ಕನ್ನಡ ಸುದ್ದಿ  /  Karnataka  /  Personality Development: Education Is The Root Of Personality Said Prajna Mattihalli In Wednesday Webinar Jnaana Deepa Svym

Personality development: ವ್ಯಕ್ತಿತ್ವದ ಸಸಿಗೆ ಶಿಕ್ಷಣವೇ ಮೂಲಗೊಬ್ಬರ- ಪ್ರಜ್ಞಾ ಮತ್ತಿಹಳ್ಳಿ

Personality development: ಕಿತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಹಾಯಕ ಉಪನ್ಯಾಸಕಿ ಪ್ರಜ್ಞಾ ಮತ್ತಿಹಳ್ಳಿ ಅವರು ಬುಧವಾರ (ಫೆ.8), Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ಆನ್‌ಲೈನ್‌ ವೆಬಿನಾರಿನಲ್ಲಿ ʻವ್ಯಕ್ತಿತ್ವ ರೂಪಿಸುವುದೇ ಶಿಕ್ಷಣʼ ಎಂಬ ವಿಷಯವನ್ನು ನಿರೂಪಿಸಿದರು.

ಜ್ಞಾನದೀಪ ವೆಬಿನಾರಿನಲ್ಲಿ ಮಕ್ಕಳು ತಮ್ಮ ತಮ್ಮ ಮನೆಗಳಿಂದ ಪಾಲ್ಗೊಂಡ ವಿಭಿನ್ನ ನೋಟ
ಜ್ಞಾನದೀಪ ವೆಬಿನಾರಿನಲ್ಲಿ ಮಕ್ಕಳು ತಮ್ಮ ತಮ್ಮ ಮನೆಗಳಿಂದ ಪಾಲ್ಗೊಂಡ ವಿಭಿನ್ನ ನೋಟ

ಧಾರವಾಡ: ವ್ಯಕ್ತಿತ್ವವೆಂಬುದು ವ್ಯಕ್ತಿಯನ್ನು ಪ್ರಮಾಣಿಸುವ ಅಳತೆಗೋಲು ಎಂದು ಕಿತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಹಾಯಕ ಉಪನ್ಯಾಸಕಿ ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.

ಅವರು ಬುಧವಾರ (ಫೆ.8), Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ಆನ್‌ಲೈನ್‌ ವೆಬಿನಾರಿನಲ್ಲಿ ʻವ್ಯಕ್ತಿತ್ವ ರೂಪಿಸುವುದೇ ಶಿಕ್ಷಣʼ ಎಂಬ ವಿಷಯವನ್ನು ನಿರೂಪಿಸಿದರು.

ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಬುಧವಾರ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ವೆಬಿನಾರ್‌ಗಳನ್ನು ಸಂಘಟಿಸುತ್ತಿದೆ.

ವ್ಯಕ್ತಿತ್ವ ಎಂಬುದು ವ್ಯಕ್ತಿಯನ್ನು ಪ್ರಮಾಣಿಸುವ ಅಳತೆಗೋಲು ಎಂದರೆ ತಪ್ಪಾಗಲಾರದು. ಅಂತಹ ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ನಿರಂತರ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಬ್ಬ ವ್ಯಕ್ತಿಯ ಜೀವನದ ರೀತಿಯನ್ನು ನಿರೂಪಿಸುವ ಅಥವಾ ಪ್ರತಿಪಾದಿಸುವ ದೈಹಿಕ ಮತ್ತು ಮಾನಸಿಕ ಅಂಶಗಳ ಕ್ರೋಢಿಕೃತ ವ್ಯವಸ್ಥೆಯೇ ವ್ಯಕ್ತಿತ್ವವಾಗಿದೆ ಎಂಬುದನ್ನು ತಿಳಿಯಪಡಿಸಿದರು.

ವ್ಯಕ್ತಿತ್ವದ ಸ್ವರೂಪವನ್ನು ಎರಡು ರೀತಿಯಲ್ಲಿ ಕಾಣಬಹುದು.ಒಂದು ಬಾಹ್ಯ ವ್ಯಕ್ತಿತ್ವ, ಇನ್ನೊಂದು ಆಂತರಿಕ ವ್ಯಕ್ತಿತ್ವ. ಬಾಹ್ಯ ವ್ಯಕ್ತಿತ್ವವು ಆಂಗಿಕ ಭಾಷೆ, ಸಂವಹನ ಮತ್ತು ವರ್ತನೆಯಂತಹ ಅಂಶಗಳನ್ನು ಒಳಗೊಂಡಿದ್ದು, ಆಂತರಿಕ ಅಂಶಗಳ ತಳಹದಿಯ ಮೇಲೆ ನಿರ್ಮಾಣವಾಗುವಂತಹುದಾಗಿದೆ.

ಆಂತರಿಕ ಅಂಶವು ಆಲೋಚನೆ, ಭಾವನೆ ಮತ್ತು ಧೋರಣೆಗಳಂತಹ ಅಂಶಗಳಿಂದ ರೂಪುಗೊಂಡಿದ್ದು ಬಾಹ್ಯ ವ್ಯಕ್ತಿತ್ವದ ಅನುಷ್ಠಾನಕ್ಕೆ ಸೈದ್ಧಾಂತಿಕ ನಿಲುವನ್ನು ಒದಗಿಸುತ್ತದೆ. ಅಂದರೆ, ಬಾಹ್ಯ ವ್ಯಕ್ತಿತ್ವಕ್ಕೆ ಪೂರಕವಾದ ಅಂಶಗಳನ್ನು ಇದು ವೃದ್ಧಿಸುತ್ತದೆ. ಇಂತಹ ಉತ್ತಮ ಅಂಶಗಳನ್ನು ಒಳಗೊಂಡ ಒಂದು ಉತ್ತಮ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಅದು ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರಜ್ಞಾ ಮತ್ತಿಹಳ್ಳಿ ಪ್ರತಿಪಾದಿಸಿದರು.

ವ್ಯಕ್ತಿತ್ವ ರೂಪಿಸುವ ಶಿಕ್ಷಣವನ್ನು ಪಠ್ಯದಲ್ಲಿಯೇ ಅಳವಡಿಸಿ ಬೋಧಿಸುವುದು ಕಷ್ಟಸಾಧ್ಯ. ಅದನ್ನು ಶಿಕ್ಷಕರು ಸಂದರ್ಭೋಚಿತ ಅಂಶಗಳೊಂದಿಗೆ ಪಠ್ಯದ ಜತೆಜತೆಗೆ ಬೋಧಿಸುವುದರಿಂದ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಲು ಸಾಧ್ಯವಾಗುವುದು ಎಂಬುದನ್ನು ಪ್ರಜ್ಞಾ ಮತ್ತಿಹಳ್ಳಿ ತಿಳಿಸಿಕೊಟ್ಟರು.

ಸರಿ ತಪ್ಪುಗಳ ವಿವೇಚನೆಗೆ ಒಳಪಟ್ಟು, . ಭೂತಕಾಲದ ವಿಶ್ಲೇಷಣೆಯೊಂದಿಗೆ ಭವಿಷ್ಯದ ಕುರಿತು ಒಂದು ಪೂರ್ವ ನಿರ್ಧರಿತ ಉತ್ತಮ ಯೋಜನೆಯೊಂದನ್ನು ರೂಪಿಸಿ ನಿರಂತರ ಶ್ರಮ ವಹಿಸುವ ಆಲೋಚನೆಯು ನಮ್ಮದಾಗಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆದ್ದರಿಂದ ಮಕ್ಕಳು ಈ ನಿಟ್ಟಿನಲ್ಲಿ ಕಾರ್ಯಮಗ್ನರಾಗಬೇಕು ಎಂಬುದನ್ನು ಮಾರ್ಮಿಕವಾಗಿ ಅವರು ತಿಳಿಸಿದರು.

ಒಂದೆಡೆ, ವಿಶ್ವ ಕುಟುಂಬ, ದೇಶಭಕ್ತಿ, ರಾಷ್ಟ್ರಪ್ರೇಮ, ಸಮನ್ವಯತೆಯಂತಹ ಭಾವನೆಗಳನ್ನು, ಇನ್ನೊಂದೆಡೆ, ನಾನು ನನ್ನ ಕನಸು, ಮಾನವಿಯತೆ, ಕರುಣೆ, ಪ್ರೀತಿ, ಸಹಬಾಳ್ವೆಯಂತಹ ಭಾವನೆಗಳನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವದ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಬಹುದು. ವ್ಯಕ್ತಿತ್ವದ ಕುಡಿಯ ಬೆಳವಣಿಗೆಗೆ ಶಿಕ್ಷಣವೆಂಬುದು ಮೂಲ ಗೊಬ್ಬರವಿದ್ದಂತೆ, ಒಳ್ಳೆಯ ಧೋರಣೆಗಳನ್ನು , ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ನಮ್ಮದಾಗಿಸಿಕೊಂಡು ರಾಷ್ಟ್ರದ ಪ್ರಗತಿಯಲ್ಲಿ ನಾವೆಲ್ಲರೂ ಭವಿಷ್ಯದ ಸಂಪನ್ಮೂಲ ವ್ಯಕ್ತಿಗಳಾಗೋಣ ಎಂದು ಅವರು ಹೇಳಿದರು.

ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 514 ವಿದ್ಯಾರ್ಥಿಗಳು ಮತ್ತು 728 ವಿದ್ಯಾರ್ಥಿನಿಯರು ಸೇರಿದಂತೆ 1242 ಮಕ್ಕಳು ಪಾಲ್ಗೊಂಡರು.

IPL_Entry_Point