ಕನ್ನಡ... ಕನ್ನಡ... ಕನ್ನಡ.... ಹೇಳಬೇಕಿರುವುದು ಸೋನು ನಿಗಮ್ಗಲ್ಲ!: ರಾಜೀವ ಹೆಗಡೆ ಬರಹ
ಬೆಂಗಳೂರಿನಲ್ಲಿ ಇತ್ತೀಚೆಗೆ ಹಲವು ಸಂದರ್ಭದಲ್ಲಿ ಕನ್ನಡ ಮತ್ತು ಭಾಷೆ ವಿಚಾರದಲ್ಲಿ ಗಲಭೆ ಉಂಟಾಗುತ್ತಿದೆ. ಜನರನ್ನು ಭಾಷೆ ವಿಚಾರದಲ್ಲಿ ವಿಭಜಿಸುವ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಗಾಯಕ ಸೋನು ನಿಗಮ್ ಹಾಡಿನ ಸಂದರ್ಭದಲ್ಲಿ ಉಂಟಾದ ಕನ್ನಡ ವಿವಾದದ ಬಗ್ಗೆ ರಾಜೀವ್ ಹೆಗಡೆ ಬರಹ ಇಲ್ಲಿದೆ.

ಕಳೆದೈದು ವರ್ಷಗಳಿಂದ ಬೆಂಗಳೂರಿನ ಕೆಲವು ಕನ್ನಡಿಗರು ಹಾಗೂ ಕೆಲವು ಮಾಧ್ಯಮಗಳು ಬಾಳ್ ಠಾಕ್ರೆ ಕಾಲದ ಸೈನಿಕರಂತೆ ಆಡುತ್ತಿದ್ದಾರೆ. ಪಕ್ಕದ ತಮಿಳುನಾಡಿನ ದ್ರಾವಿಡ ಪ್ರತ್ಯೇಕತಾವಾದದ ರಾಜಕೀಯದ ಚಕ್ರವ್ಯೂಹಕ್ಕೆ ಸಿಲುಕಿ ಅತಿಯಾಗಿ ವರ್ತಿಸುತ್ತಿದ್ದಾರೆ. ಕನ್ನಡಾಭಿಮಾನವನ್ನು ಬೀದಿಗೆ ತಂದು ನಿಲ್ಲಿಸುತ್ತಿದ್ದಾರೆ. ಆದರೆ ಕನ್ನಡ ಅಕ್ಷರಗಳು ನಿಜವಾಗಿಯೂ ಅರಳಬೇಕಿರುವಲ್ಲಿ ನಾವೆಲ್ಲರೂ ಕಣ್ಮುಚ್ಚಿ ಕುಳಿತಿದ್ದೇವೆ. ಆದರೆ ರಾಜಕೀಯ ಹಾಗೂ ದ್ವೇಷ ಕೆರಳುವ ಜಾಗದಲ್ಲಿ ಕನ್ನಡವನ್ನು ಬಿತ್ತುವ ಕೆಲಸ ಮಾಡುತ್ತಿದ್ದೇವೆ.
ಸೋನು ನಿಗಮ್ ನೀಡಿದ ಹೇಳಿಕೆ ಆಧರಿಸಿ, ಎಲ್ಲರೂ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಕನ್ನಡ ಚಿತ್ರರಂಗದಿಂದ ಅವರನ್ನು ಹೊರಹಾಕಬೇಕು ಎಂದು ನಿರ್ಮಾಪಕರು ಸೇರಿ ಸಾಕಷ್ಟು ಜನ ಕೂಗಾಡುತ್ತಿದ್ದಾರೆ. ಅಷ್ಟಕ್ಕೂ ಕನ್ನಡ ಗಾಯಕರಿಗೆ ಅವಕಾಶ ನೀಡಿ, ಕನ್ನಡ ನಾಯಕಿಯರಿಗೆ ಪಾತ್ರ ನೀಡಿ ಎಂದೂ ಗೋಗರೆದಾಗ ಇವರೆಲ್ಲರ ಕನ್ನಡ ಪ್ರೇಮವು ಯಾವ ಕಿಸೆಯೊಳಗೆ ಉಸಿರುಗಟ್ಟಿ ಸಾಯುತ್ತಿತ್ತೋ ತಾಯಿ ಭುವನೇಶ್ವರಿಯೇ ಬಂದು ಹೇಳಬೇಕು. ಅಂದ್ಹಾಗೆ ತಮ್ಮ ನೇರ ನುಡಿಗಳಿಂದ ಸೋನು ನಿಗಮ್ ಅವರು ಬಾಲಿವುಡ್ನಲ್ಲಿಯೂ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೋನು ನಿಗಮ್ ಹೆಸರಲ್ಲಿ ಕನ್ನಡ ಪ್ರೇಮ ತೋರಿಸುವ ನಿರ್ಮಾಪಕರು, ಮೊದಲು ಕನ್ನಡಿಗರಿಗೆ ಮಣೆ ಹಾಕುವುದನ್ನು ಕಲಿಯಲಿ.
ಇನ್ನು ಸೋನು ನಿಗಮ್ ಹೇಳಿಕೆಗೆ ಬರುವುದಾದರೆ, ವಿವಾದಾತ್ಮಕ ವಿಚಾರದ ಸಂಪೂರ್ಣ ವಿಡಿಯೋವನ್ನು ನೋಡಿ. ʼನಾನು ಹಾಡಿದ ಬೆಸ್ಟ್ ಹಾಡುಗಳು ಕನ್ನಡದಲ್ಲಿವೆ, ನಾನಿಲ್ಲಿಗೆ ಪ್ರತಿ ಬಾರಿಯೂ ಪ್ರೀತಿಯಿಂದ ಬರುತ್ತೇನೆ. ಆದರೆ ಈ ರೀತಿ ʼಕನ್ನಡ ಕನ್ನಡʼ ಎಂದು ಒತ್ತಾಯಿಸಬೇಡಿ. ನನ್ನ ಪ್ಲೇಲಿಸ್ಟ್ಗೆ ಅನುಗುಣವಾಗಿ ಎಲ್ಲ ಹಾಡನ್ನು ಹಾಡುತ್ತೇನೆ. ಹಾಗೆಯೇ ಕನ್ನಡದ ಹಾಡನ್ನು ಹಾಡುತ್ತೇನೆʼ ಎಂದು ಹೇಳುತ್ತಾರೆ. ಕೊನೆಗೆ ನೀವು ಈ ರೀತಿಯಾಗಿ ಮಾಡುವುದರಿಂದಲೇ ಪಹಲ್ಗಾಮ್ ದಾಳಿಯಾಗಿದೆ ಎನ್ನುತ್ತಾರೆ. ಇದರರ್ಥ, ನಾವು ಭಾಷೆ ಭಾಷೆಯಲ್ಲಿ ಹೊಡೆದಾಡಿಕೊಂಡಿರೋಣ, ಅವರು ಧರ್ಮವನ್ನು ಕೇಳಿ ಹೊಡೆದು ಹೋಗುತ್ತಾರೆ ಎನ್ನುದವುಷ್ಟೇ ಆಗಿದೆ.
ಆದಾಗ್ಯೂ ಅತ್ಯಂತ ಕೆಟ್ಟದಾಗಿ ಕನ್ನಡದ ಬಗ್ಗೆ ಸೋನು ನಿಗಮ್ ಮಾತನಾಡಿದ್ದಾರೆ ಎನ್ನುವುದನ್ನು ಒಂದು ಕ್ಷಣಕ್ಕೆ ಒಪ್ಪಿಕೊಳ್ಳೋಣ. ಪಹಲ್ಗಾಮ್ ಹಾಗೂ ಭಾಷೆ ಹೋಲಿಕೆ ಸರಿಯಲ್ಲವೆಂದು ಒಮ್ಮೆ ಒಪ್ಪಿಬಿಡೋಣ. ಹಾಗೆಯೇ ಅವರನ್ನು ಕನ್ನಡ ಸಿನೆಮಾ ಹಾಗೂ ಈ ನೆಲದ ಕಾರ್ಯಕ್ರಮಗಳಿಂದ ನಿಷೇಧ ಕೂಡ ಮಾಡೋಣ. ಸಹಿಷ್ಣುತೆಯ ಹರಿಕಾರರ ನಾಡಿನಲ್ಲಿ ಇಂತಹ ಕ್ರಮಗಳ ಜರಗಲೇಬೇಕು. ಆದರೆ ಈ ಕ್ಷಣದಲ್ಲಿ ನಾವು ನಿಜವಾಗಿಯೂ ʼಕನ್ನಡ....ಕನ್ನಡ....ಕನ್ನಡ....ʼವೆಂದು ಯಾರಿಗೆ ಹೇಳಬೇಕಿದೆ ಎನ್ನುವ ಪ್ರಾಮಾಣಿಕ ಆತ್ಮವಿಮರ್ಶೆ ಮಾಡಿಕೊಳ್ಳದಿದ್ದರೆ ಅಪಾಯಕಾರಿ ದಿನವನ್ನು ಮೈಮೇಲೆ ಹಾಕಿಕೊಳ್ಳುತ್ತಿದ್ದೇವೆ.
ಹಾಗಿದ್ದರೆ ʼಕನ್ನಡ...ಕನ್ನಡ...ʼ ಹೇಳಿಬೇಕಿರುವುದೆಲ್ಲಿ?
ಕೆಲ ದಿನಗಳ ಹಿಂದೆ ನಮ್ಮ ರಾಜ್ಯದ ಶಿಕ್ಷಣ ಸಚಿವರು ವಿಧಾನಸಭೆಯಲ್ಲಿ ಮಾತನಾಡಿ, ʼನಾನು ಓದಿದ ಶಿವಮೊಗ್ಗದ ಶಾಲೆಯಲ್ಲಿ ಕನ್ನಡವನ್ನು ಇಂಗ್ಲಿಷ್ನಲ್ಲಿ ಹೇಳಿಕೊಡುತ್ತಿದ್ದರುʼ ಎಂದು ಹೇಳಿದ್ದರು. ಅಂದರೆ ಮೂರು ದಶಕಗಳ ಹಿಂದೆ ಶಿವಮೊಗ್ಗದಂಥ ಶಾಲೆಯಲ್ಲಿ ಕನ್ನಡದ ಸ್ಥಿತಿ ಇಲ್ಲಿಗೆ ಬಂದಿತ್ತು. ಆದರಿಂದು ಬೆಂಗಳೂರಿನ ಬಹುತೇಕ ಇಂಗ್ಲಿಷ್ ಮಾಧ್ಯಮ ಹಾಗೂ ಇತರ ನಗರಗಳಲ್ಲಿಯೂ ಇಂಗ್ಲಿಷ್ನಲ್ಲೇ ಕನ್ನಡವನ್ನು ಕಲಿಸಲಾಗುತ್ತಿದೆ. ಭಾಷಾ ಶಿಕ್ಷಕರಿಗೆ ಕನ್ನಡಕ್ಕಿಂತ ಇಂಗ್ಲಿಷ್ ಉತ್ತಮವಾಗಿ ಬರಬೇಕು ಎನ್ನುವುದು ಷರತ್ತಾಗಿರುತ್ತದೆ. ಇದರ ಪರಿಣಾಮಾಗಿ ಕನ್ನಡ ಓದಲು ಹಾಗೂ ಬರೆಯಲು ಬರದ ಅದೆಷ್ಟೋ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಮುಗಿಸುತ್ತಿದ್ದಾರೆ. ಇಂಗ್ಲಿಷ್ನಲ್ಲಿ ಕನ್ನಡ ಬರೆಯಲು ಅವಕಾಶ ನೀಡಿ ಎಂದು ಮನವಿ ಮಾಡುವ ಪಾಲಕರು ಹಾಗೂ ವಿದ್ಯಾರ್ಥಿಗಳಿದ್ದಾರೆ. ಅಂದರೆ ಕನ್ನಡವನ್ನು ಇಂಗ್ಲಿಷ್ ಅಕ್ಷರದಲ್ಲಿ ಬರೆಯಲು ಕೊಡಿ ಎನ್ನುವುದು ಇದರ ಅರ್ಥವಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಪರೀಕ್ಷಾ ವ್ಯವಸ್ಥೆಯಿದೆ. ಇಂದು ಕನ್ನಡ ಬರೆಯಲು ಹಾಗೂ ಓದಲು ಬರದಿದ್ದರೂ ಸುಲಭವಾಗಿ ಪರೀಕ್ಷೆಯಲ್ಲಿ ಉತ್ತರ್ಣವಾಗಬಹುದು. ಸೋನು ನಿಗಮ್ ವೇದಿಕೆಯಲ್ಲಿ ʼಕನ್ನಡ...ಕನ್ನಡ...ʼ ಎಂದು ಕೂಗಿದವರ ಮಕ್ಕಳು ಕೂಡ ಇದೇ ಶಾಲೆಗೆ ಹೋಗುತ್ತಿರುತ್ತಾರೆ. ಆದರೆ ನಾವು ಮನೆಯಲ್ಲಿ ʼಕನ್ನಡ...ಕನ್ನಡ...ʼ ಎಂದು ಕೂಗುವುದನ್ನು ಮರೆತು, ರಾಜಕೀಯಕ್ಕಾಗಿ ಎಲ್ಲೆಲ್ಲೋ ಕೂಗುತ್ತಿದ್ದೇವೆ.
ರಾಜೀವ ಹೆಗಡೆ ಬರಹದ ಲಿಂಕ್ ಇಲ್ಲಿದೆ-
ಈ ರಾಜ್ಯದ ಅತ್ಯಂತ ಪ್ರಭಾವಿ ವ್ಯಕ್ತಿಯೊಬ್ಬರು ನಡೆಸುತ್ತಿರುವ ʼಜಾಗತಿಕʼ ಶಾಲೆಗೆ ನನ್ನ ಸಹೋದ್ಯೋಗಿಯೊಬ್ಬರು ಮಗನನ್ನು ಸೇರಿಸಲು ಹೋಗಿದ್ದರು. ಆಗ ಮಗನ ಜತೆಗೆ ಪಾಲಕರ ಸಂದರ್ಶನ ಮಾಡಿದ ಪ್ರಾಂಶುಪಾಲರು, ʼನೀವು ಮನೆಯಲ್ಲಿ ಇಂಗ್ಲಿಷ್ ಮಾತನಾಡಬೇಕು. ಮಗನ ಎದುರಿಗೆ ನಿಮ್ಮ ಮಾತೃಭಾಷೆಯಲ್ಲಿ ಮಾತನಾಡುವಂತಿಲ್ಲ. ಇಲ್ಲದಿದ್ದರೆ ನಿಮ್ಮ ಮಗನ ಇಂಗ್ಲಿಷ್ ಇಂಪ್ರೂವ್ ಆಗುವುದಿಲ್ಲʼ ಎಂದಿದ್ದರಂತೆ. ತಾಕತ್ತಿದ್ದರೆ ಈ ಶಾಲೆಗಳಿಗೆ ಹೋಗಿ ʼಕನ್ನಡ...ಕನ್ನಡ...ʼ ಎಂದು ಕೂಗಿ ಬನ್ನಿ. ಒಂದೊಮ್ಮೆ ವಿಳಾಸ ಮರೆತಿದ್ದರೆ ಕನ್ನಡ ಪರವಾದ ದೊಡ್ಡ ದೊಡ್ಡ ಹೋರಾಟಗಾರರ ಮನೆಯ ಮಕ್ಕಳನ್ನು ಕೇಳಿದರೆ ಅಥವಾ ಅವರ ಸ್ಕೂಲ್ ಬಸ್ ಫಾಲೋ ಮಾಡಿದರೆ ಸಿಗುತ್ತದೆ.
ಐದಾರು ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡ ಕಲಿಕೆ ಕಡ್ಡಾಯ ಮಾಡಲಾಗಿದೆ. ಶಿಕ್ಷಣ ಇಲಾಖೆಯು ಈ ಆದೇಶವನ್ನು ಸುಂದರವಾಗಿ ಹೊರಡಿಸಿದೆ. ಈ ರಾಜ್ಯವನ್ನಾಳುವ ಸರ್ಕಾರಗಳು, ಇದನ್ನು ತಮ್ಮ ಸಾಧನೆಯೆಂದು ಬಿಂಬಿಸಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಕನ್ನಡದ ಸ್ಥಿತಿ ಏನಾಗಿದೆ ಎನ್ನುವದನ್ನು ಅರಿಯುವ ಕೆಲಸ ಯಾರಿಗೂ ಬೇಕಿಲ್ಲ. ಕಳೆದೊಂದು ತಿಂಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಫಲಿತಾಂಶ ಬಂದಿದೆ. ಅಲ್ಲಿ ಮೌಲ್ಯಪಾಪನ ಮಾಡಿದ ಶಿಕ್ಷಕರ ಬಳಿ ಕನ್ನಡದ ಸ್ಥಿತಿಯ ಬಗ್ಗೆ ಒಮ್ಮೆ ಚರ್ಚಿಸಿ. ಕರ್ನಾಟಕದ ಕೆಲ ಭಾಗ ಹಾಗೂ ಬೆಂಗಳೂರು ನಗರದ ವಿದ್ಯಾರ್ಥಿಗಳ ಕನ್ನಡದ ಬಗ್ಗೆ ವಿವರಣೆ ಪಡೆದುಕೊಳ್ಳಿ. ನಾವು ಓದುವ ಕಾಲದಲ್ಲಿದ್ದ ಕನ್ನಡದ ಪರೀಕ್ಷೆಯ ಸ್ವರೂಪ ಈಗಿದ್ದರೆ ಹಾಗೂ ಅದೇ ರೀತಿ ಮೌಲ್ಯಮಾಪನ ನಡೆದರೆ ಕನ್ನಡದಲ್ಲಿಯೇ ಅತ್ಯಧಿಕ ಅನುತ್ತೀರ್ಣರಾಗುವ ಅಪಾಯ ಎದುರಾಗಬಹುದು.
ಹಾಗಿದ್ದರೆ ಇದಕ್ಕೆ ಕಾರಣವೇನು ಎನ್ನುವ ಮೌಲ್ಯಮಾಪನವನ್ನು ಶಿಕ್ಷಣ ಇಲಾಖೆ ಹಾಗೂ ಕನ್ನಡ ಪರ ಹೋರಾಟಗಾರರು ಏಕೆ ಮಾಡುತ್ತಿಲ್ಲ. ಬೇರೆ ರಾಜ್ಯದಿಂದ ವರ್ಷಕ್ಕೊಮ್ಮೆ ಬರುವ ಸೋನು ನಿಗಮ್ ಅವರು ಖಂಡಿತವಾಗಿಯೂ ಕನ್ನಡ ಹಾಡಲೇಬೇಕು. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನಮ್ಮ ನಾಡಿನಲ್ಲಿ ವರ್ಷದ 365 ದಿನ ಬದುಕುವರಿಗೆ ಕನ್ನಡ ಕಲಿಸಿ ಎಂದು ಕೂಗಿ ಹೇಳದಿದ್ದರೆ ಯಾವುದೇ ಪ್ರಯೋಜನವಿರದು. ಸಂಗೀತದ ನೈಜ ಅಧ್ಯಯನ ಮಾಡಿದವರಿಗೆ ಭಾಷೆಯ ಪರಿಮಿತಿ ಇರುವುದಿಲ್ಲ. ಹಾಡು ಯಾವುದೇ ಭಾಷೆಯದ್ದಾದರೂ ಅವರಿಗೆ ಯುನಿವರ್ಸಲ್ ಭಾಷೆಯೆಂದರೆ ʼಮ್ಯೂಸಿಕಲ್ ನೋಟ್ಸ್ʼ. ಹೀಗಾಗಿ ಭಾಷೆಯ ಜಂಜಾಟವಿಲ್ಲದೇ ಬದುಕುವ ಏಕೈಕ ಜೀವಿಗಳೆಂದರೆ ನೈಜ ಹಾಡುಗಾರರು ಹಾಗೂ ಸಂಗೀತಗಾರರು. ಆದರೆ ಪ್ರತಿ ಕ್ಷಣವೂ ಭಾಷೆಲ್ಲಿಯೇ ಬದುಕುವ ನಾವು ಕನ್ನಡದಿಂದ ದೂರವಾಗುತ್ತಿರುವ ಅಸಲಿಯತ್ತನ್ನು ಅರಿಯುವ ಪ್ರಯತ್ನಕ್ಕೇ ಹೋಗುತ್ತಿಲ್ಲ.
ನಾವಿಂದು ಅಂಗಡಿ ಮುಂಗಟ್ಟುಗಳ ನಾಮಫಲಕವು ಕನ್ನಡದಲ್ಲಿರಬೇಕು ಎಂದು ಹೋರಾಡುತ್ತಿದ್ದೇವೆ. ಕನ್ನಡ ಓದಲು ಬರುವ ನನಗೆ ಇಂತಹ ವಿಚಾರದಲ್ಲಿ ಖುಷಿಯಾಗುತ್ತದೆ. ನಾನು ಕೆಲಸ ಮಾಡುವ ಕಾರ್ಪೊರೇಟ್ ಕಂಪೆನಿಯ ಬೋರ್ಡ್ನ್ನು ಕನ್ನಡದಲ್ಲಿ ಓದುವ ಅವಕಾಶ ಸಿಕ್ಕಾಗ ಅದೇನೋ ಸಂತಸ ಮೂಡುತ್ತದೆ. ಆದರೆ ನಮ್ಮ ಮುಂದಿನ ತಲೆಮಾರಿನ ಜನರಿಗೆ ಈ ಫಲಕವನ್ನೇ ಓದಲೇ ಬರಲಿಲ್ಲ ಎಂದಾದರೆ, ಈ ಹೋರಾಟ ಮಾಡಿ ಪ್ರಯೋಜನವೇನಾಗುತ್ತದೆ. ಭಾಷೆಯನ್ನು ಬೀದಿ ಬೀದಿಯಲ್ಲಿ ಹೋಗುವ ಜನ ಮಾತನಾಡಬೇಕೆ ಹೋರತು, ಭಾಷೆಗಾಗಿ ಬೀದಿ ಬೀದಿಯಲ್ಲಿ ಕಿತ್ತಾಡಬಾರದು. ಬದಲಾಗಿ ಬೀದಿ ಬೀದಿಯಲ್ಲಿರುವ ಶಾಲೆಗಳಲ್ಲಿ ಉತ್ತಮ ಕನ್ನಡ ಕಲಿಸುವ ಕೆಲಸವಾಗಬೇಕು.
ನೋಟಿಸ್ ಬೋರ್ಡ್ ಪ್ರಾಧಿಕಾರ!
ಈ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವೆನ್ನುವುದಿದೆ. ಅದು ಕೂಡ ರಾಜಕೀಯ ಹೋರಾಟಗಾರರಂತೆ ಬಹುತೇಕ ಸಂದರ್ಭದಲ್ಲಿ ವರ್ತಿಸುತ್ತದೆ. ಮಾಧ್ಯಮಗಳಲ್ಲಿ ಹೆಡ್ಲೈನ್ ಪಡೆಯಲು ನೋಟಿಸ್ ನೀಡಲು ಕಾರ್ಯನಿರ್ವಹಿಸುವುದರಲ್ಲೇ ಹೆಚ್ಚಿನ ಕಾಲ ಕಳೆಯುವಂತೆ ಭಾಸವಾಗುತ್ತದೆ. ವೈದ್ಯರು ಕನ್ನಡದಲ್ಲಿಯೇ ಡಿಸ್ಕ್ರಿಪ್ಶನ್ ಬರೆಯಬೇಕು ಎನ್ನುವ ಬಾಲಿಶ ನೋಟಿಸ್ ಹೊರಡಿಸುವ ಬದಲಿಗೆ, ಈ ರಾಜ್ಯದಲ್ಲಿ ಪ್ರಾಥಮಿಕದಿಂದ, ವೈದ್ಯಕೀಯದವರೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ರಾಜಕಾರಣಿಗಳ ಆಡಳಿತ ಮಂಡಳಿಗೆ ಈ ಕನ್ನಡ ಕಾಳಜಿ ಕುರಿತು ನೋಟಿಸ್ ನೀಡುವ ತಾಕತ್ತನ್ನು ತೋರಿಸಲಿ. ಈ ಆರಂಭಿಕ ʼನಟ್ ಬೋಲ್ಟ್ನ್ನು ಟೈಟ್ ಮಾಡಿದರೆ, ಕೊನೆಯಲ್ಲಿ ಬಂದು ʼಕನ್ನಡ...ಕನ್ನಡ...ʼವೆಂದು ಕೂಗುವ ಸಂದರ್ಭವೇ ಬರುವುದಿಲ್ಲ. ಡಿಫಾಲ್ಟ್ ಆಗಿಯೇ ಎಲ್ಲೆಲ್ಲೂ ಕನ್ನಡವೂ ರಾರಾಜಿಸುತ್ತದೆ. ಈ ರಾಜ್ಯದಲ್ಲಿನ ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಶಾಲೆಯಲ್ಲಿನ ಕನ್ನಡ ಶಿಕ್ಷಕರ ಮೌಲ್ಯಮಾಪನವನ್ನು ಪ್ರಾಧಿಕಾರ ಮಾಡುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ. ಹಾಗೆಯೇ ತುರ್ತಾಗಿ ಕನ್ನಡ ಭಾಷೆಯ ಪರೀಕ್ಷೆಯ ಸ್ವರೂಪವನ್ನು ಬದಲಾಯಿಸಬೇಕಿದೆ.
ಕೊನೆಯದಾಗಿ: ʼಕನ್ನಡ...ಕನ್ನಡ...ʼವೆಂದು ಓದುವ ಮಕ್ಕಳ ಮನಸ್ಸಿನಲ್ಲಿ ನಾಟುವಂತೆ ಪ್ರತಿದಿನ ಶಾಲೆಯಲ್ಲಿ ಜಪಿಸಿದರೆ, ಭವಿಷ್ಯದಲ್ಲಿ ಕನ್ನಡಕ್ಕಾಗಿ ಕೂಗಿ ಕೇಳುವ ಅಗತ್ಯ ಹುಟ್ಟುವುದಿಲ್ಲ. ರಾಜ್ಯದಲ್ಲಿನ ಶಾಲೆಗಳಲ್ಲಿ ಇಂತಹ ಹೋರಾಟ, ಹಾರಾಟ ಮಾಡುವ ತಾಕತ್ತನ್ನು ಪ್ರದರ್ಶಿಸಿದರೆ, ಅಂಥವರನ್ನು ನಾನೂ ಹೊಗಳುತ್ತೇನೆ. ಖಾಸಗಿ ಶಾಲೆಗಳ ನಿರ್ಲಕ್ಷ್ಯ ಹಾಗೂ ವರ್ತನೆಯ ಕಾರಣದಿಂದ ನಗರದ ಬಹುತೇಕ ಮಕ್ಕಳು ಇಂದು ಕನ್ನಡವನ್ನು ಹೊರೆಯನ್ನಾಗಿ ನೋಡುತ್ತಿದ್ದಾರೆ. ಇದನ್ನು ಮೊದಲು ಬದಲಾಯಿಸೋಣ, ಆಗ ಕನ್ನಡ ಮೆರೆದು ರಾರಾಜಿಸುವುದನ್ನು ಯಾವುದೇ ʼಗ್ಲೋಬಲ್ʼ ಫೋರ್ಸ್ ತಡೆಯಲು ಸಾಧ್ಯವಿಲ್ಲ.