Pramod Muthalik: ಹಿಂದೂ ವಿರೋಧಿ ಸಿದ್ದರಾಮಯ್ಯ ಹುಟ್ಟಿನ ಮೂಲ ಗೊತ್ತಾಗಬೇಕು: ಮುತಾಲಿಕ್ ಕಿಡಿನುಡಿ!
ಕಟ್ಟಾ ಹಿಂದೂ ವಿರೋಧಿ ಸಿದ್ದರಾಮಯ್ಯ ಅವರ ಹುಟ್ಟಿನ ಮೂಲವನ್ನು ಮೊದಲು ಪತ್ತೆ ಮಾಡಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ಧಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಸಿದ್ದರಾಮಯ್ಯ ತಲೆಯಿಂದ ಹಿಡಿದು ಪಾದದವರೆಗೂ ಹಿಂದೂ ವಿರೋಧಿ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಾಗಲಕೋಟೆ: ಕಟ್ಟಾ ಹಿಂದೂ ವಿರೋಧಿ ಸಿದ್ದರಾಮಯ್ಯ ಅವರ ಹುಟ್ಟಿನ ಮೂಲವನ್ನು ಮೊದಲು ಪತ್ತೆ ಮಾಡಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ಧಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಸಿದ್ದರಾಮಯ್ಯ ತಲೆಯಿಂದ ಹಿಡಿದು ಪಾದದವರೆಗೂ ಹಿಂದೂ ವಿರೋಧಿ ಎಂದು ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಎಲ್ಲೇ ಹಿಂದೂಗಳ ಮೇಲೆ ದಾಳಿ ನಡೆದರೂ ಸಿದ್ದರಾಮಯ್ಯ ಮುಸಲ್ಮಾನರ ಪರವಾಗಿ ನಿಲ್ಲುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಕಂಡೂ ಕಾಣದಂತೆ ಸಿದ್ದರಾಮಯ್ಯ ನಟಿಸುತ್ತಿದ್ದಾರೆ. ಅವರ ಮುಸ್ಲಿಂ ಪ್ರೀತಿ ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಹರಿಹಾಯ್ದರು.
ಸಿದ್ದರಾಮಯ್ಯ ಅವರ ಹುಟ್ಟಿನ ಮೂಲ ರಾಜ್ಯಕ್ಕೆ ಗೊತ್ತಾಗಬೇಕು. ಸಿದ್ದರಾಮಯ್ಯ ಅವರನ್ನು ಚಿವುಟಿದರೆ ಅವರ ಮೈಯಿಂದ ಕೆಂಪು ರಕ್ತದ ಬದಲಾಗಿ ಹಸಿರು ರಕ್ತ ಹರಿಯುತ್ತದೆ. ಹೀಗಾಗಿ ಅವರ ಮೂಲ ಯಾವುದು ಎಂಬುದನ್ನು ಪತ್ತೆ ಮಾಡಲು ಅವರನ್ನು ಡಿಎನ್ಎ ಪರೀಕ್ಷಗೆ ಗುರಿಪಡಿಸಬೇಕು ಎಂದು ಮುತಾಲಿಕ್ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರ ವಂಶದ ಮೂಲ ಔರಂಗಜೇಬನದ್ದೋ ಅಥವಾ ಘಜನಿಯದ್ದೋ ಅಥವಾ ಅಕ್ಬರನದ್ದೋ ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ಏಕೆಂದರೆ ಸಿದ್ದರಾಮಯ್ಯ ಓರ್ವ ಕಟ್ಟಾ ಹಿಂದೂ ವಿರೋಧಿಯಾಗಿದ್ದು, ಬಹಿರಂಗವಾಗಿಯೇ ಹಿಂದೂಗಳ ವಿರುದ್ಧ ಹೇಳಿಕೆ ನೀಡುತ್ತಾರೆ. ಅವರನ್ನು ಡಿಎನ್ಎ ಪರೀಕ್ಷೆಗೆ ಗುರಿಪಡಿಸಿದರೆ ಸತ್ಯ ತಾನಾಗಿಯೇ ಹೊರಬರುತ್ತದೆ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗಿದೆ. ಅದರೆ ಪೊಲೀಸರು ಹಿಂದೂ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡಿದ್ದಾರೆ. ಹಿಂದೂ ಸಮಾಜ ಇನ್ನೆಷ್ಟು ದಿನ ಈ ದೌರ್ಜನ್ಯವನ್ನು ಸಹಿಸಿಕೊಂಡಿರಬೇಕು ಎಂದು ಇದೇ ವೇಳೆ ಮುತಾಲಿಕ್ ಖಾರವಾಗಿ ಪ್ರಶ್ನಿಸಿದರು.
ಕೆರೂರ ಪಟ್ಟಣದ ರಾಚೋಟೇಶ್ವರ ದೇಗುಲದ ಆವರಣದಲ್ಲಿ ಸಭೆ ನಡೆಸಿದ ಮುತಾಲಿಕ್, ಜೈಲಿನಿಂದ ಬಿಡುಗಡೆಯಾದ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿದರು. ಕೆರೂರು ಬಾದಾಮಿ ತಾಲೂಕಿನ ಭಾಗವಾಗಿದ್ದು, ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಶಾಸಕ ಎಂಬುದು ಇಲ್ಲಿ ಉಲ್ಲೇಖನೀಯ.
ಕಟೀಲ್ ವಿರುದ್ಧ ಸಿದ್ದರಾಮಯ್ಯ ಕಿಡಿ:
ಇನ್ನು ರಾಜ್ಯದಲ್ಲಿ ಪಿಎಫ್ಐ ಸಂಘಟನೆಯನ್ನು ಬೆಳೆಸಿದ್ದೇ ಸಿದ್ದರಾಮಯ್ಯ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಕಟೀಲ್ ಅವರನ್ನು ಓರ್ವ ವಿದೂಷಕ ಎಂದು ಕರೆದಿರುವ ಸಿದ್ದರಾಮಯ್ಯ, ಪ್ರೌಢಿಮೆ ಇಲ್ಲದೇ ಮಾತನಾಡುವವರ ಹೇಳಿಕೆಗಳಿಗೆಲ್ಲಾ ನಾನು ಉತ್ತರಿಸಲಾರೆ ಎಂದು ಕಿಡಿಕಾರಿದ್ದಾರೆ.
ಬಾಗಲಕೋಟೆಯ ನಾಗನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಯವರು ಈಗಿನಿಂದಲೇ ಕೋಮು ಧ್ರುವೀಕರಣ ಆರಂಭಿಸಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಪಿಎಫ್ಐ ಸಂಘಟನೆಗೆ ಕಾಂಗ್ರೆಸ್ ಪರೋಕ್ಷ ಬೆಂಬಲ ನೀಡುತ್ತದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರದ ತನುಖೆ ನಡೆಸುವುದಾಗಿ ರಾಜ್ಯ ಬಿಜೆಪಿ ಸರ್ಕಾರ ಹೇಳುತ್ತಿದೆ. ನಾವು ಅಧಿಕಾರದಲ್ಲಿದ್ದ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ನಾಯಕರ ಬಾಯಲ್ಲೇನು ಕಡುಬು ಸಿಕ್ಕಿ ಹಾಕಿಕೊಂಡಿತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಎಲ್ಲಾ ಸರ್ಕಾರಗಳ ಅವಧಿಯ ಭ್ರಷ್ಟಾಚಾರದ ತನಿಖೆ ನಡೆಸಲಿ, ಕಾಂಗ್ರೆಸ್ ಪಕ್ಷ ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಗುಡುಗಿದರು.
ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪಗಳ ವಾಕ್ಸಮರ ಜೋರಾಗಿದ್ದು, ಚುನಾವಣೆ ಹತ್ತಿರ ಬಂದಾಗ ಇದು ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತಿದೆ.