Obituary: ಕರ್ನಾಟಕದ ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅಪಘಾತದಲ್ಲಿ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Obituary: ಕರ್ನಾಟಕದ ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅಪಘಾತದಲ್ಲಿ ಸಾವು

Obituary: ಕರ್ನಾಟಕದ ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅಪಘಾತದಲ್ಲಿ ಸಾವು

Mysuru News ಮೈಸೂರಿನಲ್ಲಿ ನೆಲೆಸಿದ್ದ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮಿ ಸೀತಾಪುರ ನಿಧನರಾಗಿದ್ಧಾರೆ.

ಮೃತಪಟ್ಟ ಜಾನಪದ ವಿದ್ವಾಂಸರಾದ ಜಯಲಕ್ಷ್ಮಿ ಸೀತಾಪುರ
ಮೃತಪಟ್ಟ ಜಾನಪದ ವಿದ್ವಾಂಸರಾದ ಜಯಲಕ್ಷ್ಮಿ ಸೀತಾಪುರ

ಮೈಸೂರು: ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ (70) ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಭಾನುವಾರ ನಿಧನರಾದರು.ಅವರಿಗೆ ಜೆಎಸ್ ಎಸ್ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪತಿ ಡಾ.ರಾಜಶೇಖರ್, ವಿದೇಶದಲ್ಲಿರುವ ಇಬ್ಬರು ಪುತ್ರಿಯರು ಇದ್ದಾರೆ. ಕಳೆದ ವಾರ ಅವರು ಬೆಂಗಳೂರಿಗೆ‌ ಕಾರಲ್ಲಿ ಹೊರಟಿದ್ದಾಗ ಇನ್ನೊಂದು ಕಾರು ಬಂದು‌ ಡಿಕ್ಕಿ ಹೊಡೆದ ಘಟನೆ ಮಂಡ್ಯದ ಬಳಿ ನಡೆದಿತ್ತು‌. ಗಾಯಗೊಂಡಿದ್ದ ಅವರು ನಗರದ ಖಾಸಗಿ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದವರಾದ ಅವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಎಂ.ಎ ಪದವಿ ಪಡೆದು, ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ನಂತರ 'ಕನ್ನಡದಲ್ಲಿ ಐತಿಹಾಸಿಕ ಜಾನಪದ ಮಹಾಕಾವ್ಯಗಳು' ಕುರಿತು ಪಿಎಚ್.ಡಿ ಪದವಿ ಪಡೆದರು. ಅಮೆರಿಕದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಗೆ ಆಯ್ಕೆಯಾಗಿದ್ದರು.

ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಅವರ ನೇರವಂತಿಕೆ ಜತೆಗೆ ವಿದ್ಯಾರ್ಥಿ ಸ್ನೇಹಿ ನಡವಳಿಕೆಯಿಂದ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

ಶೋಧ; ಕನ್ನಡ ಜಾನಪದ, ಕನ್ನಡದಲ್ಲಿ ಐತಿಹಾಸಿಕ ಜಾನಪದ ಲಾವಣಿಗಳು, ಕನ್ನಡ ಸಮಗ್ರ ಗಾದೆಗಳು, ಐದು ಜಾನಪದ ಪ್ರಬಂಧಗಳು, ಜಾನಪದ ಒಕ್ಕಲು, ಕಲ್ಯಾಣವೆನ್ನಿ ಜನರೆಲ್ಲ, ಜಾನಪದ ಹಟ್ಟಿ, ಜಾನಪದ ಸಾಹಿತ್ಯದಲ್ಲಿ ಹಾಸ್ಯ, ಜಾನಪದ ತರಂಗ (ಜಾನಪದ ಕುರಿತ ಕೃತಿಗಳು), ಎದೆ ಕದವ ತಟ್ಟ್ಯಾವೆ (ಕವನ ಸಂಕಲನ), ಹಿರಿಯ ರಾಜಕಾರಣಿ ಕೆ.ಪುಟ್ಟಸ್ವಾಮಿ ಅವರ ಕುರಿತ ದಿಟ್ಟ ಸಾಧಕ, ತಬ್ಬಿಬ್ಬು ಹಾಗೂ ಬೆರಗು ಬೆಳಗು ( ನಾಟಕಗಳು) ಅವರ ಪ್ರಮುಖ ಕೃತಿಗಳು. ಮುಖ್ಯವಾಗಿ ಕುಸ್ತಿ ಕಲೆ ಕುರಿತ ಅವರ ಕೃತಿ ಅನನ್ಯವಾದುದು.

ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಅವರು ಮಾರ್ಗದರ್ಶಕರಾಗಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಿಶಂಪ ಪ್ರಶಸ್ತಿ, ಮುದ್ದು ಮಾದಪ್ಪ ಪುರಸ್ಕಾರ, ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಡಾ.ಪ್ರೀತಿ ಶುಭಶ್ಚಂದ್ರ, ಡಾ.ಎಚ್.ಎಲ್.ಶೈಲಾ ಹಾಗೂ ಡಾ.ಎಚ್.ಗೌರಮ್ಮ ಅವರು ಸಂಪಾದಿಸಿದ 'ಜಾನಪದ ಮಹಿಳಾಯಾನ' ಕೃತಿಯನ್ನು ಅವರಿಗೆ ಸಮರ್ಪಿಸಲಾಗಿತ್ತು.

ಅವರ ಅಂತ್ಯಕ್ರಿಯೆ ಮಂಗಳವಾರ (ಜೂನ್ 18) ಮಧ್ಯಾಹ್ನ ಕುವೆಂಪು ನಗರದ ಕಾವೇರಿ ಶಾಲೆ ಹತ್ತಿರದ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.