ವಿಜಯಪುರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಆಲಗೂರ ಕಣಕ್ಕೆ; ಈ ಹೋರಾಟಗಾರ ಬೆಳೆದು ಬಂದ ಹಾದಿಯೇ ರೋಚಕ
ತೀವ್ರ ಕುತೂಹಲ ಮೂಡಿಸಿದ್ದ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಯಾರೆಂದು ಅಂತಿಮಗೊಂಡಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಪ್ರೊ ರಾಜು ಆಲಗೂರ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಂತಿಮಗೊಂಡಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಪ್ರೊ ರಾಜು ಆಲಗೂರ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಲಿತ ಸಂಘರ್ಷ ಸಮಿತಿ ಮೂಲಕ ಹೋರಾಟ, ಉಪನ್ಯಾಸಕ ವೃತ್ತಿ ಹೀಗೆ ಹಲವಾರು ರೀತಿಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರೊ. ರಾಜು ಆಲಗೂರ ಈಗ ಲೋಕಸಭೆ ಚುನಾವಣೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ದಲಿತ ಸಂಘರ್ಷ ಸಮಿತಿ ಯುವ ಹುಲಿ ಎಂದೇ ಹೆಸರಾಗಿದ್ದ ರಾಜು ದಲಿತ ಹೋರಾಟದ ಮುಂಚೂಣಿ ನಾಯಕರಾಗಿದ್ದರು. 1985ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಪದವಿ ಪಡೆದ ರಾಜು ಆಲಗೂರ ಬಿಎಲ್ಡಿಇ ಸಂಸ್ಥೆಯ ಅಥರ್ಗಾ ಪಿಯು ಕಾಲೇಜ್ ಉಪನ್ಯಾಸಕನಾಗಿ ವೃತ್ತಿಜೀವನ ಆರಂಭಿಸಿದರು. 1989 ರಲ್ಲಿ ಅವಿಭಜಿತ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಸಾರಥ್ಯ ಸಹ ವಹಿಸಿಕೊಂಡಿದ್ದರು ರಾಜು.
ಆಗ ಅಜಾತಶತ್ರು ಎಂದೇ ಹೆಸರಾಗಿದ್ದ ದಿ.ಬಿಎಂ ಪಾಟೀಲರು, ಆಲಗೂರ ಅವರ ಸಂಘಟನಾ ಶಕ್ತಿ, ಜನಪರ ಕಾಳಜಿ ಮೆಚ್ಚಿ ರಾಜಕೀಯ ಪ್ರವೇಶಕ್ಕೆ ಪ್ರೋತ್ಸಾಹ ನೀಡಿದ್ದರು. ಈ ನಡುವೆ ಆಗ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ ಎಂಬಿ ಪಾಟೀಲ ಅವರು ರಾಜು ಅವರನ್ನು ರಾಜಕೀಯಕ್ಕೆ ಕರೆ ತಂದರು. ದಿ.ಬಿಎಂ ಪಾಟೀಲ ಹಾಗೂ ಎಂಬಿ ಪಾಟೀಲ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದು ಭಾವಿಸುವ ಆಲಗೂರ 1999ರಲ್ಲಿ ಬಳ್ಳೊಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು.
ನಂತರ 2004 ರಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಅನುಭವಿಸಿದ್ದ ರಾಜು, 2014ರಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅಲ್ಲದೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಸಾಬೂನು ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ನಂತರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ದೃಷ್ಟಿಯಿಂದ ರಾಜು ಆಲಗೂರ ಅವರು ನಾಗಠಾಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಯ ನಿರಾಕರಿಸಿದ್ದರು.
ಆದರೆ ಬದಲಾದ ಕಾಲಘಟ್ಟದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಪರಿಣಾಮವಾಗಿ ವಿಜಯಪುರ ಲೋಕಸಭಾ ಟಿಕೆಟ್ ಜೆಡಿಎಸ್ ಪಾಲಾಯಿತು. ಆದರೂ ಸಹ ಪಕ್ಷಕ್ಕಾಗಿ ಆಲಗೂರ ಹಗಲಿರುಳು ಸೇವೆ ಮಾಡಿದರು. ನಂತರ 2023ರ ಚುನಾವಣೆಯಲ್ಲಿ ಪುನಃ ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಇಂಗಿತ ವ್ಯಕ್ತಪಡಿಸಿದರು. ಆದರೆ ಈ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿದ ವಿಠ್ಠಲ ಕಟಕದೊಂಡ ಅವರಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ಆಲಗೂರ ಒಪ್ಪಿಕೊಂಡರು. ಪರಿಣಾಮ ಎರಡು ಬಾರಿ ತ್ಯಾಗದ ಫಲ ಎಂಬಂತೆ ಈ ಬಾರಿ ಲೋಕಸಭೆ ಟಿಕೆಟ್ ಆಲಗೂರ ಅವರಿಗೆ ದಕ್ಕಿದೆ.