ಕನ್ನಡ ಸುದ್ದಿ  /  Karnataka  /  Psi Recruitment Scam: Psi Recruitment Scam Cid Arrests Supriya Hundekar Who Got 1st Rank In Psi Recruitment Exam

PSI Recruitment Scam: ಪಿಎಸ್‌ಐ ನೇಮಕಾತಿ ಹಗರಣ- ಪರೀಕ್ಷೇಲಿ ಫಸ್ಟ್‌ ರ‍್ಯಾಂಕ್ ಪಡೆದಿದ್ದ ಸುಪ್ರಿಯಾ ಬಂಧನ; ಬಂಧಿತರ ಸಂಖ್ಯೆ 52ಕ್ಕೆ ಏರಿಕೆ

PSI Recruitment Scam: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಸುಪ್ರಿಯಾ ಈಗ ಸಿಐಡಿ ಪೊಲೀಸರ ವಶದಲ್ಲಿದ್ದಾರೆ. ಈಕೆಯನ್ನು ಬಂಧಿಸಿರುವ ಪೊಲೀಸರು, ಇನ್ನೊಬ್ಬ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.

ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣ (ಸಾಂಕೇತಿಕ ಚಿತ್ರ)
ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣ (ಸಾಂಕೇತಿಕ ಚಿತ್ರ)

ಕಲಬುರಗಿ: ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣ (PSI Recruitment Scam) ಕ್ಕೆ ಸಂಬಂಧಿಸಿ ಪರೀಕ್ಷೆಯಲ್ಲಿ ಫಸ್ಟ್‌ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಸುಪ್ರಿಯಾ ಹುಂಡೇಕರ್‌ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪಿಎಸ್​ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಇದುವರೆಗೆ 52 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯಲ್ಲಿ 8 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದೆ. ಕರ್ನಾಟಕ ಸರ್ಕಾರವು 2021ರ ಅಕ್ಟೋಬರ್‌ನಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿಗಾಗಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಹಿಪ್ಪರಗಾ ಗ್ರಾಮದ ಸುಪ್ರೀಯಾ ಹುಂಡೇಕರ್‌ ಅವರು ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆದ ಆರೋಪ ಎದುರಿಸುತ್ತಿದ್ದಾರೆ. ಆಕೆ ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಫಸ್ಟ್‌ ರ‍್ಯಾಂಕ್ ಪಡೆದಿದ್ದಾರೆ. ಸುಪ್ರಿಯಾ ಅವರ ವಿಚಾರಣೆಯ ಬಳಿಕ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಇತರರ ಮಾಹಿತಿ ಲಭ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಸಿಐಡಿ ಪೊಲೀಸರು.

ಸುಪ್ರಿಯಾ ಅವರು ಕಲಬುರಗಿಯ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದರು. ಅವರು 1ನೇ ಪತ್ರಿಕೆಯಲ್ಲಿ 50ಕ್ಕೆ 24, 2ನೇ ಪತ್ರಿಕೆಯಲ್ಲಿ 150ಕ್ಕೆ 131.25 ಅಂಕ ಪಡೆದಿದ್ದರು. ಎರಡೂ ಪತ್ರಿಕೆಗಳಿಂದ ಒಟ್ಟು 155.25 ಅಂಕ ಪಡೆದಿದ್ದ ಸುಪ್ರಿಯಾ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ಆಯ್ಕೆಯಾಗಿದ್ದರು.

ಹೀಗಾಗಿ, ಈ ಹಗರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಇನ್ನೊಬ್ಬ ಆರೋಪಿಯ ಬಂಧನಕ್ಕಾಗಿ ಶೋಧ ಮುಂದವರಿಸಿದೆ.

ಇದುವರೆಗೆ ಏನೇನಾಯಿತು?

ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಈವರೆಗೆ 52 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಸರ್ಕಾರವು ಅಕ್ಟೋಬರ್ 2021ರಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿಗಾಗಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು. 54,041 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಇದಾದ ಬಳಿಕ, ಅಭ್ಯರ್ಥಿಗಳಿಂದ ಲಂಚ ಪಡೆದಿರುವ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರದ ಸಿಬ್ಬಂದಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಒತ್ತಡ ಹೆಚ್ಚಾಗಿ, ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಆದೇಶ ನೀಡಿತ್ತು.

ತನಿಖೆಯ ಆರಂಭದಲ್ಲಿ ಸಿಐಡಿ ಪೊಲೀಸರು, ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ಅನೇಕರನ್ನು ಬಂಧಿಸಿದ್ದರು. ಪೊಲೀಸ್‌ ಅಧಿಕಾರಿಗಳೂ ಇದರಲ್ಲಿ ಷಾಮೀಲಾಗಿರುವುದು ಖಚಿತವಾಗಿ ಅವರ ಬಂಧನವೂ ಆಯಿತು. ನೇಮಕಾತಿ ವಿಭಾಗದ ಎಡಿಜಿಪಿ, ಐಪಿಎಸ್ ಅಧಿಕಾರಿ ಅಮೃತ್‌ಪಾಲ್ ಅವರ ಬಂಧನ-ವಿಚಾರಣೆ ನಡೆಯಿತು. ಹಾಗೆಯೇ, ಸೇಡಂ ಪಟ್ಟಣದ ವೀರೇಶ್ ಎಂಬ ವಿದ್ಯಾರ್ಥಿಯ ವಿಚಾರಣೆಯ ಸಂದರ್ಭದಲ್ಲಿ ಹಗರಣದ ಹಲವು ಮಹತ್ವದ ಅಂಶಗಳು ಬಹಿರಂಗವಾದವು.

ಅಕ್ರಮದ ಕೇಂದ್ರ ಜ್ಞಾನಜ್ಯೋತಿ ಎಂಬ ಆರೋಪ

ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಪರೀಕ್ಷಾ ಅಕ್ರಮ ಎಸಗುವುದಕ್ಕೆ ಕಲಬುರಗಿಯ ಜ್ಞಾನಜ್ಯೋತಿ ಶಾಲೆಯೇ ಅಕ್ರಮದ ಕೇಂದ್ರ ಎಂಬುದು ದೃಢಪಟ್ಟಿತು. ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಇದೇ ಶಾಲೆಯ ಆಡಳಿತ ಮಂಡಳಿಯಲ್ಲಿ ಹೊಣೆಗಾರಿಕೆ ಇದ್ದವರು. ರಾಜಕಾರಣಿಗಳ ಹಸ್ತಕ್ಷೇಪವೂ ಇದ್ದ ಬಗ್ಗೆ ಆರೋಪಗಳು ಕೇಳಿಬಂದವು.

IPL_Entry_Point