ಬೆಂಗಳೂರು ಆರ್‌ಆರ್‌ ನಗರದಲ್ಲಿ ಇಂದು, ನಾಳೆ ರೈತಸಂತೆ; ಹೂ, ಹಣ್ಣು, ತರಕಾರಿ, ದವಸ ಧಾನ್ಯಗಳ ಮಾರಾಟ; ಮಾವು, ಹಲಸಿನ ಹಣ್ಣಿಗೆ ಬೇಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಆರ್‌ಆರ್‌ ನಗರದಲ್ಲಿ ಇಂದು, ನಾಳೆ ರೈತಸಂತೆ; ಹೂ, ಹಣ್ಣು, ತರಕಾರಿ, ದವಸ ಧಾನ್ಯಗಳ ಮಾರಾಟ; ಮಾವು, ಹಲಸಿನ ಹಣ್ಣಿಗೆ ಬೇಡಿಕೆ

ಬೆಂಗಳೂರು ಆರ್‌ಆರ್‌ ನಗರದಲ್ಲಿ ಇಂದು, ನಾಳೆ ರೈತಸಂತೆ; ಹೂ, ಹಣ್ಣು, ತರಕಾರಿ, ದವಸ ಧಾನ್ಯಗಳ ಮಾರಾಟ; ಮಾವು, ಹಲಸಿನ ಹಣ್ಣಿಗೆ ಬೇಡಿಕೆ

ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ಇಂದು ಮತ್ತು ನಾಳೆ ರೈತಸಂತೆ ನಡೆಯುತ್ತಿದ್ದು, ವಿವಿಧ ಜಿಲ್ಲೆಗಳ ರೈತರು ನೇರವಾಗಿ ಹೂ, ಹಣ್ಣು, ತರಕಾರಿ ದವಸ, ಧಾನ್ಯಗಳ ಮಾರಾಟ ಮಾಡುತ್ತಿದ್ದಾರೆ. ಬೆಳಿಗ್ಗೆಯೆ ಶುರುವಾದ ಸಂತೆಯಲ್ಲಿ ಮಾವು ಮತ್ತು ಹಲಸಿನ ಹಣ್ಣಿಗೆ ಬೇಡಿಕೆ ಕಂಡುಬಂದಿದೆ.(ವರದಿ- ಎಚ್.‌ ಮಾರುತಿ, ಬೆಂಗಳೂರು)

ಬೆಂಗಳೂರು ಆರ್‌ಆರ್‌ ನಗರದಲ್ಲಿ ಇಂದು, ನಾಳೆ ರೈತಸಂತೆ ನಡೆಯುತ್ತಿದ್ದು, ಮಾವು, ಹಲಸಿನ ಹಣ್ಣಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ.
ಬೆಂಗಳೂರು ಆರ್‌ಆರ್‌ ನಗರದಲ್ಲಿ ಇಂದು, ನಾಳೆ ರೈತಸಂತೆ ನಡೆಯುತ್ತಿದ್ದು, ಮಾವು, ಹಲಸಿನ ಹಣ್ಣಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ.

ಬೆಂಗಳೂರು: ಮೊದಲ ರೈತ ಸಂತೆಗೆ ಸಿಕ್ಕಿದ ಪ್ರೋತ್ಸಾಹ ಮತ್ತು ಸ್ಪೂರ್ತಿಯಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ರೈತಸಂತೆ ನಡೆಯುತ್ತಿದೆ. ರೈತರೇ ನೇರವಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ನೇರ ಮಾರಾಟದ ಮೂಲಕ ನಮ್ಮ ಹೋರಾಟ’ ‘ನಮ್ಮ ಬೆಳೆಗೆ ನಮ್ಮದೇ ಬೆಲೆ’ ಶೀರ್ಷಿಕೆಯಡಿಯಲ್ಲಿ ಈ ರೈತಸಂತೆಯನ್ನು ಆಯೋಜಿಸಿದ್ದಾರೆ.

ಬೆಂಗಳೂರು ಆರ್‌ಆರ್‌ ನಗರದಲ್ಲಿ ಇಂದು, ನಾಳೆ ರೈತಸಂತೆ

ಆರ್‌ ಆರ್‌ ನಗರದ ಐಡಿಯಲ್‌ ಹೋಮ್ಸ್‌ ಲೇಔಟ್‌ ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ ಇಂದು ಮತ್ತು ನಾಳೆ (ಏ. 26 ರಿಂದ 27) ಎರಡೂ ದಿನ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ರೈತರೇ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಹಾಗಾಗಿ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳು ಲಭ್ಯ. ಈ ಬಾರಿಯ ವಿಶೇಷ ಏನೆಂದರೆ ಮಾವಿನ ಹಣ್ಣು ಆಗಮಿಸಿದ್ದು ಹೆಚ್ಚು ಮಾರಾಟವಾಗುತ್ತಿದೆ. ಜತೆಗೆ ಉತ್ತರ ಕರ್ನಾಟಕದ ಅಪ್ಪಟ ಸಜ್ಜೆ ರೊಟ್ಟಿ, ಶೇಂಗಾ ರೊಟ್ಟಿ, ಚಟ್ನಿಪುಡಿ ಸಿಗಲಿದೆ. ಅಲ್ಲಿಂದಲೇ ರೈತರು ಆಗಮಿಸಿದ್ದಾರೆ.

ಒಂದು ಕಡೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿಯುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ಆದ್ದರಿಂದ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಈ ರೈತಸಂತೆಯನ್ನು ಆಯೋಜೊಸಲಾಗಿದೆ. ಇಲ್ಲಿ ರೈತರು ತಾವು ಬೆಳೆದ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಿದ್ದಾರೆ ಎಂದು ಸಂಘಟಕರಲ್ಲೊಬ್ಬರಾದ ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳುತ್ತಾರೆ.

ಹೂ ಹಣ್ಣು ತರಕಾರಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಬಂಡವಾಳವೂ ಹುಟ್ಟುತ್ತಿಲ್ಲ ಎಂದು ರೈತರು ಅನೇಕ ಕಡೆ ತಾವು ಬೆಳೆದ ಉತ್ಪನ್ನಗಳನ್ನು ರಸ್ತೆಗೆ ಸುರಿಯುವುದು ಇಲ್ಲವೇ ಬೆಂಕಿ ಹಚ್ಚುವುದು ಸಾಮಾನ್ಯವಾಗಿರುವ ವಿಷಮ ಪರಿಸ್ಥಿತಿಯಲ್ಲಿ ಇಂತಹ ಪ್ರಯತ್ನಗಳು ರೈತರಿಗೆ ಉತ್ತೇಜನ ನೀಡುವುದರಲ್ಲಿ ಸಂಶಯವಿಲ್ಲ.

ಇಂದು ಸಂಜೆ ‘ಅಡುಗೆ ಮಾತು’ ನಾಟಕ ಪ್ರದರ್ಶನ

ರಂಗಕರ್ಮಿ ಅಕ್ಷತಾ ಪಾಂಡವಪುರ ಅವರಿಂದ ಇಂದು ಸಂಜೆ ʼಅಡುಗೆ ಮಾತುʼ ಎಂಬ ನಾಟಕ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. ರೈತಸಂತೆಗೆ ಮೈಸೂರು, ಹಾಸನ, ತುಮಕೂರು, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ ಜಿಲ್ಲೆಗಳಿಂದ ರೈತರು ಆಗಮಿಸುತ್ತಿದ್ದಾರೆ. ನಗರದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೈತರನ್ನು ಪ್ರೋತ್ಸಾಹಿಸಬೇಕು ಎಂದೂ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಸಂತೆಗೆ ತಮ್ಮ ಉತ್ಪನ್ನಗಳೊಂದಿಗೆ ಆಗಮಿಸಿರುವ ರೈತರು ಮಾತನಾಡಿ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿದ್ದೇವೆ. ಬಹುತೇಕ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ಆದ್ದರಿಂದ ಗ್ರಾಹಕರು ನಮ್ಮಿಂದ ನೇರವಾಗಿ ಖರೀದಿ ಮಾಡಿದರೆ ಸಹಾಯವಾಗುತ್ತದೆ ಎನ್ನುತ್ತಾರೆ. ವಿವಿಧ ರೀತಿಯ ಕಾಳುಗಳು, ತರಕಾರಿ, ಹಣ್ಣು, ಜೇನು ತುಪ್ಪ, ಅಡುಗೆ ಎಣ್ಣೆ ಮಾರಾಟವಾಗುತ್ತಿದೆ. ಹಲಸಿನ ಹಣ್ಣು ಮತ್ತು ಮಾವು ಈ ಸಂತೆಯ ಪ್ರಮುಖ ಆಕರ್ಷಣೆಯಾಗಿದೆ. ಮಧ್ಯವರ್ತಿಗಳಿಲ್ಲದೆ ರೈತರೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ.

ಮೊದಲ ರೈತ ಸಂತೆಗೆ ಸಿಕ್ಕಿತ್ತು ಉತ್ತಮ ಪ್ರತಿಕ್ರಿಯೆ

ಮೊದಲ ಬಾರಿಗೆ ಆರ್‌ ಆರ್‌ ನಗರದಲ್ಲಿ ಇದೇ ತಿಂಗಳ ಏಪ್ರಿಲ್‌ 12 ರಿಂದ 14ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ನಡೆದಿತ್ತು. ಈ ಸಂತೆಗೆ 50 ಕ್ಕೂ ಹೆಚ್ಚು ರೈತರು ಆಗಮಿಸಿದ್ದರು. ಎರಡು ದಿನದಲ್ಲಿ ಸುಮಾರು 22 ಲಕ್ಷ ರೂ. ವ್ಯಾಪಾರ ನಡೆದಿತ್ತು. ಮೂರು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಗ್ರಾಹಕರು ಸಂತೆಗೆ ಆಗಮಿಸಿದ್ದರು. ಇದರಿಂದ ಉತ್ತೇಜನಗೊಂಡ ಸಂಘಟಕರು ಇನ್ನು ಮುಂದೆ ನಿಯಮಿತವಾಗಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ರೈತಸಂತೆ ನಡೆಸಲು ನಿರ್ಧರಿಸಿದರು. ಇದು ಕೃಷಿ ಹಾಗೂ ಕೃಷಿಕರಿಗೆ ವರದಾನವಾಗಿದ್ದು, ಬೆಂಗಳೂರು ನಗರದ ಗ್ರಾಹಕರು ಕೂಡ ಸ್ಪಂದಿಸುತ್ತಿರುವುದು ವಿಶೇಷ ಎಂದು ಸಂಘಟಕರು ಹೇಳಿದ್ದಾರೆ.

(ವರದಿ- ಎಚ್.‌ ಮಾರುತಿ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.