ಆಪರೇಷನ್‌ ಸಿಂಧೂರ ನಂತರ ಕರ್ನಾಟಕದ ಕಾಂಗ್ರೆಸ್‌ ನಾಯಕರ ನಿಲುವೇನು, ಬಿಜೆಪಿ ಪ್ರಮುಖರು ಹೇಳಿದ್ದೇನು
ಕನ್ನಡ ಸುದ್ದಿ  /  ಕರ್ನಾಟಕ  /  ಆಪರೇಷನ್‌ ಸಿಂಧೂರ ನಂತರ ಕರ್ನಾಟಕದ ಕಾಂಗ್ರೆಸ್‌ ನಾಯಕರ ನಿಲುವೇನು, ಬಿಜೆಪಿ ಪ್ರಮುಖರು ಹೇಳಿದ್ದೇನು

ಆಪರೇಷನ್‌ ಸಿಂಧೂರ ನಂತರ ಕರ್ನಾಟಕದ ಕಾಂಗ್ರೆಸ್‌ ನಾಯಕರ ನಿಲುವೇನು, ಬಿಜೆಪಿ ಪ್ರಮುಖರು ಹೇಳಿದ್ದೇನು

ಕಾಶ್ಮೀರ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಉಗ್ರರನ್ನೇ ಗುರಿಯಾಗಿಟ್ಟುಕೊಂಡು ನಡೆಸಿದ ಆಪರೇಷನ್‌ ಸಿಂಧೂರ ನಂತರ ಕರ್ನಾಟಕದಲ್ಲೂ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಪರೇಷನ್‌ ಸಿಂಧೂರ ಕುರಿತು ಕರ್ನಾಟಕದ ಪ್ರಮುಖ ಅಭಿಪ್ರಾಯ ಹೇಗಿದೆ.
ಆಪರೇಷನ್‌ ಸಿಂಧೂರ ಕುರಿತು ಕರ್ನಾಟಕದ ಪ್ರಮುಖ ಅಭಿಪ್ರಾಯ ಹೇಗಿದೆ.

ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದದ ವಾತಾವರಣ ಇರುವಾಗಲೇ ಬುಧವಾರ ಆಪರೇಷನ್‌ ಸಿಂಧೂರ ನಡೆದು ಉಗ್ರರನ್ನು ಹೊಡೆದು ಹಾಕಲಾಗಿದೆ. ಈ ಬೆಳವಣಿಗೆಗಳ ಕುರಿತು ಕರ್ನಾಟಕದ ಕಾಂಗ್ರೆಸ್‌ ನೇತೃತ್ವದಲ್ಲಿ ಸಚಿವರಾಗಿರುವ ಹಲವರು ಮಾತನಾಡಿದ್ದಾರೆ.ಬಿಜೆಪಿ ನಾಯಕರೂ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಳಿಯನ್ನು ಸ್ವಾಗತಿಸಿದ್ದರೆ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಅವರು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ ಬಳಿಕ ಪ್ರತ್ಯುತ್ತರಕ್ಕೆ ನಮ್ಮೆಲ್ಲರ ಬೆಂಬಲವಿದೆ. ದೇಶದ ಹಿತವನ್ನು ಕಾಪಾಡಲು ನಾವೆಲ್ಲ ಒಟ್ಟಾಗಿರುತ್ತೇವೆ. ಇಡೀ ಜನಸಮುದಾಯ ದೇಶದ ರಕ್ಷಣೆಗೆ ಜೊತೆಯಾಗಿ ನಿಲ್ಲಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಪ್ರಮುಖರ ಹೇಳಿಕೆಗಳು ಇಲ್ಲಿವೆ.

ದೇಶ ಹಿತ ಕಾಪಾಡಲು ಒಟ್ಟಾಗಿರಬೇಕು: ಗೃಹ ಸಚಿವ ಪರಮೇಶ್ವರ

ಪಾಕಿಸ್ತಾನ ಉಗ್ರಗಾಮಿ‌ ನೆಲೆಗಳ ಮೇಲೆ ನಮ್ಮ ರಕ್ಷಣಾ ಇಲಾಖೆಯು ದಾಳಿ ನಡೆಸಿರುವುದಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದು ಗೃಹ ಸಚಿವ ಜಿ‌.ಪರಮೇಶ್ವರ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ ಬಳಿಕ ಪ್ರತ್ಯುತ್ತರಕ್ಕೆ ನಮ್ಮೆಲ್ಲರ ಬೆಂಬಲವಿದೆ. ದೇಶದ ಹಿತವನ್ನು ಕಾಪಾಡಲು ನಾವೆಲ್ಲ ಒಟ್ಟಾಗಿರುತ್ತೇವೆ. ಇಡೀ ಜನಸಮುದಾಯ ದೇಶದ ರಕ್ಷಣೆಗೆ ಜೊತೆಯಾಗಿ ನಿಲ್ಲಲಿದೆ ಎಂದರು.

ನಮಗೆ ಈಗಾಗಲೇ‌ ಕೇಂದ್ರ ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆಯಿಂದ ಕೆಲವು ಸೂಚನೆಗಳು ಬಂದಿವೆ. ನಾಗರಿಕರ ರಕ್ಷಣೆ ಮಾಡುವ ಕುರಿತ ತಯಾರಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿದ್ಯುತ್ ಸ್ಥಾವರ, ಅಣೆಕಟ್ಟು, ವಿಮಾನ ನಿಲ್ದಾಣಗಳ ಸೇರಿದಂತೆ ಇನ್ನಿತರ ಪ್ರಮುಳ ಸ್ಥಳಗಳಲ್ಲಿ ಕೆಎಸ್‌ಐಎಸ್‌ಎಪೊ್ ತಂಡವನ್ನು ನಿಯೋಜಿಸಲಾಗಿದೆ‌‌‌. ರಾಜ್ಯ ಗುಪ್ತದಳವು ಕೇಂದ್ರದ ಇಂಟಲಿಜೆನ್ಸ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಸಿವಿಲ್ ಡಿಫೆನ್ಸ್ ವತಿಯಿಂದ ಡ್ರಿಲ್‌ ಮಾಡಲಿದ್ದಾರೆ ಎಂದು ಹೇಳಿದರು‌.

ಈಗಾಗಲೇ ಕೇಂದ್ರ ಸರ್ಕಾರ ಭದ್ರತೆ ನೀಡುತ್ತಿರುವ ಸ್ಥಳಗಳನ್ನು ಅವರೇ ಭದ್ರತೆ ನೀಡಲಿದ್ದಾರೆ. ನಮ್ಮ ಜವಾಬ್ಧಾರಿ ಇರುವ ಕಡೆ ನಾವು ಮಾಡುತ್ತೇವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಈಗಾಗಲೇ ಪಾಕಿಸ್ತಾನ ಪ್ರಜೆಗಳನ್ನು ಕಳಿಸಲಾಗಿದೆ. ಎಫ್‌ಆರ್‌ಆರ್‌ಒ ಸಂಪರ್ಕದಲ್ಲಿದ್ದು, ಅವರು ನೀಡುವ ಮಾಹಿತಿ ಆಧಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ರಾಯಚೂರಿನಲ್ಲಿ‌ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಿರುವ ಕುರಿತು ಮಾತನಾಡಿ, ಬೇರೆ ಎಲ್ಲ ಕಾರ್ಯಕ್ರಮಗಳಿಗಿಂತ ರಕ್ಷಣೆ ವಿಚಾರ ಮುಖ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ರದ್ದುಪಡಿಸಿದ್ದಾರೆ. ದೇಶದ ಭದ್ರತೆ ಪ್ರಶ್ನೆ. ಈ ಸಂದರ್ಭದಲ್ಲಿ ನಮ್ಮ‌ ನಡುವೆ ಸಣ್ಣಪುಟ್ಟ ವ್ಯತ್ಯಾಸ, ಅಭಿಪ್ರಾಯಗಳಿದ್ದರೆ ಅದೆಲ್ಲವನ್ನು ಬದಿಗೊತ್ತಿ ದೇಶದ ರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು‌.

ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಬಸವರಾಜ ಬೊಮ್ಮಾಯಿ

ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯರ ಮೇಲೆ ದಾಳಿ ಮಾಡಿದ್ದ ಪಾಕ್ ಪೋಷಿತ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿ ಪ್ರತ್ಯುತ್ತರ ನೀಡಿದ್ದು, ಸಿಂಧೂರ ಕಳೆದು ಕೊಂಡಿರುವ ಹೆಣ್ಣು ಮಕ್ಕಳ ಪ್ರತೀಕಾರವಾಗಿ ಇದು ಆಪರೇಷನ್ ಸಿಂಧೂರ ದಾಳಿ ನಡೆದಿದ್ದು, ಸೇನೆಯ ಕಾರ್ಯಕ್ಕೆ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಾಕಿಸ್ತಾನವು ಅಂತಾರಾಷ್ಟ್ರೀಯ ಭಯೋತ್ಪಾದಕರ ನೆಲೆಗಟ್ಟು ಮತ್ತು ತರಬೇತಿ ನೀಡುವ ಫ್ಯಾಕ್ಟರಿ ಆಗಿ ಪರಿವರ್ತನೆ ಆಗಿದೆ. ಇದು ಕೇವಲ ಭಾರತ ಅಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಭಯೋತ್ಪಾದನೆ ಕಿತ್ತೊಗೆಯುವ ಕೆಲಸ ಭಾರತೀಯ ಸೇನೆ ಮಾಡಿದೆ. ಇದು ಇನ್ನೂ ಪ್ರಾರಂಭ ಪಾಕಿಸ್ತಾನದಲ್ಲಿರುವ ಕೊನೆಯ ಭಯೋತ್ಪಾದಕರಿರುವವರೆಗೂ ಈ ಕಾರ್ಯಾಚರಣೆ ನಡೆಯುತ್ತದೆ ಎಂದು ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಎಲ್ಲ ಭಾರತೀಯರು ಒಂದಾಗಿ ನಮ್ಮ ಪ್ರಧಾನಿ ನರೇಂದ್ರ ಮೊದಿ ಹಾಗೂ ನಮ್ಮ ದೇಶದ ಪ್ರಭಲ ಸೇನಾ ಪಡೆ ಹಿಂದೆ ಒಗ್ಗಟ್ಟಾಗಿ ನಿಲ್ಲಬೇಕು. ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ದೇಶಗಳು ಭಾರತದ ಈ ಕಾರ್ಯಾಚರಣೆಗೆ ಬೆಂಬಲ ಸೂಚಿಸಬೇಕು.

ಪಹಲ್ಗಾಮ್ ದಾಳಿಯಲ್ಲಿ ಮರಣ ಹೊಂದಿದ ಹಲವಾರು ಮುಗ್ದ ಭಾರತಿಯರ ಕುಟುಂಬಗಳ ಭಾವನೆ ಹಾಗೂ ತಮ್ಮ ಸಿಂಧೂರ ಕಳೆದು ಕೊಂಡಿರುವ ಹೆಣ್ಣು ಮಕ್ಕಳ ಪ್ರತೀಕಾರವಾಗಿ ಇದು ಆಪರೇಷನ್ ಸಿಂಧೂರ ಎಂದು ನಮ್ಮ ಪ್ರಧಾನಮಂತ್ರಿ ಹೆಸರಿಸಿ, ಹೆಸರಿಗೆ ತಕ್ಕ ಹಾಗೆ ದಾಳಿ ಮಾಡಿದ್ದಾರೆ. ಅವರ ಜೊತೆಗೆ ನಿಂತ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಭಾರತೀಯ ಸೇನೆಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.

ಭಾರತದ ಹೆಮ್ಮೆಯ ಸೈನಿಕರಿಗೊಂದು ದೊಡ್ಡ ಸಲಾಂ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶಗಳಲ್ಲಿರುವ ಭಯೋತ್ಪಾದಕರ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ನಮ್ಮ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಸಾಧನೆಗೊಂದು ದೊಡ್ಡ ಸಲಾಂ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನು ನಮ್ಮ ಪಕ್ಷ, ನಮ್ಮ ಸರಕಾರ ಸಂಪೂರ್ಣ ಬೆಂಬಲಿಸಿದೆ. ದೇಶದ ಭದ್ರತೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಮೊದಲೇ ಹೇಳಿದ್ದೆವು. ಮುಂದೆಯೂ ಕೇಂದ್ರ ಸರ್ಕಾರದೊಂದಿಗೆ ನಮ್ಮ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಇರಲಿದೆ ಎಂದು ಹೇಳಿದರು.

ಭಯೋತ್ಪಾದಕರ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಸಾಹಸ ಮೆಚ್ಚುವಂಥದ್ದು, ಈ ಮೂಲಕ ಪಹಲ್ಗಾಮ್ ದಾಳಿಯಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತುಸು ನೆಮ್ಮದಿ ಸಿಕ್ಕಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಎಚ್ಚರ ವಹಿಸಿದೆ. ಭಯೋತ್ಪಾದನೆ ಎಂಬ ಪೀಡುಗಿನ ವಿರುದ್ಧ ಎಲ್ಲರೂ ಒಗ್ಗಟಾಗಿ ಹೋರಾಡೋಣ ಎಂದು ಸಚಿವರು ಹೇಳಿದ್ದಾರೆ.

ಭಾರತದತ್ತ ಕೆಟ್ಟದೃಷ್ಟಿ ಬೀರುವವರಿಗೆ ಎಚ್ಚರಿಕೆ- ಈಶ್ವರ ಖಂಡ್ರೆ

ಪಾಕ್ ನೆಲದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ಯಶಸ್ವಿಯಾಗಿ ನಿರ್ದಿಷ್ಟ ಗುರಿ ದಾಳಿ ನಡೆಸಿರುವ ವಾಯುಪಡೆ ಸೇರಿದಂತೆ ಭಾರತೀಯ ಸೇನಾ, ನೌಕಾಪಡೆಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿನಂದನೆ ಸಲ್ಲಿಸಿದ್ದಾರೆ.

ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ಮಾಡಿ 9 ಭಯೋತ್ಪಾದಕ ತಾಣಗಳನ್ನು ನೆಲಸಮ ಮಾಡುವಲ್ಲಿ ಅಪರಿಮಿತ ದಕ್ಷತೆ, ಸಾಮರ್ಥ್ಯ ಮೆರೆದಿರುವ ಭಾರತೀಯ ಸೇನೆ ದೇಶದ ಜನರ ವಿಶ್ವಾಸವನ್ನು ನೂರ್ಮಡಿ ಮಾಡಿದೆ. ಮೂರೂ ಪಡೆಗಳಿಗೆ ಸಂಪೂರ್ಣ ಬೆಂಬಲ ಮತ್ತು ಕಾರ್ಯತಂತ್ರ ರೂಪಿಸಿದ ತಜ್ಞರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದು ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ, ಭಾರತದತ್ತ ಕೆಟ್ಟದೃಷ್ಟಿಬೀರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. ದೇಶದ, ಅಖಂಡತೆ, ಸಾರ್ವಭೌಮತ್ವಕ್ಕೆ ಧಕ್ಕೆಯಾದಾಗ, ಭಾರತೀಯ ಮುಗ್ಧ ಪ್ರಜೆಗಳಿಗೆ ಹಾನಿಯಾದಾಗ ಭಾರತ ತಕ್ಕ ಉತ್ತರ ನೀಡುತ್ತದೆ ಎಂಬುದನ್ನು ಇದು ಮತ್ತೊಮ್ಮೆ ಸಾಬೀತು ಮಾಡಿದೆ. ಈ ಸಂದರ್ಭದಲ್ಲಿ ಭಾರತೀಯರೆಲ್ಲರೂ ನಮ್ಮ ಪಡೆಗಳೊಂದಿಗೆ ನಿಲ್ಲುತ್ತಾರೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.