ಭಾರತದ ಯೋಧರ ಒಳಿತಿಗಾಗಿ 35 ಸಾವಿರ ಮುಜರಾಯಿ ದೇವಾಲಯಗಳಲ್ಲಿ ಪೂಜೆ, ಹೋಮ ಹವನ; ಸಾರ್ವಜನಿಕರು ಭಾಗಿ
ಕನ್ನಡ ಸುದ್ದಿ  /  ಕರ್ನಾಟಕ  /  ಭಾರತದ ಯೋಧರ ಒಳಿತಿಗಾಗಿ 35 ಸಾವಿರ ಮುಜರಾಯಿ ದೇವಾಲಯಗಳಲ್ಲಿ ಪೂಜೆ, ಹೋಮ ಹವನ; ಸಾರ್ವಜನಿಕರು ಭಾಗಿ

ಭಾರತದ ಯೋಧರ ಒಳಿತಿಗಾಗಿ 35 ಸಾವಿರ ಮುಜರಾಯಿ ದೇವಾಲಯಗಳಲ್ಲಿ ಪೂಜೆ, ಹೋಮ ಹವನ; ಸಾರ್ವಜನಿಕರು ಭಾಗಿ

ಭಾರತೀಯ ಸೇನಾಪಡೆಯ ಆಪರೇಷನ್ ಸಿಂದೂರ ಯಶಸ್ವಿಯಾದ ನಂತರ, ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸುವಂತೆ ಹೇಳಿತ್ತು. ಅದರಂತೆ ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)

ಯೋಧರ ಒಳಿತಿಗಾಗಿ 35 ಸಾವಿರ ಮುಜರಾಯಿ ದೇವಾಲಯಗಳಲ್ಲಿ ಪೂಜೆ, ಹೋಮ ಹವನ; ಸಾರ್ವಜನಿಕರು ಭಾಗಿ
ಯೋಧರ ಒಳಿತಿಗಾಗಿ 35 ಸಾವಿರ ಮುಜರಾಯಿ ದೇವಾಲಯಗಳಲ್ಲಿ ಪೂಜೆ, ಹೋಮ ಹವನ; ಸಾರ್ವಜನಿಕರು ಭಾಗಿ

ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ 'ಆಪರೇಷನ್ ಸಿಂದೂರ' ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ರಾಜ್ಯ ಮುಜರಾಯಿ ಇಲಾಖೆ ತನ್ನ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ಯೋಧರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲು ಸೂಚನೆ ನೀಡಿತ್ತು. ಇದರ ಅನ್ವಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ಹೋಮ, ಹವನ, ವಿಶೇಷ ಪೂಜೆ, ಮಂತ್ರ, ವೇದಘೋಷ ಮೊಳಗಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ 35,000 ದೇವಾಲಯಗಳಲ್ಲಿ ಯೋಧರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸುವಂತೆ ಸಚಿವ ರಾಮಲಿಂಗ ರೆಡ್ಡಿ ಆದೇಶ ಹೊರಡಿಸಿದ್ದರು. ಬಸವನಗುಡಿಯ ಐತಿಹಾಸಿಕ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸುಮಾರು ಎರಡು ಗಂಟೆ ಕಾಲ ದುರ್ಗಾ ಹೋಮ ನಡೆಯಿತು. ಸರ್ಕಾರದ ಆದೇಶದನ್ವಯ ಅನೇಕ ದೇವಾಯಗಳಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾದರು. ಬಸವನಗುಡಿಯ ಕಾರಂಜ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ದೇಶದ ಯೋಧರ ಒಳತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್‌ ಅವರು ಮಾತನಾಡಿ, ಭಾರತ ದೇಶದ ಹೆಸರಿನಲ್ಲಿ ನಾವು ಮಂತ್ರಗಳನ್ನು ಪಠಿಸಿದ್ದೇವೆ. ದೇಶದ ಗೆಲುವು, ಯೋಧರ ವಿಜಯ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರ ಒಳಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಯುದ್ಧ ನಡೆಯುವ ಮುನ್ನ ಮತ್ತು ನಂತರ ದೇವರ ಮೊರೆ ಹೋಗುವುದು ನಮ್ಮ ಸಂಪ್ರದಾಯವಾಗಿದೆ. ಅದು ನಮ್ಮ ಸಂಸ್ಕೃತಿಯ ಭಾಗವೂ ಹೌದು. ನಮ್ಮ ದೇಶದ ಸೇನೆಯ ಬಗ್ಗೆ ಹೆಮ್ಮೆಯಿದೆ ಮತ್ತು ಶಾಂತಿ ನೆಲಸುತ್ತದೆ ಎಂದು ಭಾವಿಸುತ್ತೇವೆ ಎಂದರು.

ನಗರದ ದಕ್ಷಿಣ ಭಾಗದಲ್ಲಿರುವ ಬನಶಂಕರಿ ದೇವಾಲಯದಲ್ಲಿಯೂ ಅಭಿಷೇಕ ಮತ್ತು ಆರತಿ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗಿದೆ. ದೇಶ ಕೈಗೊಳ್ಳುವ ಎಲ್ಲ ಯೋಜನೆಗಳಲ್ಲೂ ಜಯ ಸಿಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ದೇವಾಲಯದ ಸಮಿತಿ ತಿಳಿಸಿದೆ.

ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆ

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಇತರ ಮುಖಂಡರು ಮಲ್ಲೇಶ್ವರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆಯಲ್ಲಿ ಭಾಗಿಯಾದರು. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಪೂಜೆಯಿಂದ ಭಾರತದ ಶಕ್ತಿ ಹೆಚ್ಚಲಿದೆ ಮತ್ತು ಮೋದಿ ಕೈಗಳು ಬಲಗೊಳ್ಳಲಿವೆ ಎಂದಿದ್ದಾರೆ.

ರುದ್ರ ಪಾರಾಯಣ

ಮಲ್ಲೇಶ್ವರದ ಮತ್ತೊಂದು ಪ್ರಸಿದ್ಧ ಕಾಡುಮಲ್ಲೇಶ್ವರ ದೇವಾಲಯದಲ್ಲಿ ರುದ್ರ ಪಾರಾಯಣ ನಡೆದಿದ್ದು, ಮಧ್ಯಾಹ್ನದವರೆಗೂ ಮುಂದುವರೆದಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ದೇಶದ ಗಡಿಯಲ್ಲಿ ಕಾವಲು ಕಾಯುವ ಪ್ರತಿಯೊಬ್ಬ ಯೋಧನಿಗೂ ಸಮರ್ಪಣೆ ಮಾಡಲಾಗಿದೆ. ಅವರ ರಕ್ಷಣೆ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸಲಾಗಿದೆ. ಯೋಧರು ನಮಗಾಗಿ ಏನೆಲ್ಲಾ ಮಾಡುತ್ತಿರುವಾಗ ಈ ರೀತಿ ಪೂಜೆ ಸಲ್ಲಿಸುತ್ತಿರುವುದು ನಮ್ಮ ಕರ್ತವ್ಯದ ಭಾಗ ಎಂದು ಭಾವಿಸುತ್ತೇನೆ. ಮುಜರಾಯಿ ಇಲಾಖೆಯ ಎಲ್ಲ 35,000ಕ್ಕೂ ಹೆಚ್ಚು ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಆಪರೇಷನ್ ಸಿಂಧೂರ ಕಾರ್ಯಚರಣೆ ಯಶಸ್ವಿಯಾದ ಕಾರಣ ಮುಜರಾಯಿ ಇಲಾಖೆ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶ ನೀಡಲಾಗಿತ್ತು. ಗಡಿಯಲ್ಲಿ ನಿಂತು ಹೋರಾಡುವ ಯೋಧರಿಗೆ ದೇವರು ಅನುಗ್ರಹ ಕರುಣಿಸಲಿ ಮತ್ತು ಅವರ ಆತ್ಮಸ್ಥರ್ಯ ಹೆಚ್ಚಾಗಲಿ ಎಂದು ಈ ಆದೇಶ ಹೊರಡಿಸಲಾಗಿತ್ತು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.