Aam Aadmi Party: ಸಮಾಜ ಸೇವಕ, ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ವಿ ಜೆಂಶೆಟ್ಟಿ ಎಎಪಿ ಸೇರ್ಪಡೆ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಯುವನಾಯಕ, ಸಮಾಜಸೇವಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ವಿ ಜೆಂಶೆಟ್ಟಿಯವರು ಇಂದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದು, ಹೊಸದಾಗಿ ರಾಜಕೀಯಕ್ಕೆ ಎಂಟ್ರಿಯಾಗುವುದು ಸಾಮಾನ್ಯ ಪ್ರಕ್ರಿಯೆ ಆಗಿದೆ. ಇದೀಗ ಯುವನಾಯಕ, ಸಮಾಜಸೇವಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಎಎಪಿಗೆ ಸೇರ್ಪಡೆಯಾಗಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಯುವನಾಯಕ, ಸಮಾಜಸೇವಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ವಿ ಜೆಂಶೆಟ್ಟಿಯವರು ಇಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ, ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಬಸವರಾಜ್ ವಿ ಜೆಂಶೆಟ್ಟಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮೋಹನ್ ದಾಸರಿ, ಬಸವರಾಜ್ರವರು ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಕಾರ್ಯದರ್ಶಿ ಹಾಗೂ ಅಧ್ಯಕ್ಷ ಹುದ್ದೆಗಳಿಗೆ ಆಯ್ಕೆಯಾಗಿ, ವಿದ್ಯಾರ್ಥಿಗಳ ಹಿತಕ್ಕಾಗಿ ಶ್ರಮಿಸಿದ ಅನುಭವ ಹೊಂದಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಯುವ ಘಟಕಗಳಲ್ಲಿ ಕೂಡ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಟ್ರಸ್ಟ್ವೊಂದರ ಸಂಸ್ಥಾಪಕ ಸದಸ್ಯ ಹಾಗೂ ಆಜೀವ ಸದಸ್ಯರಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಉತ್ತಮ ಪ್ರಜಾಕೀಯ ಪಾರ್ಟಿಯ ಸಂಸ್ಥಾಪಕ ಸದಸ್ಯರಾಗಿರುವ ಬಸವರಾಜ್, 2018ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಉತ್ತಮ ನಾಯಕತ್ವ ಗುಣ ಹೊಂದಿರುವ ಹಾಗೂ ಸಮಾಜದ ಮೇಲೆ ಅಪಾರ ಕಾಳಜಿ ಹೊಂದಿರುವ ಇಂತಹವರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸ ತಂದಿದೆ ಎಂದು ದಾಸರಿ ಹೇಳಿದ್ದಾರೆ.
ಆಮ್ ಆದ್ಮಿ ಪಾರ್ಟಿ ಸೇರಿ ಮಾತನಾಡಿದ ಬಸವರಾಜ್ ವಿ ಜೆಂಶೆಟ್ಟಿ, ಕಳೆದ ಹತ್ತು ವರ್ಷಗಳ ಸಣ್ಣ ಅವಧಿಯಲ್ಲಿ ಆಮ್ ಆದ್ಮಿ ಪಾರ್ಟಿಯು ಎರಡು ರಾಜ್ಯಗಳಲ್ಲಿ ಅಧಿಕಾರ ಪಡೆದು ಮಾಡಿರುವ ಸಾಧನೆಗಳು ಹಾಗೂ ದೇಶದ ರಾಜಕೀಯದಲ್ಲಿ ತಂದಿರುವ ಬದಲಾವಣೆಗಳು ಅಭೂತಪೂರ್ವವಾಗಿವೆ ಎಂದರು.
ಸರ್ಕಾರಿ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಬಗ್ಗೆ ಇಂದು ಬಿಜೆಪಿ, ಕಾಂಗ್ರೆಸ್ನಂತಹ ಹಳೆಯ ಪಕ್ಷಗಳು ಮಾತನಾಡುತ್ತಿದ್ದು, ಇದರ ಶ್ರೇಯಸ್ಸು ಆಮ್ ಆದ್ಮಿ ಪಾರ್ಟಿಗೆ ಸಲ್ಲಬೇಕು. ದೆಹಲಿಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮನೀಶ್ ಸಿಸೋಡಿಯಾ ಹಾಗೂ ಆರೋಗ್ಯ ಕ್ಷೇತ್ರವನ್ನು ಸುಧಾರಿಸಿದ ಸತ್ಯೇಂದ್ರ ಜೈನ್ ಇಂದು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯಿಂದ ಸುಳ್ಳು ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಬಿಜೆಪಿಗೆ ಆಮ್ ಆದ್ಮಿ ಪಾರ್ಟಿಯ ಭಯ ಯಾವ ಪ್ರಮಾಣದಲ್ಲಿ ಕಾಡುತ್ತಿದೆ ಎಂಬುದನ್ನು ಇದರಿಂದ ತಿಳಿಯಬಹುದು. ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಜನಪರ ಆಡಳಿತ ರಚನೆಯಾಗಬೇಕೆಂದರೆ ಇಲ್ಲಿ ಕೂಡ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಬೇಕ ಎಂದು ಬಸವರಾಜ್ ವಿಜೆಂಶೆಟ್ಟಿ ಹೇಳಿದ್ದಾರೆ. ಸೇರ್ಪಡೆ ಸಮಾರಂಭದಲ್ಲಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ಕುಶಲಮೋಹನ್ ಪಕ್ಷದ ಮುಖಂಡ ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಬೆಂಬಲಿಗರು ಭಾಗವಹಿಸಿದ್ದರು.
ದೆಹಲಿ ಮಾಜಿ ಡಿಸಿಎಂ ವಿರುದ್ಧ ಮತ್ತೊಂದು ಎಫ್ಐಆರ್
ದೆಹಲಿ ಸರ್ಕಾರದ 'ಫೀಡ್ಬ್ಯಾಕ್ ಯೂನಿಟ್' ಪ್ರಕರಣದಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಇತರ ಐವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
2015 ರಲ್ಲಿ ಎಎಪಿ ಸರ್ಕಾರ ರಚಿಸಿದ್ದ ವಿಶೇಷ ಫೀಡ್ಬ್ಯಾಕ್ ಯೂನಿಟ್ (ಎಫ್ಬಿಯು) ರಾಜಕೀಯ ಪ್ರತಿಸ್ಪರ್ಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಬೇಹುಗಾರಿಕೆ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ವಿರುದ್ಧ ಸಿಬಿಐ ಹೊಸ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿದೆ. ಎಫ್ಬಿಯು ಅನ್ನು ಉದ್ದೇಶಪೂರ್ವಕವಾಗಿ ರಚಿಸಲಾಗಿದ್ದು, ಇದು ಸರ್ಕಾರದ ಬೊಕ್ಕಸಕ್ಕೆ 36 ಲಕ್ಷ ರೂ. ನಷ್ಟವನ್ನು ಉಂಟುಮಾಡಿದೆ ಎಂದು ಸಿಬಿಐ ಹೇಳಿದೆ. ದೆಹಲಿ ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಈಗಾಗಲೇ ಜೈಲಿನಲ್ಲಿದ್ದಾರೆ.
ವಿಭಾಗ