ಕನ್ನಡ ಸುದ್ದಿ  /  Karnataka  /  Siddaramaiah Will Lose Election From Kolar Sys Former Chief Minister Hd Kumaraswamy

HD Kumaraswamy: ತಮ್ಮ ಕೊನೆಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಸೋಲು: ಹೆಚ್‌ಡಿಕೆ ಭವಿಷ್ಯ!

ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೋಲಾರ ಕ್ಷೇತ್ರದಿಂದ ಸೋಲು ಅನುಭವಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಹೆಚ್‌ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ರಾಯಚೂರು ತಾಲೂಕಿನ ಮಿಟ್ಟಿಮಲ್ಕಾಪುರದಲ್ಲಿ‌ ಹೆಚ್‌ಡಿಕೆ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಕುರಿತು ಇಲ್ಲಿದೆ ಮಾಹಿತಿ.

ಹೆಚ್‌ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ
ಹೆಚ್‌ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ (Verified Twitter)

ರಾಯಚೂರು: ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೋಲಾರ ಕ್ಷೇತ್ರದಿಂದ ಸೋಲು ಅನುಭವಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಹೆಚ್‌ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ರಾಯಚೂರು ತಾಲೂಕಿನ ಮಿಟ್ಟಿಮಲ್ಕಾಪುರದಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, ಇದು ಖಂಡಿತವಾಗಿಯೂ ಸಿದ್ದರಾಮುಯ್ಯ ಅವರ ಕೊನೆಯ ಚುನಾವಣೆಯಾಗಲಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸೋಲು ಅನುಭವಿಸಲಿದ್ದಾರೆ. ಆ ಬಳಿಕ ಅವರು ರಾಜಕೀಯದಿಂದ ದೂರ ಉಳಿಯಲಿದ್ದಾರೆ. ಅವರೇ ಹೇಳುವಂತೆ ಇದು ಅವರ ಕೊನೆಯ ಚುನಾವಣೆಯಾಗಲಿದ್ದು, ಸೋಲಿನೊಂದಿಗೆ ಸಿದ್ದರಾಮಯ್ಯ ಅವರ ರಾಜಕೀಯ ಪಯಣ ಅಂತ್ಯವಾಗಲಿದೆ ಎಂದು ಹೆಚ್‌ಡಿಕೆ ಗರಂ ಆಗಿ ಹೇಳಿದರು.

ಕಾಂಗ್ರೆಸ್ ಪಕ್ಷವು ದೇಶದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಎದುರಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ. ವಿವಿಧ ರಾಜ್ಯಗಳಲ್ಲಿರುವ ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ನಾವು ರಣತಂತ್ರ ಸಿದ್ಧಪಡಿಸುತ್ತಿದ್ದು, ಬಿಜೆಪಿಗೆ ಪರ್ಯಾಯ ರಾಜಕಾರಣವನ್ನು ಮುಂದಿಡಲಿದ್ದೇವೆ ಎಂದು ಹೆಚ್‌ಡಿಕೆ ಇದೇ ವೇಳೆ ಮಾಹಿತಿ ನೀಡಿದರು.

ರಾಜ್ಯ ವಿಧಾನಸಭೆ ಚುನಾವಣೆ ನಂತರ ರಾಷ್ಟ್ರೀಯ ಮಟ್ಟದಲ್ಲಿ ಜನತಾ ಪರಿವಾರವನ್ನು ಒಗ್ಗೂಡಿಸಲಾಗುವುದು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಯಾವುದೇ ವಿಶೇಷ ಯೋಜನೆ ದೊರೆಯದು. ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. 123 ಸ್ಥಾನಗಳಲ್ಲಿ ನಮ್ಮ ಗೆಲುವು ನಿಶ್ಚಿತ. ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸಿ, ಜನರ ಒಳಿತಿಗಾಗಿ ಆಡಳಿತ ನಡೆಸುತ್ತೇವೆ ಎಂದು ಹೆಚ್‌ಡಿಕೆ ಇದೇ ವೇಳೆ ಭರವಸೆ ನೀಡಿದರು.

ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಟೀಕೆ ಮಾಡುವುದೇ ಕೆಲಸವಾಗಿದೆ. ಜೆಡಿಎಸ್‌ಗೆ ಟೀಕೆ ಮಾಡುವುದರಿಂದ ನಾವು ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ತಿಳಿದುಕೊಂಡಿದ್ದರೆ, ಅದು ಅವರ ತಪ್ಪು ಕಲ್ಪನೆ. ರಾಜ್ಯಕ್ಕೆ ಯಾವ ಪಕ್ಷ ಉತ್ತಮ ಎಂಬುದನ್ನು ಜನರು ಅರಿತುಕೊಂಡಿದ್ದಾರೆ ಎಂದು ಹೆಚ್‌ಡಿಕೆ ಇದೇ ವೇಳೆ ಕಿಡಿಕಾರಿದರು.

ಇನ್ನು ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಯಾವುದೇ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಬರುವುದಿರಿಂದ ಯಾವ ಪ್ರಯೋಜನವೂ ಆಗದು. ಅವರೆಲ್ಲ ಇಲ್ಲಿಗೆ ಬರುವುದು ಕಾರ್ಪೋರೇಟ್‌ ಕಂಪನಿಗಳ ಹಾಗೂ ವೃಹತ್‌ ಖಾಸಗಿ ಶಿಕ್ಷಣ ಸಂಸ್ಥೆಗಳ ಆಹ್ವಾನದ ಮೇರೆಗೆ. ಇದರಿಂದ ರಾಜ್ಯಕ್ಕೆ ಏನು ಪ್ರಯೋಜನ ಎಂದು ಜೆಡಿಎಸ್‌ ನಾಯಕ ಖಾರವಾಗಿ ಪ್ರಶ್ನಿಸಿದರು.

ದೇಶದ ಶ್ರೀಮಂತ ವ್ಯಕ್ತಿಯ ಕಂಪನಿಯ ಷೇರು ಕುಸಿದರೆ ಬಿಜೆಪಿ ನಾಯಕರಿಗೆ ಚಿಂತೆ ಶುರುವಾಗುತ್ತದೆ. ಆದರೆ ರೈತರ ಹಾಗೂ ಬಡವರ ಜೀವನದಬಗ್ಗೆ ಬಿಜೆಪಿ ನಾಯಕರು ಎಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮಹಾದಾಯಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುವ ಬಬಿಜೆಪಿ ನಾಯಕರು, ಗೋವಾ ಈ ಕುರಿತು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರೂ ಮೌನವಾಗಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದರು.

ಸಂಬಂಧಿತ ಸುದ್ದಿ

Praja Dhwani Samavesha: 'ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ' - ಹೆಚ್​ಡಿಕೆಗೆ ಸಿದ್ದರಾಮಯ್ಯ ಟಾಂಗ್​

ಕುಮಾರಸ್ವಾಮಿ ಕೈಲಿ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮಪ್ರಭುಗಳ ಮಾತುಗಳು ಅವರಿಗೆ ಹೊಂದಿಕೆಯಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point