ಹೆಣ್ಣೂ ಮನುಷ್ಯಳೇ, ಅವಳಲ್ಲೂ ಕ್ರೌರ್ಯ ಇರುತ್ತದೆ; ಸಮಾನತೆಯ ಪೈಪೋಟಿ ಬದಲು ಬೆಳೆಯುವ ಆಲೋಚನೆ ಮುಖ್ಯ -ರೂಪಾ ರಾವ್ ಬರಹ
ಹಲವು ಸಲ ಹೆಣ್ಣು ಕ್ರೌರ್ಯ ತೋರಿದರೆ, ಒಂದು ಹೆಣ್ಣಾಗಿ ಅಂತಹ ನಡೆ ತೋರಿಸಬೇಕಾದರೆ ಅವಳಿನ್ನೆಷ್ಟು ರೋಸಿ ಹೋಗಿದ್ದಿರಬಹುದು ಎಂಬ ಕನಿಕರದಿಂದ ನೋಡುತ್ತೇವೆ. ಇದು ಅತ್ಯಂತ ಅಪಾಯಕಾರಿ. ಹೆಣ್ಣೂ ಮನುಷ್ಯಳೇ, ಅವಳಲ್ಲೂ ಕ್ರೌರ್ಯ ಇರುತ್ತದೆ. ಬರಹ: ರೂಪಾ ರಾವ್

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮನೆಯೊಳಗೆ ನಾಲ್ಕು ಗೋಡೆಗಳ ಮಧ್ಯೆ ನಡೆದ ಕ್ರೌರ್ಯ ಬಯಲಾಗಿದೆ. ಈ ಪ್ರಕರಣವು ಹಲವು ಅನುಮಾನಗಳ ಜೊತೆಗೆ ಪ್ರಶ್ನೆಗಳನ್ನೂ ಹುಟ್ಟುಹಾಕಿವೆ. ಒಂದು ಕಾಲದಲ್ಲಿ ಪ್ರಬಲ ಹುದ್ದೆಗಳನ್ನು ನಿರ್ವಹಿಸಿದ್ದ ಅಧಿಕಾರಿಯೊಬ್ಬರಿಗೆ ಈ ಸ್ಥಿತಿ ಬರಬಾರದಿತ್ತು ಎಂದು ಹಲವರು ಹೇಳುತ್ತಿದ್ದಾರೆ. ಇತ್ತೀಚೆಗೆ ಮಹಿಳೆಯರು ಕ್ರೌರ್ಯದಲ್ಲಿ ಭಾಗಿಯಾಗುತ್ತಿರುವುದು ಹೆಚ್ಚುತ್ತಿದೆ ಎಂಬ ಪ್ರಶ್ನೆಗಳು ಹುಟ್ಟುತ್ತಿವೆ. ಈ ಕುರಿತು ಮನಶ್ಶಾಸ್ತ್ರಜ್ಞರಾದ ರೂಪಾ ರಾವ್ ಅವರು ಬರೆದಿರುವ ಬರಹ ಇಲ್ಲಿದೆ.
ಇತ್ತೀಚೆಗೆ ಹೆಂಗಸರಲ್ಲಿ ಕ್ರೌರ್ಯ ಜಾಸ್ತಿ ಆಗ್ತಿದೆಯೇ ಎಂಬ ಪ್ರಶ್ನೆ ಹೊತ್ತು ಟಿವಿಯವರು ಬಂದಿದ್ದರು. ಇದು ಡಿಜಿಪಿ ಅವರ ಕೊಲೆಯ ಹಿನ್ನೆಲೆಯಲ್ಲಿ ಬಂದ ಪ್ರಶ್ನೆ. ಅಲ್ಲಿ ಹೇಳಲಾದ ಹಲವು ವಿಷಯಗಳ ಜೊತೆ ಇನ್ನೊಂದಷ್ಟು ವಿಷಯಗಳು ಇಲ್ಲಿವೆ. ವಿಷಯ ಯಾವ ಕಡೆಯೂ ವಾಲಬಾರದೆಂಬ ಎಚ್ಚರಿಕೆಯೊಂದಿಗೆ ಕೇವಲ ವಿಷಯವನ್ನು ಮಾತ್ರ ಹೇಳುತ್ತಿದ್ದೇನೆ. ಮೊದಲಿಗೆ ಮಹಿಳೆಯೂ ಮನುಷ್ಯಳೇ. ಅರಿಷಡ್ವರ್ಗಗಳು ಪುರುಷ-ಮಹಿಳೆ ಎನ್ನದೆ ಕ್ರೋಧ, ಮದ, ಮತ್ಸರ, ಅಹಂಕಾರ, ಮೋಹ, ಲೋಭ, ಅಜ್ಞಾನ ಇವುಗಳು ಪ್ರತಿ ಮನುಷ್ಯನಲ್ಲಿಯೂ ಇವೆ.
ಸಮಾಜ ಹೆಂಗಸರನ್ನು 'ಕ್ಷಮಯಾಧರಿತ್ರಿ', 'ಸಹನಾಮಯಿ' ಅಂತೆಲ್ಲಾ ಬಿಂಬಿಸಿದ್ದು ನಿಜ. ಅವಳು ಹಾಗಿರಲು ಕಾರಣ ಅದು ಸಮಾಜದ, ಸಂಸ್ಕೃತಿಯ, ಕುಟುಂಬದಿಂದ ಬಂದ ನೈತಿಕ ಮೌಲ್ಯಗಳು. ಆಗ ಹೆಂಗಸರಿಗೆ ಭಯ, ಸಹಜವಾದ ಹೆಂಗರುಳು, ಬೈಗುಳ, ಸಾಮಾಜಿಕ ನಿಂದನೆ, ಮಕ್ಕಳ ಭವಿಷ್ಯದ ಹೆದರಿಕೆ ಇತ್ಯಾದಿ ಕಾರಣಗಳಿಂದ ತಮ್ಮ ಅಸಮಾಧಾನ, ಹತಾಶೆ ಅಥವಾ ಕ್ರೋಧವನ್ನು ಹೊರಹಾಕುತ್ತಿರಲಿಲ್ಲವೇನೋ. ಇವತ್ತು ಸಮಾಜ ಮುಕ್ತತೆಯತ್ತ ವಾಲುತ್ತಿದೆ. ಮಹಿಳೆಗೆ ಮಾತನಾಡುವ ಅವಕಾಶ ಸಿಕ್ಕಿದೆ. ಪ್ರತಿಕ್ರಿಯಿಸುವ ಅವಕಾಶ ಸಿಗುತ್ತಿದೆ. ಈ ನಡೆ ಸ್ವಾಗತಾರ್ಹ, ಆದರೆ ಈ ಸ್ವಾತಂತ್ರ್ಯದ ಸದುಪಯೋಗ ಮಾಡಿಕೊಳ್ಳುವವರು ಒಳ್ಳೊಳ್ಳೆಯ ಹಾದಿ ಹಿಡಿದಿದ್ದರೆ, ಅದನ್ನು ದುರ್ಬಳಕೆ ಮಾಡಿಕೊಂಡ ಸಂದರ್ಭಗಳೂ ಕಾಣಿಸುತ್ತಿವೆ. ಈ ಆಧುನಿಕ ಜಗತ್ತಿನಲ್ಲಿ ಹೊಸ ಆಕಾಂಕ್ಷಿಗಳು ಹೆಚ್ಚಾದ ಹಾಗೆ ಆದನ್ನು ಪಡೆಯಲೇಬೇಕೆಂಬ ಆಂತರಿಕ ಒತ್ತಡಗಳು ಜಾಸ್ತಿ ಆಗುತ್ತಿವೆ.
ಇದಕ್ಕೆ ಮಹಿಳೆಯರೂ ಹೊರತಲ್ಲ
ತನ್ನ ಸುಖಕ್ಕಾಗಿ, ಹೆಸರಿಗಾಗಿ, ಹಣಕ್ಕಾಗಿ, ಗುರುತಿಗಾಗಿ, ಸ್ಥಾನಕ್ಕಾಗಿ ರೇಸಿನಲ್ಲಿ ಅವರೂ ಈಗ ಇದ್ದಾರೆ. ಈ ಹಾದಿಯಲ್ಲಿನ ಒತ್ತಡವನ್ನು ನಿವಾರಿಸಿಕೊಳ್ಳುವ ಹಂತದಲ್ಲಿ ಯಾರೇ ಅಡ್ಡಬಂದರೂ, ಅವರನ್ನು ನಿವಾರಿಸಿಕೊಳ್ಳಬೇಕೆನ್ನುವ ಧೋರಣೆಯೂ ಬೆಳೆಯುತ್ತಿದೆ. ಈ ಸಮಯದಲ್ಲಿ ಕೆಲವು ಹೆಂಗಸರು, ತಮ್ಮ ತಪ್ಪುಗಳನ್ನು ಅಥವಾ ತಪ್ಪು ತೀರ್ಮಾನಗಳನ್ನು ಮುಚ್ಚಿಹಾಕಲು, ಅಥವಾ ಅಡ್ಡಿಯಾದ ವ್ಯಕ್ತಿಯನ್ನು ದೂರಮಾಡಲು ಹಿಂಸೆಯ ಮಾರ್ಗವನ್ನು ಆಯ್ಕೆ ಮಾಡುತ್ತಿದ್ದಾರೆ. ಅದು ತನ್ನ ಸುಖಕ್ಕಾಗಿ, ಹಠಕ್ಕಾಗಿ ಸ್ವಂತ ಮಗುವನ್ನು ಕೊಂದ ತಾಯಿಯಂದಿರು ಇರಬಹುದು, ತನ್ನ ದಾರಿಗೆ ಅಡ್ಡ ಬಂದ ಗಂಡನನ್ನು ಕೊಲ್ಲಿಸಿ ಒಲೆಗೆ ಹಾಕಿದ ಹೆಂಡತಿ ಇರಬಹುದು. ತನ್ನ ಪ್ರೀತಿಗೆ ಅಡ್ಡ ಬಂದ ತಾಯಿಯನ್ನು ಕೊಂದ ಮಗಳೇ ಇರಬಹುದು.
ಮಾನಸಿಕ ಆರೋಗ್ಯ
ನಾನು ಈ ಸಂದರ್ಭದಲ್ಲಿ ಯಾರ ವ್ಯಕ್ತಿಗತ ವಿವರಣೆಗೂ ಹೋಗುವುದಿಲ್ಲ. ಆದರೆ ನಿವೃತ್ತ ಸೀನಿಯರ್ ಆಫೀಸರ್ ಅವರ ಬಗ್ಗೆ ಓದಿದಾಗ, ಅಲ್ಲಿ ಹೇಳಲಾದ ಲಕ್ಷಣಗಳ ಹಿಂದೆ ಯಾವ ಮನೋವೈಜ್ಞಾನಿಕ ಅಂಶಗಳು ಕೆಲಸ ಮಾಡುತ್ತವೆ ಎಂಬುದನ್ನು ಚಿಕ್ಕದಾಗಿ ವಿವರಿಸುತ್ತೇನೆ. ಈ ಘಟನೆಯ ಹಿನ್ನೆಲೆ ನೋಡಿದರೆ ಕ್ರೌರ್ಯದ್ದಲ್ಲ, ಅಥವಾ ಪ್ಲಾನ್ ಮಾಡಿ ಕೊಂದಿದ್ದಲ್ಲ. ಇಲ್ಲಿ ದೊಡ್ಡ ಪಾತ್ರ ವಹಿಸಿರುವುದು ಮಾನಸಿಕ ಅನಾರೋಗ್ಯ.
ದೀರ್ಘಕಾಲದ ಪರ್ಸಿಕ್ಯುಟರಿ ಡಿಲ್ಯೂಷನ್ ಅಥವಾ ಸೈಕೋಸಿಸ್ ಅಂದರೆ, ತನ್ನ ಸುತ್ತಮುತ್ತಲ ಜನರು ತನಗೆ ಏನೋ ತೊಂದರೆ ಮಾಡುತ್ತಾರೆ ಅಥವಾ ಅಪಾಯ ಮಾಡುತ್ತಾರೆ, ವಿಷ ಹಾಕುತ್ತಿದ್ದಾರೆ, ಮಕ್ಕಳನ್ನು ನಿಯಂತ್ರಿಸುತ್ತಿದ್ದಾರೆ, ನಾನು ಬಲಿಯಾಗುತ್ತೇನೆ ಎಂಬ ಸಂಶಯ ಪೂರ್ಣ ಭ್ರಮೆಗಳು. ಇವುಗಳಲ್ಲಿ ವ್ಯಕ್ತಿಗೆ ತಾನೇನು ನಂಬಿದ್ದೇನೋ ಅದೇ ನಿಜವೆಂದು ಭಾವಿಸುತ್ತಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅನ್ನುವ ಅಂಶವನ್ನೂ ಅವರು ನಂಬುವುದಿಲ್ಲ. ಮೇಲಿನ ಘಟನೆಯಲ್ಲಿ ಕೊಲೆ ಮಾಡಿದ ವ್ಯಕ್ತಿಗೆ ಪತಿ ಕುಡಿಯುವ ನೀರಲ್ಲಿ ವಿಷಹಾಕಿದ್ದಾರೆ, ಮಗಳ ಮೇಲೆ ಕಂಟ್ರೋಲ್ ತೆಗೆದುಕೊಳ್ಳುತ್ತಿದ್ದಾರೆ. ತನ್ನ ಅತಿ ದೊಡ್ಡ ಶತ್ರು ಪತಿ ಎಂಬೆಲ್ಲಾ ದೂರುಗಳು ಇದ್ದವು. ಇವೆಲ್ಲವೂ ಅವರ ತಲೆಗಂಟಿರುವ ನಂಬಿಕೆ ಮತ್ತು ಅದರಿಂದುಂಟಾಗುವ ಭಾವನೆಗಳ ಪರಿಣಾಮ. ಇವು ನಿಜವೇ ಅಲ್ಲದಿದ್ದರೂ, ಅವರ ಭಾವನೆಗೆ ಅದು ನಿಜವೆಂದು ತೋರಿಸುತ್ತದೆ. ಇಂತಹ ಭ್ರಮಾಧೀನ ಸಮಯದಲ್ಲಿ ಅವರೊಳಗೇ ಯುದ್ದವಾಗುತ್ತಿರುತ್ತದೆ. (ಇಂತಹುದೇ ಒಂದು ವಿಚಾರದ ಕಥೆ ಸೈಕೊ ಹಾರರ್ ಪುಸ್ತಕದಲ್ಲಿ ಬರೆದಿರುವೆ).
ಎಲ್ಲಿ ನಂಬಿಕೆ ಎನ್ನುವುದು ವಾಸ್ತವವಲ್ಲವೋ, ಸತ್ಯವಾಗಿಲ್ಲವೋ, ಅಲ್ಲಿ ಅಸಹಜ ಭೀತಿ, ಸಂಶಯ ಮತ್ತು ಅನಗತ್ಯ ಆತ್ಮರಕ್ಷಣೆ ಬೇಕೆನ್ನುವ ಭ್ರಮೆಯೂ ಹುಟ್ಟುತ್ತದೆ. ಈ ಆತ್ಮರಕ್ಷಣೆಯ ಭ್ರಮೆಯಲ್ಲಿ ತಾನು ಶತ್ರುವೆಂದು ಭಾವಿಸಿರುವ ವ್ಯಕ್ತಿಯನ್ನು ಕೊಲ್ಲಲೂಬಹುದು. ಇಲ್ಲಿ ಅವರ ಉದ್ದೇಶ ತನ್ನನ್ನು ತಾನು ‘ಬಚಾವ್’ ಮಾಡಿಕೊಳ್ಳುವ ಕ್ರಿಯೆ. ಆದರೆ ವಿಪರ್ಯಾಸವೆಂದರೆ ಅವರು ಅಲ್ಲಿ ಯಾರೋ ಅಮಾಯಕ ವ್ಯಕ್ತಿಯನ್ನು ಕೊಂದಿರುತ್ತಾರೆ.
ಸಮಾಜವೂ ಹೊಣೆ
ಬಹುಪಾಲು ಘಟನೆಗಳಲ್ಲಿ ಮೊದಲು ಯಾರಿಗೂ ಈ ಡಿಲ್ಯೂಷನ್ಗಳು ಗಂಭೀರವಾಗಿ ತೋರಿಸುವುದಿಲ್ಲ. "ಅವಳು ಭಾರಿ ಡ್ರಾಮಾ ಮಾಡ್ತಾ ಇದ್ದಾಳೆ", "ಇವಳಿಗೆ ಎಲ್ಲರೂ ಶತ್ರು ಅನ್ನಿಸೋದೇ ಹೆಸರಾಗಿದೆ" ಎಂದು ತಳ್ಳಿಹಾಕಲಾಗುತ್ತದೆ. ಕೆಲವೊಮ್ಮೆ ಮನೆಯವರು ಸಹ "ಇವಳಿಗೆ ಒಳ್ಳೆಯ ಮನಸ್ಥಿತಿ ಇಲ್ಲ" ಅಂತ ಮಾತನಾಡಿ ಬಿಡುತ್ತಾರೆ. ಮೇಲೆ ಹೇಳಿದ ಘಟನೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನೂನು, ಪೊಲೀಸ್ ಇಲಾಖೆ ಮತ್ತು ವೈದ್ಯಕೀಯ ಸಮುದಾಯಗಳು ಸಂಯುಕ್ತವಾಗಿ ಕೆಲಸ ಮಾಡುವಾಗ ಮಾತ್ರ ಇಂತಹ ಘಟನೆಗಳ ಮರುಕಳಿಕೆ ತಡೆಯಬಹುದು. ಕುಟುಂಬವೊಂದೇ ಈ ಹೊಣೆಗಾರಿಕೆಯನ್ನು ಹೊರುವಂತಿಲ್ಲ. ಸಮಾಜ ಕೂಡ ಹೊಣೆಗಾರ.
ಬಹಳಸಲ ಕೊಲೆಯಂತಹ ಕೃತ್ಯಕ್ಕೆ ಮಾನಸಿಕ ಅನಾರೋಗ್ಯ ಕಾರಣವಾಗಿರುವುದಿಲ್ಲ. ಕೆಲವರು ನಿಖರವಾಗಿ ತಂತ್ರಬದ್ಧವಾಗಿ ಕ್ರೌರ್ಯತೋರಿಸುತ್ತಾರೆ. ಎಲ್ಲೋ toxic choices ನಾರ್ಮಲೈಸ್ ಅನಿಸಿಬಿಡುತ್ತಿವೆಯೇನೋ.
ಸಾಫ್ಟ್ ಕಾರ್ನರ್
ಹಲವು ಸಲ ಹೆಣ್ಣು ಕ್ರೌರ್ಯ ತೋರಿದರೆ, ಒಂದು ಹೆಣ್ಣಾಗಿ ಅಂತಹ ನಡೆ ತೋರಿಸಬೇಕಾದರೆ ಅವಳಿನ್ನೆಷ್ಟು ರೋಸಿ ಹೋಗಿದ್ದಿರಬಹುದು ಎಂಬ ಕನಿಕರದಿಂದ ನೋಡುತ್ತೇವೆ. ಇದು ಅತ್ಯಂತ ಅಪಾಯಕಾರಿಯಾದುದು. ಪುರುಷ ತಪ್ಪು ಮಾಡಿದರೆ, ತಕ್ಷಣ ಸಮಾಜ ಆತನ ಮೇಲೆ ಕಠಿಣವಾಗಿ ಪ್ರತಿಕ್ರಿಯಿಸುತ್ತೆ. ಆದರೆ ಹೆಂಗಸು ತಪ್ಪು ಮಾಡಿದ್ರೆ, “ಅವಳ ಹಿಂದೆ ನೋವು ಇದೆ”, “ಅವಳು ಮಾನಸಿಕವಾಗಿ ಜರ್ಜರಿತಳಾಗಿದ್ದಾಳೆ” ಅನ್ನೋ ಸಹಾನುಭೂತಿ ಇರುತ್ತದೆ. ಹೆಣ್ಣೂ ಮನುಷ್ಯಳೇ, ಅವಳಲ್ಲೂ ಕ್ರೌರ್ಯ ಇರುತ್ತದೆ.
ಎಲ್ಲೋ ಲಿಬರಲಿಸಂ “ನಾನು ನನಗೆ ಬೇಕಾದ ಹಾಗೆ ಯಾರಿಗೇನೇ ಆದರೂ ಮಾಡಬಹುದು” ಅನ್ನುವ ಕಲ್ಪನೆಯ ಮನಸ್ಥಿತಿ ತರುತ್ತಿದೆಯೇನೋ. ಸಮಾಜದ ಈ ದ್ವಂದ್ವ ನೋಟ ಬದಲಾಗಬೇಕಿದೆ. ಹೆಣ್ಣಿಗೆ ಅಭಿವ್ಯಕ್ತಿಯ ಶಕ್ತಿ ಸಿಕ್ಕಿದೆ, ಅವಕಾಶ ಇದೆ, ಧೈರ್ಯವಿದೆ. ನಿಜ ಆದರೆ ಸಂಯಮದ ಶಕ್ತಿಯೂ ಬೇಕಿದೆ. ನಾನೂ ಗಂಡಿನ ಸಮ ಎನ್ನುವ ಸಮಾನತೆಯ ಪೈಪೋಟಿಗೆ ಬೀಳುವ ಬದಲು, ನಾನು ಹೆಣ್ಣಾಗಿಯೇ ಹೇಗೆ ಬೆಳೆಯಬಹುದು ಎಂಬ ಆಲೋಚನೆ ಈಗ ಮುಖ್ಯ.
ಕೆಲವು ಗಂಡಸರ ಹಾಗೆ ಕೆಟ್ಟ ಭಾಷೆ ಉಪಯೋಗಿಸುವುದು, ಅವನಂತೆಯೇ ಸಿಗರೇಟು, ಡ್ರಗ್ಸ್ ಮಾಡುವುದು ಅಥವಾ ಕುಡಿದು ಎಲ್ಲೆಂದರಲ್ಲಿ ಬೀಳುವುದು. ತನ್ನ ಸುಖಕ್ಕೇ ಮೊದಲ ಆದ್ಯತೆ ಕೊಡುವುದು, ನೀಚ ಮಾರ್ಗಕ್ಕೆ ಮುಂದಾಗುವುದು ಇವೆಲ್ಲಾ ಸಮಾನತೆ ಅಲ್ಲ ಅಧೋಗತಿ. ಒಂದು ಕುಟುಂಬ ಹೆಣ್ಣಿನಿಂದಲೇ ಉದ್ದಾರವಾಗುವುದು ಇದು ನಿಜ. ಆಕೆ ಮನಸು ಮಾಡಿದರೆ ತಾನಿರುವ ಮನೆಯ ದೀಪ ಹಚ್ಚಬಹುದು ಅಥವ ಬೆಂಕಿಯನ್ನೇ ಹಚ್ಚಬಹುದು. ಗಂಡಿನದು ಬಾಹುಬಲವಷ್ಟೇ, ಆದರೆ ಹೆಣ್ಣಿನದು ಭಾವನೆಗಳ ಮಹಾಪೂರದ ಶಕ್ತಿ. ಆ ಶಕ್ತಿಯನ್ನು ಅಗತ್ಯವಿರುವ ರೀತಿಯಲ್ಲಿ ಹಿಡಿದಿಡುವ ಶಕ್ತಿ ಅವಳಿಗೆ ಮಾತ್ರ ಇರುವುದು.
- ಬರಹ: ರೂಪಾ ರಾವ್
ಇದನ್ನೂ ಓದಿ | ಜೀವ ಉಳಿಸಿಕೊಳ್ಳಲು ಗಂಡನ ಹತ್ಯೆ; ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಕೊಲೆ ರಹಸ್ಯ ಬಿಚ್ಚಿಟ್ಟ ಪತ್ನಿ ಪಲ್ಲವಿ
ವಿಭಾಗ