ಕನ್ನಡ ಸುದ್ದಿ  /  Nation And-world  /  Rahul Gandhi To Address Event In Kolar Where He Made Modi Surname Remark

Rahul Kolar Visit: 'ಮೋದಿ ಉಪನಾಮ' ಹೇಳಿಕೆ ನೀಡಿದ್ದ ಸ್ಥಳಕ್ಕೆ ಬರಲಿರುವ ರಾಗಾ.. ಕೋಲಾರದ ಜನರನ್ನುದ್ದೇಶಿಸಿ ಮಾತನಾಡಲಿರುವ ಕೈ ನಾಯಕ

'ಮೋದಿ ಉಪನಾಮ' ಹೇಳಿಕೆ ನೀಡಿ ಲೋಕಸಭೆಯಿಂದ ಅನರ್ಹಗೊಂಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎಲ್ಲಿ ಆ ಹೇಳಿಕೆ ನೀಡಿದ್ದರೋ ಅಲ್ಲಿಗೆ ಬಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

ನವದೆಹಲಿ: 'ಮೋದಿ ಉಪನಾಮ' ಹೇಳಿಕೆ ನೀಡಿ ಲೋಕಸಭೆಯಿಂದ ಅನರ್ಹಗೊಂಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎಲ್ಲಿ ಆ ಹೇಳಿಕೆ ನೀಡಿದ್ದರೋ ಅಲ್ಲಿಗೆ ಬಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

2019ರ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಕೋಲಾರದಲ್ಲಿ ರಾಹುಲ್​ ಗಾಂಧಿ 'ಮೋದಿ ಉಪನಾಮ' ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್​ ನ್ಯಾಯಾಲಯವು ರಾಹುಲ್​ ಗಾಂಧಿ ದೋಷಿ ಎಂದು ಹೇಳಿದ್ದು, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತೀರ್ಪಿನ ಬೆನ್ನಲ್ಲೇ ರಾಹುಲ್​ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಏಪ್ರಿಲ್ 5 ರಂದು ಪ್ರಚಾರ ಕಾರ್ಯಕ್ರಮಕ್ಕಾಗಿ ಕೋಲಾರಕ್ಕೆ ಹಿಂತಿರುಗಲಿರುವ ರಾಹುಲ್​ ಗಾಂಧಿ, ಅಲ್ಲಿನ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

2019ರಲ್ಲಿ ಕೋಲಾರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್​ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ, ಚೌಕೀದಾರ್‌ ಶೇಕಡ 100ರಷ್ಟು ಕಳ್ಳ ಇದ್ದಾನೆ. ಒಂದು ಸಣ್ಣ ಪ್ರಶ್ನೆ ಕೇಳ್ತೇನೆ. 'ಎಲ್ಲಾ ಕಳ್ಳರು ಹೇಗೆ ಮೋದಿ ಎಂಬ ಸರ್​ನೇಮ್​​ಗಳನ್ನು ಹೊಂದಿದ್ದಾರೆ? ನೀರವ್‌ ಮೋದಿ, ಲಲಿತ್‌ ಮೋದಿ, ನರೇಂದ್ರ ಮೋದಿ, ಇನ್ನೂ ಹುಡುಕಾಡಿದ್ರೆ ಇನ್ನಷ್ಟು ಮೋದಿಗಳು ಬಯಲಾಗಬಹುದು ಎಂದು ಹೇಳಿಕೆ ನೀಡಿದ್ದರು.

ಇದರ ವಿರುದ್ಧ ಇದನ್ನು ಖಂಡಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ಕೇಸ್​ ದಾಖಲಿಸಿದ್ದರು. ಮಾರ್ಚ್​ 23 ರಂದು ಈ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ್ದ ಸೂರತ್ ಜಿಲ್ಲಾ ನ್ಯಾಯಾಲಯ ರಾಹುಲ್​ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೇ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ಇದೆ. ತೀರ್ಪು ಪ್ರಕಟವಾದ ಬೆನ್ನಲ್ಲೇ ಲೋಕಸಭೆಯಿಂದ ವಯನಾಡು ಸಂಸದ ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ತಮ್ಮ ಟ್ವಿಟರ್‌ ಬಯೋವನ್ನು ಬದಲಾಯಿಸಿಕೊಂಡಿದ್ದು, ಸಂಸದ ಎಂದು ಇದ್ದ ಜಾಗದಲ್ಲಿ ‘ಅನರ್ಹ ಸಂಸದ’ ಎಂದು ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ್ದನ್ನು ಖಂಡಿಸಿ ದೇಶದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇಂದೂ ಕೂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಿನ್ನೆ (ಮಾರ್ಚ್​ 27) ವಿರೋಧ ಪಕ್ಷದ ನಾಯಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವಿಷಯದಲ್ಲಿ ಕಾನೂನು ಮತ್ತು ರಾಜಕೀಯವಾಗಿ ಹೋರಾಡುವುದಾಗಿ ಕಾಂಗ್ರೆಸ್​​ ಹೇಳಿದೆ.

ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಸರ್ಕಾರಿ ಬಂಗಲೆ ತೆರವು ಮಾಡುವಂತೆ ರಾಹುಲ್ ಗಾಂಧಿಗೆ ಲೋಕಸಭೆಯ ಹೌಸಿಂಗ್​ ಕಮಿಟಿ ನೋಟಿಸ್ ನೀಡಿದೆ. ರಾಷ್ಟ್ರ ರಾಜಧಾನಿಯ 12, ತುಘಲಕ್ ಲೇನ್​ನಲ್ಲಿರುವ ಬಂಗಲೆಯನ್ನು ಏಪ್ರಿಲ್​ 23ರ ಒಳಗೆ ಖಾಲಿ ಮಾಡುವಂತೆ ನೋಟಿಸ್​ ನೀಡಲಾಗಿದೆ. 2004ರಲ್ಲಿ ಮೊದಲ ಬಾರಿ ಲೋಕಸಭಾ ಸಂಸದರಾದಾಗ ರಾಹುಲ್​ ಗಾಂಧಿಗೆ ಸರ್ಕಾರದಿಂದ ಈ ಬಂಗಲೆಯನ್ನು ಮಂಜೂರು ಮಾಡಲಾಗಿತ್ತು. ನಿಯಮದ ಪ್ರಕಾರ, ಅನರ್ಹಗೊಂಡ ಸಂಸದರು ಸರ್ಕಾರಿ ವಸತಿಗೆ ಅರ್ಹರಲ್ಲ ಮತ್ತು ಅಧಿಕೃತ ಬಂಗಲೆಯನ್ನು ಖಾಲಿ ಮಾಡಲು 30 ದಿನಗಳ ಅವಧಿಯನ್ನು ನೀಡಲಾಗುತ್ತದೆ.

ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕವೂ, ಎರಡು ವರ್ಷಗಳ ಶಿಕ್ಷೆಯನ್ನು ಅನುಭವಿಸುವ ಸಾಧ್ಯತೆಯನ್ನೂ ಲೆಕ್ಕಿಸದೆ ರಾಹುಲ್​ ಗಾಂಧಿ ಅವರು ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸುತ್ತಲೇ ಇದ್ದಾರೆ.

ವಿಭಾಗ