ಹುಬ್ಬಳ್ಳಿ, ಕಲಬುರ್ಗಿ, ವಿಜಯಪುರ ಸೇರಿ ಕರ್ನಾಟಕದ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ಇಂದು ಮಳೆ
North Karnataka weather: ಕರ್ನಾಟಕದ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ಒಂದು ಜಿಲ್ಲೆ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಹಗುರ/ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದಾಗ್ಯೂ ಬಿರುಗಾಳಿಯ ಎಚ್ಚರಿಕೆಯನ್ನು ನೀಡಿದೆ.

ಕರ್ನಾಟಕದಾದ್ಯಂತ ಮುಂಗಾರು ಮಳೆ ತೀವ್ರತೆ ಪಡೆದುಕೊಂಡಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಇಂದು (ಜುಲೈ 27ರಂದು) ಹಗುರ/ ಸಾಧಾರಣ ಮಳೆ ನಿರೀಕ್ಷಿಸಲಾಗುತ್ತಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.
ಟ್ರೆಂಡಿಂಗ್ ಸುದ್ದಿ
ಉತ್ತರ ಒಳನಾಡು ಭಾಗದಲ್ಲಿ ಬುಧವಾರ (ಜು.26) ದಿಂದ ಗುರುವಾರದ ತನಕ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿ.ಮೀ ಇದ್ದರೆ, 28ರಿಂದ 30ರ ತನಕ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿ,ಮೀ. ಇರಲಿದೆ ಎಂದು ಇಲಾಖೆ ಹೇಳಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಈ ಐದು ಜಿಲ್ಲೆಗಳಲ್ಲಿ ಇಂದು (ಜು.27) ಬೆಳಗ್ಗೆ 8.30ರಿಂದ ನಾಳೆ (ಜು.28) ಬೆಳಗ್ಗೆ 8.30ರ ತನಕ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಗುರ ಸಾಧಾರಣ ಮಳೆಯಿಂದ ಭಾರಿ ಮಳೆ/ ಬಿರುಗಾಳಿ ಬೀಸಬಹುದಾದ ಕಾರಣ ಯಲ್ಲೋ ಅಲರ್ಟ್ ಘೋಷಣೆ ಆಗಿದೆ.
ಇನ್ನುಳಿದಂತೆ, ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇದೆ. ಈ ಜಿಲ್ಲೆಗಳಲ್ಲಿ ಹಗುರ/ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಯಲ್ಲೋ ಅಲರ್ಟ್ ಕೊಡುವುದು ಯಾವಾಗ?
ಭಾರಿ ಮಳೆ ಇದ್ದಾಗ ಅಂದರೆ 64.5 ಮಿ.ಮೀ.ನಿಂದ 115.5 ಮಿ.ಮೀ. ತನಕದ ಮಳೆ ಬೀಳುವ ಮುನ್ಸೂಚನೆ ಇದ್ದರೆ ಅಂತಹ ಸಂದರ್ಭದಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗುತ್ತದೆ.
ಇನ್ನು 2.5 ಮಿ.ಮೀ.ನಿಂದ 15.5 ಮಿ.ಮೀ.ತನಕ ಮಳೆ ಬೀಳುವುದಾದರೆ ಅಂತಹ ಸಂದರ್ಭದಲ್ಲಿ ಅದನ್ನು ಹಗುರ ಮಳೆ ಎಂದು ಪರಿಗಣಿಸಲಾಗುತ್ತದೆ. 15.6 ಮಿ.ಮೀ.ನಿಂದ 64.4 ಮಿ.ಮೀ. ತನಕದ ಮಳೆ ಬೀಳುವುದಾದರೆ ಆಗ ಸಾಧಾರಣ ಮಳೆ ಎಂದು ಪರಿಗಣಿಸಲಾಗುತ್ತದೆ.
ಕರಾವಳಿಯ ಎಲ್ಲ ಜಿಲ್ಲೆಗಳ ಕೆಲವು ಕಡೆಗಳಲ್ಲಿ; ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರ್ಗಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಹಾಸನ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು ಬೆಳಗ್ಗೆ 8.30ರ ತನಕ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಮುಂದುವರಿದ ಭಾಗವಾಗಿ, ಜುಲೈ 28ರ ಬೆಳಗ್ಗೆ 8.30ರ ತನಕ ಮುನ್ಸೂಚನೆ ಪ್ರಕಾರ, ಕರಾವಳಿಯ ಎಲ್ಲಾ ಜಿಲ್ಲೆಗಳ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಸಂಬಂಧಿತ ಲೇಖನ