ಕನ್ನಡ ಸುದ್ದಿ  /  Karnataka  /  Patriotic Muslims Must Make Sure Their Children Not To Involve In Anti Social Activities Urges Ks Eshwarappa

KS Eshwarappa: ʼದೇಶಭಕ್ತ ಮುಸಲ್ಮಾನರೇ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇರಲಿ..ʼ: ಕೆಎಸ್ ಈಶ್ವರಪ್ಪ ಸಲಹೆ!‌

ಪಿಎಫ್‌ಐ, ಎಸ್‌ಡಿಪಿಐ ರಾಷ್ಟ್ರದ್ರೋಹಿ ಸಂಘಟನೆಗಳಾಗಿದ್ದು, ದೇಶಭಕ್ತ ಮುಸಲ್ಮಾನರು ತಮ್ಮ ಮಕ್ಕಳು ಈ ಸಂಘಟನೆಗಳತ್ತ ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಸಲಹೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ ಈಶ್ವರಪ್ಪ, ನಿಮ್ಮ ಮಕ್ಕಳ ತಲೆಗೆ ಮೂಲಭೂತವಾದ ಹೋಗದಂತೆ ನೋಡಿಕೊಳ್ಳಿ ಎಂದು ಮುಸ್ಲಿಂ ಪೋಷಕರಿಗೆ ಮನವಿ ಮಾಡಿದರು.

ಕೆಎಸ್‌ ಈಶ್ವರಪ್ಪ (ಸಂಗ್ರಹ ಚಿತ್ರ)
ಕೆಎಸ್‌ ಈಶ್ವರಪ್ಪ (ಸಂಗ್ರಹ ಚಿತ್ರ) (HT_PRINT)

ಶಿವಮೊಗ್ಗ: ಪಿಎಫ್‌ಐ, ಎಸ್‌ಡಿಪಿಐ ರಾಷ್ಟ್ರದ್ರೋಹಿ ಸಂಘಟನೆಗಳಾಗಿದ್ದು, ದೇಶಭಕ್ತ ಮುಸಲ್ಮಾನರು ತಮ್ಮ ಮಕ್ಕಳು ಈ ಸಂಘಟನೆಗಳತ್ತ ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಸಲಹೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ ಈಶ್ವರಪ್ಪ, ನಿಮ್ಮ ಮಕ್ಕಳ ತಲೆಗೆ ಮೂಲಭೂತವಾದ ಹೋಗದಂತೆ ನೋಡಿಕೊಳ್ಳಿ ಎಂದು ಮುಸ್ಲಿಂ ಪೋಷಕರಿಗೆ ಮನವಿ ಮಾಡಿದರು.

ರಾಷ್ಟ್ರ ಭಕ್ತ ಮುಸಲ್ಮಾನರು ತಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಅವರು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಬೆಳೆಸುತ್ತಾರೆ. ಕೊಲೆ, ಸುಲಿಗೆ ಮುಂತಾದ ಸಮಾಜವಿರೋಧಿ ಕೃತ್ಯದಲ್ಲಿ ಭಾಗಿಯಾಗುತ್ತಾರೆ. ಕೊನೆಗೆ ಜೈಲು ಸೇರಿ ತಮ್ಮ ಬಾಳು ಹಾಳು ಮಾಡಿಕೊಳ್ಳುತ್ತಾರೆ ಎಂದು ಕೆಎಸ್‌ ಈಶ್ವರಪ್ಪ ಎಚ್ಚರಿಸಿದರು.

ಪಿಎಫ್‌ಐ, ಎಸ್‌ಡಿಪಿಐ ಮುಂತಾದ ಸಮಾಜಘಾತ ಸಂಘಟನೆಗಳು, ಮುಸ್ಲಿಂ ಯುವಕರನ್ನು ಭಯೋತ್ಪದಕ ಸಂಘಟನೆ ಐಸಿಸ್‌ನತ್ತ ಆಕರ್ಷಿತವಾಗುವಂತೆ ಮಾಡುತ್ತಿವೆ. ಈ ಬಗ್ಗೆ ಮುಸ್ಲಿಂ ಸಮುದಾಯದ ಹಿರಿಯರು ಎಚ್ಚರಿಕೆ ವಹಿಸಬೇಕು. ಮುಸ್ಲಿಂ ಯುವಕರು ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ ಎಂದು ಈಶ್ವರಪ್ಪ ಸ್ಷಷ್ಟಪಡಿಸಿದರು.

‌ಉದ್ಯೋಗವಿಲ್ಲದ ಕಾರಣಕ್ಕೆ ಮುಸ್ಲಿಂ ಯುವಕರು ದುಷ್ಕೃತ್ಯಕ್ಕೆ ಇಳಿಯುತ್ತಿದ್ದಾರೆ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ. ಹಾಗಾದರೆ ಕೇವಲ ಮುಸ್ಲಿಂ ಸಮುದಾಯದ ಯುವಕರಿಗೆ ಮಾತ್ರ ಉದ್ಯೋಗವಿಲ್ಲವೇ? ಬೇರೆ ಸಮುದಾಯದ ಯುವಕರು ಈ ರೀತಿಯ ಕೃತ್ಯಗಳಲ್ಲಿ ಏಕೆ ಭಾಗಿಯಾಗುವುದಿಲ್ಲ? ಈ ಕುರಿತು ಮುಸ್ಲಿಂ ಸಮಾಜ ಗಂಭೀರವಾಗಿ ಚಿಂತಿಸಬೇಕಲ್ಲವೇ? ಎಂದು ಈಶ್ವರಪ್ಪ ಮಾರ್ಮಿಕವಾಗಿ ಪ್ರಶ್ನಿಸಿದರು. ಜೈಲಿಗೆ ಹೋಗಿ ಬಂದಿರುವ ನಲಪಾಡ್‌ನಂತವರನ್ನು ಕಾಂಗ್ರೆಸ್‌ ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿರುವುದೇ ದುರಂತ ಎಂದು ಈಶ್ವರಪ್ಪ ಕಿಡಿಕಾರಿದರು.

ಮುಸಲ್ಮಾನರು ತಮ್ಮ ಮನಸ್ಥಿತಿ ಬದಲಾಯಿಸಿಕೊಂಡು ರಾಷ್ಟ್ರಭಕ್ತರಾಗಬೇಕು. ರಾಷ್ಟ್ರದ್ರೋಹಿಗಳಿಗೆ ಬುದ್ದಿ ಹೇಳುವ ಕೆಲಸವನ್ನು ಮುಸ್ಲಿಂ ಸಮುದಾಯದ ಹಿರಿಯರು ಮಾಡಬೇಕು. ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳತ್ತ ನಿಮ್ಮ ಮಕ್ಕಳು ಆಕರ್ಷಿತರಾಗದಂತೆ ತಡೆಯಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ಇನ್ನು ಕಾಂಗ್ರೆಸ್‌ನ ಪೇಸಿಎಂ ಅಭಿಯಾನದ ಬಗ್ಗೆ ಕಿಡಿಕಾರಿದ ಈಶ್ವರಪ್ಪ, ಮುಖ್ಯಮಂತ್ರಿ ವಿರುದ್ಧ ಇಂತಹ ಹೀನ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು. 40 ಪರ್ಸೆಂಟ್‌ ಕಮಿಷನ್‌ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಒದಗಿಸದ ಕಾಂಗ್ರೆಸ್‌, ಖಾಲಿ ಡಬ್ಬ ಅಲ್ಲಾಡಿಸುತ್ತಾ ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ ನಾಯಕರ ಮಾತು ಕೇಳಲು ರಾಜ್ಯದ ಜನ ಮೂರ್ಖರಲ್ಲ ಎಂದು ಈಶ್ವರಪ್ಪ ಗುಡುಗಿದರು.

40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡುತ್ತಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ತಮ್ಮ ಬಳಿ ಸಾಕ್ಷ್ಯಧಾರವಿದ್ದರೆ ಮೊದಲು ಅದನ್ನು ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಕೇವಲ ಪ್ರಚಾರಕ್ಕಾಗಿ ಪೇಸಿಎಂ ಅಭಿಯಾನ ಹಮ್ಮಿಕೊಂಡರೆ ಅದರಿಂದ ಏನೂ ಪ್ರಯೋಜನವಿಲ್ಲ ಎಂದು ಕೆಎಸ್‌ ಈಶ್ವರಪ್ಪ ಇದೇ ವೇಳೆ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ವತಿಯಿಂದ ಅ. 30ರಂದು ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಅ.9 ರಂದು ಹುಬ್ಬಳ್ಳಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆ ನಡೆಯಲಿದೆ. ಸಮಾವೇಶದ ಯಶಸ್ಸಿಗಾಗಿ 5 ತಂಡ ರಚಿಸಲಾಗಿದ್ದು, 224 ವಿಧಾನಸಭಾ ಕ್ಷೇತ್ರಗಳಿಂದಲೂ ಸುಮಾರು 3 ಸಾವಿರ ಹಿಂದುಳಿದ ವರ್ಗದ ಪ್ರಮುಖ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅ.30ರ ಕಲಬುರಗಿ ಸಮಾವೇಶದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಈಶ್ವರಪ್ಪ ಇದೇ ವೇಳೆ ಮಾಹಿತಿ ನೀಡಿದರು.

ವಿಭಾಗ