Hassan Scandal; ಪ್ರಜ್ವಲ್ ರೇವಣ್ಣ ಜರ್ಮನಿಗೆ?, ಎಸ್ಐಟಿ ಅವರನ್ನು ವಾಪಸ್ ಕರೆತರುವುದು ಹೇಗೆ, ಭಾರತ ಜರ್ಮನಿ ಹಸ್ತಾಂತರ ಒಪ್ಪಂದದ 5ಮುಖ್ಯಾಂಶ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದು, ಎಸ್ಐಟಿ ವಿಚಾರಣೆಗೆ ಕರೆದರೆ ಬರುತ್ತಾರೆ ಎಂದು ಅವರ ಅಪ್ಪ ಹೆಚ್ ಡಿ ರೇವಣ್ಣ ನಿನ್ನೆ (ಏಪ್ರಿಲ್ 30) ಹೇಳಿದ್ದರು. ಎಸ್ಐಟಿ ಅವರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತೆ ಎಂದು ಗೃಹ ಸಚಿವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ, ಭಾರತ - ಜರ್ಮನಿ ಹಸ್ತಾಂತರ ಒಪ್ಪಂದದ 5 ಮುಖ್ಯಾಂಶಗಳ ವಿವರ ಹೀಗಿದೆ.
ಬೆಂಗಳೂರು: ಅಶ್ಲೀಲ ವಿಡಿಯೋ ಬಹಿರಂಗ ಮತ್ತು ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗುತ್ತಿದ್ದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿರುವುದು ಈಗ ಖಚಿತವಾಗಿದೆ. ಇದನ್ನು ಅವರ ಅಪ್ಪ ಹೆಚ್ ಡಿ ರೇವಣ್ಣ ಖಚಿತಪಡಿಸಿದ್ದಾರೆ. ಈ ನಡುವೆ, ಈ ಎರಡೂ ಕೇಸ್ಗಳಿಗೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಬೇಕು ಎಂದು ಕರ್ನಾಟಕ ಸರ್ಕಾರ ರಚಿಸಿರುವ ಎಸ್ಐಟಿ ಇಬ್ಬರಿಗೂ ನೋಟಿಸ್ ಜಾರಿಗೊಳಿಸಿದೆ.
ಈ ನೋಟಿಸ್ ಪ್ರಕಾರ ಇಂದು ಪ್ರಜ್ವಲ್ ರೇವಣ್ಣ ಮತ್ತು ಅವರ ಅಪ್ಪ ಹೆಚ್ ಡಿ ರೇವಣ್ಣ ವಿಚಾರಣೆಗೆ ಹಾಜರಾಗಬೇಕು. ಆದರೆ, ಪ್ರಜ್ವಲ್ ಪರ ವಕೀಲರು ಸಮಯಾವಾಕಾಶ ಕೇಳಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಈ ನಡುವೆ, ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಪ್ರಜ್ವಲ್ ವಿದೇಶಕ್ಕೆ ಹೋಗಿದ್ದರೆ ಅಲ್ಲಿಂದ ವಾಪಸ್ ಕರೆತರುವ ಕೆಲಸವನ್ನು ಎಸ್ಐಟಿ ಮಾಡಲಿದೆ ಎಂದು ಹೇಳಿದ್ದರು.
ಈ ವಿಚಾರದ ಹಿನ್ನೆಲೆಯಲ್ಲಿ ಗಮನಿಸುವಾಗ, ಭಾರತದಲ್ಲಿ ಅಪರಾಧ ಕೃತ್ಯವೆಸಗಿ ಜರ್ಮನಿಗೆ ಪರಾರಿಯಾದವರನ್ನು ವಾಪಸ್ ಕರೆತರುವ ಒಪ್ಪಂದ ಭಾರತ-ಜರ್ಮನಿ ನಡುವೆ ಇದೆಯೇ ಎಂಬ ಪ್ರಶ್ನೆ, ಅನುಮಾನ ಕಾಡುವುದು ಸಹಜ. ಭಾರತ ಮತ್ತು 48 ರಾಷ್ಟ್ರಗಳ ನಡುವೆ ಗಡಿಪಾರು ಒಪ್ಪಂದ ಚಾಲ್ತಿಯಲ್ಲಿದೆ. ಇದಲ್ಲದೆ, ಇನ್ನೂ 12 ರಾಷ್ಟ್ರಗಳ ಜೊತೆಗೆ ಇಂತಹ ಒಪ್ಪಂದ ಇದೆ.
ಭಾರತ- ಜರ್ಮನಿ ಗಡಿಪಾರು ಒಪ್ಪಂದದ ಅಂಶಗಳಿವು
ಭಾರತದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಈ ಹಿಂದೆ ನೀಡಿರುವ ಮಾಹಿತಿ ಪ್ರಕಾರ, ಉಭಯ ದೇಶಗಳು ರಾಜತಾಂತ್ರಿಕ ಮಾರ್ಗದಲ್ಲೇ ಹಸ್ತಾಂತರ ಅಥವಾ ಗಡಿಪಾರು ಪ್ರಕ್ರಿಯೆ ಜರುಗಿಸಬೇಕು. ಭಾರತ- ಜರ್ಮನಿ ಗಡಿಪಾರು ಒಪ್ಪಂದದ ಪ್ರಮುಖ ಅಂಶಗಳಿವು.
1) ಭಾರತ- ಜರ್ಮನಿ ಗಡಿಪಾರು ಒಪ್ಪಂದದ ಪ್ರಕಾರ, ಹಸ್ತಾಂತರಿಸಬಹುದಾದ ಅಪರಾಧಗಳು ಎರಡೂ ರಾಜ್ಯಗಳ ಕಾನೂನುಗಳ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತವೆ ಮತ್ತು ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗುತ್ತವೆ.
2) ಹಸ್ತಾಂತರಿಸಬಹುದಾದ ಅಪರಾಧವನ್ನು ಒಪ್ಪಿಸುವ ಪ್ರಯತ್ನ ಅಥವಾ ಪಿತೂರಿಗೆ ಸಂಬಂಧಿಸಿ ಹಸ್ತಾಂತರವನ್ನು ನೀಡಲಾಗುವುದು.
3) ರಾಜಕೀಯ ಕಾರಣಕ್ಕೆ ಹಸ್ತಾಂತರ ಕೇಳುವಂತೆ ಇಲ್ಲ. ಕೇಳಿದರೂ ಹಸ್ತಾಂತರಿಸಲೇ ಬೇಕು ಎಂಬ ನಿಯಮ ಇಲ್ಲ. ಎರಡೂ ದೇಶಗಳಲ್ಲಿ ಒಪ್ಪಿತವಾಗಿರುವ ನಿಯಮಗಳಿಗೆ ಅನುಸಾರವಾಗಿ ಗಡಿಪಾರು ಒಪ್ಪಂದ ಚಾಲ್ತಿಯಲ್ಲಿರುತ್ತದೆ.
4) ಉಭಯ ರಾಷ್ಟ್ರಗಳ ನಡುವಿನ ಸಹಕಾರವು ಅಪರಾಧಗಳ ಸವಾಲು ಎದುರಿಸಲು ಗಡಿಪಾರು/ಹಸ್ತಾಂತರ ಒಪ್ಪಂದ ಸಹಾಯ ಮಾಡುತ್ತದೆ. ಇದು ವಿಶೇಷವಾಗಿ ಭಯೋತ್ಪಾದಕ ಅಪರಾಧಗಳಂತಹ ಘೋರ ಅಪರಾಧಗಳಿಗೆ ಅನ್ವಯವಾಗುತ್ತದೆ.
5) ಆಯಾ ದೇಶಗಳ ಪೌರರನ್ನು ಒಪ್ಪಂದ ಮಾಡಿಕೊಂಡ ದೇಶಕ್ಕೆ ಗಡಿಪಾರು ಮಾಡುವುದಕ್ಕೆ ಅವಕಾಶ ಇಲ್ಲ. ಉದಾಹರಣೆಗೆ ಜರ್ಮನಿಯ ಪೌರನನ್ನು ಭಾರತಕ್ಕೆ, ಭಾರತದ ಪೌರನನ್ನು ಜರ್ಮನಿಗೆ ಗಡಿಪಾರು ಮಾಡುವಂತೆ ಇಲ್ಲ.
ಭಾರತ- ಜರ್ಮನಿ ಗಡಿಪಾರು ಒಪ್ಪಂದದ ಹಿನ್ನೆಲೆ
ಭಾರತದ ಜೊತೆಗೆ ಗಡಿಪಾರು ಒಪ್ಪಂದ ಮಾಡಿಕೊಂಡ ಯುರೋಪ್ ಒಕ್ಕೂಟದ ಎರಡನೇ ದೇಶ ಜರ್ಮನಿ. ಭಾರತ ಮತ್ತು ಜರ್ಮನಿ ನಡುವೆ 2001 ರ ಜೂನ್ 27 ರಂದು ಈ ಒಪ್ಪಂದ ಏರ್ಪಟ್ಟಿತು. ಭಾರತದ ಪರವಾಗಿ ಅಂದಿನ ಕೇಂದ್ರ ಗೃಹ ಸಚಿವ ಎಲ್.ಕೆ.ಅಡ್ವಾಣಿ ಮತ್ತು ಜರ್ಮನಿಯ ಫೆಡರಲ್ ಸಚಿವ ಡಾ.ಹೆರ್ಟಾ ಡಬ್ಲರ್-ಗ್ಮೆಲಿನ್ ಅವರು ಗಡಿಪಾರು ಒಪ್ಪಂದ/ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಮೂಲಕ "ಹಸ್ತಾಂತರಿಸಬಹುದಾದ ಅಪರಾಧಗಳಲ್ಲಿ" ಬೇಕಾಗಿರುವ ವ್ಯಕ್ತಿಯನ್ನು ಹಸ್ತಾಂತರಿಸಲು ಎರಡು ದೇಶಗಳಿಗೆ ಅವಕಾಶ ಸಿಕ್ಕಂತಾಗಿದೆ.
1998 ರಲ್ಲಿ ಭಾರತದ ರಾಷ್ಟ್ರಪತಿ ಕೆ ಆರ್ ನಾರಾಯಣನ್ ಅವರು ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಬೇಕಾಗಿತ್ತು. ಆದರೆ, ಜರ್ಮನಿಯ ಸಾಂವಿಧಾನಿಕ ನ್ಯಾಯಾಲಯದ 'ಡೇಟಾ ಪ್ರೊಟೆಕ್ಷನ್' ಕುರಿತ ತೀರ್ಪಿನ ಕಾರಣ ಈ ಒಪ್ಪಂದ ಮುಂದೂಡಲ್ಪಟ್ಟಿತ್ತು. ಪರಿಣಾಮ ಜರ್ಮನಿಯವರು ತಮ್ಮ ಅಸ್ತಿತ್ವದಲ್ಲಿರುವ ಮತ್ತು ಪ್ರಸ್ತಾವಿತ ಹಸ್ತಾಂತರ ಒಪ್ಪಂದಗಳ ನಿಯಮಗಳನ್ನು ಪರಿಷ್ಕರಿಸಬೇಕಾಗಿತ್ತು, ಡೇಟಾ ಮತ್ತು ಗೌಪ್ಯತೆ ರಕ್ಷಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ಸೇರಿಸಿತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.