ನೇಹಾ-ಫಯಾಜ್ ತುಂಬಾ ಪ್ರೀತಿಸುತ್ತಿದ್ರು; ಮಗ ಮಾಡಿದ ತಪ್ಪಿಗೆ ಶಿಕ್ಷೆಯಾಗ್ಲಿ; ಕಣ್ಣೀರು ಹಾಕಿ ಕ್ಷಮೆ ಕೋರಿದ ಫಯಾಜ್ ತಾಯಿ ಮುಮ್ತಾಜ್ ಜಕಾತಿ
ನೇಹಾ-ಫಯಾಜ್ ತುಂಬಾ ಪ್ರೀತಿಸುತ್ತಿದ್ರು, ಮಗ ಮಾಡಿರೋದು ತಪ್ಪು, ಅವನಿಗೆ ಶಿಕ್ಷೆಯಾಗಲಿ. ಅವನು ಮಾಡಿದ ತಪ್ಪಿಗೆ ನಾವು ತಲೆ ತಗ್ಗಿಸುವಂತಾಗಿದೆ. ಕರ್ನಾಟಕದ ಜನರಲ್ಲಿ ಕ್ಷಮೆ ಕೋರುತ್ತೇನೆ ಎಂದು ಫಯಾಜ್ ತಾಯಿ ಮುಮ್ತಾಜ್ ಕಣ್ಣೀರು ಹಾಕಿದ್ದಾರೆ.

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣ (Neha Hiremath Murder Case) ಕರ್ನಾಟಕ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಒತ್ತಾಯಗಳು ಕೇಳಿಬಂದಿವೆ. ಸಿನಿಮಾ ರಂಗದ ಕೆಲ ನಟ, ನಟಿಯರು ಸೇರಿದಂತೆ ಇಡೀ ರಾಜ್ಯದ ಜನತೆ ನೇಹಾ ಹಿರೇಮಠ ಹತ್ಯೆಯ ಅತ್ಯಂತ ಹೀನ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಇದರ ನಡುವೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಘಟನೆ ಬಗ್ಗೆ ಮಾತನಾಡಿರುವ ಆರೋಪಿ ಫಯಾಜ್ ತಾಯಿ, ನೇಹಾ ಮತ್ತು ಫಯಾಜ್ ತುಂಬಾ ಪ್ರೀತಿಸುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೆ, ನನ್ನ ಮಗ ಮಾಡಿರೋದು ತಪ್ಪು. ಕಾನೂನು ಪ್ರಕಾರ ಅವನಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಆರೋಪಿ ಫಯಾಜ್ ತಾಯಿ ಮುಮ್ತಾಜ್ ಜಕಾತಿ, ನನ್ನ ಮಗ ಮಾಡಿರುವ ತಪ್ಪಿಗೆ ಕರ್ನಾಟಕದ ಸಮಸ್ತ ಜನತೆಗೆ ಕ್ಷಮೆ ಕೋರುತ್ತೇನೆ. ನೇಹಾಳ ತಂದೆ-ತಾಯಿಗೂ ಕ್ಷಮೆ ಕೋರುತ್ತೇನೆ. ಅದೂ ನನ್ನ ಮಗಳು ಇದ್ದಂಗೆ. ನನ್ನ ಮಗಳು ಬೇರೆಯಲ್ಲ, ಆ ಮಗು ಬೇರೆಯಲ್ಲ. ಅವರ ತಂದೆ-ತಾಯಿಗೆ ಎಷ್ಟು ದುಃಖವಾಗಿದೆಯೋ ಅಷ್ಟೇ ದುಃಖ ನನಗೂ ಆಗಿದೆ. ನನ್ನ ಮಗ ಮಾಡಿರೋದು ತಪ್ಪೇ ಎಂದು ಕಣ್ಣೀರು ಹಾಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಪ್ರೀತಿಸಲು ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ ಫಯಾಜ್ ಎಂಬಾತ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪವಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೀತಿಸಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ನೇಹಾ ಕೊಲೆ?
ಆರೋಪಿ ಅದೇ ಕಾಲೇಜಿನಲ್ಲಿ ಮೊದಲ ವರ್ಷದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಎಂಸಿಎ) ವಿದ್ಯಾರ್ಥಿಯಾಗಿದ್ದ. ಆರೋಪಿಯನ್ನು 23 ವರ್ಷದ ಫಯಾಜ್ ಎಂದು ಗುರುತಿಸಲಾಗಿದ್ದು, ಚಾಕು ಮತ್ತು ಮಾಸ್ಕ್ ಧರಿಸಿ ಕಾಲೇಜು ಕ್ಯಾಂಪಸ್ ಒಳಗೆ ಹೋಗಿ ಮಧ್ಯಾಹ್ನ 3.30 ರ ಸುಮಾರಿಗೆ ನೇಹಾಳ ಎದೆ ಮತ್ತು ಕುತ್ತಿಗೆಗೆ ಹಲವು ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಎಂಸಿಎ ಬಿಟ್ಟಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದಾರೆ.
ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಹಲವಾರು ಸಂಘಟನೆಗಳು ಮತ್ತು ವಿದ್ಯಾರ್ಥಿ ಕಾರ್ಯಕರ್ತರು ಶುಕ್ರವಾರ (ಏಪ್ರಿಲ್ 19) ನಗರದಲ್ಲಿ ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹುಬ್ಬಳ್ಳಿಯಲ್ಲಿ ಕಾಲೇಜು ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸಿತು. ಹಿಂದೂ ಜಾಗರಣ ವೇದಿಕೆ, ಶ್ರೀರಾಮಸೇನೆ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬಿವಿಬಿ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.