Sudhakar on Siddaramaiah: ಸಿದ್ದರಾಮಯ್ಯನವರು ಕೋಲಾರದಲ್ಲಿ ಗೆಲ್ಲುವುದಿಲ್ಲ, ಕೋಲಾರಕ್ಕೆ ಬಂದು ಖೆಡ್ಡಾಗೆ ಬಿದ್ದಿದ್ದಾರೆ: ಸಚಿವ ಸುಧಾಕರ್
ಆರೋಗ್ಯ ಇಲಾಖೆಯ ಮೂರು ವರ್ಷದ ಖರ್ಚಿನ ಪ್ರತಿ ಪೈಸೆಯ ಲೆಕ್ಕ ಕೊಡುತ್ತೇನೆ. ಬೇಕಿದ್ದರೆ ತನಿಖೆ ಮಾಡಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದ್ದಾರೆ.
ಬೆಂಗಳೂರು: ಭ್ರಷ್ಟಾಚಾರ ವಿಚಾರದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರ ನಡುವಿನ ವಾಕ್ಸಮರ ಮುಂದುವರೆದಿದೆ.
ಕೆಲ ಸ್ಥಳೀಯ ಮುಖಂಡರು ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಕರೆತಂದು ಖೆಡ್ಡಾಗೆ ಬೀಳಿಸಿದ್ದಾರೆ. ಇದು ಕಷ್ಟದ ಕ್ಷೇತ್ರವಾಗಿದ್ದು, ಅವರು ಗೆಲ್ಲುವುದಿಲ್ಲ. ಆದರೆ ಅಂತಿಮವಾಗಿ ಅವರು ಅಲ್ಲಿ ಸ್ಪರ್ಧೆಗೆ ನಿಲ್ಲದೆ ವರುಣಾದಲ್ಲಿ ಸ್ಪರ್ಧಿಸಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ನಾನು ಓಡಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ಸಿದ್ದರಾಮಯ್ಯನವರ ವಿರುದ್ಧ ನಿಲ್ಲುವ ಬಿಜೆಪಿ ಅಭ್ಯರ್ಥಿಯನ್ನೂ ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಸಿಎಜಿ ವರದಿ ಹೇಳಿಕೆ ಬಗ್ಗೆ ಸ್ಪಷ್ಟನೆ
2013-2018 ರ ಅವಧಿಯ ಸಿಎಜಿ ವರದಿಯಲ್ಲಿರುವ ಅಂಶಗಳನ್ನು ಹೇಳಿದ್ದೇನೆ. ಆ ಅವಧಿಯಲ್ಲಿ 35 ಸಾವಿರ ಕೋಟಿ ರೂ. ನಷ್ಟು ಆರ್ಥಿಕ ಅವ್ಯವಹಾರ ಕಂಡುಬಂದಿದೆ ಎಂದು ವರದಿಯಲ್ಲೇ ಹೇಳಲಾಗಿದೆ. ಕೋವಿಡ್ ನಿರ್ವಹಣೆ ಬಗ್ಗೆ ಸದನದಲ್ಲೇ ಉತ್ತರ ನೀಡಿದ್ದರೂ, ಉತ್ತರ ಕೇಳದೆಯೇ ಕಾಂಗ್ರೆಸ್ ನಾಯಕರು ಪಲಾಯನ ಮಾಡಿದ್ದರು. ಕೋವಿಡ್ ನಿರ್ವಹಣೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಇದಕ್ಕೆ ಬೇಕಿದ್ದರೆ ಶ್ವೇತಪತ್ರವನ್ನೂ ಹೊರಡಿಸಲು ತಯಾರಿದ್ದೇವೆ. ಎಸಿಬಿ ರದ್ದು ಮಾಡಲು ಸಹಕರಿಸುವ ಮೂಲಕ ಲೋಕಾಯುಕ್ತಕ್ಕೆ ನಮ್ಮ ಸರ್ಕಾರವೇ ಶಕ್ತಿ ನೀಡಿದೆ ಎಂದು ಹೇಳಿದ್ದಾರೆ.
ತನಿಖೆ ಮಾಡಿಸಲಿ
ಮೂರು ವರ್ಷದಲ್ಲಿ ಆರೋಗ್ಯ ಇಲಾಖೆಯಿಂದ ಖರ್ಚು ಮಾಡಿದ ಮೊತ್ತದ ಪ್ರತಿ ಪೈಸೆಯ ಲೆಕ್ಕವನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತೇನೆ. ಯಾವುದೇ ತನಿಖೆಯನ್ನು ಅವರು ಮಾಡಿಸಲಿ. ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ರಾಜ್ಯ ಎಂಬ ಪ್ರಶಸ್ತಿಯನ್ನು ಮಾಧ್ಯಮ ಸಂಸ್ಥೆಯೇ ನೀಡಿದೆ. ರಾಜಕೀಯದ ತೆವಲಿಗಾಗಿ ಟೀಕೆ ಮಾಡಿದರೆ ಏನೂ ಮಾಡಲಾಗುವುದಿಲ್ಲ ಎಂದು ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ಅನೈತಿಕವಾಗಿ ಜೆಡಿಎಸ್ ಜೊತೆ ಹೊಂದಾಣಿಕೆ
ಸಿದ್ದರಾಮಯ್ಯ ಅವರು ರಾಜಕೀಯಕ್ಕಾಗಿ ಮಾತನಾಡಬಹುದು. ಆದರೆ ನಾನು ಏಕೆ ಕಾಂಗ್ರೆಸ್ ತೊರೆದೆ ಎನ್ನುವುದು ಅವರಿಗೂ ಗೊತ್ತಿದೆ. ಹಣಕ್ಕಾಗಿ ಹೋಗದೆ ಸಿದ್ಧಾಂತಕ್ಕಾಗಿ ಬಿಜೆಪಿಯನ್ನು ಸೇರಿದೆ ಹಾಗೂ ಅನೈತಿಕವಾಗಿ ಜನತಾದಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಬೇಸತ್ತಿದ್ದೆ ಎಂಬುದು ಅವರಿಗೆ ತಿಳಿದಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಜೀವನವಿಡೀ ಕಾಂಗ್ರೆಸ್ ನಾಯಕರನ್ನು ಬೈದುಕೊಂಡೇ ಇದ್ದರು. ಜನತಾದಳದಲ್ಲೇ ಇದ್ದು ಸಚಿವರಾಗಿ, ಡಿಸಿಎಂ ಆಗಿ, ಬಳಿಕ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಸೇರಿದರು. ಒಂದು ವರ್ಷ ತಡೆದುಕೋ, ಲೋಕಸಭೆ ಚುನಾವಣೆ ಬಳಿಕ ಕುಮಾರಸ್ವಾಮಿಯವರನ್ನು ಸಿಎಂ ಆಗಿ ಒಂದು ದಿನವೂ ಇರಿಸುವುದಿಲ್ಲ ಎಂದು ನಮಗೆಲ್ಲರಿಗೂ ಸಿದ್ದರಾಮಯ್ಯನವರು ಹೇಳಿದ್ದರು. ಆ ಬಳಿಕ 5 ವರ್ಷವೂ ಸಿಎಂ ಎಂದುಬಿಟ್ಟರು. ಆ ಸಮಯದಲ್ಲಿ ಹೆಚ್ಚು ಸಮಸ್ಯೆ ಇತ್ತು. ನನ್ನ ರಾಜಕೀಯ ಭವಿಷ್ಯವೇ ಮುಗಿಯುತ್ತಿತ್ತು. ಆದರೂ ಮತ್ತೆ ಸ್ಪರ್ಧಿಸಿ ಜನರ ಆಶೀರ್ವಾದ ಪಡೆದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಅನಿಲ್ ಆಂಟನಿ ಅವರು ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೇ, ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಅವರ ಮೇಲೆ ಒತ್ತಡ ತಂದಿದ್ದಾರೆ. ಒಂದು ಕಡೆ ಫ್ರೀ ಸ್ಪೀಚ್ ಬಗ್ಗೆ ಹೇಳುತ್ತಾರೆ, ಇನ್ನೊಂದು ಕಡೆ ಒತ್ತಡ ತರುತ್ತಾರೆ. ಇದರಿಂದ ಬೇಸತ್ತು ಆತ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೋಲಾರದಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರು ಮೆಡಿಕಲ್ ಕಾಲೇಜು ತರಲೇ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಸರ್ಕಾರ ಕೋಲಾರದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಲಿದೆ. ಇಲ್ಲಿನವರೇ ಆರೋಗ್ಯ ಸಚಿವರಾದ್ರೂ ಏನೂ ಕೆಲಸ ಮಾಡಲಿಲ್ಲ ಎಂದರು.
ಚಿಕ್ಕಬಳ್ಳಾಪುರ ನನಗೆ ಉತ್ತಮ ಪಿಚ್
ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ ಬಾಲ್ ನೋಡಿ ಆಡುತ್ತಾನೆಯೇ ಹೊರತು, ಬೌಲರ್ನ್ನು ನೋಡುವುದಿಲ್ಲ. ನಾನು ಕೂಡ ಮೂರು ಬಾರಿ ಗೆದ್ದಿದ್ದು, ಜನರ ಮೇಲೆ ನನಗೆ ನಂಬಿಕೆ ಇದೆ. ಜನರ ಆಶೀರ್ವಾದ ಇರುವವರೆಗೆ ಚಿಕ್ಕಬಳ್ಳಾಪುರ ನನಗೆ ಉತ್ತಮ ಪಿಚ್ ಎಂದು ಸಚಿವರು ಹೇಳಿದ್ದಾರೆ.