Siddaramaiah Cabinet: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜತೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ 8 ಶಾಸಕರು
Siddaramaiah Cabinet: ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಯಾರೆಲ್ಲ ಮೊದಲ ಹಂತದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂಬ ಕುತೂಹಲ ಸಹಜ. ಲಭ್ಯ ಮಾಹಿತಿ ಪ್ರಕಾರ, ಕನಿಷ್ಠ ಎಂಟು ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಉಳಿದ ವಿವರ ಮುಂದೆ ಓದಿ.
ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ (Siddaramaiah), ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಜತೆಗೆ 8 ಶಾಸಕರು (8 MLAs) ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ (Congress) ಮೂಲಗಳು ತಿಳಿಸಿವೆ.
ಕಾಂಗ್ರೆಸ್ ವರಿಷ್ಠರು, ಹೈಕಮಾಂಡ್ ಅನುಮೋದಿಸಿದ ಸಚಿವರ ಪಟ್ಟಿಯೊಂದಿಗೆ ಬೆಂಗಳೂರಿಗೆ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೆ.ಸಿ.ವೇಣುಗೋಪಾಲ್ ಬರೆದದ್ದು ಎನ್ನಲಾದ ಪತ್ರದಲ್ಲಿ ಸಚಿವ ಸ್ಥಾನಕ್ಕೆ ಹೈಕಮಾಂಡ್ ಅನುಮೋದಿಸಿರುವ ಎಂಟು ಶಾಸಕರ ಹೆಸರು ಇದೆ. ಈ ಪತ್ರ ಬಹಿರಂಗವಾಗಿದೆ.
ಇದರಲ್ಲಿರುವ ಪ್ರಕಾರ, ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಔಪಚಾರಿಕವಾಗಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಸಿದ್ದರಾಮಯ್ಯ ಅವರು, ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮತ್ತೆ ದೆಹಲಿಗೆ ತೆರಳಿದರು. ಅಲ್ಲಿ ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸಿದ್ದರು. ಬೆಂಗಳೂರಿಗೆ ಹಿಂದಿರುಗುವಾಗ ಇವರು ಶಿವಕುಮಾರ್ ಅವರೊಂದಿಗೆ ಬಂದಿಲ್ಲ ಎನ್ನುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಡಿ.ಕೆ.ಶಿವಕುಮಾರ್ ಸಹ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ದೊರಕಿಸಲು ಯತ್ನಿಸಿದ್ದರು. ಅವರು ಈಗಷ್ಟೇ ದೆಹಲಿಯಿಂದ ಹೊರಟಿದ್ದು ಶೀಘ್ರ ಬೆಂಗಳೂರು ತಲುಪಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಇಂದು (ಮೇ 20) ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಪರಿಚಯ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಸತತ ಎರಡು ಭಾರಿ ಅಧ್ಯಕ್ಷರಾಗಿದ್ದ ಡಾ ಜಿ ಪರಮೇಶ್ವರ್ (Dr G Parameshwar) ಪ್ರಭಾವಿ ದಲಿತ ನಾಯಕರಾಗಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲೂ (Assembly Election 2023) ತುಮಕೂರು (Tumakur) ಜಿಲ್ಲೆಯ ಕೊರಟಗೆರೆಯಿಂದ (Koratagere) ಸ್ಪರ್ಧಿಸಿ ಗೆದ್ದ ಜಿ ಪರಮೇಶ್ವರ್ ಅವರು ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರು ಕೂಡ ಆಗಿದ್ದರು. ಅವರು ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಹಿರಿಯ ನಾಯಕನ ಪರಿಚಯ ಹೀಗಿದೆ
ಎಂ.ಬಿ.ಪಾಟೀಲರ ಕಿರುಪರಿಚಯ: ರಾಜ್ಯ ರಾಜಕಾರಣದಲ್ಲಿ ಎಂ.ಬಿ.ಪಾಟೀಲ್ (M B Patil) ಎಲ್ಲರಿಗೂ ಚಿರಪರಿಚಿತ ಹೆಸರು. ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕ. ಬಬಲೇಶ್ವರದ ಶಾಸಕ. ಮಾಜಿ ಸಚಿವ. ಜಲಸಂಪನ್ಮೂಲ ಸಚಿವರಾಗಿ ಹೆಸರು ಗಳಿಸಿದವರು. ಈಗ ಕರ್ನಾಟಕ ಚುನಾವಣೆ (Karnataka Assembly Election)ಯಲ್ಲಿ ಸತತ ನಾಲ್ಕನೇ ಗೆಲುವು ಬಯಸಿ ಬಬಲೇಶ್ವರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಸಲದ ಚುನಾವಣೆ ಎದುರಿಸಿ ಗೆಲುವಿನ ನಗೆ ಬೀರಿದ್ದಾರೆ. ಈಗ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದಾರೆ. - ಎಂ.ಬಿ.ಪಾಟೀಲ್ ಅವರ ಪರಿಚಯ ಇಲ್ಲಿದೆ
ಕೆ.ಎಚ್.ಮುನಿಯಪ್ಪ ಕಿರು ಪರಿಚಯ: ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಿಂದ ಸತತವಾಗಿ 7 ಬಾರಿ ಸಂಸದರಾಗಿದ್ದ ಕೆಹೆಚ್ ಮುನಿಯಪ್ಪ ಕೂಡ ಒಬ್ಬರು. ಆದರೆ ಈ ಬಾರಿಯ ಎಲೆಕ್ಷನ್ನಲ್ಲಿ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಬದಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಲ್ಲಿ ಕಣಕ್ಕೆ ಇಳಿದು ಗೆಲುವು ಕಂಡಿದ್ದಾರೆ. ಇವರು ಕೂಡ ಈ ಸಲ ಸಚಿವ ಸ್ಥಾನದ ಆಕಾಂಕ್ಷಿ. - 7 ಬಾರಿ ಸಂಸದರಾಗಿದ್ದ ಕೆಎಚ್ ಮುನಿಯಪ್ಪ; ಕಾಂಗ್ರೆಸ್ ನಾಯಕನ ಬದುಕಿನ ವಿವರ ಇಲ್ಲಿದೆ