Praveen Nettar murder case: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಆರು ಆರೋಪಿಗಳ ಪತ್ತೆಗೆ 19 ಲಕ್ಷ ರೂಪಾಯಿ ಇನಾಮು ಘೋಷಣೆ
Praveen Nettar murder case: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ನಡುವೆ, ಆರೋಪಿಗಳ ಪತ್ತೆಗೆ ಲುಕ್ ಔಟ್ ನೋಟಿಸ್ ಕೂಡ ಜಾರಿಯಾಗಿದೆ. ಈಗ ಆರು ಆರೋಪಿಗಳ ಪತ್ತೆ ಒಟ್ಟು 19 ಲಕ್ಷ ರೂಪಾಯಿ ಇನಾಮು ಘೋಷಣೆ ಆಗಿದೆ.
ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ -ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ನಡುವೆ, ಆರೋಪಿಗಳ ಪತ್ತೆಗೆ ಲುಕ್ ಔಟ್ ನೋಟಿಸ್ ಕೂಡ ಜಾರಿಯಾಗಿದೆ. ಈಗ ಆರು ಆರೋಪಿಗಳ ಪತ್ತೆ ಒಟ್ಟು 19 ಲಕ್ಷ ರೂಪಾಯಿ ಇನಾಮು ಘೋಷಣೆ ಆಗಿದೆ.
ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ಪ್ರಕರಣದ ತನಿಖೆ ನಡೆಸುತಿದ್ದು, ಎರಡು ಹಂತದಲ್ಲಿ ಆರೋಪಿಗಳ ಪತ್ತೆಗೆ ಇನಾಮು ಘೋಷಿಸಿದೆ. ಮೊದಲ ಹಂತದಲ್ಲಿ ನಾಲ್ವರು ಆರೋಪಿಗಳ ಪತ್ತೆಗೆ 14 ಲಕ್ಷ ರೂಪಾಯಿ ಬಹುಮಾನವನ್ನು ಎನ್ಐಎ ಪ್ರಕಟಿಸಿತ್ತು. ಈಗ ಎರಡನೇ ಹಂತದಲ್ಲಿ ಇನ್ನಿಬ್ಬರು ಆರೋಪಿಗಳ ವಿವರ ನೀಡಿ, ಅವರ ಪತ್ತೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ನಿಷೇಧಿತ ಪಿಎಫ್ಐ ಕಾರ್ಯಕಾರಿ ಸಮಿತಿ ಸದಸ್ಯ ಬಂಟ್ವಾಳ ತಾಲೂಕು ಕೊಡಾಜೆಯ ಮಹಮ್ಮದ್ ಷರೀಫ್ (48) ಹಾಗೂ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯ ಮಸೂದ್ ಎಂಬಾತನ ಪತ್ತೆಗೆ ಸುಳಿವು ಒದಗಿಸುವಂತೆ ಎನ್ಐಎ ಪತ್ರಿಕಾ ಹೇಳಿಕೆ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದೆ. ಸುಳಿವು ನೀಡಿ ಬಂಧನಕ್ಕೆ ನೆರವು ಒದಗಿಸಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅದು ಹೇಳಿದೆ.
ಮೊದಲ ಹಂತದಲ್ಲಿ ನಾಲ್ವರು ಆರೋಪಿಗಳ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಪೈಕಿ ಮೂವರು ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯವರು. ಇನ್ನೊಬ್ಬ ಕೊಡಗು ಜಲ್ಲೆಯವನು. ಅವರ ಪತ್ತೆ, ಬಂಧನಕ್ಕೆ ನೆರವಾದವರಿಗೆ 14 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಎನ್ಐಎ ಘೋಷಿಸಿತ್ತು. ಆದರೆ ಇದುವರೆಗೆ ಅವರ ಪತ್ತೆಯಾಗಿಲ್ಲ. ಮೊಹಮ್ಮದ್ ಮುಸ್ತಾಫಾ (5 ಲಕ್ಷ ರೂ.) ಈತ ಸುಳ್ಯ ತಾಲೂಕು ಬೆಳ್ಳಾರೆ ಬೂಡುಮನೆ ನಿವಾಸಿ. ತುಫೈಲ್ (5 ಲಕ್ಷ ರೂ.). ಈತ ಮಡಿಕೇರಿಯ ಗದ್ದಿಗೆ ನಿವಾಸಿ. ಉಮರ್ ಫಾರೂಕ್ (2 ಲಕ್ಷ ರೂಪಾಯಿ)- ಈತ ಸುಳ್ಯದ ಕಲ್ಲುಮುಟ್ಲು ನಿವಾಸಿ. ಅಬೂಬಕರ್ ಸಿದ್ಧಿಕ್ (2 ಲಕ್ಷ ರೂಪಾಯಿ) - ಈತ ಸುಳ್ಯ ತಾಲೂಕು ಬೆಳ್ಳಾರೆ ನಿವಾಸಿ. ಇವರು ನಾಲ್ವರು ಆ ಆರೋಪಿಗಳು. ಸುಳಿವು ನೀಡಿದ ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿಡುವುದಾಗಿ ಎನ್ಐಎ ಭರವಸೆ ನೀಡಿದೆ.
ಹಿನ್ನೆಲೆ: ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ನಡೆಸುತ್ತಿದ್ದರು. ವ್ಯಾಪಾರ ಮುಗಿಸಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಮೇಲೆ ಮಾರಾಕಾಸ್ತ್ರಗಳಿಂದ ಏಕಾಕಿ ದಾಳಿ ನಡೆಸಿ ಹತ್ಯೆ ಮಾಡಿದ್ದರು.
ದಕ್ಷಿಣ ಕನ್ನಡ ಬಿಜೆಪಿ ಯುವ ನೇತಾರ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ಬೆಳ್ಳಾರೆಯ ಅವರ ಕೋಳಿ ಅಂಗಡಿ ಸಮೀಪವೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೇ ಬಿಜೆಪಿ ಯುವಮೋರ್ಚಾ ಸಿಡಿದೆದ್ದಿತ್ತು. ಈ ಪ್ರಕರಣವನ್ನು ಎನ್ಐಎ ತನಿಖೆಗೆ ನಡೆಸುತ್ತಿದ್ದು, ಇದುವರೆಗೆ 14ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ. ಉಳಿದ ಆರೋಪಿಗಳಿಗೆ ಶೋಧ ಮುಂದುವರಿದಿದೆ.