ಹೀಗೊಂದು ಅರ್ಥಪೂರ್ಣ ಕಾರ್ಮಿಕರ ದಿನಾಚರಣೆ: ಎಲ್ಲ ಸಿಬ್ಬಂದಿಯನ್ನು ವಿಮಾನದಲ್ಲಿ ಪ್ರವಾಸ ಕರೆದೊಯ್ದ ಮಾಲೀಕ
ಕನ್ನಡ ಸುದ್ದಿ  /  ಕರ್ನಾಟಕ  /  ಹೀಗೊಂದು ಅರ್ಥಪೂರ್ಣ ಕಾರ್ಮಿಕರ ದಿನಾಚರಣೆ: ಎಲ್ಲ ಸಿಬ್ಬಂದಿಯನ್ನು ವಿಮಾನದಲ್ಲಿ ಪ್ರವಾಸ ಕರೆದೊಯ್ದ ಮಾಲೀಕ

ಹೀಗೊಂದು ಅರ್ಥಪೂರ್ಣ ಕಾರ್ಮಿಕರ ದಿನಾಚರಣೆ: ಎಲ್ಲ ಸಿಬ್ಬಂದಿಯನ್ನು ವಿಮಾನದಲ್ಲಿ ಪ್ರವಾಸ ಕರೆದೊಯ್ದ ಮಾಲೀಕ

ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಬೆರಳೆಣಿಕೆಯ ಉದಾಹರಣೆಗಳಲ್ಲಿ ಇದು ಕೂಡ ಒಂದು. ಅದರಲ್ಲೂ ದಕ್ಷಿಣ ಕನ್ನಡದ ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್ ಸಂಸ್ಥೆಯ ಮಾಲಕ ಕೇಶವ ಅಮೈ ಎಲ್ಲ ಸಿಬ್ಬಂದಿಯನ್ನು ವಿಮಾನದಲ್ಲಿ ಟೂರ್ ಮಾಡಿಸಿದ್ದಾರೆ. (ವರದಿ: ಹರೀಶ ಮಾಂಬಾಡಿ)

ದಕ್ಷಿಣ ಕನ್ನಡದ ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್ ಸಂಸ್ಥೆ
ದಕ್ಷಿಣ ಕನ್ನಡದ ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್ ಸಂಸ್ಥೆ

ಮಂಗಳೂರು: ಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಇಲ್ಲೊಬ್ಬರು ಉದ್ಯಮಿ ತನ್ನ ಸಂಸ್ಥೆಯ ಕಾರ್ಮಿಕರನ್ನು ವಿಮಾನ ಹತ್ತಿಸಿ, ಖುಷಿಪಡಿಸಿದ್ದಾರೆ..ಇಂಥ ಹೃದಯವೈಶಾಲ್ಯ ತೋರಿದವರು ಪುತ್ತೂರಿನ ಎಸ್.ಆರ್.ಕೆ.ಲ್ಯಾಡರ್ ಸಂಸ್ಥೆಯ ಮಾಲಕ ಕೇಶವ ಅಮೈ ಅವರು. ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪಯಣಿಸಿ ಗಗನದಲ್ಲಿ ಹಾರಾಡಿದ ಅನುಭವ ಪಡೆಯಬೇಕೆಂಬುದು ಬಹುತೇಕರ ಆಶಯವಾಗಿದ್ದರೂ, ಬಡ ಮತ್ತು ಮಧ್ಯಮ ವರ್ಗದವರಿಗೆ ಇದುಕಷ್ಟವೇ ಸಾಧ್ಯ. ಈ ಕಾರಣಕ್ಕೆ ಕಾರ್ಮಿಕ ದಿನಾಚರಣೆಯ ಹೆಸರಿನಲ್ಲಿ ತಮ್ಮ ಸಂಸ್ಥೆಯ ಕಾರ್ಮಿಕರೆಲ್ಲರನ್ನು ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.

ದೃಷ್ಟಿ ಹೀನತೆಯ ಸಮಸ್ಯೆಗೆ ತುತ್ತಾಗಿರುವ ಕೇಶವ ಅಮೈ ಅವರು, ಅನೇಕ ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಆದರೆ ನಾ ಕಂಡು ಕಾಣದ ಜಗತ್ತನ್ನು ಕಾರ್ಮಿಕರಿಗೆ ಬಾನಂಗಳದಿಂದ ತೋರಿಸುವ ಪ್ರಯತ್ನ ಮಾಡಬೇಕೆಂಬ ಮಹದಾಸೆಯಿಟ್ಟುಕೊಂಡಿದ್ದರು. ಪ್ರತಿ ವರ್ಷ ಹಲವು ಹೊಸತನವನ್ನು ಪರಿಚಯಿಸುತ್ತಿರುವ ಕೇಶವ ಅಮೈ ಮಾಲಕತ್ವದ ಎಸ್ ಆರ್‌ಕೆ ಲ್ಯಾರ್ಡ ಕಳೆದ ವರ್ಷ ರಜತ ಸಂಭ್ರಮವನ್ನು ಆಚರಿಸಿ ಕಾರ್ಮಿಕರಿಗೆ ಕ್ರೀಡಾಕೂಟ ಏರ್ಪಡಿಸಿತ್ತು. ಇದೀಗ ಮೇ 1 ಕಾರ್ಮಿಕರ ದಿನದ ಅಂಗವಾಗಿ ಕಾರ್ಮಿಕರಿಗೆ ಬಾನಂಗಳದಿಂದ ಜಗತ್ತನ್ನು ನೋಡುವ ಅವಕಾಶ ವಿಮಾನಯಾನ ಪ್ರವಾಸದ ಯೋಜನೆ ರೂಪಿಸಿದರು.

ಮೇ 1 ರಂದು ತನ್ನ ಸಂಸ್ಥೆಯ 51 ಕಾರ್ಮಿಕ ಸಿಬ್ಬಂದಿಗಳೊಂದಿಗೆ ತಾನೂ ಬೆಂಗಳೂರಿಗೆ ವಿಮಾನದಲ್ಲಿ ಪ್ರವಾಸ ತೆರಳಿದರು. ಬೆಳಿಗ್ಗೆ ಪುತ್ತೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ತೆರಳಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿ ಸಂಸ್ಥೆಗೆ ಸಂಬಂಧಿಸಿ ಇತರ ಫ್ಯಾಕ್ಟರಿಗಳಲ್ಲಿ ಮಾಹಿತಿ ಕಾರ್ಯಕ್ರಮ, ಸಂಜೆ ಸಂಗೀತ ರಸಮಂಜರಿ, ಕ್ಯಾಂಪ್ ಫೈಯರ್ ಮೂಲಕ ಸಂಭ್ರಮಿಸಿ ಮೇ 2ಕ್ಕೆ ಮೈಸೂರಿಗೆ ತೆರಳಿ ಅಲ್ಲಿ ಪ್ರವಾಸಿ ತಾಣಗಳನ್ನು ಸುತ್ತಾಡಿ ರಾತ್ರಿ ಮರಳಿ ಪುತ್ತೂರಿಗೆ ಬರುವ ಮೂಲಕ ಎರಡು ದಿನದ ಪ್ರವಾಸ ಪೂರ್ಣಗೊಂಡಿತು.

ನನ್ನ ಎಸ್‌ಆರ್‌ಕೆಯ ಕಾರ್ಮಿಕ ಸಿಬ್ಬಂದಿಗಳು ಸಂಸ್ಥೆಯ ಸದಸ್ಯರು. ಅವರು ಸೀಸನ್‌ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಹಗಲು-ರಾತ್ರಿ ಕೆಲಸ ಮಾಡಿ ಗ್ರಾಹಕರ ಬೇಡಿಕೆಯನ್ನು ಈಡೇರಿಸಿದ್ದಾರೆ. ಅಂತಹ ಸದಸ್ಯರಿಗೆ ನನ್ನಿಂದ ಏನಾದರೂ ಸಂತೋಷದ ದಿನ ಸಿಗಬೇಕು. ಹಾಗಾಗಿ ಅವರಲ್ಲಿ ಹಿರಿಯ ಸಿಬ್ಬಂದಿಗಳೆದುರು ನಾಲ್ಕೈದು ಆಯ್ಕೆಗಳನ್ನು ಮುಂದಿಟ್ಟೆ. ಅವರು ಪ್ರವಾಸವನ್ನು ಆರಿಸಿಕೊಂಡರು. ಆಗ ನಾನು ಅದಕ್ಕೆ ವಿಮಾನ ಪ್ರವಾಸ ಮಾಡೋಣ ಎಂದೆ, ಅದಕ್ಕೆ ಅವರು ಒಪ್ಪಿಕೊಂಡರು. ಸಿಬ್ಬಂದಿಗಳ ಸಂತೋಷವೇ ನನ್ನ ಸಂತೋಷ ಎನ್ನುತ್ತಾರೆ ಮಾಲೀಕ ಕೇಶವ ಅಮೈ. ವಿಮಾನದಲ್ಲಿ ಪಯಣಿಸಿದ್ದು, ನಮಗೆಲ್ಲಾ ಒಳ್ಳೆಯ ಅನುಭವ‌ ಉಂಟುಮಾಡಿದೆ.‌ ನಮ್ಮ ಮಾಲಕರ ಉದಾರತೆ ಇದಕ್ಕೆ ಕಾರಣ, ಅವರಿಗೆ ನಾನು ಋಣಿ ಎನ್ನುತ್ತಾರೆ ಸಿಬ್ಬಂದಿ ಯತೀಶ್.

ವರದಿ: ಹರೀಶ ಮಾಂಬಾಡಿ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in