ಪೊಂಗಲ್-ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು; ಬೆಂಗಳೂರಿನಿಂದ ಎಕ್ಸ್ಪ್ರೆಸ್ ರೈಲುಗಳ ಓಡಾಟ
ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ಎಕ್ಸ್ಪ್ರಸ್ ರೈಲುಗಳು ಓಡಲಿವೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಚೆನ್ನೈ ಹಾಗೂ ಟುಟಿಕೋರಿನ್ಗೆ ರೈಲುಗಳು ಸಂಚರಿಸಲಿವೆ. ಸಮಯ ಹಾಗೂ ಇತರ ವಿವರ ಇಲ್ಲಿದೆ.
ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲು ಸಜ್ಜಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಚೆನ್ನೈಗೆ ಈ ರೈಲು ಓಡಲಿದೆ. ಇದೇ ವೇಳೆ ಬೆಂಗಳೂರಿನಿಂದ ತಮಿಳುನಾಡಿನ ಟುಟಿಕೋರಿನ್-ಮೈಸೂರಿಗೂ ರೈಲು ಇರಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲ್ವೆ ಸ್ಟೇಶನ್ನಿಂದ ಚೆನ್ನೈನ ಎಂಜಿಆರ್ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲು ಇರಲಿದೆ. ಇದೇ ವೇಳೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ)ನಿಂದ ಟುಟಿಕೋರಿನ್-ಮೈಸೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲಿದೆ.
ಕೆಎಸ್ಆರ್ ಬೆಂಗಳೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು
ರೈಲು ಸಂಖ್ಯೆ 07319 ಕೆಎಸ್ಆರ್ ಬೆಂಗಳೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು ಜನವರಿ 10ರಂದು ಬೆಳಗ್ಗೆ 08:05ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಅದೇ ದಿನ ಮಧ್ಯಾಹ್ನ 02:40ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ. ಪುನಃ ಇದೇ ರೈಲು (07320) ಜನವರಿ 10ರಂದು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 03:40ಕ್ಕೆ ಹೊರಟು, ಅದೇ ದಿನ ರಾತ್ರಿ 10:50ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಯಶವಂತಪುರ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಅಂಬೂರು, ಗುಡಿಯಾಟ್ಟಂ, ಕಟಪಾಡಿ, ಶೋಲಿಂಗೂರ್, ಅರಕ್ಕೋಣಂ, ತಿರುವಳ್ಳೂರು ಮತ್ತು ಪೆರಂಬೂರಿನಲ್ಲಿ ನಿಲ್ಲಲಿದೆ. ಈ ರೈಲು 1 ಎಸಿ- ತ್ರಿ ಟೈರ್, 11 ಸ್ಲೀಪರ್ ಕ್ಲಾಸ್, 2 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್ಡಿ ಸೇರಿದಂತೆ 17 ಬೋಗಿಗಳನ್ನು ಒಳಗೊಂಡಿರುತ್ತದೆ.
ಎಸ್ಎಂವಿಟಿ ಬೆಂಗಳೂರು-ಟುಟಿಕೋರಿನ್-ಮೈಸೂರು ವಿಶೇಷ ಎಕ್ಸ್ಪ್ರೆಸ್ ರೈಲು
ರೈಲು ಸಂಖ್ಯೆ 06569 ಎಸ್ಎಂವಿಟಿ ಬೆಂಗಳೂರು-ಟುಟಿಕೋರಿನ್ ವಿಶೇಷ ಎಕ್ಸ್ಪ್ರೆಸ್ ರೈಲು ಜನವರಿ 10ರಂದು ರಾತ್ರಿ 10:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಜನವರಿ 11ರಂದು ಬೆಳಿಗ್ಗೆ 11:00 ಗಂಟೆಗೆ ತಮಿಳುನಾಡಿನ ಟ್ಯುಟಿಕೋರಿನ್ ತಲುಪಲಿದೆ. ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಮಧುರೈ, ವಿರುಡುನಗರ, ಸಾತೂರ್ ಮತ್ತು ಕೋವಿಲ್ಪಟ್ಟಿಯಲ್ಲಿ ನಿಲ್ಲಲಿದೆ.
ರೈಲು ಸಂಖ್ಯೆ 06570 ಜನವರಿ 11ರಂದು ಮಧ್ಯಾಹ್ನ 01:00ಕ್ಕೆ ಟುಟಿಕೋರಿನ್ ರೈಲು ನಿಲ್ದಾಣದಿಂದ ಹೊರಟು, ಜನವರಿ 12ರಂದು ಬೆಳಗ್ಗೆ 06:30ಕ್ಕೆ ಮೈಸೂರಿಗೆ ತಲುಪಲಿದೆ. ಈ ರೈಲು ಕೋವಿಲ್ಪಟ್ಟಿ, ಸಾತೂರ್, ವಿರುಡುನಗರ, ಮಧುರೈ, ದಿಂಡಿಗಲ್, ಕರೂರ್, ನಾಮಕ್ಕಲ್, ಸೇಲಂ, ಬಂಗಾರಪೇಟೆ, ಕೃಷ್ಣರಾಜಪುರಂ, ಕೆಎಸ್ಆರ್ ಬೆಂಗಳೂರು ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲು 13 ಎಸಿ ತ್ರಿ ಟೈರ್, 3 ಸ್ಲೀಪರ್ ಕ್ಲಾಸ್, 2 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಲಗೇಜ್ / ಜನರೇಟರ್ / ಬ್ರೇಕ್ ವ್ಯಾನ್ಗಳು ಸೇರಿದಂತೆ 19 ಬೋಗಿಗಳನ್ನು ಒಳಗೊಂಡಿರುತ್ತದೆ.
ರೈಲುಗಳು ನಿಲುಗಡೆಯಾಗುವ ಪ್ರತಿ ನಿಲ್ದಾಣದಲ್ಲಿನ ಆಗಮನ ಹಾಗೂ ನಿರ್ಗಮನ ಸಮಯ ತಿಳಿಯಲು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.inಗೆ ಭೇಟಿ ನೀಡಬಹುದು. ಸಹಾಯವಾಣಿ 139ಕ್ಕೆ ಕರೆ ಮಾಡಿಯೂ ಮಾಹಿತಿ ಪಡೆದುಕೊಳ್ಳಬಹುದು.