ರಹಮತ್ ತರೀಕೆರೆ ಲೇಖನ: "ಲೇಪ-ವಿರೂಪ"; ಕೊಲ್ಲಲು ಖಡ್ಗವೇ ಬೇಕೆಂದಿಲ್ಲ, ಭಾಷೆಯೊಂದೇ ಸಾಕು
ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ಬಿಸಿಲ ಬವಣೆ ತಪ್ಪಿಸಲು ಪ್ರಾಂಶುಪಾಲರೊಬ್ಬರು ಗೋಡೆಗೆ ಸಗಣಿ ಹಚ್ಚಿದ್ದ ವಿವಾದದ ಕುರಿತು ಲೇಖಕ ಪ್ರೊ.ರಹಮತ್ ತರೀಕೆರೆ ಅವರ ಅಭಿಪ್ರಾಯ, ಅದಕ್ಕೆ ಪ್ರತಿಕ್ರಿಯೆಗಳು ಹೀಗಿವೆ.

ದೆಹಲಿ ವಿಶ್ವವಿದ್ಯಾಲಯದ ಪ್ರಿನ್ಸಿಪಾಲೆಯು ಕ್ಲಾಸ್ ರೂಮಿನ ಗೋಡೆಗೆ ಸಗಣಿ ಬಳಿದಿದ್ದಕ್ಕೆ 'ಲೇಪಿಸಿದ್ದರು' ಎಂಬ ಪದವನ್ನೂ, ಅದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಪ್ರಿನ್ಸಿಪಾಲೆಯ ಮನೆಯ ಗೋಡೆಗೆ ಸಗಣಿ ಬಳಿದಿದ್ದಕ್ಕೆ 'ವಿರೂಪಗೊಳಿಸಿದರು' ಎಂಬ ಪದವನ್ನೂ ಕನ್ನಡ ಪತ್ರಿಕೆಗಳು ಬಳಸಿವೆ. ಒಂದೇ ಕ್ರಿಯೆಯನ್ನು 'ಲೇಪ' ಶಬ್ದವು ಪವಿತ್ರೀಕರಿಸುತ್ತಿದ್ದರೆ, 'ವಿರೂಪ' ಶಬ್ದವು ದುರುಳೀಕರಿಸುತ್ತಿದೆ. ಭಾಷೆಯ ರಾಜಕಾರಣವಿದು. ನುಡಿಯ ಈ ರಾಜಕಾರಣವು, ಇತಿಹಾಸ ಬರವಣಿಗೆಯಿಂದ ಹಿಡಿದು ಮಾಧ್ಯಮ ವರದಿಗಳವರೆಗೆ, ನಾವು ಮತ್ತೊಬ್ಬರ ಜತೆ ನಿತ್ಯ ಬದುಕಿನಲ್ಲಿ ಮಾಡುವ ಮಾತುಕತೆಯ ತನಕ ಸುಪ್ತವಾಗಿ ವ್ಯಾಪಿಸಿದೆ. ಲಿಂಗ ವರ್ಗ ಜಾತಿ ಧರ್ಮ ಬಣ್ಣ ಸಿದ್ಧಾಂತದ ಆಧಾರದಲ್ಲಿ ಮಾಡಲಾಗುವ ತರತಮಗಳು ಸಾಂಸ್ಥೀಕರಣ ಮತ್ತು ಸಹಜೀಕರಣ ಪಡೆದಿರುವ ಸಮಾಜದಲ್ಲಿ, ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ; ಅಧಿಕಾರಸ್ಥ ವರ್ಗಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಜನಾಭಿಪ್ರಾಯ ರೂಪಿಸುವ ಪ್ರಬಲ ಆಯುಧ ಕೂಡ. ಕನ್ನಡದ ಖ್ಯಾತ ಸಂಶೋಧಕರೊಬ್ಬರ ಬರೆಹವೊಂದು ಹೀಗೆ ಆರಂಭವಾಗುತ್ತದೆ. "ಆರ್ಯರ ಆಗಮನ, ಮುಸ್ಲಿಮರ ಆಕ್ರಮಣ, ಬ್ರಿಟಿಶರ ಪ್ರವೇಶ". 'ಆಗಮನ'ದಲ್ಲಿ ಸ್ವಾಗತ ಭಾವವಿದೆ. 'ಪ್ರವೇಶ'ದಲ್ಲಿ ನಿರ್ಲಿಪ್ತ ನಿಲುವಿದೆ. 'ಆಕ್ರಮಣ'ದಲ್ಲಿ ದೂಷಣೆಯಿದೆ. ಬಳಸುವ ಶಬ್ದದಲ್ಲೇ ಮೌಲ್ಯ-ಅಪಮೌಲ್ಯ ತುಂಬುವ ಈ ಭಾಷೆಯನ್ನು ವ್ಯಾಲ್ಯೂ ಲೋಡೆಡ್ ಲಾಂಗ್ವೇಜ್ ಎಂದು ಕರೆಯಲಾಗುತ್ತದೆ. ಈ ಭಾಷಾಬಳಕೆಯಿಂದ ಒಂದೇ ಕೃತ್ಯವು ಮಾಡಿದವರ ಧರ್ಮ ವರ್ಗ ಜಾತಿಗಳ ಆಧಾರದಲ್ಲಿ 'ಕ್ರೌರ್ಯ' ಅಥವಾ 'ಶೌರ್ಯ' ಆಗಬಲ್ಲದು; ಒಂದೇ ಯುದ್ಧವು, ಮಾಡುವವರ ಸಾಮಾಜಿಕ ಧಾರ್ಮಿಕ ಹಿನ್ನೆಲೆಯ ಮೇಲೆ 'ರಾಜ್ಯವಿಸ್ತರಣೆ' ಇಲ್ಲವೇ 'ದುರಾಕ್ರಮಣ' ಆಗಬಲ್ಲದು; ಒಂದೇ ಸಾವು ಸತ್ತವರ ಹಿನ್ನೆಲೆಯ ಆಧಾರದಲ್ಲಿ 'ಸತ್ತರು' ಅಥವಾ 'ಹುತಾತ್ಮರಾದರು' ಆಗಬಲ್ಲದು. ನಿರ್ದಿಷ್ಟ ಕೃತ್ಯ ಎಸಗಿದವರಿಗೆ ಏಕವಚನ ಬಹುವಚನ ಬಳಸಿಯೂ ಆ ಕೃತ್ಯದ ಅರ್ಥವನ್ನೇ ಬದಲಿಸಬಹುದು. ಇತಿಹಾಸ ಬರವಣಿಗೆಯನ್ನು ನಾವು ಅದರ ಕಂಟೆಂಟ್ ಮೂಲಕ ಓದುತ್ತೇವೆ. ಅದಕ್ಕೆ ಬಳಕೆಯಾದ ಭಾಷೆಯ (ರೂಪ/ಫಾರ್ಮ್) ಮೂಲಕ ಕೂಡ ಓದಬೇಕು. ದೃಶ್ಯಮಾಧ್ಯಮಗಳಲ್ಲಿ ಆಂಕರುಗಳ ಭಾಷೆ ಮಾತ್ರವಲ್ಲ, ಬಾಡಿಲಾಂಗ್ವೇಜ್ ಕೂಡ ಅರ್ಥವನ್ನು ಹುಟ್ಟಿಸುತ್ತಿರುತ್ತದೆ. ಲಾಂಗ್ವೇಜ್ ಆಂಡ್ ನೆರೇಟೀವ್ಸ್ ಆರ್ ಡೀಪ್ ಪಾಲಿಟಿಕ್ಸ್. ನಮ್ಮ ದೇಶದಲ್ಲಿ ವ್ಯಕ್ತಿಯನ್ನೊ ಸಮುದಾಯವನ್ನೊ ದುಷ್ಟೀಕರಿಸಲು ಅಥವಾ ವೈಭವೀಕರಿಸಲು, ಅಮಾನುಷಗೊಳಿಸಲು ಇಲ್ಲವೇ ಮಾನುಷಗೊಳಿಸಲು ಭಾಷೆ ಬಳಕೆಯಾಗುತ್ತದೆ. ಕೊಲ್ಲಲು ಖಡ್ಗವೇ ಬೇಕೆಂದಿಲ್ಲ. ಭಾಷೆಯೊಂದೇ ಸಾಕು.
ಈ ಅಭಿಪ್ರಾಯಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಬಸವರಾಜ ಸಾದರ ಅವರು ಹೇಳುವಂತೆ, ಭಾಷೆ ನುಡಿಯುವವರ ಮನಸ್ಸಿನ ಪ್ರತಿರೂಪ. ಈ ಭಾಷಾಮನೋವಿಜ್ಞಾನವು ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು-ಹೆಚ್ಚಾಗಿ ತನ್ನ ನೈಜರೂಪದ 'ದರ್ಶನ' ಮಾಡುತ್ತಿದೆ.
ಎಲ್ಲರ ಸಂವೇದನೆಗಳನ್ನು ಸಮನಾಗಿ ತಲುಪುವ ಮತ್ತು ತಟ್ಟುವ ಭಾಷೆ ಬರಬೇಕೆಂದರೆ, ಮೊದಲು ಅಂಥ ಮನಸ್ಸುಗಳ ನಿರ್ಮಾಣವಾಗಬೇಕು. ಆದರೆ "ತಲೆಯಲಟ್ಟುಂಬುದ ಒಲೆಯಲಟ್ಟುಂಬರು...." ಎಂಬಂತಿರುವ ಈಗಿನ ವ್ಯವಸ್ಥೆಯಲ್ಲಿ ಅದು ಸಾಧ್ಯವೆ? ಪ್ರಶ್ನೆ ಕಾಡುತ್ತದೆ.
ಅಶೋಕ ಶೆಟ್ಟರ್ ಅವರ ಪ್ರಕಾರ ಅದು ಹಾಗೇ. ಯುದ್ಧದಲ್ಲಿ ಭಾರತೀಯ ಯೋಧ ವೀರಗತಿ ಹೊಂದುತ್ತಾನೆ. ಪಾಕಿಸ್ತಾನಿ ಯೋಧ ಸಾಯುತ್ತಾನೆ. ಹೀಗೆ ಸತ್ತ ಎರಡೂ ದೇಶಗಳ ಸೈನಿಕರ ಮಡದಿ ಮಕ್ಕಳ ನೋವು ವ್ಯಾಕರಣಕ್ಕೆ ಬದ್ಧವಾಗಿರದೇ ಒಂದೇ ರೀತಿಯಾಗಿರುತ್ತದೆ ಎಂಬುದು ಬೇರೆ ಮಾತು..!
ನಿಮ್ಮ ಮಾತು ನಿಜ. 'ಮನುಷ್ಯನನ್ನು ಕೊಲ್ಲಲು ಆಯುಧಗಳೇಕೆ ಬೇಕು. ಮಾತುಗಳೇ ಸಾಕು' ಅಂತ ೨೦ ವರ್ಷದ ಹಿಂದೆ ಆನಂದ ಡಾ. ಆನಂದ್ ಋಗ್ವೇದಿ ಅವರು ತಮ್ಮ 'ಜನ್ನ ಮತ್ತು ಅನೂಹ್ಯ ಸಾಧ್ಯತೆ' ಕಥೆಯಲ್ಲಿ ಬರೆದಿದ್ದುದು ನೆನಪಾಯ್ತು ಎಂದು ಚಿದಾನಂದ ಸಾಲಿ ಪ್ರತಿಕ್ರಿಯಿಸಿದ್ದಾರೆ.
"ಭಾಷೆ ಬರೀ ಮಾತಲ್ಲ ಅದು ಮನುಷ್ಯತ್ವ".ಕವಿ ಎನ್.ಕೆ.ಹೆಚ್. ಅವರ ಮಾತು ನೆನಪಾಯಿತು =. ಮಾಧ್ಯಮಗಳು ಜನಸಾಮಾನ್ಯರ ಪ್ರಜ್ಞೆಯನ್ನು ಲೂಟಿ ಮಾಡಲು ಇಂತೆಲ್ಲ ಅರಾಜಕತೆಗೆ ಮುಂದಾದ್ರೆ ಗ್ರಹಿಕೆಯ ಕೇಂದ್ರ ಜ್ಞಾನವೇ ಸೋಲುತ್ತದೆ. ಸರಿಯಾದ ಎಚ್ಚರಿಕೆ ಕೊಟ್ರಿ ಮಾಧ್ಯಮ ರಾಜಕಾರಣಕ್ಕೆ. ಆದರೂ ಇಲ್ಲಿ ಬಣ್ಣ,ಭಾಷೆ, ಧರ್ಮ ಎಲ್ಲವನ್ನೂ ಅಸ್ತ್ರ ಮಾಡಿಟ್ಟು ಜನಸಾಮಾನ್ಯರನ್ನೆ ಬಲಿ ತಗತಿರೊ ಮೀಡಿಯಾಗಳು ಮತ್ತು ರಾಜಕಾರಣಿಗಳು ಹಾಗೂ ಇವರ ಬಾಲಕ್ಕೆ ಅಡ್ಬಿದ್ಕಂಡು ಲಾಭ ಮಾಡ್ಕಳೊ ಮನಸ್ಥಿತಿಗಳು ಈ ದೇಶದ ಸೌಹಾರ್ದ ಚರಿತ್ರೆಯನ್ನೇ ಕುರೂಪಗೊಳಿಸಿವೆ. ನಮಗೆ ಎದುರಾಗ್ತಿರೊ ಮೇಷ್ಟ್ರು ಮೇಡಂ ಗಳು ಭಯಾನಕವಾಗಿ ವಿದ್ಯಾರ್ಥಿಗಳ ಮೆದುಳಿಗೆ ಬಣ್ಣ ಬಳೀತಿದಾರೆ. ಎಲ್ಲೆಲ್ಲಿ ನೋಡಿದರೂ ಬರೀ ಇಂಥಾ ವಿಕಾರ ಮನಸ್ಥಿತಿಗಳು. ದೆಹಲಿಯ ಸಗಣಿ ಘಟನೆಯಲ್ಲಿ ವಿದ್ಯಾರ್ಥಿ ಮಿತ್ರರ ನಿಲುವು ಸರಿಯಾಗಿಯೇ ಇದೆ. ಕೊಡ್ದರ್ಗೆ ಕೊಟ್ಟು ತೋರುಸ್ಬೇಕು ಅಂದ್ರೆ ಜನ ಬಗ್ಗೋ ಕಾಲ ಅಲ್ಲ ಇದು. ಮಾಧ್ಯಮಗಳು ಲಾಭಿಗಿಳ್ದು ಸಾಮಾಜಿಕ ಶಾಂತಿಯನ್ನು ನುಂಗಿ ತೇಗ್ತಿವೆ ಎಂಬುದು ಗೀತಾ ನಾರಾಯಣ ಪ್ರತಿಕ್ರಿಯೆ.
ನಿಜ, ಭಾಷೆ ಹಾಗೂ ಬಾಡಿ ಲಾಂಗ್ವೇಜ್ ಮೂಲಕವೇ ಈ ಆಂಕರುಗಳು ತಮ್ಮ ಮನೋಭಿಲಾಷೆಯನ್ನು ವೀಕ್ಷಕರಲ್ಲಿ ಬಿತ್ತುತ್ತಿರುತ್ತಾರೆ ಮತ್ತು ಊರನ್ನೇ ಉರಿಸುತ್ತಿರುತ್ತಾರೆ. ಆ ಹುಡುಗರು ಸರಿಯಾಗೇ ಉತ್ತರಿಸಿದ್ದಾರೆ, ಇಷ್ಟವಾದರು ಅಂತಾರೆ ಮಾಧವಿ ಭಂಡಾರಿ.
ವಿಭಾಗ