ರಾಜ್ಯಕ್ಕೆ ಬರಲಿದೆ ಮತ್ತೊಂದು ವಂದೇ ಭಾರತ್ ರೈಲು; ಬೆಂಗಳೂರು ಮತ್ತು ಬೆಳಗಾವಿ ಮಧ್ಯೆ ಸಂಪೂರ್ಣ ಹೊಸ ಸೇವೆ
ರಾಜ್ಯಕ್ಕೆ 11ನೇ ವಂದೇ ಭಾರತ್ ರೈಲು ಬರಲಿದ್ದು, ಬೆಂಗಳೂರು ಮತ್ತು ಬೆಳಗಾವಿ ಮಧ್ಯೆ ಸಂಪರ್ಕ ಏರ್ಪಡಲಿದೆ. ಇದು ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲನ್ನು ವಿಸ್ತರಿಸುವುದಲ್ಲ, ಬದಲಾಗಿ ಸಂಪೂರ್ಣ ಹೊಸ ರೈಲಿನ ಸೇವೆಯಾಗಿರುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.

ಬೆಂಗಳೂರು: ಬೆಳಗಾಗಿ ಮತ್ತು ಬೆಂಗಳೂರು ಮಧ್ಯೆ ಹೊಸ ವಂದೇ ಭಾರತ್ ರೈಲು ಓಡಾಟ ನಡೆಸಲಿದ್ದು, ಇದು ರಾಜ್ಯಕ್ಕೆ ಬರಲಿರುವ 11ನೇ ವಂದೇ ಭಾರತ್ ರೈಲು ಆಗಿದೆ. ಸಂಪೂರ್ಣ ಹೊಸ ರೈಲು ಸೇವೆ ಇದಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಬೆಂಗಳೂರು- ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲಿನ ವಿಸ್ತರಣೆಯಾಗಿರುವುದಿಲ್ಲ ಎಂದು ರೈಲ್ವೆ ಹೇಳಿದೆ. ಈ ಮೊದಲು ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲನ್ನು ಬೆಳಗಾಗಿ ವಿಸ್ತರಿಸಲಾಗುತ್ತದೆ ಎನ್ನುವ ಮಾತುಕತೆ ನಡೆದಿತ್ತು. ಆದರೆ ಈ ಬಾರಿ, ಅದರ ಬದಲಿಗೆ ಹೊಸ ರೈಲು ಓಡಾಟ ನಡೆಸಲು ನಿರ್ಧರಿಸಲಾಗಿದೆ.
ಪ್ರಸ್ತುತ ನೈಋತ್ಯ ರೈಲ್ವೆಗಾಗಿ ಮೀಸಲಾದ ರೇಕ್ ಅನ್ನು ಮಂಜೂರು ಮಾಡುವ ಮೂಲಕ ಬೆಂಗಳೂರು ಮತ್ತು ಬೆಳಗಾವಿ ಮಧ್ಯೆ ಸಂಪೂರ್ಣವಾಗಿ ಹೊಸ ಸೇವೆಯನ್ನು ಪ್ರಾರಂಭಿಸಲು ರೈಲ್ವೆ ನಿರ್ಧರಿಸಿದೆ. SWR ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಾಡಿ, ಅಧಿಕೃತ ಸಂವಹನಕ್ಕಾಗಿ ಇನ್ನೂ ಕಾಯಲಾಗುತ್ತಿದೆ ಎಂದು ಹೇಳಿದ್ದರೂ, ಹಿರಿಯ ಅಧಿಕಾರಿಯೊಬ್ಬರು ಇದು ಹೊಸ ವಂದೇ ಭಾರತ್ ರೈಲು ಸೇವೆಯಾಗಲಿದೆ ಎಂದು ಡೆಕ್ಕನ್ ಹೆರಾಲ್ಡ್ಗೆ ದೃಢಪಡಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರು ಮತ್ತು ಬೆಳಗಾವಿ ಮಧ್ಯೆ ಆರಂಭದಲ್ಲಿ, ರೈಲ್ವೆ ಒಟ್ಟು ಎಂಟು ಬೋಗಿಗಳ ರೈಲು ಅನ್ನು ನಿಯೋಜಿಸಲಿದೆ ಮತ್ತು ಬೇಡಿಕೆಯ ಆಧಾರದ ಮೇಲೆ ಹೆಚ್ಚಿನ ಬೋಗಿಗಳನ್ನು ಸೇರಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಬೆಂಗಳೂರು ಮತ್ತು ಬೆಳಗಾವಿ ನಡುವೆ ಪ್ರೀಮಿಯಂ ರೈಲು ಸೇವೆಗೆ ಬೇಡಿಕೆ ಹೆಚ್ಚುತ್ತಿದೆ. ಹೊಸ ರೈಲು ಬೆಳಿಗ್ಗೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನ ಕೆಎಸ್ಆರ್ ಬೆಂಗಳೂರನ್ನು ತಲುಪುತ್ತದೆ.
ಹಿಂದಿರುಗುವ ಪ್ರಯಾಣವು ಮಧ್ಯಾಹ್ನ ಬೆಂಗಳೂರಿನಿಂದ ಪ್ರಾರಂಭವಾಗಿ ಬೆಳಗಾವಿಯಲ್ಲಿ ತಡರಾತ್ರಿಯಲ್ಲಿ ಕೊನೆಗೊಳ್ಳುತ್ತದೆ. ರೈಲಿನ ಪ್ರಾಥಮಿಕ ನಿರ್ವಹಣೆಯನ್ನು ಬೆಳಗಾವಿಯಲ್ಲಿ ಕೈಗೊಳ್ಳಲಾಗುತ್ತದೆ. ಈ ರೈಲು ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು ಮತ್ತು ಯಶವಂತಪುರದಲ್ಲಿ ನಿಲುಗಡೆ ಇರುತ್ತದೆ. ನೂತನ ರೈಲಿಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ವಾಣಿಜ್ಯ ಸಂಚಾರ ಮತ್ತು ಪ್ರಯಾಣ ದರದ ವಿವರಗಳನ್ನು ರೈಲ್ವೆ ಮಂಡಳಿ ಪ್ರಕಟಿಸುವ ನಿರೀಕ್ಷೆಯಿದೆ. ಪ್ರಯಾಣ ದರವು ಚೇರ್ ಕಾರ್ಗೆ ಸುಮಾರು 1,500 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ಗೆ 2,500 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕವು ಪ್ರಸ್ತುತ 10 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಹೊಂದಿದೆ - ಬೆಂಗಳೂರಿನಿಂದ ಐದು (ಧಾರವಾಡ, ಕಲಬುರಗಿ, ಹೈದರಾಬಾದ್, ಕೊಯಮತ್ತೂರು ಮತ್ತು ಮಧುರೈ), ಎರಡು ಮೈಸೂರಿನಿಂದ ಚೆನ್ನೈಗೆ (ಬೆಂಗಳೂರು ಮೂಲಕ), ಎರಡು ಮಂಗಳೂರಿನಿಂದ (ಮಡ್ಗಾಂವ್ ಮತ್ತು ತಿರುವನಂತಪುರಕ್ಕೆ) ಮತ್ತು ಒಂದು ಹುಬ್ಬಳ್ಳಿಯಿಂದ ಪುಣೆಗೆ ಈಗಾಗಲೇ ಓಡಾಟ ನಡೆಸುತ್ತಿವೆ.
ನೂತನ ವಂದೇ ಭಾರತ್ ರೈಲು ಸಂಚಾರದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಟ್ವೀಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ. ಬೆಂಗಳೂರು - ಬೆಳಗಾವಿ ನೂತನ ವಂದೇ ಭಾರತ್ ರೈಲಿಗೆ ನನ್ನ ಕೋರಿಕೆಯ ಮೇರಿಗೆ ಅನುಮೋದನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾನ್ಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯಖಾತೆ ಸಚಿವರಾದ ಸೋಮಣ್ಣಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಬೆಳಗಾವಿಯಿಂದ ಬೆಳಗ್ಗೆ ಹಾಗೂ ಬೆಂಗಳೂರಿನಿಂದ ಮಧ್ಯಾಹ್ನ ವಂದೇ ಭಾರತ್ ರೈಲು ಆರಂಭವಾಗಲಿದೆ. ವಂದೇ ಭಾರತ್ ರೈಲು ಸಂಪರ್ಕದಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಜೋಶಿಯವರು ಟ್ವಿಟರ್ನಲ್ಲಿ ತಿಳಿಸಿದ್ದಾರೆ.