ಕಾಡಿನ ಕಥೆಗಳು: ತಲಕಾಡು ಪ್ರವಾಸೋದ್ಯಮಕ್ಕೆ ಸ್ಥಳೀಯರ ಪ್ರಾಧಿಕಾರದ ಹಂಬಲ, ಅರಣ್ಯ ಇಲಾಖೆಗೆ ಆಗದಿರಲಿ ಪಂಚಲಿಂಗಗಳ ತವರು ಬರೀ ಆದಾಯದ ಮೂಲ
ಅರಣ್ಯ ಪ್ರದೇಶದ ಪಕ್ಕದಲ್ಲೇ ಹರಿಯುವ ಕಾವೇರಿ ನದಿಯ ಸೌಂದರ್ಯ, ಅಗಾಧ ಮರಳು, ಐತಿಹಾಸಿಕ ಮಹತ್ವ ಇರುವ ತಲಕಾಡು ಎಂಬ ಈ ಊರಿನ ಪ್ರವಾಸೋದ್ಯಮ ಪ್ರಗತಿಯ ಹೋರಾಟಕ್ಕೆ ನೂರೆಂಟು ತೊರೆಗಳು. ನಿರೀಕ್ಷೆಯಷ್ಟು ಫಲ ಸಿಕ್ಕಿಲ್ಲ.

ಕಾಡಿನ ಕಥೆಗಳು: ಕಾವೇರಿ ನದಿ ಬಳುಕುತ್ತ ಹರಿಯುವ ಎಂಟು ನೂರು ಕಿ.ಮಿ ಯಾನದಲ್ಲಿ ಅರಣ್ಯ ಪ್ರದೇಶವೂ ಸಾಕಷ್ಟಿದೆ. ಕಾವೇರಿ ಹುಟ್ಟುವುದೇ ಕೊಡಗಿನ ಅರಣ್ಯದಲ್ಲಿ. ಅಲ್ಲಿಂದ ಬಂಗಾಳಕೊಲ್ಲಿ ಸೇರುವವರೆಗೂ ಕಾವೇರಿ ಸೃಷ್ಟಿಸಿರುವ ಅದೆಷ್ಟೋ ಅದ್ಬುತ ತಾಣಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಅದರಲ್ಲಿ ತಲಕಾಡು ಎನ್ನುವ ಐತಿಹಾಸಿಕ ಮಹತ್ವ ಇರುವ ತಾಣವೂ ಕೂಡ ಸೇರಿದೆ. ಅದು ಅರಣ್ಯ ಪ್ರದೇಶ ಇರುವ, ಇತ್ತೀಚಿನ ಮೀಸಲು ಅರಣ್ಯವಾಗಿಯೂ ಮಾರ್ಪಟ್ಟಿರುವ ಪ್ರದೇಶ. ಅಲ್ಲಿ ಕಾವೇರಿ ಹರಿದು ಅಗಾಧ ರಾಶಿಯ ಮರಳನ್ನು ಉಳಿಸಿರುವುದರಿಂದ ತಲಕಾಡಿಗೆ ವಿಶಿಷ್ಟ ಸ್ಥಾನವಿದೆ. ಐತಿಹಾಸಿಕವಾಗಿ ಎಷ್ಟು ಮಹತ್ವ ಇದೆಯೋ ಪರಿಸರವಾಗಿಯೂ ನದಿ ತೀರ, ಅರಣ್ಯ ಪ್ರದೇಶ ಅಷ್ಟೇ ಮಹತ್ವವನ್ನು ಪಡೆದಿವೆ. ಈ ಎರಡು ಅಂಶಗಳು ಪ್ರವಾಸೋದ್ಯಮ ಪ್ರಗತಿಗೆ ಪೂರಕವೂ ಆಗಿವೆ.
ತಲಾ ಮತ್ತು ಕಾಡ ಎಂಬ ಇಬ್ಬರು ಕಿರಾತ ಸೋದರರಿಂದ ಈ ಊರಿಗೆ ತಲಕಾಡು ಎಂದು ಹೆಸರು ಬಂದಿದೆ ಎಂಬುದು ಸ್ಥಳ ಪುರಾಣ. ತಲಕಾಡಿನ ಶಿವನಿಗೆ ಗಜಾರಣ್ಯನಾಥ ಎಂದೂ ಕರೆಯುತ್ತಾರೆ. ಮೈಸೂರು ಜಿಲ್ಲೆಯಲ್ಲಿನ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಇದು ಮೈಸೂರಿನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಇಲ್ಲಿರುವ ದೇವಾಲಯಗಳು ಗಂಗರ ಕಾಲದ ದೇವಾಲಯಗಳು. ಇಲ್ಲಿ ನಡೆಯುವ ಪಂಚಲಿಂಗ ದರ್ಶನ ವಿಶೇಷವಾದದ್ದು ಹಾಗೂ ಪಂಚಲಿಂಗ ದರ್ಶನವು 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಸಿದ್ದ ಸ್ಥಳವಾಗಿದೆ. ತಲಕಾಡು ಒಂದು ಕಾಲದಲ್ಲಿ 30 ದೇವಾಲಯಗಳಿಂದ ಕೂಡಿದ ಭವ್ಯ ನಗರವಾಗಿತ್ತು. ಆದರೆ 16ನೇ ಶತಮಾನದಲ್ಲಿ ಇವುಗಳೆಲ್ಲವು ಮರಳಿನಲ್ಲಿ ಮುಚ್ಚಿ ಹೋಗಿವೆ. ಎರಡು ನಕ್ಷತ್ರಗಳು ಒಂದುಗೂಡಲು ಅಂದರೆ ಪಂಚಲಿಂಗ ದರ್ಶನ ಕಾರ್ತಿಕ ಮಾಸದಲ್ಲಿ ಅಮವಾಸ್ಯೆಯ ದಿನ ಆಚರಿಸಲಾಗುತ್ತದೆ. ಸಂಪ್ರದಾಯಸ್ಥರು ಮೊದಲು ಗೋಕರ್ಣ ತೀರ್ಥದಲ್ಲಿ ಸ್ನಾನ ಮಾಡಬೇಕು. ನಂತರ ಗೋಕರ್ಣೇಶ್ವರ ಮತ್ತು ಚಂಡಿಕಾ ದೇವಿ ಪೂಜೆ, ತದನಂತರ ವೈಧ್ಯನಾಥೇಶ್ವರನ ಪೂಜೆ ಸಲ್ಲಿಕೆಯಾಗುತ್ತದೆ. ನಂತರ ಕ್ರಮವಾಗಿ ಅರ್ಕೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಮಲ್ಲಿಕಾರ್ಜುನರಿಗೆ ಪೂಜೆ ಮತ್ತು ಕೀರ್ತಿ ನಾರಾಯಣ ಪೂಜೆ ಆಗುತ್ತದೆ.
ತಲಕಾಡಿನ ಪಂಚಲಿಂಗ ದೇವಸ್ಥಾನಗಳ ಸಮೀಪದಲ್ಲೇ ಕಾವೇರಿ ನದಿ ಹರಿಯುತ್ತದೆ. ಅದರಲ್ಲೂ ವೈದ್ಯನಾಥೇಶ್ವರ, ಪಾತಾಳೇಶ್ವರ ಹಾಗೂ ಮರಳೇಶ್ವರ ದೇಗುಲದ ಹಿಂಭಾಗದಲ್ಲಿಯೇ ಹೊಳೆಯಿದೆ. ಈ ದೇಗುಲಕ್ಕೆ ಹೊಂದಿಕೊಂಡಂತೆಯೇ ಅರಣ್ಯೂ ಹರಡಿಕೊಂಡಿದೆ. ಸುಮಾರು 260ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಅರಣ್ಯವಿದೆ. ಮೊದಲೆಲ್ಲಾ ಇದು ಮುಜರಾಯಿ ಇಲಾಖೆ ಜಾಗವಾಗಿತ್ತು. ಹಸಿರು ವಾತಾವರಣವಿದ್ದುದರಿಂದ ನಿಧಾನವಾಗಿ ಅರಣ್ಯ ಇಲಾಖೆಗೆ ಸೇರಿದೆ. ಅರಣ್ಯ ಇಲಾಖೆಯು ಈ ಜಾಗದಲ್ಲಿ ಗಿಡ ಮರಗಳನ್ನು ಬೆಳೆಸಿದೆ. ಅದರಲ್ಲೂ ನೀಲಗಿರಿ ಮರಗಳೇ ಈಗಲೂ ಅಲ್ಲಿ ಸಾಕಷ್ಟಿವೆ. ನದಿ ನೀರು ಹರಿಯುವುದರಿಂದ ನೀರಿನ ಕೊರತೆಯಿಲ್ಲ. ಅಕ್ಕಪಕ್ಕದಲ್ಲಿ ಮೂರ್ನಾಲ್ಕು ಬೆಟ್ಟಗಳೂ ಇರುವುದರಿಂದ ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗಿ ಬದುಕು ಕಂಡುಕೊಂಡಿವೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಈ ಪ್ರದೇಶವನ್ನು ಕೆಲವು ವರ್ಷದ ಹಿಂದೆ ಮೀಸಲು ಅರಣ್ಯ ಎಂದೂ ಬದಲಾಯಿಸಲಾಗಿದೆ. ಇದರಿಂದ ಅರಣ್ಯ ಇಲಾಖೆಗೆ ಈ ಭೂಮಿ ಹೆಚ್ಚಿನ ಹಕ್ಕಿದೆ. ದೇವಸ್ಥಾನ ಇರುವ ಜಾಗ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ಉಳಿದಿದೆ.
ಎರಡು ದಶಕದ ಹಿಂದೆ ತಲಕಾಡಿನಲ್ಲಿ ಅರಣ್ಯ ಇಲಾಖೆ ಭಾರೀ ಬದಲಾವಣೆ ಯೋಜನೆಗೆ ಮುಂದಡಿ ಇಟ್ಟಿತು. ಅಲ್ಲಿ ಗ್ರಾಮ ಅರಣ್ಯ ಸಮಿತಿಯನ್ನು ರಚಿಸಿ ಸ್ಥಳೀಯರನ್ನು ಸೇರಿಸಿಕೊಂಡು ಯೋಜನೆ ಹಾಕಿಕೊಂಡಿತು. ಜೈಕಾ ಎನ್ನುವ ಜಪಾನ್ ನೆರವಿನ ಯೋಜನೆಯಡಿ ಗಿಡ ಬೆಳೆಸುವ ಯೋಜನೆಗೆ ಈ ಪ್ರದೇಶ ಒಳಪಟ್ಟಿತ್ತು. ಶತಮಾನಗಳ ಪರಂಪತೆ, ಐತಿಹ್ಯ ಇರುವ ನಮ್ಮೂರು ಬೆಳೆಯುತ್ತದೆ ಎನ್ನುವ ಆಶಯದಿಂದ ಸ್ಥಳೀಯರು ಅರಣ್ಯ ಇಲಾಖೆಗೆ ಕೈ ಜೋಡಿಸಿದರು. ನಿಸರ್ಗ ಧಾಮ ಎನ್ನುವ ಹೆಸರು ನೀಡಿ ಇಡೀ ಪ್ರದೇಶವನ್ನು ಅರಣ್ಯ ಇಲಾಖೆ ಅಭಿವೃದ್ದಿಪಡಿಸಲು ಮುಂದಾಯಿತು. ಪ್ರವಾಸೋದ್ಯಮ ಚಟುವಟಕೆಗಳಿಗೆ ಒಂದಷ್ಟು ಸ್ಪಷ್ಟ ರೂಪ ನೀಡುವ ಪ್ರಯತ್ನಗಳಾದವು. ತಪ್ಪದ ವಿಹಾರ, ಅಲ್ಲಲ್ಲಿ ಪರಗೋಲಗಳು. ಶೌಚಾಲಯ, ಸ್ನಾನ ಮಾಡಿದವರಿಗೆ ಬಟ್ಟೆ ಬದಲಾಯಿಸುವ ಕಟ್ಟಡ ನಿರ್ಮಾಣಗೊಂಡವು. ನದಿ ತೀರದಲ್ಲೂ ಜನ ಹೆಚ್ಚು ಬಂದು ಮುಕ್ತವಾಗಿ ಸಮಯ ಕಳೆಯ ತೊಡಗಿದರು. ತಲಕಾಡಿಗೂ ನಾವು ದಿನದ ಮಟ್ಟಿಗೆ ಹೋಗಿರಬಹುದು. ದೇಗುಲ, ವನ, ಗಿರಿ ಹಾಗೂ ನದಿ ಇರುವ ಸ್ಥಳವಿದು ಎಂದು ಬಿಂಬಿಸಿದ್ದರಿಂದ ಜನರೂ ಹೆಚ್ಚು ಬರತೊಡಗಿದರು.
ಕರ್ನಾಟಕದಲ್ಲಿ ಹಲವು ಗ್ರಾಮ ಅರಣ್ಯ ಸಮಿತಿಗಳಿದ್ದರೂ ಯಶಸ್ವಿಯಾಗಿದ್ದ ಕೆಲವೇ ಅರಣ್ಯ ಪ್ರದೇಶಗಳಲ್ಲಿ ತಲಕಾಡು ಒಂದು ಎನ್ನುವ ಮಟ್ಟಿಗೆ ಇದು ಬೆಳೆಯಿತು. ಅರಣ್ಯ ಇಲಾಖೆ ಇಲ್ಲಿ ಪ್ರತಿ ವರ್ಷ ಸಾಮಾಜಿಕ ಅರಣ್ಯದ ಹೆಸರಿನಲ್ಲಿ ಇಲ್ಲಿ ಸಸಿ ನೆಡುತ್ತದೆ. ಆದರೆ ಮರಗಳು ಎಷ್ಟಾಗಿವೆ ಎನ್ನುವುದನ್ನು ಇಲ್ಲಿ ಹುಡುಕಬೇಕು. ಗ್ರಾಮ ಅರಣ್ಯ ಸಮಿತಿಯನ್ನೂ ರದ್ದು ಮಾಡಲಾಯಿತು. ಅರಣ್ಯ ಇಲಾಖೆಯ ವರ್ಷದ ಆದಾಯ ಹಾಗೂ ಗಿಡ ನೆಡುವುದಕ್ಕೆ ಈ ಭಾಗದ ಅರಣ್ಯವನ್ನೇ ಬಳಸಿಕೊಳ್ಳಲಾಯಿತು. ಈಗಲೂ ಇಲ್ಲಿ ಅರಣ್ಯ ಇಲಾಖೆಯಿಂದ ವಾಹನಗಳ ಪ್ರವೇಶ ಶುಲ್ಕವನ್ನು ಪಡೆಯಲಾಗುತ್ತದೆ. ನಿತ್ಯ ನೂರಾರು ವಾಹನ ಇಲ್ಲಿಗೆ ಬರುತ್ತವೆ. ವಾರಾಂತ್ಯ ಹಾಗೂ ರಜೆ ದಿನದಲ್ಲಿ ಇದು ಮೂರು ಪಟ್ಟು ಹೆಚ್ಚುತ್ತದೆ. ಅರಣ್ಯ ಇಲಾಖೆ ಇಲ್ಲಿ ಸುಂಕ ವಸೂಲಿ ಹೆಸರಿನಲ್ಲಿ ಆದಾಯ ಪಡೆಯುತ್ತಿದೆ.ಪ್ರಗತಿ ಮಾತ್ರ ಏನೂ ಇಲ್ಲ. ಪ್ರಗತಿ ಅರಣ್ಯ ಇಲಾಖೆ ಇಡೀ ಪರಿಸರವನ್ನು ಚೆನ್ನಾಗಿಡಲು ಸೋತಿದೆ. ಪರಿಸರ ಪಾಠ ಮಾಡುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಲ್ಲಿನ ಪರಿಸರ ಚೆನ್ನಾಗಿಡಲು ಆಗಿಲ್ಲ. ಎಲ್ಲೆಲ್ಲೂ ಪ್ಲಾಸ್ಟಿಕ್, ಬಾಟೆಲ್ಗಳು, ಬಟ್ಟೆಯ ತ್ಯಾಜ್ಯಗಳು ಕಸದ ರಾಶಿಯನ್ನೇ ಸೃಷ್ಟಿಸಿವೆ.ಪ್ರವಾಸಿಗರು ಕುಳಿತುಕೊಳ್ಳಲೂ ಪರಗೋಲ ನಿರ್ಮಿಸಿದ್ದೂ ಒಂದ ನಿರ್ವಹಣೆಯಿಲ್ಲ. ಶೌಚಾಲಯಗಳಂತೂ ಗಬ್ಬೆದ್ದು ನಾರುತ್ತಿವೆ.ಬಟ್ಟೆ ಬದಲಿಸುವ ಕೊಠಡಿಗಳು ಶೌಚಾಲಯದ ಮನೆಗಳಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಇಡೀ ವಾತಾವರಣವನ್ನು ಹಾಳು ಮಾಡಿದ್ದಾರೆ.
ಅರಣ್ಯ ಇಲಾಖೆಗೆ ಇಲ್ಲಿ ಇನ್ನೊಂದು ರೂಪದ ಆದಾಯವಿದೆ. ಅದು ತೆಪ್ಪಗಳದ್ದು. ನೂರಕ್ಕೂ ಹೆಚ್ಚು ತೆಪ್ಪಗಳಿದ್ದರು ಕೆಲವೇ ಜನರಿಗೆ ಇಲ್ಲಿ ಸೇವೆ ಕೊಡುತ್ತವೆ. ಈ ಆದಾಯವೂ ಅರಣ್ಯಗೆ ಹೋಗುತ್ತದೆ. ಇಲ್ಲಿ ಸುರಕ್ಷತೆ ಎನ್ನುವುದು ಕಿಂಚಿತ್ತೂ ಇಲ್ಲ. ಒಬ್ಬೊಬ್ಬರಿಂದ ನೂರು ರೂ. ಪಡೆದರೂ ಸುರಕ್ಷತೆಯ ಜಾಕೆಟ್ ಆಗಲಿ ಇಲ್ಲ. ತೆಪ್ಪ ಹಾಕುವವರು ನಾಲ್ಕಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ತೆಪ್ಪ ಓಡಿಸುತ್ತಾರೆ. ಅವರ ಮೇಲೆ ಭಾರ ಹಾಕಿಯೇ ಪ್ರವಾಸಿಗರು ತೆಪ್ಪ ಏರುತ್ತಾರೆ. ಇಲ್ಲಿಯೂ ಅರಣ್ಯ ಇಲಾಖೆಯದ್ದು ಗುತ್ತಿಗೆದಾರರಿಂದ ಆದಾಯ ಪಡೆದರೆ ಮುಗಿದು ಹೋಯಿತು.
ಅರಣ್ಯ ಇಲಾಖೆಯು ಇದೇ ಪರಿಸರದಲ್ಲಿ ಹೊಟೇಲ್, ಚಹಾ ಅಂಗಡಿಗಳು, ಹಣ್ಣಿನ ಗಾಡಿಗಳಿಗೆ ಅವಕಾಶ ಮಾಡಿದೆ. ಇಲ್ಲಿಯೂ ವಾರ್ಷಿಕ ಆದಾಯವಿದೆ. ಅವುಗಳಿಗೂ ಒಂದು ವ್ಯವಸ್ಥಿತ ಮಾರ್ಗ, ಸ್ಥಳವಿಲ್ಲ. ಇರುವ ಮರಳಿನಲ್ಲೇ ಅರಣ್ಯ ಇಲಾಖೆಗೆ ವಾರ್ಷಿಕ ನೆಲಬಾಡಿಗೆ ಕೊಟ್ಟು ಬದುಕುವ ಸ್ಥಿತಿಯಿದೆ.
ಪ್ರಾಕೃತಿಕ ತಾಣ, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾವೇರಿ ನದಿ ತಾಣ ನಿಜಕ್ಕೂ ಚೆನ್ನಾಗಿದೆ. ತಲಕಾಡು ನೈಸರ್ಗಿಕ ಧಾಮವೇ. ಆದರೆ ಇಷ್ಟು ಕೆಟ್ಟದಾಗಿ ನಿರ್ವಹಣೆ ಮಾಡುತ್ತಾರೆ. ಸ್ವಚ್ಚತೆಯಂತೂ ಮರೀಚಿಕೆಯಾಗಿ ಹೋಗಿದೆ. ಮಲ, ಮೂತ್ರ ವಿಸರ್ಜನೆ ಎಲ್ಲೆಂದರಲ್ಲಿ, ನದಿ ತೀರವೂ ಕಸಮಯವಾಗಿದೆ. ನಿರ್ವಹಣೆಯಲ್ಲಿ ಅರಣ್ಯ ಇಲಾಖೆ ಸಂಪೂರ್ಣ ಸೋತಿದೆ. ಕೊಡಗಿನಲ್ಲಿ ಇರುವಷ್ಟೂ ವ್ಯವಸ್ಥೆ ತಲಕಾಡಿನಲ್ಲಿ ಇಲ್ಲ ಎಂದು ಪ್ರವಾಸಿಗರು ಬೇಸರದಿಂದಲೇ ಹೇಳುತ್ತಾರೆ.
ಭಾರತದಲ್ಲಿ ವಿಭಿನ್ನ ಭಾಗದಲ್ಲಿ ದ್ವಾದಶ ಲಿಂಗಗಳಿವೆ. ಅವುಗಳ ವೀಕ್ಷಣೆಗೆ ಭಕ್ತರು ಸಾವಿರಾರು ರೂ. ಖರ್ಚು ಮಾಡಿಕೊಂಡು ಹೋಗಿ ಬರುತ್ತಾರೆ. ಅಷ್ಟು ಮಹತ್ವವನ್ನು ಆ ಲಿಂಗಗಳಿಗೆ ನೀಡಲಾಗಿದೆ. ಅದರೆ ಐದಾರು ಕಿ.ಮಿ ವ್ಯಾಪ್ತಿಯಲ್ಲಿ ಪಂಚ ಲಿಂಗಗಳು ಇರುವ, ಕಾವೇರಿ ನದಿ ತೀರ, ಅದೂ ಜನ ಕುಟುಂಬದೊಂದಿಗೆ ದಿನ ಕಳೆಯಬಲ್ಲ ಕಾವೇರಿ ಒಡಲಿದೆ. ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವೂ ಪಂಚಲಿಂಗ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಸೌಂದರ್ಯವೂ ಮನಮೋಹಕ. ನೂರಾರು ವರ್ಷಗಳ ಇತಿಹಾಸ ಇರುವ ಇಂತಹ ತಾಣವನ್ನು ಪ್ರವಾಸಿ ತಾಣವಾಗಿ ರೂಪಿಸಲು ಅರಣ್ಯ ಇಲಾಖೆ ಜತೆಗೆ ಪ್ರವಾಸೋದ್ಯಮ ಇಲಾಖೆಯೂ ವಿಫಲವಾಗಿದೆ. ಸರ್ಕಾರ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಇಚ್ಚಾಶಕ್ತಿಯನ್ನು ತೋರಿಸಿಲ್ಲ. ತಲಕಾಡು ಇತಿಹಾಸದಂತೆ ಈ ಭಾಗದ ಹಲವು ಸಾಧಕರ ಊರು ಹೌದು. ನ್ಯಾಯಮೂರ್ತಿ ಟಿ.ಜಿ.ಶಿವಶಂಕರಗೌಡ ಅವರಂತೂ ತಲಕಾಡು ಅಭಿವೃದ್ದಿಯಾಗಲೇಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಅವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾಗಿದ್ದ ತಲಕಾಡಿನ ದಾಸೇಗೌಡರಿಗೆ ಊರಿನ ಮೇಲೆ ಇದ್ದ ಅಭಿಮಾನ ಅಷ್ಟಿಷ್ಟಲ್ಲ. ಅವರು ಇರುವವರೆಗೂ ಊರ ಅಭಿವೃದ್ದಿಗೆ ಅವಿರತ ಶ್ರಮ ಹಾಕುತ್ತಲೇ ಇದ್ದರು. ಖ್ಯಾತ ನಿರ್ದೇಶಕ ನಾಗಾಭರಣ ಇದೇ ಊರಿನವರು.ಹಲವರ ಪ್ರಯತನಕ್ಕೆ ಫಲವೇ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಬೇಸರವಂತೂ ಇದೆ.
ತಲಕಾಡು ಗಂಗರು, ಚೋಳರು, ಮೈಸೂರು ಒಡೆಯರು ಆಳಿದ ಊರು. ಹೊಯ್ಸಳರ ನಂಟು ಕೂಡ ಇದೆ. ಮೈಸೂರು ಮಹಾರಾಜರ ಕುಟುಂಬದ ಮೇಲೆ ಮಾಲಂಗಿಯ ಅಲಮೇಲಮ್ಮ ನೀಡಿದ ಶಾಪ, ಇಲ್ಲಿನ ಮರಳಿನೊಂದಿಗೆ ತಳುಕು ಹಾಕಿಕೊಂಡಿದೆ. ಇಷ್ಟೆಲ್ಲಾ ಇದ್ದಾಗ್ಯೂ ಅರಣ್ಯ ಇಲಾಖೆಗೆ ಬರೀ ಆದಾಯ ಬೇಕು. ಪ್ರವಾಸೋದ್ಯಮ, ಪರಂಪರೆ ಇಲಾಖೆಗಳಿಗೆ ಇವೆಲ್ಲವೂ ಕನಿಷ್ಟ ಎನ್ನುವ ಭಾವನೆಗಳು ಇದ್ದಂತಿದೆ.
ದಶಕದ ಹಿಂದೆ ಪ್ರವಾಸೋದ್ಯಮ ಹಾಗೂ ಅರಣ್ಯ ಸಚಿವರಾಗಿದ್ದ ಸಿ.ಪಿ. ಯೋಗೇಶ್ವರ್ ಅವರು ಇಲ್ಲಿಗೆ ಬಂದು ತಲಕಾಡು ಅಭಿವೃದ್ದಿಗೆ ಪ್ರತ್ಯೇಕ ಪ್ರಾಧಿಕಾರ ರೂಪಿಸಿ ಪ್ರವಾಸೋದ್ಯಮ ಅಭಿವೃದ್ದಿ ಭರವಸೆ ನೀಡಿದ್ದರು. ಅದೇನೂ ಆಗಲೇ ಇಲ್ಲ. ಈಗ ತಿ.ನರಸೀಪುರ ಕ್ಷೇತ್ರದಿಂದಲೇ ಆರು ಬಾರಿ ಶಾಸಕ, ನಾಲ್ಕು ಬಾರಿ ಸಚಿವರಾಗಿ ತಲಕಾಡು ಭಾಗ ಸೇರಿದ ನಂತರ ಮೂರನೇ ಬಾರಿ ಶಾಸಕರಾಗಿರುವ ಡಾ.ಮಹದೇವಪ್ಪ ಅವರ ನೆಲೆಯಲ್ಲೂ ತಲಕಾಡು ಬರೀ ಮರಳ ನಾಡು ಎನ್ನಿಸಿದಂತಿದೆ. ಅವರೂ ಪ್ರಯತ್ನ ಮಾಡಿಲ್ಲ.
ತಲಕಾಡಿಗೆ ಬಂದರೆ ಇಲ್ಲಿ ತಂಗಲು ಕೊಠಡಿಗಳಿಲ್ಲ. ಊಟಕ್ಕೂ ವ್ಯವಸ್ಥೆಗಳಿಲ್ಲ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಇಲ್ಲಿಗೆ ಬರುವ ಪ್ರವಾಸಿಗರು ಸೌಲಭ್ಯ ಚೆನ್ನಾಗಿಲ್ಲ. ಅಲ್ಲಿ ಉಳಿಯಲು ಆಗದು ಎನ್ನುವ ಭಾವನೆಯಲ್ಲೇ ಹೋಗುತ್ತಾರೆ. ಅರಣ್ಯ ಇಲಾಖೆ ಭೂಮಿ ತನ್ನ ಸುಪರ್ದಿಗೆ ಪಡೆದು ಮೀಸಲು ಅರಣ್ಯ ರೂಪ ಪಡೆದು ಸರ್ಕಾರದ ಸೂಚನೆ ನಂತರವೂ ನೀಲಗಿರಿ ಮರಗಳನ್ನು ಉಳಿಸಿಕೊಂಡು ನೈಸರ್ಗಿಕ ರೂಪದಲ್ಲೇ ವ್ಯವಸ್ಥೆಗಳಿಲ್ಲದೇ ದಿನ ಕಳೆಯುತ್ತದೆ. ಊರಿನ ಹಲವರ ದನಿ ಸರ್ಕಾರಕ್ಕೂ ತಲುಪಿಲ್ಲ. ಇನ್ನು ಯಾರಿಗೆ ಹೇಳುವುದು ಹೇಳಿ ಎಂದು ತಲಕಾಡಿನ ಹಿರಿಯರು, ಪ್ರವಾಸೋದ್ಯಮ ಚಟುವಟಿಕೆ ಆಶಾದಾಯಕವಾಗಿ, ಪರಿಸರ ಸ್ನೇಹಿಯಾಗಿ ಆಗಲಿ ಎಂದು ಬಯಸುತ್ತಿರುವ ಆನಂದ ದೀಕ್ಷಿತ್ ಹೇಳುತ್ತಾರೆ.
ಸ್ಥಳೀಯ ಶಾಸಕರು, ಸಂಸದರ ಆಸಕ್ತಿ ಮುಖ್ಯವಾಗಿ ಅರಣ್ಯ ಹಾಗೂ ಪ್ರವಾಸೋದ್ಯಮ ಸಚಿವರ ಸಮನ್ವಯದೊಂದಿಗೆ ತಲಕಾಡು ಅಭಿವೃದ್ದಿ ಪ್ರಾಧಿಕಾರದ ಸ್ವರೂಪದಲ್ಲಿ ಪ್ರಗತಿಗೆ ಅವಕಾಶವಿದೆ. ಇಲ್ಲದೇ ಇದರೆ ಕಾವೇರಿ ಹೊಳೆ ಹರಿಯುತ್ತಲೇ ಇರುತ್ತದೆ. ಅರಣ್ಯ ಇಲಾಖೆ ಬರೀ ಪ್ರವೇಶ ಶುಲ್ಕ ವಸೂಲಿ ಮಾಡಿಕೊಂಡೇ ಕೂರಬೇಕಾಗುತ್ತದೆ. ಕೊನೆಗೆ ಇಲ್ಲಿ ಪ್ರವಾಸಿಗರು ಬರುತ್ತಲೇ ಕಸದ ರಾಶಿ ದೊಡ್ಡದಾಗುತ್ತಲೇ ಇರುತ್ತದೆ. ತಲಕಾಡಿನ ಇತಿಹಾಸ, ಮಹತ್ವ ಮಾತ್ರ ಮರಳಡಿಯಲ್ಲಿಯೇ ಹುದುಗಿ ಹೋಗಬೇಕಾಗುತ್ತದೆ.
- ಕುಂದೂರು ಉಮೇಶಭಟ್ಟ, ಮೈಸೂರು