಂಗಳೂರು: ಹಲವು ವರ್ಷಗಳಿಂದ ಕಾಯುತ್ತಿದ್ದ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಸಿದ್ಧವಾಗಿದೆ. ಈ ಈ ಹೆದ್ದಾರಿ ಸದ್ಯದಲ್ಲಿಯೇ ಉದ್ಘಾಟನೆಗೊಳ್ಳಲಿದೆ. ಇದೀಗ ಈ ರಸ್ತೆಯಲ್ಲಿ ಪ್ರಯಾಣಿಸಲು ಟೋಲ್‌ ಎಷ್ಟಿರಲಿದೆ ಎಂಬ ಸಂದೇಹ ಹಲವು ಜನರನ್ನು ಕಾಡಲಿದೆ. ವಿಶೇಷವಾಗಿ, ಬಸ್‌ ಪ್ರಯಾಣಕ್ಕಿಂತಲೂ ಟೋಲ್‌ ದರ ದುಬಾರಿ ಇರಲಿದೆಯೇ? ಎಂಬ ಸಂದೇಹದಲ್ಲಿ ವಾಹನ ಚಾಲಕರಿದ್ದಾರೆ.

ಸಂಸದ ಪ್ರತಾಪ್‌ ಸಿಂಹ ಮಾಹಿತಿ ನೀಡಿದ ಪ್ರಕಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಸಾಗುವವರು ಎರಡು ಕಡೆಯ ಪ್ರಯಾಣಕ್ಕೆ 250 ರೂ. ಪಾವತಿಸಬೇಕಾಗಬಹುದು ಎಂದು ಹೇಳಿದ್ದಾರೆ. ಇದು ಎರಡು ಕಡೆಯ ಪ್ರಯಾಣವಾದರೆ ಬಹುತೇಕರಿಗೆ ತೊಂದರೆಯಾಗದು. ಎಲ್ಲಾದರೂ ಒಂದೇ ಕಡೆಯ ಪ್ರಯಾಣಕ್ಕೆ 250 ರೂ. ಇದ್ದರೆ ಇದಕ್ಕಿಂತ ಕಡಿಮೆ ದರಕ್ಕೆ ನಾನ್‌ ಏಸಿ ಬಸ್‌ನಲ್ಲಿ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

"ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟೋಲ್‌ ದರ ಅಂತಿಮವಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿಕಿ.ಮೀ.ಗೆ ಇಂತಿಷ್ಟು ಎಂದು ಟೋಲ್‌ ದರ ನಿಗದಿ ಮಾಡುತ್ತದೆ. ಬೆಂಗಳೂರು ನಿಡಘಟ್ಟಕ್ಕೆ 135 ರೂ. ನಿಗದಿಪಡಿಸಲಾಗಿದೆ. ನಿಡಘಟ್ಟದಿಂದ ಮೈಸೂರಿಗೆ ಬೇರೆ ದರ ನಿಗದಿಪಡಿಸಲಾಗಿದೆ. ಇದು ಅಂತಿಮ ದರವಲ್ಲ. ಶಿಫಾರಸು ಅಷ್ಟೇʼʼ ಎಂದು ಅವರು ಹೇಳಿದ್ದಾರೆ.

ಎಲ್ಲಾದರೂ ಎರಡು ಕಡೆಯ ಪ್ರಯಾಣಕ್ಕೆ 250 ರೂ. ಅಂತಿಮ ದರವಾಗಿದ್ದರೆ ವಾಹನ ಚಾಲಕರಿಗೆ ಅಷ್ಟು ಹೊರೆಯಾಗದು. ಬೆಂಗಳೂರು ನಿಡಘಟ್ಟಕ್ಕೆಇಂತಿಷ್ಟು, ಅಲ್ಲಿಂದ ಮೈಸೂರಿಗೆ ಇಂತಿಷ್ಟು ಎಂದು ಹೋಗುವುದಕ್ಕೆ ಮತ್ತು ಬರುವುದಕ್ಕೆ ಬೇರೆಬೇರೆ ದರಗಳಿದ್ದರೆ ಒಂದೇ ಕಡೆಯ ಪ್ರಯಾಣಕ್ಕೆ 200 ರೂ.ಗಿಂತಲೂ ಹೆಚ್ಚು ಪಾವತಿಸಬೇಕಾಗಬಹುದು. ಈಗಿನ ದುಬಾರಿ ಇಂಧನಗಳಿಂದಲೇ ವಾಹನ ಮಾಲೀಕರು ಕಷ್ಟಪಡುತ್ತಿದ್ದು, ಟೋಲ್‌ ಹೆಚ್ಚಿನ ಹೊರೆ ಉಂಟು ಮಾಡಬಹುದು. ಆದರೆ, ಕಡಿಮೆ ಅವಧಿಯಲ್ಲಿ ಸುಂದರ ರಸ್ತೆಯಲ್ಲಿ ಹೋಗಬೇಕೆನ್ನುವವರು ಟೋಲ್‌ ಕಟ್ಟುವುದು ಅನಿವಾರ್ಯವಾಗಬಹುದದು.

ದೆಹಲಿ ಮುಂಬಯಿ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿ ಕಿ.ಮೀ.ಗೆ 35 ಪೈಸೆ ಟೋಲ್‌ ಶುಲ್ಕ ಇರಲಿದೆ ಎನ್ನಲಾಗಿದೆ. ಮುಂಬಯಿ ದೆಹಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗಲು ಸುಮಾರು 390 ರೂ. ನೀಡಬೇಕಾಗಬಹುದು. ಆದರೆ, ಮೈಸೂರು-ಬೆಂಗಳೂರು ದೂರಕ್ಕೂ ದೆಹಲಿ ಮುಂಬೈ ದೂರಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಇದೇ ರೀತಿ 35 ಪೈಸೆಯಲ್ಲಿ ಲೆಕ್ಕ ಹಾಕಿದರೆ ನಿಡಘಟ್ಟ-ಮೈಸೂರಿನ 75 ಕಿ.ಮೀ.ಗೆ ಈಗ ಹೇಳುವಂತೆ 135 ರೂ. ಸರಿಯಾಗುತ್ತದೆ.

ಕಳೆದ ತಿಂಗಳು ಕೊನೆಯ ವಾರದಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯ ಮಂಡ್ಯ ಬೈಪಾಸ್‌ ಸಂಚಾರಕ್ಕೆ ಮುಕ್ತವಾಗಿತ್ತು. ಇದರಿಂದಾಗಿ ಬೆಂಗಳೂರು- ಮೈಸೂರು ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಿದೆ. ಈ ಹಿಂದೆ, ರಾಮನಗರ ಮತ್ತು ಚನ್ನಪಟ್ಟಣದ ಬೈಪಾಸ್‌ಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ಒಂದು, ಒಂದೂವರೆ ಗಂಟೆಗೆ ಇಳಿಸುವ ಮಹಾತ್ವಕಾಂಕ್ಷಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣದ ಕೊನೆಹಂತದ ಕೆಲಸ ಕಾರ್ಯಗಳು ಬಿರುಸುಪಡೆದಿದೆ. ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಎಕ್ಸ್‌ಪ್ರೆಸ್‌ವೇಗೆ ಚಾಲನೆ ನೀಡಲಾಗಿತ್ತು.

ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಇನ್ನು ಕೆಲವೇ ದಿನಗಳಲ್ಲಿ ಅವಳಿ ನಗರಗಳಾಗಲು ಈ ಹೆದ್ದಾರಿ ನೆರವಾಗಲಿದೆ. ಇವೆರಡು ನಗರಗಳ ನಡುವಿನ ಪ್ರಯಾಣದ ಅವಧಿ 90 ನಿಮಿಷಗಳಿಗೆ ತಗ್ಗುವುದರಿಂದ ದಿನನಿತ್ಯ ಮೈಸೂರು-ಬೆಂಗಳೂರು ನಡುವಿನ ಪ್ರಯಾಣ ಸರಾಗವಾಗಲಿದೆ.

ಇಷ್ಟು ಮಾತ್ರವಲ್ಲದೆ, ಎಕ್ಸ್‌ಪ್ರೆಸ್‌ವೇ ಆಸುಪಾಸಿನಲ್ಲಿ ನಗರೀಕರಣ ಮತ್ತು ವಾಣಿಜ್ಯ ಚಟುವಟಿಕೆಗಳೂ ಹೆಚ್ಚಾಗಲಿವೆ. ಇದರಿಂದ ದಕ್ಷಿಣದ ಐದು ಜಿಲ್ಲೆಗಳು ಭಾರೀ ಪ್ರಮಾಣದಲ್ಲಿ ಪ್ರಗತಿ ಕಾಣುವ ನಿರೀಕ್ಷೆಯಿದೆ.ನೈಸ್‌ ಕಂಪನಿಯ ಬೆಂಗಳೂರು- ಮೈಸೂರು ಇನ್ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ವೈಫಲ್ಯದ ಸ್ಥಳದಲ್ಲಿ ಈ ಕಾರಿಡಾರ್‌ ಪರ್ಯಾಯವಾಗಿ ನಿರ್ಮಾಣಗೊಂಡಿದೆ.

ತಲಾ 3 ಪಥಗಳನ್ನು ಒಳಗೊಂಡ ಎರಡೂ ಕಡೆಯಿಂದ 6 ಪಥಗಳ ಎಕ್ಸ್‌ಪ್ರೆಸ್‌ ವೇ ಇರಲಿದೆ. ಎರಡೂ ಬದಿಯಲ್ಲಿ ತಲಾ 2 ಲೇನ್‌ಗಳನ್ನು ಒಳಗೊಂಡ ಸರ್ವಿಸ್‌ ರಸ್ತೆ ಒಳಗೊಂಡು ಒಟ್ಟು 10 ಪಥಗಳ ಈ ಯೋಜನೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹೀಗೆ, ಆರು ಪಥಗಳ ಎಕ್ಸ್‌ಪ್ರೆಸ್‌ವೇ ಮತ್ತು ನಾಲ್ಕು ಸರ್ವೀಸ್‌ ಲೇನ್‌ಗಳು ಸೇರಿದಂತೆ ದಶಪಥ ರಸ್ತೆ ಇದಾಗಿರಲಿದೆ.

ಒಟ್ಟು 8172 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. 2 ಹಂತಗಳಲ್ಲಿ ಕೈಗೆತ್ತಿಕೊಂಡಿದ್ದ ಯೋಜನೆ ಪೈಕಿ ಬೆಂಗಳೂರು- ನಿಡಘಟ್ಟ (ಮದ್ದೂರು) ವರೆಗೆ ಮೊದಲ ಹಂತದ ಕಾಮಗಾರಿ ಕೈಗೊಳ್ಳಲಾಗಿದೆ. ರಾಮನಗರದಿಂದ ಚನ್ನಪಟ್ಟಣದವರೆಗಿನ ಅತೀ ಉದ್ದದ 22.35 ಕಿ.ಮೀ. ಹೆದ್ದಾರಿಯನ್ನು ಇದು ಒಳಗೊಂಡಿದೆ.

ಒಟ್ಟು 118 ಕಿ.ಮೀ ಉದ್ದದ್ದ ಎಕ್ಸ್‌ಪ್ರೆಸ್‌ ವೇ ಮೊದಲ ಹಂತದ ಕಾಮಗಾರಿಯು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಾಲಯದಿಂದ ಹಿಡಿದು ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನವರೆಗೂ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ಇದೀಗ ಈ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲಿ ಸಂಪೂರ್ಣವಾಗಿ ಪ್ರಯಾಣಕ್ಕೆ ಮುಕ್ತವಾಗಲಿದೆ.