Parenting Program: ರಕ್ತ ಸಂಬಂಧಿಕರಲ್ಲಿ ಮದುವೆ ಆದರೆ ಹುಟ್ಟುವ ಮಕ್ಕಳ ಮೇಲೆ ಪರಿಣಾಮ; ಎಚ್ಚರವಹಿಸಲು ಡಿಮ್ಹಾನ್ಸ್ನ ಡಾ.ಮಹೇಶ ದೇಸಾಯಿ ಸಲಹೆ
Parenting Program: ರಕ್ತಸಂಬಂಧಿಕರಲ್ಲಿ ಮದುವೆಯಾದಲ್ಲಿ ಹುಟ್ಟುವ ಮಕ್ಕಳು ವಿಕಲಚೇತನ ಹೊಂದುವ ಸಾಧ್ಯತೆಗಳು ಹೆಚ್ಚು ಇದನ್ನು ಕಡಿಮೆ ಮಾಡಬೇಕು ಎಂದು ಡಿಮ್ಹಾನ್ಸ್ ನಿರ್ದೇಶಕ ಡಾ.ಮಹೇಶ ದೇಸಾಯಿ ಸಲಹೆ ನೀಡಿದರು.
ಧಾರವಾಡ: ರಕ್ತಸಂಬಂಧಿಕರಲ್ಲಿ ಮದುವೆಯಾದಲ್ಲಿ ಹುಟ್ಟುವ ಮಕ್ಕಳು ವಿಕಲಚೇತನ ಹೊಂದುವ ಸಾಧ್ಯತೆಗಳು ಹೆಚ್ಚು ಇದನ್ನು ಕಡಿಮೆ ಮಾಡಬೇಕು ಎಂದು ಡಿಮ್ಹಾನ್ಸ್ ನಿರ್ದೇಶಕ ಡಾ.ಮಹೇಶ ದೇಸಾಯಿ ಸಲಹೆ ನೀಡಿದರು.
ಟ್ರೆಂಡಿಂಗ್ ಸುದ್ದಿ
ಅವರು ಮಂಗಳವಾರ, “ಅಭಿವೃದ್ದಿ ಕುಂಠಿತ ಮಕ್ಕಳ ಪಾಲಕರಿಗೆ ಸಾಮರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರ"ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗರ್ಭಿಣಿಯರು ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ವೈದ್ಯರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನ್ನು ಪಡೆದುಕೊಳ್ಳಬೇಕು. ವಿಶೇಷಚೇತನ ಮಕ್ಕಳಿಗೆ ಅಪಸ್ಮಾರ ರೋಗ ಅಥವಾ ಬೇರೆ ಕಾಯಿಲೆಗಳಿದ್ದಲ್ಲಿ ಸೂಕ್ತ ಚಿಕಿತ್ಸೆಯನ್ನು ತಜ್ಞವೈದ್ಯರಿಂದ ಕೊಡಿಸಬೇಕು ಎಂದು ತಿಳಿಸಿದರು.
ಡಿಮ್ಹಾನ್ಸ್ ಸಂಸ್ಥೆಯಿಂದ ವಿಶೇಷಚೇತನ ಮಕ್ಕಳ ಪಾಲಕರಿಗೆ ಹಲವಾರು ಕಾರ್ಯಾಗಾರಗಳನ್ನು ಈಗಾಗಲೇ ಮಾಡಲಾಗಿದೆ ಮತ್ತು ಇಂತಹ ಕಾರ್ಯಾಗಾರಗಳಿಗೆ ಡಿಮ್ಹಾನ್ಸ್ ಸಂಸ್ಥೇಯು ಬೇರೆ ಬೇರೆ ಸ್ವಯಂ ಸೇವಾಸಂಸ್ಥೆಗಳ ಬೆಂಬಲವನ್ನು ತೆಗೆದುಕೊಳ್ಳುತ್ತಿದ್ದು ಇದು ಸಮುದಾಯದಲ್ಲಿ ಉತ್ತಮವಾಗಿ ಸಂಸ್ಥೆಯು ಕೆಲಸ ಮಾಡುವಲ್ಲಿ ಸಹಾಯಕವಾಗುತ್ತಿದೆ ಎಂದು ತಿಳಿಸಿದರು.
ಅರಿಲ್ ಅಸೋಸಿಯಶನ್ ಆಫ್ ರೂರಲ್ ಆ್ಯಂಡ ಅರ್ಬನ್ ಡೆವಲಪ್ಮೆಂಟ್ (ಆರೂಡ), ಅಕ್ಷರ ಕಿಡ್ಸ್ ಸಮನ್ವಯ ಶಿಕ್ಷಣ ಮಕ್ಕಳ ಶೀಘ್ರಪತ್ತೆ ಹಚ್ಚುವಿಕೆ ಚಟುವಟಕೆ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಎಪಿಡಿ ಬೆಂಗಳೂರು, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ, ಧಾರವಾಡ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಪ್ರೊಫೆಷನಲ್ ಸೋಶಿಯಲ್ ವರ್ಕ ಅಸೋಸಿಯೇಷನ್ (ರಿ) ಕರ್ನಾಟಕ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಇವರ ಸಹಯೋಗದಲ್ಲಿ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮಂಗಳವಾರ ʻಅಭಿವೃದ್ದಿ ಕುಂಠಿತ ಮಕ್ಕಳ ಪಾಲಕರಿಗೆ ಸಾಮರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರʼ ವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯಅತಿಥಿ ಬಸವರಾಜ ಬೇಳಾರ ಎಂ.ಆರ್.ಡಬ್ಲೂ ಧಾರವಾಡ ಇವರು, ವಿಕಲಚೇತನರಿಗೆ ದೊರಯುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ವೇದಿಕೆಯ ಕಾರ್ಯಕ್ರಮದ ನಂತರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಕು.ಶ್ವೇತಾ ಉಕ್ಕೋಜಿಕರ್ ಎಪಿಡಿ, ಬೆಳಗಾವಿ ಇವರು ಮಕ್ಕಳಲ್ಲಿ ವಿಕಲಚೇತನವನ್ನು ಶೀಘ್ರಪತ್ತೆ ಹಾಗೂ ಪುನರ್ವಸತಿ ಬಗ್ಗೆ ಮಾಹಿತಿ ನೀಡಿ ತದನಂತರ ವಿವಿಧ ಚಟುವಟಿಕೆಗಳನ್ನು ಪ್ರಾತ್ಯಾಕ್ಷಿಕವಾಗಿ ತಿಳಿಸಿಕೊಟ್ಟರು.
ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಮಾಜಕಾರ್ಯಕರ್ತ ಅಶೋಕ ಕೋರಿ ಯವರು ವಿಕಲಚೇತನ ಮಕ್ಕಳ ಪಾಲಕರ ಮನೋಸಾಮಾಜಿಕ ಸಮಸ್ಯೆಗಳು ಮತ್ತು ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟನ್ ಹಿರಿಯ ವ್ಯವಸ್ಥಾಪಕ ಡಾ.ಮೋಹನ್ಕುಮಾರ ಥಂಭದ ಇವರು ಉಪಶಮನ ಆರೈಕೆ (ಪ್ಯಾಲಿಯೇಟಿವ್ ಕೇರ್) ಅಂದರೇನು ಮತ್ತು ಅದರ ಪ್ರಯೋಜನೆಗಳನ್ನು ಪಡೆದುಕೊಳ್ಳುವದರ ಬಗ್ಗೆ ತಿಳಿಸುತ್ತಾ ಬೆಂಬಲಿತ ಗುಂಪುಗಳನ್ನು ರಚನೆ ಮಾಡುವುದು ಹಾಗೂ ಅದರ ಪ್ರಯೋಜನೆಗಳ ಕುರಿತು ವಿಷಯ ಮಂಡನೆ ಮಾಡಿದರು.
ಆರೋಡ ಸಂಸ್ಥೆಯ ನಾಗರಾಜ ಹೂಗಾರ ಇವರು ವಿಕಲಚೇತನರಿಗೆ ಇರುವ ಸಾಮಾಜಿಕ ಭದ್ರತೆ ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸಿದರು.
ಡಾ.ಸರಸ್ವತಿ ಟಿ, ಈರಣ್ಣ ಬಾರಕೇರ್, ಗಾಯಿತ್ರಿ ಶಿಂಧೆ, ಮಹದೇವ ತಹಶಿಲ್ದಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕು.ಯಶೋಧಾ ಮತ್ತು ಸ್ವಾತಿ ಪ್ರಾರ್ಥಿಸಿದರು. ಅಶೋಕ ಕೋರಿ ಕಾಯ್ರಕ್ರಮ ನಿರೂಪಿಸಿದರು. ನಾಗರಾಜ ಹೂಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳಾ ವಂದಿಸಿದರು.