Karnataka Reservoirs: ತಗ್ಗಿದ ಕಬಿನಿ ಹೊರ ಹರಿವು, ಕೆಆರ್‌ಎಸ್‌, ಅಲಮಟ್ಟಿ ಜಲಾಶಯದಿಂದ ಅಧಿಕ ನೀರು ಹೊರಕ್ಕೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ತಗ್ಗಿದ ಕಬಿನಿ ಹೊರ ಹರಿವು, ಕೆಆರ್‌ಎಸ್‌, ಅಲಮಟ್ಟಿ ಜಲಾಶಯದಿಂದ ಅಧಿಕ ನೀರು ಹೊರಕ್ಕೆ

Karnataka Reservoirs: ತಗ್ಗಿದ ಕಬಿನಿ ಹೊರ ಹರಿವು, ಕೆಆರ್‌ಎಸ್‌, ಅಲಮಟ್ಟಿ ಜಲಾಶಯದಿಂದ ಅಧಿಕ ನೀರು ಹೊರಕ್ಕೆ

Karntaka Dam level ಕರ್ನಾಟಕದಲ್ಲಿ ಕೆಲವು ಜಲಾಶಯಗಳು ಈಗಾಗಲೇ ತುಂಬಿದ್ದು ಬಹುತೇಕ ಜಲಾಶಯಗಳು ತುಂಬುವ ಹಂತಕ್ಕೆ ಬಂದಿವೆ. ಭಾನುವಾರ ಸಂಜೆ ಹೊತ್ತಿಗೆ ಜಲಾಶಯಗಳ ಸ್ಥಿತಿಗತಿ ಹೀಗಿತ್ತು.

ಹಾಸನ ಜಿಲ್ಲೆಯ ರಾಮನಾಥಪುರ ಬಳಿ ಕಾವೇರಿ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ಹಾಸನ ಜಿಲ್ಲೆಯ ರಾಮನಾಥಪುರ ಬಳಿ ಕಾವೇರಿ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಲ್ಲೂ ಎಡಬಿಡದೇ ಮಳೆಯಾಗುತ್ತಿರುವುದರಿಂದ ಕರ್ನಾಟಕದ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ನದಿಗಳಿಂದಾಗಿ ಜಲಾಶಯಗಳಲ್ಲೂ ಭಾನುವಾರ ಸಂಜೆ ಹೊತ್ತಿಗೆ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಈಗಾಗಲೇ ತುಂಗಾ, ಕಬಿನಿ, ಸೂಪಾ, ಹಾರಂಗಿ ಜಲಾಶಯಗಳು ತುಂಬಿವೆ. ಕೃಷ್ಣರಾಜಸಾಗರ ತುಂಬುವ ಹಂತಕ್ಕೆ ಬಂದಿದೆ. ಆಲಮಟ್ಟಿ. ಭದ್ರಾ. ತುಂಗಭದ್ರಾ ಜಲಾಶಯಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಪಡೆಯುತ್ತಿವೆ. ಈ ಜಲಾಶಯಗಳೂ ಮಾಸಾಂತ್ಯದೊಳಗೆ ತುಂಬುವ ಲಕ್ಷಣಗಳು ಕಂಡಿವೆ. ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ನೋಡಿಕೊಂಡು ಈಗಾಗಲೇ ತುಂಗಾ, ಕಬಿನಿ, ಕೆಆರ್‌ಎಸ್‌, ಆಲಮಟ್ಟಿ ಜಲಾಶಯದಿಂದಲೂ ಭಾರೀ ನೀರು ಹರಿಸಲಾಗುತ್ತಿದೆ. ಕೆಆರ್‌ಎಸ್‌ ಜತೆಗೆ ಹೇಮಾವತಿ, ಭದ್ರಾ ಜಲಾಶಯದಿಂದಲೂ ಶನಿವಾರದಿಂದ ನೀರು ಹರಿಸಲಾಗುತ್ತಿದೆ. ಕಬಿನಿ ಹೊರಹರಿವನ್ನು ತಗ್ಗಿಸಲಾಗಿದೆ.

ಕಬಿನಿ ಜಲಾಶಯ

ಕೇರಳದಲ್ಲಿ ಸುರಿದ ಭಾರೀ ಮಳೆ ಪರಿಣಾಮವಾಗಿ ಕಬಿನಿ ಜಲಾಶಯಕ್ಕೆ ಯಥೇಚ್ಛ ನೀರು ಹರಿದು ಬಂದಿದೆ. ಭಾನುವಾರ ಸಂಜೆ 4ರ ಹೊತ್ತಿಗೆ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 32,510 ಕ್ಯೂಸೆಕ್‌ ಇತ್ತು. ಹೊರ ಹರಿವಿನ ಪ್ರಮಾಣವನ್ನು ಇಳಿಸಲಾಗಿದ್ದು. ಸದ್ಯ ಹೊರ ಹರಿವು 20,000 ಕ್ಯೂಸೆಕ್‌ ಮಾತ್ರ ಇದೆ. ಜಲಾಶಯದ ನೀರಿನ ಮಟ್ಟವು 2281.36 ಅಡಿ ಇದೆ. ಜಲಾಶಯದಲ್ಲಿ 2284 ನೀರು ಸಂಗ್ರಹಿಸಲು ಅವಕಾಶವಿದೆ. ಕಬಿನಿ ಜಲಾಶಯದಲ್ಲಿ ಈಗ 17.85 ಟಿಎಂಸಿ ಇದ್ದು. 19.52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಕೇರಳದಲ್ಲಿ ಮಳೆಯಾಗುತ್ತಿದ್ದು,ನೀರಿನ ಒಳ ಹರಿವಿನ ಪ್ರಮಾಣ ನೋಡಿಕೊಂಡು ಹೊರ ಹರಿವು ನಿರ್ಧರಿಸುವ ತೀರ್ಮಾನಕ್ಕೆ ಕಬಿನಿ ವ್ಯಾಪ್ತಿಯ ಅಧಿಕಾರಿಗಳು ಬಂದಿದ್ದಾರೆ.

ಕೆಆರ್‌ಎಸ್‌ ಜಲಾಶಯ

ಮಂಡ್ಯ ಜಿಲ್ಲೆಯತ ಕೆಆರ್‌ಎಸ್‌ ಜಲಾಶಯವೂ ಈ ಬಾರಿ ಬಹುಬೇಗನೇ ತುಂಬಿದೆ. ಒಂದು ವಾರದಲ್ಲಿಯೇ ಶೇ. 25 ತುಂಬಿ ಹೊರ ಹರಿವು ಆರಂಭಿಸಲಾಗಿದೆ. ಭಾನುವಾರ ಸಂಜೆ ಹೊತ್ತಿಗೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟವು 123 ಅಡಿ ದಾಟಿದೆ. ಇನ್ನೊಂದು ಅಡಿ ಮಾತ್ರ ತುಂಬಲು ಬೇಕಾಗಿದೆ. ಜಲಾಶಯದ ಗರಿಷ್ಠ ಮಟ್ಟವು124.80 ಅಡಿ. ಸದ್ಯ ಜಲಾಶಯಕ್ಕೆ 69,161 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 51,769 ಕ್ಯೂಸೆಕ್‌ ನಷ್ಟಿದೆ. ಸದ್ಯ 46.835 ಟಿಎಂಸಿ ನೀರು ಸಂಗ್ರಹಿಸಲಾಗಿದ್ದು, 49.452 ಟಿಎಂಸಿ ನೀರನ್ನು ಕೆಆರ್‌ಎಸ್‌ ನಲ್ಲಿ ಸಂಗ್ರಹಿಸಬಹುದು.

ಭಾರೀ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿ ಬಿಡುತ್ತಿರುವುದರಿಂದ ರಂಗನತಿಟ್ಟು ಪಕ್ಷಿಧಾಮವನ್ನು ಪ್ರವಾಸಿಗರಿಗೆ ಬಂದ್‌ ಮಾಡಲಾಗಿದೆ. ಎರಡು ದಿನದ ಹಿಂದೆ ದೋಣಿ ವಿಹಾರ ಬಂದ್‌ ಮಾಡಲಾಗಿತ್ತು.

ಕೃಷ್ಣರಾಜ ಸಾಗರ ಜಲಾಶಯಕ್ಕೆ ನೀರಿನ ಹರಿವು ಚೆನ್ನಾಗಿದೆ. ಹೇಮಾವತಿಯಿಂದ ಹರಿಸಿದ್ದ ನೀರು ಸೇರುತ್ತಿದೆ. ಹಾರಂಗಿಯಿಂದಲೂ ನೀರು ಬರುತ್ತಿದೆ. ಜಲಾಶಯ ಬಹುತೇಕ ತುಂಬಿದ್ದು. ಒಳ ಹರಿವು ಬಹಳ ಇರುವ ಕಾರಣಕ್ಕೆ ಹೊರ ಹರಿವನ್ನು ಹೆಚ್ಚಿಸಿ ಜಲಾಶಯದ ಸುರಕ್ಷತೆ ಕಾಪಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಹಾರಂಗಿ ಜಲಾಶಯ

ಕೊಡಗಿನ ಹಾರಂಗಿ ಜಲಾಶಯದ ನೀರಿನ ಮಟ್ಟವು 2854.42 ಅಡಿ ತಲುಪಿದೆ. ಜಲಾಶಯಕ್ಕೆ ಈಗಲೂ 8069 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು. ಹೊರ ಹರಿವಿನ ಪ್ರಮಾಣವನ್ನು 5750 ಕ್ಯೂಸೆಕ್‌ಗೆ ಇಳಿಕೆ ಮಾಡಲಾಗಿದೆ.

ಹೇಮಾವತಿ ಜಲಾಶಯ

ಹಾಸನದ ಹೇಮಾವತಿ ಜಲಾಶಯಕ್ಕೂ 23,700 ಕ್ಯೂಸೆಕ್‌ ನೀರು ಹರಿದು ಹರುತ್ತಿದೆ. ಜಲಾಶಯದ ನೀರಿನ ಮಟ್ಟವು 2919.52 ಅಡಿಗೆ ತಲುಪಿದೆ. ಗರಿಷ್ಠ ಮಟ್ಟ 2922 ಅಡಿ. ಜಲಾಶಯದಿಂದ ಸದ್ಯ ನದಿ ಹಾಗೂ ನಾಲೆ ಸೇರಿ 3200 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಮಧ್ಯಾಹ್ನ 2ರ ಹೊತ್ತಿಗೆ ಕ್ರಸ್ಟ್‌ ಗೇಟ್‌ಗಳ ಮೂಲಕ ಹರಿಸುವುದನ್ನು ನಿಲ್ಲಿಸಲಾಗಿದೆ. ಜಲಾಶಯದಲ್ಲಿ ಸದ್ಯ 34.725 ಟಿಎಂಸಿ ನೀರು ಸಂಗ್ರಹವಾಗಿದ್ದು, 37.10 ಟಿಎಂಸಿ ಸಂಗ್ರಹಿಸುವ ಸಾಮರ್ಥ್ಯವಿದೆ.

ಲಿಂಗನ ಮಕ್ಕಿಗೂ ನೀರು

ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಲ್ಲೂ ನೀರಿನ ಪ್ರಮಾಣ ಭಾನುವಾ ಏರಿದೆ. ಜಲಾಶಯದ ನೀರಿ ಮಟ್ಟವು 1796.05 ಅಡಿ ತಲುಪಿದೆ. ಒಳ ಹರಿವು 48,793 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ 86.47 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 151.64 ಟಿಎಂಸಿ ನೀರು ಸಂಗ್ರಹಿಸಬಹುದು.

ಭದ್ರಾ ಒಳಹರಿವಿನಲ್ಲಿ ಇಳಿಕೆ

ಇನ್ನು ಚಿಕ್ಕಮಗಳೂರು ಭಾಗದಲ್ಲಿ ಮಳೆ ಪ್ರಭಾವ ಕಡಿಮೆಯಾಗಿದ್ದರಿಂದ ಭದ್ರಾ ಜಲಾಶಯಕ್ಕೂ ಬರುತ್ತಿರುವ ಒಳ ಹರಿವಿನಲ್ಲಿ ಗಣನೀಯ ಇಳಿಕೆಯಾಗಿದೆ. ಹೊರ ಹರಿವನ್ನೂ ಕೂಡ ತಗ್ಗಿಸಲಾಗಿದೆ. ಭದ್ರಾ ಜಲಾಶಯಕ್ಕೆ ಭಾನುವಾರ 23674 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು 191 ಕ್ಯೂಸೆಕ್ ಇದೆ. ಶುಕ್ರವಾರದವರೆಗೆ ಒಳಹರಿವು 48,000 ಕ್ಯೂಸೆಕ್‌ ಇತ್ತು. ಶನಿವಾರ ಈ ಪ್ರಮಾಣ 46876 ಕ್ಯೂಸೆಕ್ ನಷ್ಟಾಗಿತ್ತು ಭಾನುವಾರ 23674 ಕ್ಯೂಸೆಕ್ ಗೆ ಇಳಿದಿದೆ. ಜಲಾಶಯದ ನೀರಿನ ಮಟ್ಟವು164.4 ಅಡಿಗೆ ತಲುಪಿದೆ. ಗರಿಷ್ಠ ಮಟ್ಟವು 186 ಅಡಿಯಷ್ಟಿದೆ. 71.5 ಟಿಎಂಸಿ ನೀರನ್ನು ಇಲ್ಲಿಗೆ ಸಂಗ್ರಹಿಸಬಹುದಾಗಿದ್ದು, ಸದ್ಯ 47.06 ಟಿಎಂಸಿ ನೀರಿದೆ.

ಆಲಮಟ್ಟಿಯಲ್ಲಿ ಏರಿಕೆ

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಭಾನುವಾರ ಸಂಜೆ ಮತ್ತೆ ಭಾರೀ ನೀರು ಹರಿದು ಬರುತ್ತಿದ್ದು , ಹೊರಹರಿವನ್ನು ಏರಿಸಲಾಗಿದೆ. ಸದ್ಯ ಜಲಾಶಯಕ್ಕೆ 87,217 ಕ್ಯೂಸೆಕ್‌ ನೀರು ಒಳ ಹರಿವು ಇದೆ. ಹೊರ ಹರಿವಿನ ಪ್ರಮಾಣವನ್ನು 1,00,064ಕ್ಕೆ ಏರಿಕೆ ಮಾಡಲಾಗಿದೆ. ಜಲಾಶಯದ ನೀರಿನ ಮಟ್ಟವು 517.90 ಮೀಟರ್‌ ಇದೆ. ಗರಿಷ್ಠ ಮಟ್ಟವು 519.60 ಮೀಟರ್‌. ಒಟ್ಟು 96.306 ಟಿಎಂಸಿ ನೀರು ಇಲ್ಲಿ ಈಗ ಸಂಗ್ರಹವಾಗಿದೆ.

ಘಟಪ್ರಭಾ ನದಿಯಿಂದಯೂ ನೀರು ಹರಿಸಿರುವ ಜತೆಗೆ ಕೃಷ್ಣಾ ನದಿಯಲ್ಲೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಇದರಿಂದ ನಿಧಾನವಾಗಿ ಆಲಮಟ್ಟಿಯಿಂದ ಕೃಷ್ಣಾನದಿ ಹೊರ ಹರಿವಿನ ಪ್ರಮಾಣವನ್ನು1,25,000 ಕ್ಯೂಸೆಕ್‌ನಿಂದ 1,50,000 ಕ್ಯೂಸೆಕ್‌ಗೆ ಏರಿಕೆ ಮಾಡಲಾಗುವುದು. ಭಾನುವಾರ ರಾತ್ರಿ ಹೊತ್ತಿಗೆ ಇನ್ನಷ್ಟು ಹೆಚ್ಚಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Whats_app_banner