ಆಕ್ರೋಶ vs ಸಹಾನುಭೂತಿ: ಬೆಂಗಳೂರು ರಸ್ತೆ ಜಗಳದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ, ಅಧಿಕಾರಿ ಅಮಾನತಿಗೆ ಆಗ್ರಹ
ವಿಂಗ್ ಕಮಾಂಡರ್ ಮತ್ತು ಡೆಲಿವರಿ ಬಾಯ್ ನಡುವಿನ ಗಲಾಟೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ಇಲ್ಲಿನ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಏಪ್ರಿಲ್ 21ರ ಬೆಳಿಗ್ಗೆ ವಾಯುಪಡೆಯ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದ್ದ. ಇದು ದೊಡ್ಡ ಸಂಚಲನ ಮೂಡಿಸಿತ್ತು. ಬೈಕ್ ಸವಾರನೊಬ್ಬ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದಿದ್ದ. ಈ ವಿಡಿಯೋದಲ್ಲಿ ಆತನ ಮುಖದಲ್ಲಿ ರಕ್ತ ಸೋರುತ್ತಿತ್ತು. ಗಾಯಕ್ಕೆ ಬ್ಯಾಂಡೇಜ್ ಕಟ್ಟಿಕೊಂಡಿದ್ದ. ಇದೀಗ ಸಿಸಿಟಿವಿ ದೃಶ್ಯಗಳಲ್ಲಿ ವಿಂಗ್ ಕಮಾಂಡರ್ ಅಸಲಿ ಬಣ್ಣ ಬಯಲಾಗಿದೆ. ತಾನು ಹೇಳಿದ್ದೆಲ್ಲವೂ ಅಪ್ಪಟ ಸುಳ್ಳು ಎಂದು ಗೊತ್ತಾಗಿದೆ. ತಾನೇ ಕನ್ನಡಿಗನನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡ್ರಾಮಾ ಮಾಸ್ಟರ್ ವಾಯುಪಡೆಯ ವಿಂಗ್ ಕಮಾಂಡರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವ್ಯಾಪಕ ಚರ್ಚೆಯಾಗುತ್ತಿದೆ.
ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ತನ್ನದೇನು ತಪ್ಪೇ ಇಲ್ಲ ಎನ್ನುವ ರೀತಿ ಹೇಳಿಕೆ ಸಿಂಪತಿ ಗಿಟ್ಟಿಸಿಕೊಂಡು ಶೀಲಾದಿತ್ಯ ಡ್ರಾಮಾ ಮಾಡಿದ್ದ. ಪೊಲೀಸರಿಗೆ ದೂರು ಕೊಟ್ಟರೂ ಅದನ್ನು ಪರಿಗಣಿಸುತ್ತಿಲ್ಲ. ಸಿವಿ ರಾಮನ್ ನಗರದ ಡಿಆರ್ಡಿಒ ಕಾಲೋನಿಯಲ್ಲಿರುವ ತನ್ನ ಮನೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದ. ತನ್ನನ್ನು ಮನಬಂದಂತೆ ಹೊಡೆದಿದ್ದ. ಇದು ಸಾಲದಂತೆ, 'ದೇಶ ಕಾಯುವವರಿಗೆ ಕೊಡುವ ಮರ್ಯಾದೆ ಇದೇನಾ' ಎಂದು ಸಿನಿಮಾದಂತೆ ಡೈಲಾಗ್ ಹೇಳಿದ್ದ. ಜತೆಗೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದ. ಈಗ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಂಗ್ ಕಮಾಂಡರ್ ಹೇಳಿದ್ದೆಲ್ಲವೂ ಸುಳ್ಳು ಎಂದು ಗೊತ್ತಾಗಿದೆ. ತನಗೆ ಹೊಡೆದಿದ್ದಾನೆ ಎಂದು ಒಂದೇ ಕಣ್ಣಲ್ಲಿ ನೀರು ಹಾಕಿದ್ದ ಈತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ತಾನೇ ಥಳಿಸಿ ಕಥೆ ಕಟ್ಟಿದ ವಿಂಗ್ ಕಮಾಂಡರ್
ತನಗೆ ಕನ್ನಡ ಬರುವುದಿಲ್ಲ ಎಂದೆಲ್ಲಾ ದೂರಿದರು ಎಂದಿದ್ದ ವಿಂಗ್ ಕಮಾಂಡರ್, ಬಹಿರಂಗವಾದ ಸಿಸಿಟಿವಿ ದೃಶ್ಯಗಳಲ್ಲಿ ಮೃಗದಂತೆ ವರ್ತಿಸಿ ಬೈಕ್ ಸವಾರನ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ. ಮನಸೋ ಇಚ್ಛೆ ಥಳಿಸಿದ್ದಾರೆ. ರಕ್ತ ಬರುವಂತೆ ಹೊಡೆದಿದ್ದಾನೆ. ನಡು ರಸ್ತೆಗೆ ಎಸೆದು ಬೂಟ್ ಕಾಲಿನಿಂದ ಮುಖ, ಎದೆಗೆ ಒದ್ದಿದ್ದಾನೆ. ನೆರೆದಿದ್ದ ಜನರು ಬಿಡಿಸಲು ಹರಸಾಹಸ ಪಟ್ಟರು. ರಕ್ತ ಸ್ರಾವವಾಗಿದ್ದರೂ ಹೊಡೆಯುವುದನ್ನು ನಿಲ್ಲಿಸಲಿಲ್ಲ. ತಾನೊಬ್ಬ ಡಬ್ಲ್ಯುಡಬ್ಲ್ಯುಇ ಫೈಟರ್ ಎನ್ನುವ ರೀತಿ ಸವಾರನ ಮೇಲೆ ಥಳಿಸಿದ್ದಾನೆ. ಹೀಗೆ ಥಳಿಸಿದ ವಿಂಗ್ ಕಮಾಂಡರ್ ತನ್ನದೇ ಕಥೆ ಕಟ್ಟಿದ್ದಾನೆ. ಇದೀಗ ಆತನ ಮುಖವಾಡ ಬಟಾಬಯಲಾಗಿದೆ. ವಿಂಗ್ ಕಮಾಂಡರ್ ಮತ್ತು ಬೈಕ್ ಸವಾರನಿಗೆ ಜಗಳ ಆಗಿರುವುದು ನಿಜ. ಆದರೆ ನಿಖರವಾದ ಕಾರಣ ಏನೆಂದು ಗೊತ್ತಿಲ್ಲ. ಹಾಗಂತ ಥಳಿಸುವ ಹಕ್ಕು ಯಾರಿಗೂ ಇಲ್ಲ. ಈ ಘಟನೆ ನಡೆದಿದ್ದು ಟಿನ್ ಫ್ಯಾಕ್ಟರಿ ಜಂಕ್ಷನ್ ಸಮೀಪ.
ಬೈಕ್ ಸವಾರನ ತಾಳಿ ಅಳಲು
ಘಟನೆಯ ಬಳಿಕ ಥಳಿತಕ್ಕೆ ಒಳಗಾದ ಬೈಕ್ ಸವಾರನ ತಾಯಿ ಪ್ರತಿಕ್ರಿಯಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅವರು ಮಾಡಿದ ತಪ್ಪನ್ನು ನಮ್ಮ ಮಕ್ಕಳ ಮೇಲೆ ಹಾಕಿದ್ದು ಎಷ್ಟು ಸರಿ? ಒಬ್ಬ ಕಮಾಂಡರ್ ಆಗಿ, ಆರ್ಮಿಯಾಗಿ ಕೈ ಕಚ್ಚಿ, ರಸ್ತೆಯಲ್ಲೆಲ್ಲಾ ಬೈಕ್ ಬಿಸಾಕಿದ್ದಾರೆ. ಈ ರೀತಿ ಮಾಡಿದ್ರೂ ನಾವು ಯಾವುದೇ ದೂರು ನೀಡಲಿಲ್ಲ. ಒಂದು ವೇಳೆ ದೂರು ಕೊಟ್ಟಿದ್ದರೆ ಇನ್ನೂ ದೊಡ್ಡದಾಗುತ್ತಿತ್ತು. ಎನೋ ಚಿಕ್ಕ ಗಲಾಟೆ ಎನ್ನುವ ಕಾರಣಕ್ಕೆ ನಾವು ಸುಮ್ಮನಾದೆವು. ಅದಕ್ಕೆ ನಾವು ಮನೆ ಬಂದ್ವಿ. ಆದರೆ ಇವರು ದೊಡ್ಡದು ಮಾಡಿ ನಮ್ಮ ಮಗನಿಗೆ ತೊಂದ್ರೆ ಕೊಡ್ತಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು’ ಎಂದು ಬೈಕ್ ಸವಾರನ ತಾಯಿ ಕೋರಿದ್ದಾರೆ.
ಪೋಸ್ಟ್ ಅಳಿಸಿದ ಬಿಜೆಪಿ ಐಟಿ ಸೆಲ್ ಸದಸ್ಯ
ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯನ್ನೂ ಎಳೆದು ತರಲಾಗಿದೆ. ಬಿಜೆಪಿ ಐಟಿ ಸೆಲ್ ಸದಸ್ಯ ರಿಷಿ ಭಾಗ್ರಿ ಕನ್ನಡಿಗರ ಮೇಲೆ ದಾಳಿ ಮಾಡುವ ತಮ್ಮ ಟ್ವೀಟ್ ಅನ್ನು ಸದ್ದಿಲ್ಲದೆ ಅಳಿಸಿದ್ದಾರೆ. ಅವರು ವಿಡಿಯೋ ವೈರಲ್ ಆಗುವುದಕ್ಕೂ ಮುನ್ನ ಕನ್ನಡ ಮಾತನಾಡಿಲ್ಲ ಎನ್ನುವ ಕಾರಣಕ್ಕೆ ವಿಂಗ್ ಕಮಾಂಡರ್ ಕ್ರೂರವಾಗಿ ದಾಳಿಗೆ ಒಳಗಾಗಿದ್ದಾರೆ. ಕನ್ನಡಿಗರೇತರಿಗೆ ಕರ್ನಾಟಕ ಸುರಕ್ಷಿತವೇ ಎಂದು ಪೋಸ್ಟ್ ಹಾಕಿದ್ದರು. ಇದೀಗ ಈ ಪೋಸ್ಟ್ ಅಳಿಸಿದ್ದಾರೆ.
ಬೈಕರ್ ಓವರ್ಟೇಕ್ ಮಾಡುವ ಅವಧಿಯಲ್ಲಿ ಮಹಿಳೆ ಜೋರಾಗಿ ಕೂಗುತ್ತಾಳೆ. ಆಗ ಬೈಕರ್ ನಿಲ್ಲಿಸಿದಾಗ, ‘ನೀನು ಹೀಗಾ ಚಾಲನೆ ಮಾಡೋದು’ ಎಂದು ಮಹಿಳೆ ಪ್ರಶ್ನಿಸಿದ್ದಾಳೆ. ಇದರ ಬೆನ್ನಲ್ಲೇ ವಿಂಗ್ ಕಮಾಂಡರ್, ಬೈಕ್ ಸವಾರನಿಗೆ ತನ್ನ ಕಾರಿನಿಂದ ಗುದ್ದಿದ್ದಾನೆ. ಬಳಿಕ ಬೈಕರ್ ಆತನ ತಲೆಗೆ ಹೊಡೆದು ಏಕೆ ನನ್ನನ್ನು ಹೊಡೆದೆ ಎಂದು ಪ್ರಶ್ನಿಸಿದ್ದಾನೆ. ಆಗ ಈ ಗಲಾಟೆ ನಡೆದಿದೆ ಎಂದು ಮೊಹಮ್ಮದ್ ಜುಬೈರ್ ಎನ್ನುವವರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಆತನನ್ನು ಅಧಿಕಾರದಿಂದ ಕಿತ್ತಾಕಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಆಕ್ರೋಶ
ಘಟನೆ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಅಧಿಕಾರಿ ನಡೆಗೆ ಕಿಡಿಕಾರಿದ್ದಾರೆ. ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ನಂತರ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ.
ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿ. ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ.
ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೆ ಸರ್ಕಾರ ಕರ್ನಾಟಕದಲ್ಲಿದೆ. ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ. ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ.
ಅಧಿಕಾರಿ ಮಾಡಿದ್ದು ಸರಿ ಎಂದ ಮಾಜಿ ಪತ್ರಕರ್ತನ ವಿರುದ್ಧ ಕಿಡಿ
ಘಟನೆಯ ಬಳಿಕ ಮಾಜಿ ಪತ್ರಕರ್ತರೊಬ್ಬರು ಈ ವಿಡಿಯೋದ ಆರಂಭ ಗಮನಿಸಿದರೆ, ಆ ಅಧಿಕಾರಿ ಮಾಡಿದ ಕೆಲಸ ಸರಿ ಇದೆ. ಮೊದಲು ಗಾಡಿ ನಿಲ್ಲಿಸಿ ಜಗಳ ಶುರು ಮಾಡಿದ್ದು ಈ ಡೆಲಿವರಿ ಹುಡುಗ. ಸೌಂಡ್ ಕೇಳಿದರೆ, ಈತ ಹೋಗಿ ಕಾರಿನ ಮೇಲೆ ಗುದ್ದಿದ್ದಾನೆ. ಅವನಿಗೆ ಹೊಡೆದಿದ್ದಾನೆ. ಇನ್ನೊಂದು ವೀಡಿಯೋದಲ್ಲಿ ಹೀಗೆ ಬರುತ್ತಿರುವಾಗಲೇ ಆ ಆರ್ಮಿ ಆಫೀಸರ್ ಮೂಗಿನಿಂದ ರಕ್ತ ಸೋರುತ್ತಿತ್ತು. ಆಮೇಲೆ ಮತ್ತೂ ಜಗಳ ಮುಂದುವರಿಸಬೇಕು ಎಂದುಕೊಂಡೇ ಗಾಡಿಯನ್ನು ಸೈಡ್ಗೆ ಪಾರ್ಕ್ ಮಾಡುತ್ತಾನೆ. ಹೊಡೆದ ಈತ ಓಡಿಹೋಗುತ್ತಾನೆ ಎಂದು ಅವರಿಬ್ಬರೂ ಕಾರು ಇಳಿದು ಬಂದಿದ್ದಾರೆ. ಆತ ಬೈಕ್ ಬೀಳಿಸಿ ವಾಪಸ್ ಹೋಗುತ್ತಾನೆ. ಆದರೆ, ಹಾಗೆ ಹೋದವನನ್ನು ಈತ ತಲೆಗೆ ಹೊಡೆದು ಕೆರಳಿಸುತ್ತಾನೆ.
ಆಮೇಲೆ, ಅವನು ಸರಿಯಾಗಿ ತದುಕಿದ್ದಾನೆ. "ನಾನು ಹೊಡೆದರೆ ನಿನ್ನ ಗತಿಯೇನು?" ಎಂದು ಕೇಳುತ್ತಾ ಹೊಡೆದಿದ್ದಾನೆ ಎಂದರೆ, ಡೆಲಿವರಿ ಹುಡುಗನೇ ಮೊದಲು ಹೊಡೆದಾಟ ಶುರು ಮಾಡಿದ್ದು ಎನ್ನುವುದು ಗೊತ್ತಾಗುತ್ತದೆ. ಅವನು ಹೊಡೆಯಲು ಶುರು ಮಾಡಿದಾಗ ಈತನ ಹತ್ತಿರ ತಪ್ಪಿಸಿಕೊಳ್ಳುವುದಕ್ಕೂ ಆಗಿಲ್ಲ. ಇಲ್ಲಿ ಡೆಲಿವರಿ ಹುಡುಗನಿಗೆ "ಕನ್ನಡ" ಒಂದು ಅಸ್ತ್ರ. "ಕನ್ನಡ ಕಲ್ಚರ್" ಅಂತ ಹೇಳೋದು ಕೇಳುತ್ತೆ. ಇದೆಲ್ಲ ಈ ಕನ್ನಡ "ಓಲಾಟಗಾರರು" ಹುಟ್ಟಿಸಿದ ಹುಚ್ಚು. ನೀವು ಹೊರಗಿನಿಂದ ಬಂದವರನ್ನು ಎಷ್ಟು ಕೆಟ್ಟದಾಗಿ ಬೇಕಾದರೂ ನಡೆಸಿಕೊಳ್ಳಬಹುದು. ಅದನ್ನು ಕನ್ನಡದ ಹೆಸರಿನಲ್ಲಿ ಮುಚ್ಚಿ ಹಾಕಬಹುದು ಅಂತ. ಒಂದು ವೇಳೆ ಆ ಅಧಿಕಾರಿ ದಂಪತಿ ಕಾನೂನು ಪ್ರಕಾರ ಹೋಗಿದ್ದರೆ, ಇಷ್ಟು ಹೊತ್ತಿಗೆ ಪೊಲೀಸರು ಏನೆಂದರೆ ಏನೂ ಮಾಡುತ್ತಿರಲಿಲ್ಲ. ಆತನನ್ನು ಬಂಧಿಸುವ ಧೈರ್ಯವನ್ನೂ ತೋರುತ್ತಿರಲಿಲ್ಲ. ಅದಕ್ಕೆ ಅಧಿಕಾರಿ ಅಲ್ಲೇ ಸರಿಯಾದ ಪಾಠ ಕಲಿಸಿದ್ದಾನೆ ಎಂದು ಕೃಷ್ಣ ಭಟ್ ಎನ್ನುವವರ ಫೇಸ್ಬುಕ್ನಲ್ಲಿ ಬರೆದಿದ್ದಾರೆ. ಆದರೆ ಇವರ ವಿರುದ್ಧವೂ ಆಕ್ರೋಶ ವ್ತಕ್ತವಾಗಿದೆ.