ಪಹಲ್ಗಾಮ್ ಉಗ್ರದಾಳಿಗೂ ಮೊದಲು ಶಿವಮೊಗ್ಗದ ಮಂಜುನಾಥ್ ರಾವ್ ದಂಪತಿ ಸಂಭ್ರಮಿಸಿದ ವಿಡಿಯೋ ವೈರಲ್
ಪಹಲ್ಗಾಮ್ ಉಗ್ರದಾಳಿ: ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಪಹಲ್ಗಾಮ್ನಲ್ಲಿ ಉಗ್ರರ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ದಾಳಿಗೂ ಮೊದಲು ಅವರು ಖುಷಿಯಿಂದ ಮಾಡಿದ್ದ ವಿಡಿಯೋ ವೈರಲ್ ಆಗಿದೆ.

ಪಹಲ್ಗಾಮ್ ಉಗ್ರದಾಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಗ ಅಭಿಜಯನ ಸಾಧನೆ ಹಿನ್ನೆಲೆಯಲ್ಲಿ ಖುಷಿಯಿಂದ ಕುಟುಂಬ ಸಹಿತ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮಂಜುನಾಥ್ ರಾವ್ ಉಗ್ರ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ದಾಳಿಗೂ ಕೆಲವೇ ಗಂಟೆ ಮೊದಲು ಬೋಟ್ ರೈಡ್ನಲ್ಲಿ ಮಂಜುನಾಥ ರಾವ್ ಮತ್ತು ಪಲ್ಲವಿ ಖುಷಿಯಿಂದ ಸಂಭ್ರಮಪಟ್ಟ ಕ್ಷಣದ ವಿಡಿಯೋ ವೈರಲ್ ಆಗಿದೆ. ಇದನ್ನು ಸಿಟಿಜೆನ್ಸ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಉಗ್ರದಾಳಿ ಹಾಗೂ ಅದಕ್ಕೂ ಮೊದಲ ಕ್ಷಣಗಳನ್ನು ನೆನಪಿಸಿದೆ.
ನಮ್ಮನ್ನೂ ಹತ್ಯೆ ಮಾಡಿ ಅಂದ್ರೆ, ನಿಮ್ಮನ್ನು ಬಿಡ್ತೇವೆ, ಮೋದಿಗೆ ಹೋಗಿ ಹೇಳಿ ಅಂದ್ರು- ಪಲ್ಲವಿ
ಪಹಲ್ಗಾಮ್ನ ಆಸ್ಪತ್ರೆಯಲ್ಲಿದ್ದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಸುದ್ದಿ ಚಾನೆಲ್ಗಳೊಂದಿಗೆ ಮಾತನಾಡುತ್ತ, ನಮ್ಮ ಕಣ್ಣೆದುರೇ ಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಉಗ್ರರ ಬಳಿ, ನಮ್ಮನ್ನೂ ಹತ್ಯೆ ಮಾಡುವಂತೆ ಬೇಡಿಕೊಂಡೆವು. ಆದರೆ, ಅವರು ನನಗೆ ಹೇಳಿದ್ದು ಇಷ್ಟು - ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವಿಷಯ ತಿಳಿಸುವುದಕ್ಕಾಗಿ ಜೀವಂತ ಬಿಡುತ್ತಿದ್ದೇವೆ. ಮೋದಿಗೆ ಹೋಗಿ ಹೇಳಿ ಎನ್ನುತ್ತ ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ತನ್ನ ಪತಿಯ ಹತ್ಯೆ ಕಣ್ಣಾರೆ ಕಂಡಿದ್ದ ಅವರು ಆಘಾತಕ್ಕೆ ಒಳಗಾಗಿದ್ದಾರೆ.
ಉಗ್ರದಾಳಿಗೂ ಮೊದಲು ಶಿವಮೊಗ್ಗದ ಮಂಜುನಾಥ್ ರಾವ್ ದಂಪತಿ ಸಂಭ್ರಮಿಸಿದ ವಿಡಿಯೋ ವೈರಲ್
ಸಿಟಿಜೆನ್ಸ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮಂಜುನಾಥ್ ರಾವ್ ಮತ್ತು ಪಲ್ಲವಿ ತಾವು ಪ್ರವಾಸ ಹೇಗೆ ಕೈಗೊಂಡೆವು ಎಂಬುದನ್ನು ಹೇಳಿದ್ದಾರೆ. ಅಲ್ಲಿ ಪ್ರವಾಸಿ ಮಾರ್ಗದರ್ಶಿಯಾದವರಿಗೆ, ಕರೆದೊಯ್ದ ಸಂಸ್ಥೆಗೆ ಧನ್ಯವಾದ ಹೇಳಿರುವುದು ವಿಡಿಯೋದಲ್ಲಿದೆ.
ತುರ್ತು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಇಂದು ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ. ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ. ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ತಂಡ ಕಾಶ್ಮೀರಕ್ಕೆ
ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ. ಉಗ್ರಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ಸಂಜೆಯೇ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.