ಮಂಗಳೂರು ಹೊರವಲಯದಲ್ಲಿ ಅತ್ಯಾಚಾರ ಶಂಕೆ: ಅಸ್ವಸ್ಥ ಸ್ಥಿತಿಯಲ್ಲಿ ಯುವತಿ ಪತ್ತೆ
ಮಂಗಳೂರು ಹೊರವಲಯದ ಉಳ್ಳಾಲ ಪರಿಸರದಲ್ಲಿ ಪಶ್ಚಿಮ ಬಂಗಾಲ ಮೂಲದ ಯುವತಿಯೊಬ್ಬಳು ಅಸ್ವಸ್ಥ ಸ್ಥಿತಿಯಲ್ಲಿ ಗಾಯಗೊಂಡು ಪತ್ತೆಯಾಗಿದ್ದು, ಸಾಮೂಹಿಕ ಅತ್ಯಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಪರಿಸರದಲ್ಲಿ ಪಶ್ಚಿಮ ಬಂಗಾಲ ಮೂಲದ ಯುವತಿಯೊಬ್ಬಳು ಅಸ್ವಸ್ಥ ಸ್ಥಿತಿಯಲ್ಲಿ ಗಾಯಗೊಂಡು ಪತ್ತೆಯಾಗಿದ್ದು, ಸಾಮೂಹಿಕ ಅತ್ಯಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಯುವತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತಸೆ ಪಡೆಯುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ನಿಖರ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.
ತೀವ್ರ ಅಸ್ವಸ್ಥಗೊಂಡಿರುವ ಯುವತಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹಲವು ಊಹಾಪೋಹಗಳು ಹರಡಿದ್ದು, ಆಟೋ ಚಾಲಕ ಸೇರಿ ಮೂವರು ವ್ಯಕ್ತಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ಹೇಳಲಾಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉಳ್ಳಾಲ ರಾಣಿಪುರ ಸಮೀಪ ನೇತ್ರಾವತಿ ನದಿ ಬಳಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.
ಘಟನೆ ವಿವರ ಹೀಗಿದೆ
ನೀರು ಕೇಳಿಕೊಂಡು ಬಂದು ಮನೆಯೊಂದರ ಬಾಗಿಲು ಬಡಿದಿದ್ದ ಈ ಯುವತಿ, ಕೆಲವೇ ಕ್ಷಣದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು. ಹೊರರಾಜ್ಯದ ಈ ಯುವತಿಯ ಮೈಯಲ್ಲಿ ಗಾಯದ ಗುರುತುಗಳಿವೆ ಎನ್ನಲಾಗಿದೆ. ಮನೆಯವರು ಬಾಗಿಲು ತೆರೆದಾಗ ಯುವತಿಗೆ ಪ್ರಜ್ಞೆ ಇತ್ತು. ಆಕೆ ನಶೆಯಲ್ಲಿದ್ದಳು. ಕೆಲವೇ ಕ್ಷಣದಲ್ಲಿ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಬಳಿಕ ಮನೆಯವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆಕೆಗೆ ಪ್ರಜ್ಞೆ ಬಂದರೂ ಮಾತನಾಡಲಾಗದ ಸ್ಥಿತಿಯಲ್ಲಿದ್ದಳು. ಈ ಪ್ರದೇಶದಲ್ಲಿ ನಿರ್ಜನ ಮನೆಯೊಂದಿದ್ದು, ಅಲ್ಲಿ ಗಾಂಜಾ ವ್ಯಸನಿಗಳು ಬರುತ್ತಿರುವ ಶಂಕೆ ಇದೆ. ಬುಧವಾರ ತಡರಾತ್ರಿ ನಾಲ್ವರ ತಂಡ ಬಂದಿತ್ತು ಎನ್ನಲಾಗಿದೆ. ಯುವತಿ ಯಾರ ಜೊತೆ ಬಂದಿದ್ದಳು, ಪರಿಚಿತರೇ ಅಥವಾ ಬೇರೇನಾದರೂ ನಡೆದಿದೆಯೇ ಎಂಬ ಕುರಿತು ಇನ್ನಷ್ಟೇ ಮಾಹಿತಿ ದೊರಕಬೇಕಿದೆ.