ಕನ್ನಡ ಸುದ್ದಿ  /  Karnataka  /  Siddaramaiah Slams Bjp Government Over Psi Exam Sacm In Assembly

Siddaramaiah: ಇದನ್ನು ಸರ್ಕಾರಕ್ಕೆ ತಲುಪಿಸಿ ಎಂದು ಬಡ ಪೋಷಕರು ಕೊಟ್ಟಿದ್ದಾರೆ: ಸಿದ್ದರಾಮಯ್ಯ ಕೈಯಲ್ಲಿ ಇರುವುದೇನು?

ಪಿಎಸ್‌ಐ ಮತ್ತು ಶಿಕ್ಷಕರ ನೇಮಕಾತಿ ಹಗರಣದ ಕುರಿತು ನಡೆದ ಚರ್ಚೆಯಲ್ಲಿ ಸಿದ್ದರಾಮಯ್ಯ ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿದರು. ಸರ್ಕಾರಿ ಉದ್ಯೋಗಗಳಿಗೆ ಲಂಚ ಕೊಡುವ ಶಕ್ತಿಯಿಲ್ಲದ ಬಡ ಉದ್ಯೋಗಕಾಂಕ್ಷಿಗಳು, ತಮ್ಮ ಪೋಷಕರು ಬೆಳೆದ ಅಕ್ಕಿ, ರಾಗಿ, ಜೋಳ ಮುಂತಾದ ಧವಸ ಧಾನ್ಯಗಳನ್ನು ಸರ್ಕಾರಕ್ಕೆ ಕೊಡುವಂತೆ ನನಗೆ ಕೊಟ್ಟಿದ್ದಾರೆ. ನಾನು ಈ ಸದನದಲ್ಲಿ ಈ ಧವಸ ಧಾನ್ಯಗಳನ್ನು ಸರ್ಕಾರಕ್ಕೆ ಕೊಡಲು ಬಯಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಧವಸ ಧಾನ್ಯಗಳ ಗಂಟು ಪ್ರದರ್ಶಿಸಿದ ಸಿದ್ದರಾಮಯ್ಯ
ಧವಸ ಧಾನ್ಯಗಳ ಗಂಟು ಪ್ರದರ್ಶಿಸಿದ ಸಿದ್ದರಾಮಯ್ಯ (Verified Twitter)

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಇಂದು(ಸೆ.೨೦-ಮಂಗಳವಾರ) ಪಿಎಸ್‌ಐ ಅಕ್ರಮ ನೇಮಕಾತಿ, ಶಿಕ್ಷಕರ ಅಕ್ರಮ ನೇಮಕಾತಿ ಬಗ್ಗೆ ಚರ್ಚೆ ನಡೆದಿದೆ. ಈ ಚರ್ಚೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರವೇ ನಡೆದಿದೆ. ಆದರೆ ಈ ಚರ್ಚೆಗಿಂತ ಸಿದ್ದರಾಮಯ್ಯ ಸದನಕ್ಕೆ ತಂದ ಗಂಟೊಂದು ಇಡೀ ರಾಜ್ಯದ ಗಮನ ಸೆಳೆಯಿತು. ಸಿದ್ದರಾಮಯ್ಯ ತಂದ ಗಂಟಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲ ವಿಧಾನಸಭೆ ಸದಸ್ಯರಲ್ಲೂ ಇತ್ತು.

ಪಿಎಸ್‌ಐ ಮತ್ತು ಶಿಕ್ಷಕರ ನೇಮಕಾತಿ ಹಗರಣದ ಕುರಿತು ನಡೆದ ಚರ್ಚೆಯಲ್ಲಿ ಸಿದ್ದರಾಮಯ್ಯ ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿದರು. ಸೂಕ್ತ ದಾಖಲೆಗಳೊಂದಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ, ಸರ್ಕಾರಿ ನೌಕರಿಯ ಕನಸು ಕಾಣುವ ಬಡ ಅಭ್ಯರ್ಥಿಗಳ ಜೀವನವನ್ನು ರಾಜ್ಯ ಸರ್ಕಾರ ಹಾಳು ಮಾಡಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಸರ್ಕಾರಿ ಉದ್ಯೋಗಗಳಿಗೆ ಲಂಚ ಕೊಡುವ ಶಕ್ತಿಯಿಲ್ಲದ ಬಡ ಉದ್ಯೋಗಕಾಂಕ್ಷಿಗಳು, ತಮ್ಮ ಪೋಷಕರು ಬೆಳೆದ ಅಕ್ಕಿ, ರಾಗಿ, ಜೋಳ ಮುಂತಾದ ಧವಸ ಧಾನ್ಯಗಳನ್ನು ಸರ್ಕಾರಕ್ಕೆ ಕೊಡುವಂತೆ ನನಗೆ ಕೊಟ್ಟಿದ್ದಾರೆ. ನಾನು ಈ ಸದನದಲ್ಲಿ ಈ ಧವಸ ಧಾನ್ಯಗಳನ್ನು ಸರ್ಕಾರಕ್ಕೆ ಕೊಡಲು ಬಯಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಕೂಡಲೇ ಮಧ್ಯಪ್ರವೇಶ ಮಾಡಿದ ಸ್ಪೀಕರ್‌ ಕಾಗೇರಿ, ಎಲ್ಲಿದೆ ಕೊಡಿ ನೋಡೋಣ ಎಂದು ಕೋರಿದರು. ಆದರೆ ಸಿದ್ದರಾಮಯ್ಯ ನಿಯಮಗಳ ಪ್ರಕಾರ ಇವನ್ನೆಲ್ಲಾ ಸದನದ ಒಳಗೆ ತರುವಂತಿಲ್ಲವಲ್ಲ ಎಂದು ಹೇಳಿದರು. ಅಷ್ಟರಲ್ಲಿ ಕಾಂಗ್ರೆಸ್‌ ಶಾಸಕ ರಾಜೇಗೌಡ ಧವಸ ಧಾನ್ಯಗಳಿದ್ದ ಗಂಟನ್ನು ಸಿದ್ದರಾಮಯ್ಯ ಅವರಿಗೆ ತಂದುಕೊಟ್ಟರು. ಇದನ್ನು ಸಿದ್ದರಾಮಯ್ಯ ಸ್ಪೀಕರ್‌ ಅವರಿಗೆ ಕೊಡಲು ಮುಂದಾದರು.

ಈ ವೇಳೆ ಎದ್ದು ನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಉತ್ತಮವಾಗಿ ಈವೆಂಟ್‌ ಮ್ಯಾನೇಜ್‌ಮೆಂಟ್‌ ಮಾಡುತ್ತಾರೆ ಎಂದು ಕಾಲೆಳೆದರು. ಅಲ್ಲದೇ ಸದನದಲ್ಲಿ ಇವೆನ್ನೆಲ್ಲಾ ಪ್ರದರ್ಶಿಸಬಾರದು ಎಂದು ಗುಡುಗಿದರು. ಇದಕ್ಕೆ ಅಷ್ಟೇ ಏರುಧ್ವನಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, ನನಗೆ ಈವೆಂಟ್‌ ಮ್ಯಾನೆಜ್‌ಮೆಂಟ್‌ ಎಲ್ಲಾ ಗೊತ್ತಿಲ್ಲ. ಗೊತ್ತಿರುವುದು ಸತ್ಯ ಹೇಳುವುದೊಂದೇ ಎಂದು ಗುಡುಗಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು.

ಇನ್ನು ಸದನಕ್ಕೆ ಅಕ್ಕಿ, ದವಸ ಧಾನ್ಯಗಳನ್ನು ತರುವುದು ಸರಿಯಲ್ಲ ಎಂದು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಸಿದ್ದರಾಮಯ್ಯ ಅವರಿಗೆ ಧವಸ ಧಾನ್ಯಗಳನ್ನು ಗಂಟನ್ನು ತಂದುಕೊಟ್ಟ ಕಾಂಗ್ರೆಸ್‌ ಶಾಸಕ ರಾಜೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಕಾಂಗ್ರೆಸ್‌ ಸದಸ್ಯರಲ್ಲಾ ಒಟ್ಟಾಗಿ ಸರ್ಕಾರದ ಮೇಲೆ ಮುಗಿಬಿದ್ದರು.

ಸದನಲ್ಲಿ ಇಷ್ಟೆಲ್ಲಾ ಬಿಸಿಬಿಸಿ ಚರ್ಚೆ ಮುಗಿಯುತ್ತಿದ್ದಂತೇ, ಅದೇ ಧವಸ ಧಾನ್ಯಗಳ ಗಂಟಿನೊಂದಿಗೆ ಹೊರಬಂದ ಸಿದ್ದರಾಮಯ್ಯ, ಪತ್ರಕರ್ತರಿಗೆ ಆ ಗಂಟನ್ನು ಪ್ರದರ್ಶಿಸಿದರು. ಇದು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ಬಡ ಪೋಷಕರು ಬೆಳೆದ ಧವಸ ಧಾನ್ಯ, ಇದನ್ನು ಸರ್ಕಾರಕ್ಕೆ ತಲುಪಿಸಿ ಎಂದು ನನ್ನ ಕೈಗಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಟ್ವೀಟ್‌ ಕೂಡ ಮಾಡಿರುವ ಸಿದ್ದರಾಮಯ್ಯ, ʼʼಸರ್ಕಾರಿ ಉದ್ಯೋಗಗಳಿಗೆ ಲಂಚ ಕೊಡುವ ಶಕ್ತಿಯಿಲ್ಲದ ಬಡ ಉದ್ಯೋಗಕಾಂಕ್ಷಿಗಳು ತಮ್ಮ ಪೋಷಕರು ಬೆಳೆದ ಅಕ್ಕಿ, ರಾಗಿ, ಜೋಳ ಮುಂತಾದ ಬೆಳೆಗಳ ಗಂಟನ್ನು ನನ್ನ ಕೈಗಿತ್ತು ಸರ್ಕಾರಕ್ಕೆ ತಲುಪಿಸಿ, ಉದ್ಯೋಗ ಕೊಡಿಸಿ ಎಂದು ಕೋರಿದ್ದಾರೆ. ಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ ಬಿಜೆಪಿ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ..ʼʼ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.
IPL_Entry_Point