ದೆಹಲಿ ವಿಮಾನ ಹತ್ತಿದ ಬಿವೈ ವಿಜಯೇಂದ್ರ-ಯತ್ನಾಳ್‌ ಬಣ; ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ರಾಜಕೀಯ
ಕನ್ನಡ ಸುದ್ದಿ  /  ಕರ್ನಾಟಕ  /  ದೆಹಲಿ ವಿಮಾನ ಹತ್ತಿದ ಬಿವೈ ವಿಜಯೇಂದ್ರ-ಯತ್ನಾಳ್‌ ಬಣ; ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ರಾಜಕೀಯ

ದೆಹಲಿ ವಿಮಾನ ಹತ್ತಿದ ಬಿವೈ ವಿಜಯೇಂದ್ರ-ಯತ್ನಾಳ್‌ ಬಣ; ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ರಾಜಕೀಯ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ದೆಹಲಿ ತಲುಪಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ವರಿಷ್ಠರ ಭೇಟಿಯಾಗಿ ತಮ್ಮ ತಮ್ಮ ಬೇಡಿಕೆ ಇಡುವುದು ಬಹುತೇಕ ಖಚಿತ. ರಾಜಧಾನಿಯಲ್ಲಿ ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆ ನಡೆಯಲಿದೆ.

ದೆಹಲಿ ವಿಮಾನ ಹತ್ತಿದ ಬಿವೈ ವಿಜಯೇಂದ್ರ-ಯತ್ನಾಳ್‌; ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ರಾಜಕೀಯ
ದೆಹಲಿ ವಿಮಾನ ಹತ್ತಿದ ಬಿವೈ ವಿಜಯೇಂದ್ರ-ಯತ್ನಾಳ್‌; ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ರಾಜಕೀಯ

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಬಹಿರಂಗವಾಗಿದ್ದು ಹೊಸ ವಿಷಯವೇನಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ಪ್ರತ್ಯೇಕ ಬಣ ರೂಪುಗೊಂಡಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ನೇತೃತ್ವದ ಬಣ ಮತ್ತೊಮ್ಮೆ ದೆಹಲಿ ಯಾತ್ರೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ರಾಘವೇಂದ್ರ ಕೆಳಗಿಳಿಸಿ ನೂತನ ಅಧ್ಯಕ್ಷರ ನೇಮಕಕ್ಕೆ ಯತ್ನಾಳ್‌ ಬಣ ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಯತ್ನಾಳ್‌ ದೆಹಲಿಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮದೇ ಪಕ್ಷದ ನಾಯಕರ ಅಸಮಾಧಾನವು ವಿಜಯೇಂದ್ರ ನಿದ್ದೆಗೆಡಿಸಿದೆ. ತಮ್ಮ ಕುರ್ಚಿ ಉಳಿಸಿಕೊಳ್ಳುವ ಜತೆಗೆ, ಪಕ್ಷದ ಆಂತರಿಕ ಅಸಮಾಧಾನ ಶಮನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ವಿಜಯೇಂದ್ರ ಮತ್ತು ಯತ್ನಾಳ್‌ ಇಬ್ಬರೂ ಕೇಂದ್ರ ಸಚಿವ ಸೋಮಣ್ಣ ಮನೆ ಪೂಜೆಯ ನೆಪದಲ್ಲಿ ದೆಹಲಿ ತಲುಪಿದ್ದಾರೆ. ಅಲ್ಲಿ ವರಿಷ್ಠರ ಭೇಟಿಯಾಗಿ ತಮ್ಮ ತಮ್ಮ ಬೇಡಿಕೆ ಇಡುವುದು ಬಹುತೇಕ ಖಚಿತ.

ಕೆಲವು ದಿನಗಳ ಹಿಂದಷ್ಟೇ ಯತ್ನಾಳ್‌ ಬಣದ ನಾಯಕರು ದೆಹಲಿಗೆ ಹೋಗಿ ಬಂದಿದ್ದರು. ಅದರ ಬೆನ್ನಲ್ಲೇ ಮತ್ತೊಮ್ಮೆ ಹೈಕಮಾಂಡ್‌ ಭೇಟಿಯ ಪ್ರಯತ್ನ ನಡೆದಿದೆ. ದೆಹಲಿಗೆ ತೆರಳುವ ಮುನ್ನ ಯತ್ನಾಳ್‌ ಬಣದ ನಾಯಕರು ಭಾನುವಾರ (ಫೆ.9) ಸಭೆ ಸೇರಿದ್ದರು. ತಮ್ಮ ಮುಂದಿನ ನಡೆಗಳು ಹಾಗೂ ನಿಲುವಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ನಾನು ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಸಿಎಂ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ

ನಾನು ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ. ಅಲ್ಲದೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ. ಕೇಂದ್ರ ಸಚಿವ ವಿ. ಸೋಮಣ್ಣ‌ ಅವರ ಗೃಹಪ್ರವೇಶಕ್ಕೆ ಹೋಗುತ್ತಿದ್ದು, ರಾಷ್ಟ್ರೀಯ ನಾಯಕರ ಭೇಟಿಗೆ ಪ್ರಯತ್ನ ಮಾಡುತ್ತೇವೆ ಎಂದು ಯತ್ನಾಳ್‌ ಹೇಳಿದ್ದಾರೆ.

ಅತ್ತ ವಿಜಯೇಂದ್ರ ದೆಹಲಿ ಯಾತ್ರೆಯ ಬಗ್ಗೆ ಭಿನ್ನ ರಾಗಗಳಿವೆ. ಪಕ್ಷದ ವರಿಷ್ಠರ ಕರೆಗೆ ಓಗೊಟ್ಟು ರಾಜ್ಯಾಧ್ಯಕ್ಷ ರಾಷ್ಟ್ರ ರಾಜಧಾನಿಗೆ ಹೋಗಿರುವುದು ಬಹುತೇಕ ಸ್ಪಷ್ಟ. ಆದರೆ, ಅವರು ಖಾಸಗಿ ಕಾರ್ಯಕ್ರಮ ನಿಮಿತ್ತ ಹೋಗಿದ್ದಾರೆ ಎಂದು ರಾಘವೇಂದ್ರ ಆಪ್ತ ವಲಯ ಹೇಳುತ್ತಿದೆ. ಚಿತ್ರದುರ್ಗಕ್ಕೆ ತೆರಳಬೇಕಿದ್ದ ರಾಘವೇಂದ್ರ, ಕೊನೆಯ ಕ್ಷಣದಲ್ಲಿ ಯೋಜನೆ ಬದಲಾಯಿಸಿ ದೆಹಲಿ ವಿಮಾನ ಹತ್ತಿದ್ದಾರೆ. ಅಲ್ಲಿ ವರಿಷ್ಠರನ್ನು ಭೇಟಿಯಾಗದೆ ಮರಳುವುದಂತೂ ದೂರದ ಮಾತು.

ದೆಹಲಿಯಲ್ಲಿ ಕರ್ನಾಟಕ ರಾಜಕೀಯ

ಅತ್ತ ಯತ್ನಾಳ್‌, ಇತ್ತ ರಾಘವೇಂದ್ರ, ಎರಡೂ ಬಣವೂ ದೆಹಲಿಗೆ ತೆರಳಿದ್ದು ಆಸಕ್ತಿ ಹೆಚ್ಚಿಸಿದೆ. ಎರಡೂ ಬಣಗಳ ನಾಯಕರು ದೆಹಲಿ ವರಿಷ್ಠರನ್ನೇ ಭೇಟಿಯಾಗುತ್ತಿರಯವುದು, ಏನೆಲ್ಲಾ ಬೆಳವಣಿಗೆ ನಡೆಯಲಿದೆ ಎಂಬುದು ಸಹಜವಾಗಿ ಕುತೂಹಲ ಮೂಡಿಸಿದೆ. ಇಂದು ಎಲ್ಲಾ ರಾಜಕೀಯ ಬೆಳವಣಿಗೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner