Karnataka Reservoirs: ಕೇರಳದಲ್ಲಿ ಭಾರೀ ಮಳೆ, ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹೊರಟಿತು ಹೆಚ್ಚಿನ ನೀರು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕೇರಳದಲ್ಲಿ ಭಾರೀ ಮಳೆ, ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹೊರಟಿತು ಹೆಚ್ಚಿನ ನೀರು

Karnataka Reservoirs: ಕೇರಳದಲ್ಲಿ ಭಾರೀ ಮಳೆ, ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹೊರಟಿತು ಹೆಚ್ಚಿನ ನೀರು

Kabini Dam ಕೇರಳದ ಮಳೆ( Kerala Rains) ಕಾರಣದಿಂದ ಮೈಸೂರು ಜಿಲ್ಲೆ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವು ಇದ್ದು ಹೊರ ಹರಿವನ್ನೂ ಏರಿಸಲಾಗಿದೆ.

ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ.
ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ.

ಮೈಸೂರು: ಕೆಲ ದಿನಗಳ ಬಿಡುವಿನ ಬಳಿಕ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ. ಈಗಾಗಲೇ ಜಲಾಶಯ ಬಹುತೇಕ ತುಂಬಿರುವುದರಿಂದ ಹೊರ ಹರಿವಿನ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಕೇರಳದಿಂದ ಕರ್ನಾಟಕ ಮಾರ್ಗವಾಗಿ ಬರುತ್ತಿರುವ ನೀರು ನದಿ ಮೂಲಕ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಈಗಾಗಲೇ ಕರ್ನಾಟಕವು ಪ್ರತಿದಿನ ಒಂದು ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರವೂ ಸೂಚನೆ ನೀಡಿದೆ. ಈ ಕಾರಣದಿಂದ ತುಂಬಿದ ಜಲಾಶಯದಿಂದ ನೀರನ್ನು ಭಾರೀ ಪ್ರಮಾಣದಲ್ಲಿ ಹರಿಸಲಾಗುತ್ತಿದ್ದು,ಕಪಿಲಾ ಹಾಗೂ ಕಾವೇರಿ ನದಿ ಮೂಲಕ ತಮಿಳುನಾಡು ಸೇರುತ್ತಿದೆ.

ಕೇರಳದಲ್ಲಿ ಸತತವಾಗಿ ಸುರಿದ ಮಳೆ ಪರಿಣಾಮವಾಗಿ ಕಬಿನಿ ಜಲಾಶಯವೂ ಬೇಗನೇ ಈ ಬಾರಿ ತುಂಬಿದೆ. ಮೂರ್ನಾಲ್ಕು ದಿನದಿಂದ ಮಳೆ ಪ್ರಮಾಣ ಇಳಿಕೆಯಾಗಿದ್ದರಿಂದ ಒಳ ಹರಿವು ಕಡಿಮೆಯಾಗಿತ್ತು. ಆದರೂ ಒಳಹರಿವು ಹಾಗು ಹೊರ ಹರಿವು ಸಮಪ್ರಮಾಣದಲ್ಲಿ ಹೋಗುತ್ತಿತ್ತು. ಈಗ ಮತ್ತೆ ಕೇರಳದಲ್ಲಿ ಮಳೆ ಚುರುಕಾಗಿ ಕಬಿನಿ ಜಲಾಶಯಕ್ಕೆ ಒಳ ಹರಿವು ಅಧಿಕಗೊಂಡಿದೆ. ಭಾನುವಾರ ಬೆಳಿಗ್ಗೆ ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ 19027 ಕ್ಯೂಸೆಕ್‌. ಜಲಾಶಯದ ನೀರಿನ ಮಟ್ಟವು : 2283.20 ಅಡಿ. ಗರಿಷ್ಠ ಮಟ್ಟವು 2284 ಅಡಿ. ಸದ್ಯ ಜಲಾಶಯದಲ್ಲಿ 18.99 ಟಿಎಂಸಿ ನೀರು ಸಂಗ್ರಹವಾಗಿದೆ. 19.52 ಟಿಎಂಸಿ ನೀರನ್ನು ಕಬಿನಿ ಜಲಾಶಯದಲ್ಲಿ ಸಂಗ್ರಹಿಸಲು ಅವಕಾಶವಿದೆ.

ಇದನ್ನೂ ಓದಿರಿ:

ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿರುವುದರಿಂದ ಹೊರ ಹರಿವನ್ನೂ ಏರಿಕೆ ಮಾಡಲಾಗಿದೆ. ಶನಿವಾರ ಸಂಜೆಯಿಂದಲೇ ಜಲಾಶಯದಿಂದ 20 ಸಾವಿರ ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಆದರೆ ಅಧಿಕೃತವಾಗಿ 16750 ಕ್ಯೂಸೆಕ್‌ ಹೊರ ಹರಿವನ್ನು ತೋರಿಸಲಾಗುತ್ತಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೊರ ಹರಿವನ್ನೂ ನಿಧಾನವಾಗಿ ಏರಿಸಲಾಗುತ್ತಿದೆ.

ತಮಿಳುನಾಡಿಗೆ ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ಪ್ರತಿ ನಿತ್ಯ ಒಂದು ಟಿಎಂಸಿ ನೀರು ಹರಿಸುವ ಸೂಚನೆ ಬಂದಿದೆ. ಇದರ ನಡುವೆ ಕೇರಳದಲ್ಲಿ ಭಾರೀ ಮಳೆಯಾಗಿ ಹೊರ ಹರಿವು ಹೆಚ್ಚಿದ್ದರಿಂದ ಹೊರ ಹರಿವು ಹೆಚ್ಚಿಸಲಾಗಿದೆ. ಈ ನೀರು ಕಪಿಲಾ ನದಿ ಮೂಲಕ ಕಾವೇರಿ ನದಿ ಸೇರಿ ತಮಿಳುನಾಡು ತಲುಪಲಿದೆ. ಇದಕ್ಕೆ ಕನಿಷ್ಟ ಒಂದು ದಿನವಾದರೂ ಬೇಕು. ಸೋಮವಾರ ಬೆಳಿಗ್ಗೆ ಹೊತ್ತಿಗೆ ಮೆಟ್ಟೂರು ಜಲಾಶಯ ತಲುಪಬಹುದು.

ಮೊದಲಿನಿಂದಲೂ ಬೇಗನೇ ತುಂಬುವ ಜಲಾಶಯ ಕಬಿನಿ. ಸಣ್ಣ ಜಲಾಶಯವಾಗಿರುವುದು ಇದಕ್ಕೆ ಕಾರಣ. ಆದರೆ ಬೇಗನೇ ತುಂಬಿದ ನಂತರ ಹೆಚ್ಚುವರಿ ನೀರನ್ನು ನದಿ ಮೂಲಕ ಹರಿಸುವುದರಿಂದ ತಮಿಳುನಾಡಿನ ಬೇಡಿಕೆಗೆ ಅನುಗುಣವಾಗಿ ತಲುಪಲಿದೆ. ಮೈಸೂರು, ಬೆಂಗಳೂರು ಕುಡಿಯುವ ನೀರಿನ ಜತೆಗೆ ತಮಿಳುನಾಡಿಗೆ ನೀರು ಕೊಡುವ ಜಲಾಶಯ ಎನ್ನುವ ಹೆಸರನ್ನು ಕಬಿನಿ ಪಡೆದುಕೊಂಡಿದೆ.

ನೀರು ಹೊರ ಹೋಗುತ್ತಿರುವುದರಿಂದ ನಂಜನಗೂಡು, ಸುತ್ತೂರು, ತಿ.ನರಸೀಪುರ ಭಾಗದಲ್ಲಿ ಕಪಿಲಾ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಸದ್ಯಕ್ಕೆ ಈ ಭಾಗದಲ್ಲಿ ಪ್ರವಾಹದ ಭೀತಿ ಇಲ್ಲ. 60 ಸಾವಿರ ಕ್ಯೂಸೆಕ್‌ ನೀರು ಹೊರ ಬಿಟ್ಟರೆ ಮಾತ್ರ ಅನಾಹುತ ಆಗಬಹುದು. ಕೇರಳದಲ್ಲಿ ಮಳೆ ಇದೆ. ಒಳಹರಿವು ಹೆಚ್ಚಾದರೆ ಜಲಾಶಯದಿಂದ ಹೆಚ್ಚಿನ ನೀರು ಹೊರ ಹರಿಸಲಾಗುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.

ಈ ನಡುವೆ ಕಬಿನಿ ಜಲಾಶಯ ತುಂಬಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಆದರೆ ಕಬಿನಿ ಭಾಗದ ಕಬಿನಿ ಬಲದಂಡೆ, ಎಡದಂಡೆ ನಾಲೆಗಳಿಗೆ ನೀರು ಇನ್ನೂ ಹರಿಸುತ್ತಿಲ್ಲ. ಕಳೆದ ಬಾರಿ ಬರದ ವಾತಾವರಣದಿಂದ ಕಬಿನಿ ಭಾಗದ ಮೈಸೂರು, ಚಾಮರಾಜನಗರ ಜಿಲ್ಲೆಯ ರೈತರು ತೊಂದರೆ ಅನುಭವಿಸಿದರು. ಈಗಲಾದರೂ ಬೇಗನೇ ನಾಲೆಗಳಿಗೆ ನೀರು ಹರಿಸಲಿ ಎನ್ನುವ ಒತ್ತಾಯವನ್ನು ರೈತರು ಮಾಡಿದ್ದಾರೆ.