ನಮ್ಮ ಗುರಿ, ಸತೀಶ್..ಅಲ್ಲಲ್ಲ, ರಮೇಶ್ ಜಾರಕಿಹೊಳಿ ಗುರಿ ಒಂದೇ: ಕಟೀಲ್ ಟಂಗ್ ಸ್ಲಿಪ್ ಸರಿಮಾಡಿಕೊಂಡಿದ್ದು ಹೀಗೆ..!
ರಮೇಶ್ ಜಾರಕಿಹೊಳಿ ಖಂಡಿತವಾಗಿಯೂ ಮತ್ತೆ ಸಚಿವರಾಗುತ್ತಾರೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳು ಈ ಕುರಿತು ನಿರ್ಣಯ ತೆಗೆದುಕೊಳ್ಳುತ್ತಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ಸಿಗುವುದು ಪಕ್ಕಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಕಟೀಲ್ ಪಕ್ಷದ ಸಭೆ ಉದ್ದೇಶಿಸಿ ಮಾತನಾಡಿದರು.
ಬೆಳಗಾವಿ: ʼʼಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಾಮರ್ಥ್ಯ ವೃದ್ಧಿಸುವುದೇ ನಮ್ಮ ಮತ್ತು ಸತೀಶ್ ಜಾರಕಿಹೊಳಿ...ಅಲ್ಲಲ್ಲ, ರಮೇಶ್ ಜಾರಕಿಹೊಳಿ ಅವರ ಗುರಿ..ʼʼ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಾಯ್ತಪ್ಪಿನಿಂದ ಅಡಿದ ಮಾತೊಂದು ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿದ್ದು ಹೀಗೆ..
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ತೃಪ್ತಿದಾಯಕ ಎಂದು ಹೇಳಿದರು. ಮುಂಬರುವ ವಿಧಾನಸಭೆ ಚುನಾವಣೆಯನ್ನು ಜಿಲ್ಲೆಯಲ್ಲಿ ಯಾರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಸಂೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಕಟೀಲ್ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ದೊರಕಿಸಿ ಕೊಡುವುದೇ ನಮ್ಮ ಹಾಗೂ ಸತೀಶ್ ಜಾರಕಿಹೊಳಿ ಗುರಿ ಒಂದೇ ಎಂದ ಕಟೀಲ್, ಕೂಡಲೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ರಮೇಶ್ ಜಾರಕಿಹೊಳಿ ಎಂದು ಹೇಳಿದರು. ಆಗ ಪತ್ರಿಕಾಗೋಷ್ಠಿಯಲ್ಲಿದ್ದ ಬಾಲಚಂದ್ರ ಜಾರಕಿಹೊಳಿ ಅವರೂ ಸೇರಿದಂತೆ ಎಲ್ಲರೂ ಮುಗುಳ್ನಕ್ಕರು.
ಮುಂದುವರೆದು ಮಾತನಾಡಿದ ಕಟೀಲ್, ರಮೇಶ್ ಜಾರಕಿಹೊಳಿ ಖಂಡಿತವಾಗಿಯೂ ಮತ್ತೆ ಸಚಿವರಾಗುತ್ತಾರೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳು ಈ ಕುರಿತು ನಿರ್ಣಯ ತೆಗೆದುಕೊಳ್ಳುತ್ತಾರೆ. ಕರ್ನಾಟಕದಲ್ಲಿ ಅವಧಿಗೂ ಮೊದಲೇ ಚುನಾವಣೆ ನಡೆಸುವ ಧಾವಂತ ನಮಗಿಲ್ಲ. ಪೂರ್ಣ ಐದು ವರ್ಷಗಳ ಕಾಲ ಅಧಿಕಾರ ನಡೆಸಿ ಚುನಾವಣೆ ಎದುರಿಸುತ್ತೇವೆ ಎಂದು ಕಟೀಲ್ ಇದೇ ವೇಳೆ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯನವರಿಗೆ ರಾಜಕೀಯ ಸನ್ಯಾಸತ್ವ ಕೊಡಿಸುವ ಸಂಕಲ್ಪ ಬಿಜೆಪಿ ಮತ್ತು ರಮೇಶ್ ಜಾರಕಿಹೊಳಿಯವರದ್ದಾಗಿದೆ ಎಂದು ಕಟೀಲ್ ಇದೇ ವೇಳೆ ನುಡಿದರು. ಆಂತರಿಕ ಭದ್ರೆತೆಗೆ ದಕ್ಕೆ ತರುವ ನಿಟ್ಟಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ ಕಾಂಗ್ರಸ್ ಪಕ್ಷವನ್ನು ಮೊದಲು ನಿಷೇಧ ಮಾಡಬೇಕಿದೆ ಎಂದೂ ಕಟೀಲ್ ಇದೇ ವೇಳೆ ಹರಿಹಾಯ್ದರು.
ಕೇಂದ್ ಸರ್ಕಾರ ಪಿಎಫ್ಐ ಸಂಘಟನೆ ನಿಷೇಧ ಮಾಡಿದ ಮೇಲೆ, ಕಾಂಗ್ರೆಸ್ನವರು ಆರ್ಎಸ್ಎಸ್ ನಿಷೇಧ ಮಾಡಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಇದು ಆಂತರಿಕ ಭದ್ರತೆಯ ಬಗ್ಗೆ ಕಾಂಗ್ರೆಸ್ ಹೊಂದಿರುವ ನೀತಿ. ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೇರಣೆ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ ಎಂದು ಕಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಆಡಳಿತ ನಡೆಸಿದರೆ, ದೇಶ ಹಾಳಾಗುತ್ತದೆ ಎಂಬುದು ಮಹಾತ್ಮಾ ಗಾಂಧಿಜೀಗೆ ಮೊದಲೇ ಗೊತ್ತಿತ್ತು. ಹೀಗಾಗಿಯೇ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡುವಂತೆ ಗಾಂಧಿಜೀ ಸಲಹೆ ನೀಡಿದ್ದರು. ಸಿದ್ದರಾಮಯ್ಯ ಈ ಇತಿಹಾಸವನ್ನು ಸ್ವಲ್ಪ ತಿಳಿದುಕೊಳ್ಳಲಿ ಎಂದು ಕಟೀಲ್ ವ್ಯಂಗ್ಯವಾಡಿದರು.
ಇನ್ನು ರಾಹುಲ್ ಗಾಂಧಿ ಭಾರತ ಜೋಡೋ ಪಾದಯಾತ್ರೆ ಮಾಡುವ ಸಂದರ್ಭದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮೇಲೆ ಸಿಬಿಐ ದಾಳಿ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್, ಸಿಬಿಐ ಸ್ವತಂತ್ರ ತನಿಖಾ ತಂಡ ಎಂಬುದನ್ನು ಯಾರೂ ಮರೆಯಬಾರದು ಎಂದರು. ರಾಹುಲ್ ಅವರ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದೂ ಕಟೀಲ್ ಇದೇ ವೇಳೆ ಸ್ಪಷ್ಟಪಡಿಸಿದರು.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು 9 ಗಂಟೆಗಳ ಕಾಲ ತನಿಖೆಗೆ ಗುರಿಪಡಿಸಲಾಗಿತ್ತು. ಮಾಡಿದ್ದರು. ಅಮಿತ್ ಶಾ ಅವರನ್ನು ಜೈಲಿಗೆ ಹಾಕಲಾಗಿತ್ತು. ಅವಾಗ ನಾವು ಬೀದಿಗೆ ಇಳಿದು ಹೋರಾಟ ಮಾಡಿರಲಿಲ್ಲ. ಕಾಂಗ್ರೆಸ್ ನಾಯಕರಿಗೆ ಕಾನೂನಿಗೆ ಗೌರವ ಕೊಡುವುದೇ ಗೊತ್ತಿಲ್ಲ ಎಂದು ಕಟೀಲ್ ಕಿಡಿಕಾರಿದರು.